Muslim College ವಕ್ಫ್ ಬೋರ್ಡ್ ಕಾಲೇಜುಗಳಲ್ಲಿ ಎಲ್ಲ ಸಮುದಾಯದವರ ಅಭ್ಯಾಸಕ್ಕೂ ಅವಕಾಶ: ಶಾಫಿ ಸಅದಿ ಹೇಳಿಕೆ
ವಕ್ಫ್ ಬೋರ್ಡ್ ನಿಂದ 10 ಮಹಿಳಾ ಶಾಲೆ- ಕಾಲೇಜುಗಳ ಆರಂಭ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸ್ಥಳಗಳನ್ನು ಗುರುತಿಸಲಾಗಿದೆ.
ಮಹಿಳೆಯರ ಕಾಲೇಜು ನಿರ್ಮಾಣಕ್ಕೆ 2.5 ಕೋಟಿ ರೂ. ಬಳಸಲು ತೀರ್ಮಾನ
ಬೆಂಗಳೂರು (ಡಿ.1): ರಾಜ್ಯದಲ್ಲಿರುವ ವಕ್ಫ್ ಬೋರ್ಡ್ ನಲ್ಲಿರುವ 25 ಕೋಟಿ ರೂ.ಗಳಲ್ಲಿ 10 ಮಹಿಳೆಯರ ಕಾಲೇಜು ಆರಂಭಿಸಲು ಉದ್ದೇಶಿಸಲಾಗಿದೆ. ಮಂಗಳೂರು ಕೊಡಗು, ಚಿಕ್ಕಮಗಳೂರು ಕಲ್ಬುರ್ಗಿ ಸೇರಿದಂತೆ ಹತ್ತು ಜಿಲ್ಲೆಗಳಲ್ಲಿ ಮಹಿಳೆಯರ ಕಾಲೇಜು ಸ್ಥಾಪಿಸಲು 6 ತಿಂಗಳ ಹಿಂದೇಯೇ ತೀರ್ಮಾನ ಮಾಡಿದ್ದೇವೆ ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಎನ್. ಕೆ.ಮುಹಮ್ಮದ್ ಶಾಫಿ ಸಅದಿ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ವಕ್ಫ್ ಬೋರ್ಡ್ 10 ಸ್ಥಳದಲ್ಲಿ ಮಹಿಳಾ ಶಾಲೆ- ಕಾಲೇಜು ನಿರ್ಮಾಣದ ಬಗ್ಗೆ ತೀರ್ಮಾನಿಸಲಾಗಿದೆ. ವಕ್ಫ್ ಬೋರ್ಡ್ ನ ಅಧೀನದಲ್ಲಿ 42 ಸಾವಿರ ಅಧೀನ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಈ ಸಂಸ್ಥೆಗಳಿಂದಲೇ ಶಾಲಾ ಕಾಲೇಜು ಸ್ಥಾಪಿಸಲಾಗುತ್ತದೆ. ಆದರೆ, ಅವರಿಗೆ ವಕ್ಫ್ ಬೋರ್ಡ್ ನಿಂದ 2 ರಿಂದ 2.5 ಕೋಟಿ ರೂ ನೀಡುತ್ತೇವೆ. ವಕ್ಫ್ ಬೋರ್ಡ್ ನ ರಾಜ್ಯ ಸರ್ಕಾರದ ಅನುದಾನದಲ್ಲಿ 25 ಕೋಟಿ ಅನುದಾನ ಇದೆ. ಅದರಲ್ಲಿ ಮಹಿಳೆಯರ ಸಬಲೀಕರಣ ಉದ್ದೇಶದಿಂದ ಶಾಲಾ ಕಾಲೇಜು ನಿರ್ಮಾಣಕ್ಕೆ ಹಣವನ್ನ ಕೊಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕರ್ನಾಟಕದ 10 ಕಡೆ ಮುಸ್ಲಿಂ ಕಾಲೇಜು: ಶೀಘ್ರ ಸಿಎಂ ಶಂಕು
ವಕ್ಫ್ ಬೋರ್ಡ್ ಸಂಸ್ಥೆಗಳಿಂದ ನಿರ್ಮಾಣ: ವಕ್ಫ್ ಬೋರ್ಡ್ ವತಿಯಿಂದ ನೇರವಾಗಿ ಶಾಲಾ ಕಾಲೇಜು ನಿರ್ಮಾಣ ಮಾಡುವುದಿಲ್ಲ. ನಮ್ಮ ಮಂಡಳಿಯ ಅಧೀನದಲ್ಲಿರುವ ಶಿಕ್ಷಣ ಸಂಸ್ಥೆಗಳು ಶಾಲಾ ಕಾಲೇಜು ನಿರ್ಮಾಣ ಮಾಡಲಿವೆ. ಭೇಟಿ ಬಚಾವೊ, ಭೇಟಿ ಪಡಾವೊ ಯೋಜನೆ ಅಡಿಯಲ್ಲಿ ಹಣ ಮತ್ತು ಜಾಗವನ್ನ ಕೊಡಲಾಗುತ್ತದೆ. ಇನ್ನು ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡುವ ಮೊದಲು ಸರ್ಕಾರದ ಅನುಮತಿ ಪಡೆಯಬೇಕು. ಇದಕ್ಕಾಗಿ ಪ್ರಸ್ತಾವನೆ ಸಿದ್ದಪಡಿಸುತ್ತಿದ್ದೇವೆ. ಆದರೆ, ಈವರೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿಲ್ಲ. ಸರ್ಕಾರದಿಂದ ಒಪ್ಪಿಗೆ ಕೊಟ್ಟ ಬಳಿಕ ಹಣ ಬಿಡುಗಡೆ ಮಾಡುತ್ತೇವೆ. ಇಲ್ಲದಿದ್ದರೆ ಹಣ ನೀಡುವುದಿಲ್ಲ ಎಂದರು.
