ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮತ್ತು ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಂದುವರೆಸಲು ನೀಡಿದ್ದ ಅನುಮತಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್) ಹಿಂಪಡೆದಿದೆ. ಎಸ್ಸಿ ಒಳ ಮೀಸಲಾತಿ ಅಳವಡಿಕೆ ಹಿನ್ನೆಲೆ ಈ ನಿರ್ಧಾರ.

ಬೆಂಗಳೂರು (ಡಿ.6): ಕರ್ನಾಟಕ ಲೋಕಸೇವಾ ಆಯೋಗದಿಂದ ಲೋಕೋಪಯೋಗಿ ಇಲಾಖೆಯಲ್ಲಿನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ 42 ಹುದ್ದೆಗಳು ಹಾಗೂ ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕರು 76 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಂದುವರೆಸಲು ನೀಡಿದ್ದ ಅನುಮತಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್) ಹಿಂಪಡೆದಿದೆ.

Add Asianetnews Kannada as a Preferred SourcegooglePreferred

ಎಸ್ಸಿ ಒಳ ಮೀಸಲಾತಿ ಹಿನ್ನೆಲೆ ನಿರ್ಧಾರ?

2024ರ ಸೆಪ್ಟೆಂಬರ್‌ನಲ್ಲಿ 42 ಹುದ್ದೆಗಳು ಹಾಗೂ 2024ರ ಮಾರ್ಚ್ ತಿಂಗಳಲ್ಲಿ 70 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಎಸ್ಸಿ ಒಳ ಮೀಸಲಾತಿ ಅಳವಡಿಕೆಗಾಗಿ ಹೊಸ ಅಧಿಸೂಚನೆಗಳಿಗೆ ತಡೆ ನೀಡಿರುವ ಜೊತೆಗೆ ತಿದ್ದುಪಡಿ ಅಧಿಸೂಚನೆಗಳನ್ನು ಕೂಡ ರದ್ದುಪಡಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈ ಎರಡು ನೇಮಕಾತಿಗಳಿಗೂ ತಿದ್ದುಪಡಿ ಅಧಿಸೂಚನೆ ಹೊರಡಿಸಿದ್ದರೂ ವಿಶೇಷ ಪ್ರಕರಣವೆಂದು ಪರಿಗಣಿಸಿ, ನೇಮಕಾತಿ ಮುಂದುವರೆಸುವಂತೆ ಸರ್ಕಾರದ ಪತ್ರದ ಅನ್ವಯ ಡಿಪಿಎಆರ್‌ನಿಂದ ಅ.9ರಂದು ಕೆಪಿಎಸ್‌ಸಿಗೆ ಪತ್ರ ಬರೆಯಲಾಗಿತ್ತು. ಆದರೆ, ಡಿ.4ರಂದು ಅನುಮತಿಯನ್ನು ವಾಪಸ್ ಪಡೆಯಲಾಗಿದೆ ಎಂದು ಡಿಪಿಎಆರ್ ತಿಳಿಸಿದೆ.

ಅಭ್ಯರ್ಥಿಗಳ ಒತ್ತಾಯ:

76 ಹುದ್ದೆಗಳಿಗೆ ಈಗಾಗಲೇ ಪರೀಕ್ಷೆ ನಡೆದಿದ್ದು, ಫಲಿತಾಂಶ ಪ್ರಕಟಣೆ ಬಾಕಿ ಇರುವ ಕಾರಣ ನೇಮಕ ಪ್ರಕ್ರಿಯೆ ಮುಂದುವರೆಸುವಂತೆ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು ಸರ್ಕಾರವನ್ನು ಒತ್ತಾಯಿಸಿದ್ದರು.