* ವಿದ್ಯುತ್ ಸಂಪರ್ಕ ಬೇಕಾದವರಿಗೆ ಸಿಹಿ ಸುದ್ದಿ* ಇನ್ಮುಂದೆ ಸಂಪರ್ಕಕ್ಕೆ ಒಸಿ ಅಗತ್ಯವಿಲ್ಲ* OC ರೂಲ್ಸ್ ತೆಗೆದು ಹಾಕಿದ ವಿದ್ಯುತ್ ನಿಯಂತ್ರಣ ಆಯೋಗ
ಬೆಂಗಳೂರು, (ಜುಲೈ. 02): ವಿದ್ಯುತ್ ಸಂಪರ್ಕ ಪಡೆಯಲು ಓಸಿ ನಿಯಮವನ್ನು KREC ತೆಗೆದು ಹಾಕಿದ್ದು, ಇನ್ಮುಂದೆ ವಿದ್ಯುತ್ ಸಂಪರ್ಕ ಪಡೆಯಲು ಒಸಿ ಕಡ್ಡಾಯವಲ್ಲ. ಈ ಬಗ್ಗೆ ಇಂಧನ ಸಚಿವ ವಿ. ಸುನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ.
ಉದ್ಯಮ, ವಾಣಿಜ್ಯ ಮಳಿಗೆ, ವಾಸದ ಮನೆಗೆ ಒಸಿ ಅಗತ್ಯವಿತ್ತು. ಬಿಬಿಎಂಪಿ, ಸ್ಥಳೀಯ ಸಂಸ್ಥೆಗಳಿಂದ ಒಸಿ ಪಡೆಯಬೇಕಾಗಿತ್ತು. ಒಸಿ ಇದ್ದವರಿಗೆ ಮಾತ್ರ ವಿದ್ಯುತ್ ಸಂಪರ್ಕ ನೀಡಲಾಗುತ್ತಿತ್ತು. ಸಿಎಂ ಅನುಮೋದನೆಯೊಂದಿಗೆ ಸರ್ಕಾರ ಮನವಿ ಸಲ್ಲಿಸಿದ್ದು, ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ ನಿಯಮ ತೆಗೆದುಹಾಕಿದೆ.
ಬಿಜೆಪಿಯ ಬೆಂಗಳೂರು ಶಾಸಕರು ಇಂಧನ ಸಚಿವ ವಿ.ಸುನೀಲ್ ಕುಮಾರ್ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ನಿಯಮ ಬದಲಾವಣೆ ಮಾಡುವಂತೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸಾಧ್ಯತೆಯನ್ನು ಪರಿಶೀಲನೆಗೆ ಕ್ರಮ ಕೈಗೊಳ್ಳುವಂತೆ ಸುನೀಲ್ ಕುಮಾರ್ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರ ಜತೆ ಚರ್ಚೆ ನಡೆಸಿದ್ದರು. ನಂತರ ಕೆಇಆರ್ ಸಿಗೆ ಪತ್ರ ಬರೆಯಲಾಗಿತ್ತು. ಈ ಬಗ್ಗೆ ಸಾರ್ವಜನಿಕ ಅಹವಾಲು ಸ್ವೀಕರಿಸಿದ ಆಯೋಗ ಹೊರಡಿಸಿದ ಆದೇಶ ಈಗ ರಾಜ್ಯಪತ್ರದ ಮೂಲಕ ಅಧಿಕೃತಗೊಂಡಿದೆ. ಇನ್ನು ಮುಂದೆ ಗುರುತಿನ ಚೀಟಿ ಹಾಗೂ ಸ್ವತ್ತಿನ ಹಕ್ಕುಪತ್ರ ಇದ್ದರೆ ವಿದ್ಯುತ್ ಸಂಪರ್ಕ ಪಡೆಯಬಹುದಾಗಿದೆ.
