2 ದಿನದಲ್ಲಿ ಸಭೆ ನಡೆಸಲಿದ್ದಾರೆ ಈ ಶಾಸಕರು
ಇನ್ನೆರಡು ದಿನದಲ್ಲಿ ಈ ಶಾಸಕರೆಲ್ಲರೂ ಸೇರಿ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಮಹತ್ವದ ವಿಚಾರದ ಬಗ್ಗೆ ಚರ್ಚೆ ನಡೆಯಲಿದ್ದು, ಸ್ವಾಮೀಜಿಯಿಂದಲೇ ಈ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಬೆಂಗಳೂರು (ಮಾ.08): ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ 2ಎ ಮೀಸಲಾತಿ ನೀಡುವ ಬಗ್ಗೆ ವಿಧಾನಮಂಡಲದ ಅಧಿವೇಶನಲ್ಲಿ ಚರ್ಚೆ ನಡೆಸುವ ಹಿನ್ನೆಲೆಯಲ್ಲಿ ಒಂದೆರಡು ದಿನಗಳಲ್ಲಿ ಸಮುದಾಯದ ಎಲ್ಲ ಶಾಸಕರ ಸಭೆಯನ್ನು ಕರೆದಿರುವುದಾಗಿ ಕೂಡಲಸಂಗಮದ ಪಂಚಮಸಾಲಿ ಮಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಮೀಸಲಾತಿಗಾಗಿ ಪಂಚಮಸಾಲಿ ಸಮಾಜದ ಹೋರಾಟ ಭಾನುವಾರ ಹದಿನೈದನೇ ದಿನಕ್ಕೆ ಕಾಲಿರಿಸಿದ್ದು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಸ್ವಾಮೀಜಿ, ‘ವಿಧಾನಮಂಡಲದಲ್ಲಿ ಮೀಸಲಾತಿ ನೀಡುವ ಬಗ್ಗೆ ಚರ್ಚಿಸಲು ವಿಧಾನಸಭಾ ಅಧ್ಯಕ್ಷರು ಅನುಮತಿ ನೀಡಬೇಕು. ಈ ಬಗ್ಗೆ ವಿಧಾನಸಭಾ ಅಧ್ಯಕ್ಷರಿಗೆ ಮನವಿ ಮಾಡುವಂತೆ ಸಮುದಾಯದ ಶಾಸಕರನ್ನು ಕೇಳಿಕೊಳ್ಳಲಾಗುವುದು’ ಎಂದು ಹೇಳಿದರು.
'ಪಂಚಮ ಕಹಳೆ ಬರೀ ಟ್ರೇಲರ್ ಅಷ್ಟೇ. ಮುಂದೈತೆ ಮಾರಿಹಬ್ಬ'!
‘ಈ ಚರ್ಚೆ ನಡೆಯುವ ಸಂದರ್ಭದಲ್ಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಬಗ್ಗೆ ಮುಖ್ಯಮಂತ್ರಿಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ. ಸರ್ಕಾರವು ಮೀಸಲಾತಿಯ ತೀರ್ಮಾನ ಕೈಗೊಳ್ಳಲು ನೀವೇ ಒಂದು ಗಡುವು ವಿಧಿಸಿ ಎಂದು ಹೇಳುತ್ತಿದೆ. ನಾವು ಇಲ್ಲಿಯವರೆಗೆ ಸಾಕಷ್ಟುಗಡುವುಗಳನ್ನು ನೀಡಿಯಾಗಿದೆ. ಈಗ ಸರ್ಕಾರವೇ ಒಂದು ಗಡುವು ನೀಡಬೇಕು’ ಎಂದು ಅವರು ಆಗ್ರಹಿಸಿದರು.