Asianet Suvarna News Asianet Suvarna News

ಕರ್ನಾಟಕದಲ್ಲಿ ಮತ್ತೆ ಮೋದಿ ಹವಾ: ಇಂದು ಯಾದಗಿರಿ, ಕಲಬುರಗಿಗೆ ಇಂದು ಪ್ರಧಾನಿ ಭೇಟಿ

ಕಳೆದೊಂದು ವಾರದ ಅವಧಿಯಲ್ಲಿ ಉತ್ತರ ಕರ್ನಾಟಕಕ್ಕೆ ಮೋದಿ ನೀಡುತ್ತಿರುವ 2ನೇ ಭೇಟಿ ಇದಾಗಿದೆ. ಜ.12ರಂದು ಹುಬ್ಬಳ್ಳಿಯಲ್ಲಿ ನಡೆದ 5 ದಿನಗಳ ರಾಷ್ಟ್ರೀಯ ಯುವಜನೋತ್ಸವಕ್ಕೆ ಅವರು ಚಾಲನೆ ನೀಡಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ತವರಲ್ಲಿ ನಡೆಯುತ್ತಿರುವ ಮೋದಿಯವರ ಈ ಕಾರ್ಯಕ್ರಮದಿಂದಾಗಿ ಬಿಜೆಪಿಯಲ್ಲಿ ಚುನಾವಣೋತ್ಸಾಹ ಗರಿಗೆದರಿದೆ.

PM Narendra Modi Will Be Come to Karnataka on Jan 19th grg
Author
First Published Jan 19, 2023, 3:38 AM IST

ಯಾದಗಿರಿ/ಕಲಬುರಗಿ(ಜ.19): ಪ್ರಧಾನಿ ನರೇಂದ್ರ ಮೋದಿಯವರು ಇಂದು(ಗುರುವಾರ) ರಾಜ್ಯಕ್ಕೆ ಭೇಟಿ ನೀಡಲಿದ್ದು, ಯಾದಗಿರಿ ಜಿಲ್ಲೆ ಸುರಪುರ ಮತಕ್ಷೇತ್ರದ ಕೊಡೇಕಲ್‌ ಗ್ರಾಮದಲ್ಲಿ 10,500 ಕೋಟಿ ರು.ಗಳ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಬಳಿಕ, ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮಳಖೇಡದಲ್ಲಿ ತಾಂಡಾ ಹಾಗೂ ಹಟ್ಟಿಗಳಲ್ಲಿ ವಾಸವಿರುವ 51,900 ಬಡ ಕುಟುಂಬಗಳಿಗೆ ಏಕಕಾಲದಲ್ಲಿ ಹಕ್ಕುಪತ್ರ ವಿತರಣೆಗೆ ನಿಶಾನೆ ತೋರಲಿದ್ದಾರೆ.

ಕಳೆದೊಂದು ವಾರದ ಅವಧಿಯಲ್ಲಿ ಉತ್ತರ ಕರ್ನಾಟಕಕ್ಕೆ ಮೋದಿ ನೀಡುತ್ತಿರುವ 2ನೇ ಭೇಟಿ ಇದಾಗಿದೆ. ಜ.12ರಂದು ಹುಬ್ಬಳ್ಳಿಯಲ್ಲಿ ನಡೆದ 5 ದಿನಗಳ ರಾಷ್ಟ್ರೀಯ ಯುವಜನೋತ್ಸವಕ್ಕೆ ಅವರು ಚಾಲನೆ ನೀಡಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ತವರಲ್ಲಿ ನಡೆಯುತ್ತಿರುವ ಮೋದಿಯವರ ಈ ಕಾರ್ಯಕ್ರಮದಿಂದಾಗಿ ಬಿಜೆಪಿಯಲ್ಲಿ ಚುನಾವಣೋತ್ಸಾಹ ಗರಿಗೆದರಿದೆ.