ರಾಜ್ಯದ ಜನತೆಗೆ ವಿದ್ಯುತ್ ಶಾಕ್, ಜುಲೈ 1ರಿಂದ ದರ ಏರಿಕೆ, ಕೆಇಆರ್ಸಿ ಒಪ್ಪಿಗೆ
ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಸುನೀಲ್ ಕುಮಾರ್, ಕಟ್ಟಡಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದ ನಿರಾಕ್ಷೇಪಣಾ ಪತ್ರ (ಓಸಿ) ಇಲ್ಲ ಎಂಬ ಕಾರಣಕ್ಕೆ ವಿದ್ಯುತ್ ಸಂಪರ್ಕ ನಿರಾಕರಣೆ ಇನ್ನು ಸಾಧ್ಯವಿಲ್ಲ. ಕಾಂಗ್ರೆಸ್ ಕಾಲದ ಈ 'ಕತ್ತಲೆಭಾಗ್ಯದ' ನಿಯಮವನ್ನು ಕೊನೆಗೂ ನಿವಾರಿಸಿದ್ದೇವೆ. ನಿಯಮ ಬದಲಾಯಿಸಿ KREC ಹೊರಡಿಸಿದ್ದ ಆದೇಶ ಇಂದಿನಿಂದಲೇ ರಾಜ್ಯಪತ್ರದ ಮೂಲಕ ಜಾರಿಗೆ ಬರುತ್ತಿದೆ. ಸರ್ವರಿಗೂ ಬೆಳಕು ಎಂಬ ನಮ್ಮ ಧ್ಯೇಯವಾಕ್ಯಕ್ಕೆ ಇನ್ನು ಯಾವುದೇ ಅಡ್ಡಿ ಇಲ್ಲ ಎಂದು ಆದೇಶದ ಮಾಹಿತಿ ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 5 ಲಕ್ಷ ಕುಟುಂಬಗಳಿಗೆ ಇದು ಅನುಕೂಲವಾಗಲಿದೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಈ ಕತ್ತಲೆ ಭಾಗ್ಯದ ಕಾನೂನನ್ನು ಜಾರಿಗೆ ಬಂದಿದ್ದು, ನಮ್ಮ ಸರಕಾರ ಅದನ್ನು ಬದಲಾಯಿಸಿದೆ. ಎಲ್ಲರ ಮನೆಯಲ್ಲೂ ಬೆಳಕು ಮೂಡಲಿದೆ ಎಂದಿದ್ದಾರೆ. ಕಳೆದ ಐದು ವರ್ಷಗಳಿಂದ ಈ ಸಮಸ್ಯೆ ಬೆಂಗಳೂರಿನ ನಾಗರಿಕರನ್ನು ಕಾಡುತ್ತಿದ್ದು, ಬಿಬಿಎಂಪಿ ಹಾಗೂ ಇಂಧನ ಇಲಾಖೆಯ ಈ ಧೋರಣೆ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದರು.
ಇದರ ಕುರಿತು ಕರ್ನಾಟಕ ಬಿಜೆಪಿ ಸಹ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಅವಧಿಯಲ್ಲಿ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕವಿದ ಕತ್ತಲೆಯನ್ನು ಬೊಮ್ಮಾಯಿ ಸರ್ಕಾರ ಹೊಸಬೆಳಕು ನೀಡಿ ಬೆಳಗಿಸಿದೆ. ಇನ್ನು ಮುಂದೆ ಕಟ್ಟಡ ಕಟ್ಟುವವರು ವಾಸ ಪ್ರಮಾಣಪತ್ರವಿಲ್ಲದೆಯೂ ವಿದ್ಯುತ್ ಸಂಪರ್ಕ ಪಡೆಯಬಹುದು. ಸರ್ವರಿಗೂ ಸದಾ ಬೆಳಕು ಎನ್ನವ ಧ್ಯೇಯದಿಂದ ಬಿಜೆಪಿ ಸರ್ಕಾರ ಹೊಸ ನಿಯಮ ಜಾರಿ ಮಾಡಿದೆ ಎಂದು ಕಾಂಗ್ರೆಸ್ಗೆ ಟಾಂಗ್ ಕೊಟ್ಟಿದೆ.
