ರಾಜ್ಯದಲ್ಲಿ ತಗ್ಗಿದ ವರುಣನ ಅಬ್ಬರ: ಈ ಭಾಗದಲ್ಲಿ ಇನ್ನೂ 2 ದಿನ ಮಳೆ
* 7 ಜಿಲ್ಲೆಗೆ ಯೆಲ್ಲೋ ಅಲರ್ಟ್
* ಮಲೆನಾಡು, ಕರಾವಳಿಯಲ್ಲಿ ಇನ್ನೂ 2 ದಿನ ಮಳೆ
* ಜು.25ರಂದು ರಾಜ್ಯದಲ್ಲಿ ಮಳೆ ಅಬ್ಬರ ಕಡಿಮೆ
ಬೆಂಗಳೂರು(ಜು.26): ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಅಬ್ಬರಿಸಿದ್ದ ಮಳೆ ಭಾನುವಾರ ತಗ್ಗಿದ್ದು, ಕೆಲವೆಡೆ ಮಾತ್ರ ಬಿರುಸಿನ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜು.18ರಿಂದ ಆರಂಭವಾಗಿದ್ದ ಮಳೆ ಬಹುತೇಕ ರಾಜ್ಯದೆಲ್ಲಡೆ ಧಾರಾಕಾರವಾಗಿ ಸುರಿದಿದೆ. ಹವಾಮಾನದಲ್ಲಿ ಅಷ್ಟಾಗಿ ಬದಲಾವಣೆಗಳು ಆಗದ ಹಿನ್ನೆಲೆಯಲ್ಲಿ ಜು.25ರಂದು ರಾಜ್ಯದಲ್ಲಿ ಮಳೆ ಅಬ್ಬರ ಕಡಿಮೆಯಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಬೆಳಗಾವಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ 10 ಸೆಂ.ಮೀ.ಗಿಂತ ಕಡಿಮೆ ಮಳೆ ದಾಖಲಾಗಿದೆ.
ಮಳೆ ಇಳಿಮುಖ, ಕೆಲವೆಡೆ ಪ್ರವಾಹ ಯಥಾಸ್ಥಿತಿ
ಮುಂದಿನ 48 ಗಂಟೆ ಮಲೆನಾಡು ಮತ್ತು ಕರಾವಳಿಯ ಏಳು ಜಿಲ್ಲೆ ಹೊರತುಪಡಿಸಿ ಉಳಿದೆಡೆ ತುಂತುರು ಮಳೆಯಾಗುವ ಸಂಭವವಿದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಜು.27ರವರೆಗೆ ಹಾಗೂ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಜು.26ರಂದು ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ.
ಭಾನುವಾರ ಬೆಳಗ್ಗೆ 8-30ಕ್ಕೆ ಕೊನೆಗೊಂಡ ಕಳೆದ 24ಗಂಟೆಯಲ್ಲಿ ಶಿವಮೊಗ್ಗದ ತೀರ್ಥಹಳ್ಳಿ, ಆಗುಂಬೆಯಲ್ಲಿ ತಲಾ 10 ಸೆಂ.ಮೀ. ಅಧಿಕ ಮಳೆ ಸುರಿದಿದೆ. ಉಳಿದಂತೆ ಉಡುಪಿಯ ಕೊಲ್ಲೂರು 8, ಬೆಳಗಾವಿ ಜಿಲ್ಲೆಯ ಲೊಂಡಾ ಮತ್ತು ಚಿಕ್ಕಮಗಳೂರಿನ ಮಡಿಕೇರಿ, ಕೊಪ್ಪದಲ್ಲಿ ತಲಾ 6, ಉತ್ತರ ಕನ್ನಡದ ಭಟ್ಕಳ, ಕದ್ರಾ, ಶಿರಾಲಿ, ದಕ್ಷಿಣ ಕನ್ನಡದ ಸುಬ್ರಹ್ಮಣ್ಯ, ಶಿವಮೊಗ್ಗದ ತಾಳಗುಪ್ಪ, ಚಿಕ್ಕಮಗಳೂರಿನ ಶೃಂಗೇರಿ, ಜಯಪುರ ಮತ್ತು ಹಾಸನದ ಸಕಲೇಶಪುರದಲ್ಲಿ ತಲಾ 5 ಸೆಂ.ಮೀ.ಮಳೆ ದಾಖಲಾಗಿದೆ.