ಕಲಬುರಗಿ: 50 ಸಾವಿರ ಲಂಬಾಣಿ ಮಹಿಳೆಯರಿಂದ ಸಾಂಪ್ರದಾಯಿಕವಾಗಿ ಮೋದಿಗೆ ಸ್ವಾಗತ

ಸ್ಕಾಡಾಗೆ ಚಾಲನೆ:

ಬೆಳಗ್ಗೆ 11ಕ್ಕೆ ವಾಯುಪಡೆಯ ವಿಶೇಷ ವಿಮಾನದಲ್ಲಿ ಕಲಬುರಗಿಗೆ ಆಗಮಿಸಲಿರುವ ಮೋದಿ, ಅಲ್ಲಿಂದ ವಾಯುಪಡೆಯ ಎಂಐ 17 ವಿಶೇಷ ಹೆಲಿಕಾಪ್ಟರ್‌ ಮೂಲಕ ಕೊಡೇಕಲ್‌ ಬಳಿ ನಿರ್ಮಿಸಲಾದ ವಿಶೇಷ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. ಬಳಿಕ, ನಡೆಯುವ ಕಾರ್ಯಕ್ರಮದಲ್ಲಿ ಸುಮಾರು 4,700 ಕೋಟಿ ರು.ಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ನಾರಾಯಣಪುರ ಬಸವ ಸಾಗರ ಜಲಾಶಯದ ಗೇಟುಗಳ ಸ್ಕಾಡಾ (ಜಿಪಿಎಸ್‌-ರಿಮೋಟ್‌ ಆಧಾರಿತ ಜಲಾಶಯ ಗೇಟುಗಳ ಚಾಲನೆ) ವ್ಯವಸ್ಥೆ ಉದ್ಘಾಟಿಸಲಿದ್ದಾರೆ. ಜೊತೆಗೆ, 2,050 ಕೋಟಿ ರು.ಗಳ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ 2,000 ಕೋಟಿ ರು.ಗಳ ವೆಚ್ಚದ ಸೂರತ್‌-ಚೆನ್ನೈ ಎಕ್ಸಪ್ರೆಸ್‌ ವೇ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಬಳಿಕ, ಮಧ್ಯಾಹ್ನ 1.15ಕ್ಕೆ ಮಳಖೇಡಕ್ಕೆ ಆಗಮಿಸಲಿರುವ ಮೋದಿ, ಕಲಬುರಗಿ, ವಿಜಯಪುರ, ಯಾದಗಿರಿ, ಬೀದರ್‌, ರಾಯಚೂರು ಜಿಲ್ಲೆಗಳ ತಾಂಡಾ ಹಾಗೂ ಹಟ್ಟಿಗಳಲ್ಲಿ ವಾಸವಿರುವ 51,900 ಬಡ ಕುಟುಂಬಗಳಿಗೆ ಏಕಕಾಲದಲ್ಲಿ ಹಕ್ಕುಪತ್ರ ವಿತರಣೆಗೆ ನಿಶಾನೆ ತೋರಲಿದ್ದಾರೆ.

ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌, ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಪಶು ಸಂಗೋಪನೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್‌ ಹಾಗೂ ಇತರ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

‘ಸ್ಕಾಡಾ’ ತಂತ್ರಜ್ಞಾನ ಮೂಲಕ ಗೇಟುಗಳ ನಿರ್ವಹಣೆ:

ಮೋದಿಯವರು ಗುರುವಾರ ಕೊಡೇಕಲ್‌ ಗ್ರಾಮದಲ್ಲಿ ನಾರಾಯಣಪುರ ಎಡದಂಡೆ ಕಾಲುವೆಯ ವಿಸ್ತರಣಾ, ಪುನಶ್ಚೇತನ ಹಾಗೂ ನವೀಕರಣ ಮತ್ತು ಆಧುನೀಕರಣ ಯೋಜನೆ ಉದ್ಘಾಟಿಸಲಿದ್ದಾರೆ. ಇಲ್ಲಿ ದೇಶದಲ್ಲೇ ಮೊದಲ ಬಾರಿಗೆ ಸ್ಕಾಡಾ (ಜಿಪಿಎಸ್‌-ರಿಮೋಟ್‌ ಆಧಾರಿತ ಜಲಾಶಯ ಗೇಟುಗಳ ಚಾಲನೆ) ವ್ಯವಸ್ಥೆ ಅಳವಡಿಸಲಾಗಿದೆ. ಇಲ್ಲಿ ಸ್ವಯಂ ಚಾಲಿತ ಗೇಟುಗಳನ್ನು ಅಳವಡಿಸಲಾಗಿದೆ. ಉಪಗ್ರಹ ಮಾಹಿತಿ ಆಧಾರಿತ ದೂರಸಂವೇದಿ ತಂತ್ರಜ್ಞಾನ ಆಧರಿಸಿ ಇದು ಕೆಲಸ ನಿರ್ವಹಿಸಲಿದ್ದು, ತತಕ್ಷಣದ ಅಂಕಿ-ಅಂಶಗಳ ಕುರಿತ ಮಾಹಿತಿಯನ್ನು ಒದಗಿಸುತ್ತದೆ.

