Asianet Suvarna News Asianet Suvarna News

ಶಿವಮೊಗ್ಗ ಪ್ರವೇಶಿಸದಂತೆ ಪ್ರಮೋದ್ ಮುತಾಲಿಕ್‌ಗೆ ನಿರ್ಬಂಧ: ಕಾರಣವೇನು?

15 ದಿನಗಳ ಹಿಂದೆ ಈದ್‌ ಮಿಲಾದ್‌ ಮೆರವಣಿಗೆ ವೇಳೆ ಕೋಮು ಸಂಘರ್ಷಕ್ಕೆ ಈಡಾಗಿದ್ದ ಶಿವಮೊಗ್ಗದ ರಾಗಿಗುಡ್ಡಕ್ಕೆ ಭೇಟಿ ನೀಡಲು ಮುಂದಾಗಿದ್ದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನು ಪೊಲೀಸರು ತಡೆದಿದ್ದು, ಶಿವಮೊಗ್ಗ ಪ್ರವೇಶಕ್ಕೆ ಅವರಿಗೆ ನಿರ್ಬಂಧ ಹೇರಿದ್ದಾರೆ. 

Pramod Muthalik banned from entering Shivamogga gvd
Author
First Published Oct 19, 2023, 9:51 AM IST

ಶಿವಮೊಗ್ಗ (ಅ.19): 15 ದಿನಗಳ ಹಿಂದೆ ಈದ್‌ ಮಿಲಾದ್‌ ಮೆರವಣಿಗೆ ವೇಳೆ ಕೋಮು ಸಂಘರ್ಷಕ್ಕೆ ಈಡಾಗಿದ್ದ ಶಿವಮೊಗ್ಗದ ರಾಗಿಗುಡ್ಡಕ್ಕೆ ಭೇಟಿ ನೀಡಲು ಮುಂದಾಗಿದ್ದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನು ಪೊಲೀಸರು ತಡೆದಿದ್ದು, ಶಿವಮೊಗ್ಗ ಪ್ರವೇಶಕ್ಕೆ ಅವರಿಗೆ ನಿರ್ಬಂಧ ಹೇರಿದ್ದಾರೆ. ಬುಧವಾರ ಬೆಳಗ್ಗೆ ರಾಗಿಗುಡ್ಡಕ್ಕೆ ಭೇಟಿ ನೀಡಲು ಮುತಾಲಿಕ್‌ ನಿರ್ಧರಿಸಿದ್ದರು. ಹೀಗಾಗಿ, ಮಂಗಳೂರಿನಿಂದ ಶಿವಮೊಗ್ಗದೆಡೆ ಹೊರಟಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಮಂಗಳವಾರ ರಾತ್ರಿ 2 ಗಂಟೆ ಸುಮಾರಿಗೆ ತೀರ್ಥಹಳ್ಳಿಯ ಆಗುಂಬೆಯಲ್ಲಿ ಅವರ ವಾಹನವನ್ನು ತಡೆದರು. 

ರಾಗಿಗುಡ್ಡದಲ್ಲಿ ನಿಷೇಧಾಜ್ಞೆ ಜಾರಿಯಿದೆ. ನಿಮಗೆ ಜಿಲ್ಲೆಗೆ ಪ್ರವೇಶ ನಿರಾಕರಿಸಿ, ಜಿಲ್ಲಾಡಳಿತದ ಆದೇಶ ಹೊರಡಿಸಿದೆ. ಹೀಗಾಗಿ, ನಿಮಗೆ ಶಿವಮೊಗ್ಗಕ್ಕೆ ತೆರಳು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು. ಬಳಿಕ, ಅವರ ವಿರೋಧ ಲೆಕ್ಕಿಸದೆ, ಪೊಲೀಸರು ತಮ್ಮ ವಾಹನದಲ್ಲಿಯೇ ಕೂರಿಸಿಕೊಂಡು, ಹೊನ್ನಾಳಿ ಮೂಲಕ ದಾವಣಗೆರೆ ಜಿಲ್ಲೆಗೆ ದಾಟಿಸಿದರು. ಜೊತೆಗೆ ಇನ್ನು 15 ದಿನಗಳ ಕಾಲ ರಾಗಿಗುಡ್ಡ ಪ್ರವೇಶಿಸದಂತೆ ಸೂಚನೆ ನೀಡಿದರು. ಬಳಿಕ ದಾವಣಗೆರೆಯಲ್ಲಿ ಮಾತನಾಡಿದ ಮುತಾಲಿಕ್‌, ರಾಗಿಗುಡ್ಡಕ್ಕೆ 15 ದಿನಗಳ ನಿರ್ಬಂಧ ಹೇರಿದ ಜಿಲ್ಲಾಡಳಿತದ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ತಿಳಿಸಿದರು.

