ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಸಹ ಕೈದಿಗಳಿಂದ ಕಜ್ಜಿ, ಕೆಮ್ಮು ಮುಂತಾದ ಸೋಂಕು ಹರಡುವ ಭಯದಿಂದ ತಮ್ಮನ್ನು ಬೇರೆ ಸೆಲ್‌ಗೆ ವರ್ಗಾಯಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಮೊಬೈಲ್ ಪತ್ತೆ ಪ್ರಕರಣದ ನಂತರ ಸಾಮಾನ್ಯ ಬ್ಯಾರಕ್‌ಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟಪಡುತ್ತಿದ್ದಾರೆ.

ಬೆಂಗಳೂರು: ನನ್ನ ಬ್ಯಾರಕ್‌ನಲ್ಲಿರುವ ಕೆಲವರಿಗೆ ಕಜ್ಜಿ, ಕೆಮ್ಮು ಕಾಯಿಲೆ ಬಾಧಿತರಿಂದ ನನಗೂ ಸೋಂಕು ಹರಡುವ ಭಯವಿದ್ದು, ತಕ್ಷಣ ನನ್ನನ್ನು ಬೇರೆ ಸೆಲ್‌ಗೆ ವರ್ಗಾಯಿಸಿ’ ಎಂದು ಅತ್ಯಾ*ಚಾರ ಪ್ರಕರಣದ ಕೈದಿ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಈ ಮನವಿಗೆ ತಕ್ಷಣಕ್ಕೆ ಯಾವುದೇ ಕ್ರಮ ಜರುಗಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಪರಿಶೀಲಿಸಿ ಕ್ರಮ ಜರುಗಿಸುವುದಾಗಿ ಜೈಲಿನ ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಇತ್ತೀಚೆಗೆ ಕೈದಿ ಪ್ರಜ್ವಲ್ ಅವರ ಸೆಲ್‌ನಲ್ಲಿ ಮೊಬೈಲ್ ಪತ್ತೆಯಾಗಿ ಕಾರಾಗೃಹ ಮತ್ತು ಸುಧಾರಣಾ ಇಲಾಖೆಗೆ ಭಾರಿ ಮುಜುಗರ ಉಂಟು ಮಾಡಿತ್ತು. ಪ್ರಕರಣದ ಬಳಿಕ ವಿಶೇಷ ಭದ್ರತಾ ವಿಭಾಗದ ಬ್ಯಾರಕ್‌ನಲ್ಲಿ ಸಾಮಾನ್ಯ ಕೈದಿಗಳ ಬ್ಯಾರಕ್‌ಗೆ ಅವರನ್ನು ಅಧಿಕಾರಿಗಳು ಸ್ಥಳಾಂತರಿಸಿದ್ದರು. ಈಗ ‘ಸಾಮಾನ್ಯ’ ಕೈದಿ ಜೀವನ ಅವರಿಗೆ ಸಂಕಷ್ಟ ತಂದಿದೆ.

ಒಂದೇ ಬ್ಯಾರಕ್‌ನಲ್ಲಿ 25 ಕೈದಿಗಳು

ನನ್ನ ಜತೆ ಸುಮಾರು 25 ಕೈದಿಗಳಿದ್ದಾರೆ. ಎಲ್ಲರೂ ಒಂದೇ ಶೌಚಾಲಯ ಬಳಸಬೇಕಿದೆ. ನನಗೆ ಈ ಬ್ಯಾರಕ್ ವಾತಾವರಣ ಹೊಂದುತ್ತಿಲ್ಲ. ನನಗೂ ಸಹಕೈದಿಗಳಿಂದ ಸೋಂಕು ಹರಡುವ ಭೀತಿ ಇದೆ ಎಂದು ಪ್ರಜ್ವಲ್ ಅಲವತ್ತುಕೊಂಡಿರುವುದಾಗಿ ತಿಳಿದು ಬಂದಿದೆ.

