ಗೃಹಜ್ಯೋತಿ ಗೆ ಅರ್ಜಿ ಸಲ್ಲಿಸಲು ಗಡುವನ್ನು ವಿಧಿಸಿಲ್ಲ. ಎರಡರಿಂದ ಮೂರು ತಿಂಗಳು ಸಮಯಾವಕಾಶ ಇದೆ ಎಂದು ಇಂಧನ ಸಚಿವ  ಕೆ ಜೆ ಜಾರ್ಜ್ ಸ್ಪಷ್ಟಪಡಿಸಿದ್ದಾರೆ.

ಚಿಕ್ಕಮಗಳೂರು (ಜು.1): ಗೃಹ ಜ್ಯೋತಿ ಯೋಜನೆಯ ಜೂನ್ ಮಾಹೆಯ ವಿದ್ಯುತ್ ಬಿಲ್ ಜುಲೈಗೆ ಬರುತ್ತೆ ಅದನ್ನು ಕಟ್ಟಬೇಕಾಗುತ್ತದೆ. ಜುಲೈ ತಿಂಗಳಿನಿಂದ ಯೋಜನೆ ಅನ್ವಯವಾಗುತ್ತದೆ. ಅದು ಉಚಿತವಾಗಲಿದ್ದು ಆಗಸ್ಟ್‌ನಿಂದ ಅರ್ಹರು ಬಿಲ್ ಕಟ್ಟುವಂತಿರುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು. ಚಿಕ್ಕಮಗಳೂರು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗೃಹಜ್ಯೋತಿ ಗೊಂದಲಗಳು ಬಗೆಹರಿದಿವೆ. ಸುಮಾರು 85 ರಿಂದ 86 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ. ಪ್ರತಿ ದಿನ ಅರ್ಜಿಗಳು ಬರುತ್ತಿವೆ. ಮುಂದಿನ ತಿಂಗಳು 25 ರ ವರೆಗೆ ಅರ್ಜಿ ಸಲ್ಲಿಸಬಹುದು ಒಂದೊಮ್ಮೆ ಅವರು ಅರ್ಜಿ ಸಲ್ಲಿಸದೇ ಇದ್ದಲ್ಲಿ ಒಂದು ತಿಂಗಳ ಬಿಲ್ ಕಟ್ಟಬೇಕಾಗುತ್ತದೆ. ಮತ್ತೆ ಅವರು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಆದಷ್ಟು ಬೇಗ ಎಲ್ಲರೂ ಅರ್ಜಿ ಸಲ್ಲಿಸಬೇಕು ಎಂದರು.

ಅರ್ಜಿ ಸಲ್ಲಿಸಲು ಗಡುವನ್ನು ವಿಧಿಸಿಲ್ಲ: 
ಸದ್ಯಕ್ಕೆ ಅರ್ಜಿ ಸಲ್ಲಿಸಲು ಗಡುವನ್ನು ವಿಧಿಸಿಲ್ಲ. ಎರಡರಿಂದ ಮೂರು ತಿಂಗಳು ಸಮಯಾವಕಾಶ ಕೊಡುತ್ತೇವೆ. ಅಷ್ಟರಲ್ಲಿ ಯಾರೂ ಅರ್ಜಿ ಹಾಕದಿದ್ದರೆ ಅರ್ಜಿ ಪಡೆಯುವುದನ್ನು ನಿಲ್ಲಿಸಬೇಕಾಗುತ್ತದೆ. ಭಾಗ್ಯ ಜ್ಯೋತಿ ಯೋಜನೆಯ ಫಲಾನುಭವಿಗಳು ಸಹ ಗೃಹ ಜ್ಯೋತಿ ಲಾಭ ಪಡೆಯಲು ಅರ್ಜಿಯನ್ನು ಸಲ್ಲಿಸಲೇ ಬೇಕಾಗುತ್ತದೆ ಎಂದರು.ಬಾಡಿಗೆ ಮನೆಯವರದ್ದು, ಹೊಸದಾಗಿ ಬಾಡಿಗೆ ಬಂದವರದ್ದು ಹೀಗೆ ಕೆಲವು ಗೊಂದಲಗಳು ನಮ್ಮ ಗಮನಕ್ಕೆ ಬಂದ ಕೂಡಲೇ ಸರಿಪಡಿಸುವ ಕೆಲಸವನ್ನು ಮಾಡಿದ್ದೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಟಿ.ಡಿ. ರಾಜೇಗೌಡ, ಆನಂದ್‌, ಜಿಲ್ಲಾಧಿಕಾರಿ ಮೀನಾ ನಾಗರಾಜ್‌, ಮಾಜಿ ಸಚಿವ ಬಿ.ಬಿ. ನಿಂಗಯ್ಯ, ಎಸ್ಪಿ ಉಮಾ ಪ್ರಶಾಂತ್‌ ಇದ್ದರು.