Ghost ಫ್ಯಾನ್ಸ್ ಶೋ ವೇಳೆ ಶಿವಣ್ಣನ ಅಭಿಮಾನಿಗಳ ಆಕ್ರೋಶ: ಸಂತೋಷ್ ಥಿಯೇಟರ್ ಗಾಜು ಪುಡಿಪುಡಿ

ಕರ್ನಾಟಕದಲ್ಲಿ ಕೆಲವೊಂದಿಷ್ಟು ಜನರು ಪ್ಯಾಲೇಸ್ತೀನ್‌ನ ಹಮಾಸ್ ಪರ ನಿಂತಿರುವುದು ದೇಶದ್ರೋಹದ ಕೆಲಸವಾಗಿದ್ದು, ಕರ್ನಾಟಕದ ಮುಸ್ಲಿಮರಿಗೂ, ಪ್ಯಾಲೇಸ್ತೀನ್‌ನ ಹಮಾಸ್‌ಗೂ ಏನು ಸಂಬಂಧ ಎಂದು ಇದೇ ವೇಳೆ ಅವರು ಕಿಡಿಕಾರಿದರು. 2024ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತೆ ಗೆದ್ದು ಪ್ರಧಾನಿಯಾಗಬೇಕೆಂಬ ಸಂಕಲ್ಪದೊಂದಿಗೆ ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲೂ ‘ಮೋದಿ ಗೆಲ್ಲಿಸಿ, ಭಾರತ ಉಳಿಸಿ’ ಅಭಿಯಾನವನ್ನು ಸೆಪ್ಟಂಬರ್‌ನಿಂದ ಕೈಗೊಳ್ಳಲಾಗುವುದು ಎಂದು ಹೇಳಿದರು.

ಹಮಾಸ್ ಪರ ನಿಂತ ವಿದ್ಯಾರ್ಥಿಗಳ ತನಿಖೆ ನಡೆಸಿ: ಕರ್ನಾಟಕದಲ್ಲೂ ಕೆಲವೊಂದಿಷ್ಟು ಮಂದಿ ಪ್ಯಾಲೇಸ್ತೀನ್‌ನ ಹಮಾಸ್ ಪರ ನಿಂತಿರುವುದು ದೇಶದ್ರೋಹದ ಕೆಲಸವಾಗಿದ್ದು, ಕರ್ನಾಟಕ ಮುಸ್ಲಿಮರಿಗೂ, ಪ್ಯಾಲೇಸ್ತೀನ್‌ನ ಹಮಾಸ್‌ಗೂ ಏನು ಸಂಬಂಧ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಕಿಡಿಕಾರಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬೆಂಗಳೂರಿನಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಇಂಜಿನಿಯರಿಂಗ್‌ ವಿದ್ಯಾರ್ಥಿಗಳೂ ಪಾಲ್ಗೊಂಡಿದ್ದು, ಇಂತಹವರಿಗೂ ಹಾಗೂ ಪ್ಯಾಲೇಸ್ತೀನ್‌ನ ಹಮಾಸ್ ಉಗ್ರರ ಜೊತೆಗೆ ಸಂಬಂಧ ಇದೆಯಾ ಎಂಬ ಬಗ್ಗೆಯೂ ತನಿಖೆಯಾಗಬೇಕು ಎಂದರು.

ಬಿಜೆಪಿ ಜತೆ ಮೈತ್ರಿ ಇದ್ದರೂ ಜಾತ್ಯತೀತ ಜನತಾದಳ ಜಾತ್ಯತೀತವಾಗೇ ಇರಲಿದೆ: ಬಂಡೆಪ್ಪ ಕಾಶಂಪೂರ್

ಬೆಂಗಳೂರಿನಲ್ಲಿ ಪ್ಯಾಲೇಸ್ತೀನ್‌ನ ಹಮಾಸ್ ಪರ ನಡೆದ ಹೋರಾಟದಲ್ಲಿ ಕೆಲವು ಪ್ರಗತಿಪರ ಸಂಘಟನೆಗಳೂ ಭಾಗಿಯಾಗಿದ್ದು, ಅವುಗಳ ಮೇಲೆ ಕೇಸ್ ಹಾಕಿಲ್ಲ. ಇದು ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ನೀತಿಗೆ ಸಾಕ್ಷಿ. ಕಾಂಗ್ರೆಸ್‌ ಸರ್ಕಾರವೇನಿದ್ದರೂ ಹಿಂದೂಗಳ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

Follow Us:
Download App:
  • android
  • ios