ರೌಡಿ ಭರತ್ ಕೊಟ್ಟ ಮೊಬೈಲ್ 

ನಾನು ಮೊಬೈಲ್‌ನಲ್ಲಿ ಮಾತನಾಡಿರುವ ವಿಡಿಯೋ ಹಳೆಯದು. 2024ರ ಸೆ.24 ರಂದು ನನಗೆ ರೌಡಿ ಭರತ್ ಯಾರೋ ಜೆಡಿಎಸ್‌ನವರು ನಿಮ್ಮ ಜೊತೆ ಮಾತನಾಡಬೇಕಂತೆ ಎಂದು ಮೊಬೈಲ್ ಕೊಟ್ಟಿದ್ದ ಎಂದು ಪ್ರಜ್ವಲ್ ಹೇಳಿರುವುದಾಗಿ ತಿಳಿದು ಬಂದಿದೆ.

ಸಹ ಕೈದಿ ಮೇಲೆ ಶಂಕೆ

ನನ್ನ ಬ್ಯಾರಕ್‌ ಮೇಲೆ ಸಿಸಿಬಿ ದಾಳಿಯ ಹಿಂದೆ ಸಂಚಿರುವ ಬಗ್ಗೆ ಶಂಕೆ ಇದೆ. ದಾಳಿಗೂ ಒಂದು ಗಂಟೆ ಮುನ್ನ ನನ್ನ ಸೆಲ್‌ಗೆ ಮೊಬೈಲ್ ಅನ್ನು ಸಹ ಕೈದಿ ಪ್ರತಾಪ್ ರಾಯ್ ತಂದಿಟ್ಟಿದ್ದಾನೆ. ದಾಳಿ ವೇಳೆ ಮೊಬೈಲ್ ಸಿಕ್ಕಿದ್ದು ನೋಡಿ ನನಗೆ ಅಚ್ಚರಿಯಾಯಿತು. ನನಗೆ ಮೊಬೈಲ್ ಸಂಗತಿ ಗೊತ್ತಿಲ್ಲ ಎಂದು ಕಾರಾಗೃಹ ಅಧಿಕಾರಿಗಳ ಮುಂದೆ ಪ್ರಜ್ವಲ್ ಗೋಳಾಡಿದ್ದಾರೆ ಎನ್ನಲಾಗಿದೆ.

ಕೂಡಲೇ ಬೇರೆ ಸೆಲ್‌ಗೆ ಸ್ಥಳಾಂತರಿಸಬೇಕು. ನಾನು ತಪ್ಪು ಮಾಡದೆ ಇದ್ದರೂ ಶಿಕ್ಷೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಅವೆರಲ್ಲ ಬಹುತೇಕ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಕೆಲವರು ಕಜ್ಜಿ, ಕೆಲವರಿಗೆ ಕೆಮ್ಮು ಹಾಗೂ ಇತರೆ ರೋಗಗಳಿಂದ ಪೀಡಿತರಾಗಿದ್ದಾರೆ.

ಮಹಾಲಕ್ಷ್ಮೀ ಲೇಔಟ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಭರತ ಬಂಧಿತನಾಗಿದ್ದ. ಜೈಲಿನಲ್ಲಿ ಆತನಿಗೆ ಮೊಬೈಲ್ ಸಿಕ್ಕಿತು. ಒಂದು ದಿನ ಆತನ ಮೊಬೈಲ್‌ಗೆ ಹಾಸನ ಜಿಲ್ಲೆಯ ನಮ್ಮ ಪಕ್ಷದ (ಜೆಡಿಎಸ್) ಮುಖಂಡರೊಬ್ಬರು ಕರೆ ಮಾಡಿ ನನ್ನೊಂದಿಗೆ ಮಾತನಾಡಿಸುವಂತೆ ಕೋರಿದ್ದರಂತೆ. ಆಗ ನನ್ನ ಸೆಲ್‌ಗೆ ಬಂದು ಭರತ್‌ ಮೊಬೈಲ್ ಕೊಟ್ಟು ಪಕ್ಷದ ಮುಖಂಡರ ಜತೆ ಮಾತನಾಡಿಸಿದ್ದ. ಆದರೆ ನನ್ನ ಬಳಿ ಮೊಬೈಲ್ ಇರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.