ಕಾಲುವೆ ಮೂಲಕ 10,000 ಕ್ಯೂಸೆಕ್‌ ನೀರು ಸಾಗಿಸುವ ಸಾಮರ್ಥ್ಯ ಹೊಂದಿರುವ ಈ ಯೋಜನೆ, 4.5 ಲಕ್ಷ ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಕಲ್ಪಿಸುತ್ತದೆ. ಈ ಯೋಜನೆಯಿಂದ 4,400 ಗೇಟುಗಳ ಮೂಲಕ ಹರಿಯುವ ನೀರು ಪೋಲಾಗದಂತೆ ನೋಡಿಕೊಳ್ಳಲಾಗುತ್ತದೆ. ಕಲಬುರಗಿ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳ 560 ಗ್ರಾಮಗಳ 3 ಲಕ್ಷಕ್ಕೂ ಹೆಚ್ಚು ರೈತರಿಗೆ ಇದರಿಂದ ಅನುಕೂಲವಾಗಲಿದೆ. ಯೋಜನೆಯ ಒಟ್ಟು ವೆಚ್ಚ ಸುಮಾರು 4,700 ಕೋಟಿ ರು.

ಏನೇನು ಕಾರ್ಯಕ್ರಮ?

ಬೆ.11: ವಾಯುಪಡೆಯ ವಿಶೇಷ ವಿಮಾನದಲ್ಲಿ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮನ
11.50: ಯಾದಗಿರಿ ಜಿಲ್ಲೆ ಕೊಡೆಕಲ್‌ನಲ್ಲಿ 4,700 ಕೋಟಿ ರು.ಗಳ ನಾರಾಯಣಪುರ ಬಸವ ಸಾಗರ ಜಲಾಶಯದ ಗೇಟುಗಳ ಸ್ಕಾಡಾ ವ್ಯವಸ್ಥೆ ಉದ್ಘಾಟನೆ
12.00: ಜಲಜೀವನ್‌ ಮಿಷನ್‌ ಯೋಜನೆಯಡಿ ಯಾದಗಿರಿ ಜಿಲ್ಲೆಯ 713 ಗ್ರಾಮಗಳಿಗೆ ನೀರು ಕಲ್ಪಿಸುವ 2050 ಕೋಟಿ ರು.ಗಳ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಶಂಕುಸ್ಥಾಪನೆ
12.15: 2,000 ಕೋಟಿ ರು.ಗಳ ಸೂರತ್‌-ಚೆನ್ನೈ ಎಕ್ಸಪ್ರೆಸ್‌ ವೇ ನಿರ್ಮಾಣಕ್ಕೆ ಶಂಕುಸ್ಥಾಪನೆ
ಮಧ್ಯಾಹ್ನ 2: ಕಲಬುರಗಿ ಜಿಲ್ಲೆ ಮಳಖೇಡಕ್ಕೆ ಭೇಟಿ, 51,900 ತಾಂಡಾ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ
ಮಧ್ಯಾಹ್ನ 3: ಕಲಬುರಗಿ ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ವಾಪಸ್‌

51,900 ಜನರಿಗೆ ಹಕ್ಕುಪತ್ರ: ದಾಖಲೆ

ಕಲಬುರಗಿ: ಮಳಖೇಡದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕಲಬುರಗಿ, ವಿಜಯಪುರ, ಯಾದಗಿರಿ, ಬೀದರ್‌, ರಾಯಚೂರು ಜಿಲ್ಲೆಗಳ ತಾಂಡಾ ಹಾಗೂ ಹಟ್ಟಿಗಳಲ್ಲಿ ವಾಸವಿರುವ 51,900 ಬಡ ಕುಟುಂಬಗಳಿಗೆ ಏಕಕಾಲದಲ್ಲಿ ವಾಸಸ್ಥಳದ ಹಕ್ಕುಪತ್ರ ವಿತರಿಸಲಾಗುತ್ತದೆ. ಇದು ಗಿನ್ನೆಸ್‌ ದಾಖಲೆಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ.

