ಕೇಂದ್ರ ಸರ್ಕಾರದ ಅಂಗವಿಕಲರ ಸಬಲೀಕರಣ ಇಲಾಖೆ ನೀಡುವ ಬಹು ಅಂಗವಿಕಲತೆ ಗುರುತಿನ ಚೀಟಿ (ಯುಡಿಐಡಿ) ಹೊಂದಿರುವ ವ್ಯಕ್ತಿಗಳು ಹೆದ್ದಾರಿಗಳಲ್ಲಿ ಟೋಲ್‌ ಶುಲ್ಕ ಪಾವತಿಸದೆ ಸಂಚರಿಸಲು ಅವಕಾಶವಿದ್ದರೂ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇ ಟೋಲ್‌ ಸಿಬ್ಬಂದಿ ಅದನ್ನು ಪರಿಗಣಿಸದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬೆಂಗಳೂರು (ನ.27): ಕೇಂದ್ರ ಸರ್ಕಾರದ ಅಂಗವಿಕಲರ ಸಬಲೀಕರಣ ಇಲಾಖೆ ನೀಡುವ ಬಹು ಅಂಗವಿಕಲತೆ ಗುರುತಿನ ಚೀಟಿ (ಯುಡಿಐಡಿ) ಹೊಂದಿರುವ ವ್ಯಕ್ತಿಗಳು ಹೆದ್ದಾರಿಗಳಲ್ಲಿ ಟೋಲ್‌ ಶುಲ್ಕ ಪಾವತಿಸದೆ ಸಂಚರಿಸಲು ಅವಕಾಶವಿದ್ದರೂ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇ ಟೋಲ್‌ ಸಿಬ್ಬಂದಿ ಅದನ್ನು ಪರಿಗಣಿಸದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಐಟಿಐ ಅಂಗವಿಕಲ ನೌಕರರ ಕಲ್ಯಾಣ ಸಂಘದ ಸಂಸ್ಥಾಪನಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಮೂರ್ತಿ ಅವರು, ನನ್ನ ಬಳಿ ಕೇಂದ್ರ ಸರ್ಕಾರ ನೀಡಿರುವ ಯುಡಿಐಡಿ ಇದೆ. ಈ ಐಡಿ ಇರುವ ಪ್ರತಿಯೊಬ್ಬರೂ ಎಲ್ಲ ಹೆದ್ದಾರಿಗಳಲ್ಲಿ ತಮ್ಮ ವಾಹನಗಳಿಗೆ ಟೋಲ್‌ ಶುಲ್ಕ ಪಾವತಿಸದೆ ಸಂಚರಿಸಲು ಕಾನೂನಾತ್ಮಕವಾಗಿ ಮಾನ್ಯತೆ ಮಾಡಬೇಕು. ನೈಸ್‌ ರಸ್ತೆ ಸೇರಿದಂತೆ ರಾಜ್ಯದ ಇತರೆ ಟೋಲ್‌ಗಳಲ್ಲಿ ಇದನ್ನು ಪರಿಗಣಿಸುತ್ತಿದ್ದಾರೆ. ಆದರೆ, ಬೆಂಗಳೂರು ಮೈಸೂರು ಹೆದ್ದಾರಿ ಟೋಲ್‌ನಲ್ಲಿ ಮಾತ್ರ ಪರಿಗಣಿಸುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಟೋಲ್‌ ಸಿಬ್ಬಂದಿ ಬೇಜವಾಬ್ದಾರಿತನದಿಂದ ವರ್ತಿಸುತ್ತಾರೆ ಎಂದು ಆರೋಪಿಸಿದ್ದಾರೆ.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್‌ ತಪ್ಪಿಸಲು, ಮಂಡ್ಯದಲ್ಲಿ ಹೆದ್ದಾರಿ ಸಿಬ್ಬಂದಿ ಮೇಲೆ ಹಲ್ಲೆ

ಭಾನುವಾರ ನಾನು ನನ್ನ ಮಗನೊಂದಿಗೆ ಕಾರಿನಲ್ಲಿ ಮದ್ದೂರಿಗೆ ಹೋಗುವಾಗ ನನ್ನ ಯುಡಿಐಡಿ ತೋರಿಸಿ ಶುಲ್ಕ ಪಡೆಯದಂತೆ ಮನವಿ ಮಾಡಿದರೂ ಟೋಲ್‌ ಸಿಬ್ಬಂದಿ ಪರಿಗಣಿಸಲಿಲ್ಲ. ಬೆಂಗಳೂರಿಂದ ಮದ್ದೂರಿಗೆ ಹೋಗುವಾಗ ಮತ್ತು ವಾಪಸ್‌ ಬರುವಾಗ ಎರಡೂ ಸಮಯದಲ್ಲಿ ಫಾಸ್ಟ್‌ ಟ್ಯಾಗ್‌ ಮೂಲಕ ಒಟ್ಟು ₹330 ಶುಲ್ಕ ಕಡಿತಗೊಳಿಸಿದರು. ಮಾನ್ಯತೆ ಇದ್ದರೂ ಏಕೆ ನಮ್ಮ ಐಡಿ ಪರಿಗಣಿಸುವುದಿಲ್ಲ ಎಂದು ಕೇಳಿದರೆ ಶುಲ್ಕ ಕಟ್ಟಾಗಿ ಹೋಗಿದೆ ಏನೂ ಮಾಡಲಾಗಲ್ಲ ಎಂದರು. ಶುಲ್ಕ ಮರುಪಾವತಿಗೂ ಒಪ್ಪದೆ ನಿರ್ಲಕ್ಷ್ಯ ತೋರಿದರು. ಸಿಬ್ಬಂದಿಯ ಈ ವರ್ತನೆ ವಿರುದ್ಧ ದೂರು ನೀಡುವ ಬಗ್ಗೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.