Kalakeri Dargah Uroos even: ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದ ಹಜರತ್ ಸೈಯ್ಯದ್ಬಾಷಾ ರಹಮತುಲ್ಲಾ ಅಲೈ ಅವರ ಉರೂಸ್ ಪ್ರಯುಕ್ತ ನಡೆದ ಧರ್ಮಸಭೆಯಲ್ಲಿ ಈ ದರ್ಗಾ ಭಾವೈಕ್ಯತೆಯ ಸಂಕೇತವಾಗಿದೆ ಎಂದು ಸರ್ಕಾರದ ಮುಖ್ಯಸಚೇತಕ ಸಲೀಂ ಅಹ್ಮದ್ ತಿಳಿಸಿದರು.
ಮುಂಡರಗಿ (ಫೆ.12): ಕಲಕೇರಿ ಗ್ರಾಮದ ಈ ದರ್ಗಾ ಭಾವೈಕ್ಯತೆಯ ಸಂಕೇತವಾಗಿದೆ. ಶಾಂತಿ, ನೆಮ್ಮದಿ, ಸಹಬಾಳ್ವೆಯನ್ನು ಪಾಲಿಸೋಣ. ಎಲ್ಲ ವರ್ಗದವರು ಒಂದಾಗಿ ಸಮಾಜವನ್ನು ಕಟ್ಟುವ ಕೆಲಸ ಮಾಡೋಣ ಎಂದು ಸರ್ಕಾರದ ಮುಖ್ಯಸಚೇತಕ, ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್ ತಿಳಿಸಿದರು.
ತಾಲೂಕಿನ ಕಲಕೇರಿ ಗ್ರಾಮದಲ್ಲಿ ಹಜರತ್ ಸೈಯ್ಯದ್ಬಾಷಾ ರಹಮತುಲ್ಲಾ ಅಲೈ ಅವರ ಉರೂಸ್ ಪ್ರಯುಕ್ತ ಇತ್ತೀಚೆಗೆ ಹಮ್ಮಿಕೊಂಡಿದ್ದ ಧರ್ಮಸಭೆ ಉದ್ಘಾಟಿಸಿ ಮಾತನಾಡಿದರು.
ತಾಲೂಕು, ಜಿಲ್ಲೆ, ರಾಜ್ಯ, ದೇಶ ಅಭಿವೃದ್ಧಿಯಾಗುವುದಕ್ಕೆ ಶಾಂತಿ, ನೆಮ್ಮದಿ, ಸಹಬಾಳ್ವೆ ಮುಖ್ಯ. ಎಲ್ಲ ವರ್ಗದ ಜನರು ಸೇರಿ ವಿಶ್ವಾಸ, ಸೌಹಾರ್ದತೆಯಿಂದ ಬಾಳಬೇಕು ಎಂದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನುಡಿದಂತೆ ನಡೆದಿದೆ. ರಾಷ್ಟ್ರಕವಿ ಕುವೆಂಪು ಅವರ ಮಾತಿನಂತೆ ಸರ್ವ ಜನಾಂಗದ ಶಾಂತಿಯ ತೋಟದಂತೆ ಇಲ್ಲಿ ಎಲ್ಲ ವರ್ಗದವರ ಹಿತ ಕಾಪಾಡುವಂತ ಕೆಲಸ ನಡೆಯುತ್ತಿದೆ. ಬದ್ಧತೆ, ಪ್ರಾಮಾಣಿಕತೆಯಿಂದ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಪ್ರತಿವರ್ಷವೂ ಉರೂಸ್ನ ಅಂಗವಾಗಿ ಒಳ್ಳೊಳ್ಳೆಯ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಈ ಉರೂಸನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿರುವುದು ಸಂತಸ ತಂದಿದೆ. ಪ್ರತಿಯೊಬ್ಬರೂ ಭಾವೈಕ್ಯತೆ, ಸೌಹಾರ್ದತೆಯಿಂದ ಬಾಳಬೇಕು. ಹಿಂದೂ- ಮುಸ್ಲಿಂ ಎನ್ನದೆ ಎಲ್ಲರೂ ಸೇರಿ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬಾಳಿ ಬದುಕಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಹಜರತ್ ಮುಸ್ತಫಾ ಖಾದ್ರಿ, ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ಸೈಯದಷಾಹ ಹೈದರವಲಿ ಉಲಾ ನಭೀರಾ ಖಾದ್ರಿ ಆಶೀರ್ವಚನ ನೀಡಿದರು. ಮಾಜಿ ಸಚಿವ ಎಸ್.ಎಸ್. ಪಾಟೀಲ, ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ ಮಾತನಾಡಿದರು. ದರ್ಗಾ ಕಮಿಟಿ ಅಧ್ಯಕ್ಷ ಎಂ.ಯು. ಮಕಾಂದಾರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
ಕಲಕೇರಿ ಗ್ರಾಪಂ ಅಧ್ಯಕ್ಷೆ ಮಮತಾಜಬೇಗಂ ಖತೀಬ, ಅಂದಪ್ಪ ಮೇಟಿ, ಡಾ. ಹಮ್ಮಿದ ಕೊಪ್ಪದ, ಭೀಮಣ್ಣ ಹುಳಕಣ್ಣವರ, ಹಾಸಿಂಪೀರ ಲಕ್ಷ್ಮೇಶ್ವರ, ಎ.ಎ. ಅಳವಂಡಿ, ಬಿ.ಕೆ. ದೇಸಾಯಿ, ಬಾಬಾಜಾನ ಅಳವಂಡಿ, ಜಾಫರಸಾಬ ಮಕಾಂದಾರ, ಮೈಹಿಬೂಬಸಾಬ್ ಮಕಾಂದಾರ್, ಸನಾವುಲ್ಲಾ ಮಕಾಂದಾರ್, ಮೈಬೂಸಾಬ್ ಮಾಳೆಕೊಪ್ಪ, ದೌಲತಸಾಬ್ ಶಿರೋಳ, ನನ್ನೇಸಾಬ್ ಖತೀಬ್, ಜಾಫರ್ ಮಕಾಂದಾರ ಉಪಸ್ಥಿತರಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಡಿ. ಮಕಾಂದಾರ ಸ್ವಾಗತಿಸಿದರು. ಶಾಬುದ್ದೀನ್ ನದಾಫ್ ನಿರೂಪಿಸಿದರು. ಜಹಿರುದ್ದೀನ್ ಮುಲ್ಲಾ ವಂದಿಸಿದರು.