'ಅಕ್ಕಿ ಕೊಡದವರು ನಾವು ರೊಕ್ಕ ಕೊಡುವುದನ್ನು ಏಕೆ ಪ್ರಶ್ನಿಸ್ತಾರೆ ?' ಬಿಜೆಪಿ ವಿರುದ್ಧ ಶಾಸಕ ಹಿಟ್ನಾಳ್ ಕಿಡಿ

ವಿದ್ಯುತ್‌ ದರ ಹೆಚ್ಚಳ ಖಂಡಿಸಿ ಪ್ರತಿಭಟನೆ
ಗಂಗಾವತಿ: ವಿದ್ಯುತ ದರ ಹೆಚ್ಚಳ ಮತ್ತು ಎಪಿಎಂಸಿ ಕಾಯ್ದೆ ವಾಪಸಾತಿಗೆ ಆಗ್ರಹಿಸಿ ತಾಲೂಕು ರೈಸ್‌ ಮಿಲ್‌ ಅಸೋಸಿಯೇಷನ್‌ ನೇತೃತ್ವದಲ್ಲಿ ರೈಸ್‌ಮಿಲ್‌ ಮಾಲೀಕರು ಪ್ರತಿಭಟನೆ ನಡೆಸಿದರು.

ನಗರದ ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿಯಿಂದ ಮಹಾತ್ಮಗಾಂಧಿ ವೃತ್ತದವರಿಗೂ ಮೆರವಣಿಗೆ ನಡೆಸಿದ ಮಾಲೀಕರು ಕೂಡಲೇ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

ಗ್ಯಾರಂಟಿ ಯೋಜನೆಗಳ ಜಾರಿಗಾಗಿ 4ರಂದು ಇಡೀ ದಿನ ಬಿಜೆಪಿ ಧರಣಿ: ಬಿಎಸ್‌ವೈ

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಅಕ್ಕಿ ಗಿರಣಿ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಪರಣ್ಣ ಮುನವಳ್ಳಿ, ರಾಜ್ಯ ಸರ್ಕಾರ ಕೂಡಲೆ ವಿದ್ಯುತ್‌ ದರ ಕಡಿಮೆ ಮಾಡಬೇಕು, ಇಲ್ಲದಿದ್ದರೆ ಮಿಲ್‌ ನಡೆಸುವದು ಕಷ್ಟಕವಾಗುತ್ತದೆ. ವಿದ್ಯುತ್‌ ದರ ಹೆಚ್ಚಳದಿಂದ ಈಗಾಗಲೇ ಅಕ್ಕಿ ಗಿರಣಿದಾರರಿಗೆ ಆರ್ಥಿಕವಾಗಿ ಹೊರೆಯಾಗಿದೆ.ಆದ್ದರಿಂದ ವಿದ್ಯುತ್‌ ದರ ಹೆಚ್ಚಳ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಉದ್ಯಮಿಗಳಾದ ಸರ್ವೇಶ್‌ ಮಾಂತಗೊಂಡ, ಸಿದ್ದಣ್ಣ ಮಸ್ಕಿ, ಮಸ್ಕಿ ಸಿದ್ದರಾಮಪ್ಪ, ಗುಲ್‌ಚಂದ್‌ ಮೋಥಾ,ಸುಭಾಸ್‌ ಬೊಂಬ್‌, ಎನ್‌.ಆರ್‌.ಸೂರ್ಯನಾರಾಯಣ,ಎಸ್‌ವಿಎಲ್‌ ನಾಗೇಶ್ವರರಾವ್‌,ಸಾಗರ ಮುಷ್ಟಿ,ಉಮೇಶ ಸಿಂಗನಾಳ, ಗುರುನಾಥಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.