PM Narendra Modi: ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಶಾಸಕ ರಾಜೂಗೌಡ ಬಿಜೆಪಿ ಕಾರ್ಯಕರ್ತರೊಂದಿಗೆ ಸಭೆ

ವೇದಿಕೆ ಮೇಲೆ ಪ್ರಧಾನಿ ನರೇಂದ್ರ ಮೋದಿ 5 ಕುಟುಂಬಗಳಿಗೆ ಸಾಂಕೇತಿಕವಾಗಿ ಹಕ್ಕುಪತ್ರ ವಿತರಿಸುವರು. ಬಳಿಕ, ಇದೇ ವೇದಿಕೆಯಲ್ಲಿ 51,900 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗುವುದು. 50 ಸಾವಿರಕ್ಕೂ ಹೆಚ್ಚು ಜನರಿಗೆ ಒಂದೇ ವೇದಿಕೆಯಲ್ಲಿ ಹಕ್ಕುಪತ್ರ ವಿತರಿಸುತ್ತಿರುವುದು ಗಿನ್ನೆಸ್‌ ದಾಖಲೆಗೆ ಸೇರಲಿದೆ. ಈ ಹಿನ್ನೆಲೆಯಲ್ಲಿ ಗಿನ್ನೆಸ್‌ ದಾಖಲೆ ಮಾಡಿಕೊಳ್ಳುವ ಅಧಿಕಾರಿಗಳ ತಂಡ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ.

ಉಚಿತ ನೋಂದಣಿ:

ಹಕ್ಕುಪತ್ರ ವಿತರಣೆಯ ನಂತರ ಈ ಗ್ರಾಮಗಳು ಕಂದಾಯ ಗ್ರಾಮಗಳಾಗಲಿವೆ. ಈ ಜನರಿಗೆ ಸರ್ಕಾರಿ ಸೌಲಭ್ಯ, ಬ್ಯಾಂಕ್‌ ಸಾಲ ಪಡೆಯಲು ಅನುಕೂಲವಾಗಲಿದೆ. ಈವರೆಗೆ ಅವರು ವಾಸವಿದ್ದ ಜಾಗ ಇನ್ನು ಮುಂದೆ ಅವರ ಹೆಸರಿಗೆ ಆಗಲಿದೆ. ರಿಜಿಸ್ಪ್ರೇಷನ್‌ ಫೀ ಪಡೆಯದೇ ಸಂಬಂಧಿತ ಸಬ್‌ ರಿಜಿಸ್ಟ್ರರ್‌ ಆಫೀಸಿನಲ್ಲಿ ಅವರ ಹೆಸರಿಗೆ ದಾಖಲಿಸಿ ಕೊಡುತ್ತೇವೆ. ರಾಜ್ಯದಲ್ಲಿ 1 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಗುರಿ ಇದೆ. ಎರಡನೇ ಹಂತದಲ್ಲಿ ಮುಂದಿನ ತಿಂಗಳು ದಾವಣಗೆರೆಯ ಸೇವಾಲಾಲ್‌ ಮಂದಿರ ಬಳಿ ನಡೆಯುವ ಕಾರ್ಯಕ್ರಮದಲ್ಲಿ ಅಮಿತ್‌ ಶಾ ಅವರಿಂದ 50 ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವ ಉದ್ದೇಶವಿದೆ. ಈವರೆಗೆ 3,200ಕ್ಕೂ ಹೆಚ್ಚು ತಾಂಡಾ, ಹಟ್ಟಿ, ಹಾಡಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಿದ್ದೇವೆ ಎಂದು ಸಚಿವರು ತಿಳಿಸಿದರು.

Follow Us:
Download App:
  • android
  • ios