ಎಲ್ಲ ಸಮುದಾಯದವರ ಕಲಿಕೆಗೆ ಆದ್ಯತೆ: ವಕ್ಫ್ ಬೋರ್ಡ್ ಅಧೀನದಲ್ಲಿರುವ ಶಾಲೆ- ಕಾಲೇಜುಗಳಲ್ಲಿ ಯಾವ ಸಮುದಾಯದ ವಿದ್ಯಾರ್ಥಿನಿಯರು ಬೇಕಾದರೂ ಶಿಕ್ಷಣ ಅಭ್ಯಾಸ ಮಾಡಬಹುದು. ಇದು ಕೇವಲ ಮುಸ್ಲಿಂ ಮಹಿಳೆಯರಿಗೆ ಮಾತ್ರ ಸೀಮಿತವಾಗಿ ಇರುವುದಿಲ್ಲ. ಸರ್ಕಾರ ನಮ್ಮ ಪ್ರಸ್ತಾವನೆಯನ್ನ ಒಪ್ಪುವ ಸಾಧ್ಯತೆ ವಿಶ್ವಾಸ ಇದೆ. ಮುಂಬರುವ ವಿಧಾನಸಭಾ ಚುನಾವಣೆಯಿಂದ ಯಾವ ವಿಚಾರದಲ್ಲಿ ಬೇಕಾದರೂ ನೀವು ರಾಜಕಾರಣ ಮಾಡಿ. ಆದರೆ, ಮಹಿಳೆಯರ ಶಿಕ್ಷಣ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ಮನವಿ ಮಾಡಿದ್ದಾರೆ.
ಕರ್ನಾಟಕದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕಾಲೇಜು: ಸಿಎಂ ಬೊಮ್ಮಾಯಿ ಹೇಳಿದ್ದಿಷ್ಟು
ಶಿಕ್ಷಣ ವಿಚಾರದಲ್ಲಿ ಕೋಮು ಬಣ್ಣ ಬೇಡ: ಇನ್ನು ರಾಜ್ಯದಲ್ಲಿ ಹಿಂದುಗಳ ದೇವಾಲಯದ ಜಾತ್ರೆಗಳಲ್ಲಿ ಹಿಂದೂಯೇತರ ವರ್ತಕರಿಗೆ ಅವಕಾಶ ನೀಡದಂತೆ ಹಿಂದೂಪರ ಸಂಘಟನೆಗಳು ಹೋರಾಟ ಮಾಡುಯತ್ತಿರುವ ವಿಚಾರದ ಬಗ್ಗೆ ಮಾತನಾಡುವುದಿಲ್ಲ. ನಾನು ಮನುಷ್ಯ ಧರ್ಮದ ಪ್ರತಿಪಾದಕ ಆಗಿದ್ದೇನೆ. ಮನುಷ್ಯತ್ವ ಇಲ್ಲದ ಯಾವ ವಿಷಯದ ಬಗ್ಗೆಯೂ ಮಾತನಾಡುವುದಿಲ್ಲ. ಶಿಕ್ಷಣ ವಿಚಾರದಲ್ಲಿ ಯಾರು ಕೋಮು ಬಣ್ಣ ಬಳಿಯಬಾರದು. ವಕ್ಫ್ ಬೋರ್ಡ್ ಜಾಗವನ್ನ ರಕ್ಷಿಸುವ ಬಗ್ಗೆ ಸರ್ಕಾರ ನಮಗೆ ಸೂಚನೆ ನೀಡಿದೆ. ಆ ನಿಟ್ಟಿನಲ್ಲಿ ನಾವು ಮುಂದಾಗುತ್ತಿದ್ದೇವೆ. ಇದನ್ನ ಸಹಿಸದವರು ಇದಕ್ಕೆ ಕೊಕ್ಕೆ ಹಾಕಲು ಮುಂದಾಗಿದ್ದು, ವಿವಾದ ಸೃಷ್ಟಿಸಿದ್ದಾರೆ ಎಂದರು.