ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯನ್ನು ವಿಭಜಿಸಿ ಉದಯಗಿರಿ ಉತ್ತರ ಮತ್ತು ದಕ್ಷಿಣ ಎಂದು ಎರಡು ಠಾಣೆಗಳನ್ನಾಗಿ ಮಾಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. .

ಮೈಸೂರು (ಜೂ.21): ಸಾಂಸ್ಕೃತಿಕ ನಗರಿ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯನ್ನು ವಿಭಜಿಸಿ ಉದಯಗಿರಿ ಉತ್ತರ ಪೊಲೀಸ್ ಠಾಣೆ ಮತ್ತು ಉದಯಗಿರಿ ದಕ್ಷಿಣ ಪೊಲೀಸ್ ಠಾಣೆಯಾಗಿ ಸೃಜಿಸಲು ರಾಜ್ಯ ಸರ್ಕಾರದ ಒಳಾಡಳಿತ ಇಲಾಖೆಯು ಅನುಮತಿ ನೀಡಿ ಆದೇಶಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದರಿಂದ ಹಲವು ವರ್ಷಗಳಿಂದ ಎನ್.ಆರ್. ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ತನ್ವೀರ್ ಸೇಠ್ ಅವರು ನಡೆಸುತ್ತಿದ್ದ ಪ್ರಯತ್ನವು ಸಫಲಗೊಂಡಿದೆ. ಹಾಗೆಯೇ, ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ ಸಂಬಂಧ 18 ಪೊಲೀಸ್ ಠಾಣೆಗಳಿದ್ದು, ಈಗ ಇದರ ಸಂಖ್ಯೆ 19ಕ್ಕೆ ಏರಿಕೆ ಆಗಲಿದೆ.

ಕೋಮು ಸೂಕ್ಷ್ಮ ಪ್ರದೇಶವಾಗಿರುವ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಎರಡೂವರೆ ದಶಕಗಳಿಂದ ನಡೆಯುತ್ತಿರುವ ಅಪರಾಧ ಕೃತ್ಯ, ಕೋಮುಗಲಭೆ, ಜಾತಿ- ಧರ್ಮಗಳ ನಡುವಿನ ವೈವಿಧ್ಯಮಯ ವಿವಾದ, ಕೊಲೆ, ಕೊಲೆ ಯತ್ನ ಪ್ರಕರಣಗಳು ಮತ್ತು ಬದಲಾಗುತ್ತಿರುವ ಚುನಾವಣಾ ವ್ಯವಸ್ಥೆಯಿಂದಾಗಿ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೇಲೆ ಕಾರ್ಯದೋತ್ತಡ ಹೆಚ್ಚಾಗಿತ್ತು.

ಉದಯಗಿರಿ ಠಾಣೆ ವ್ಯಾಪ್ತಿಯಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಧರ್ಮಿಯರು ಹೆಚ್ಚಾಗಿದ್ದು, 78 ಮಸೀದಿಗಳು, 59 ದೇವಸ್ಥಾನಗಳು ಮತ್ತು 9 ಚರ್ಚ್‌ ಗಳಿವೆ. ಹೀಗಾಗಿ, ಎನ್.ಆರ್. ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರು ಉದಯಗಿರಿ ಠಾಣೆಯನ್ನು ಪ್ರತ್ಯೇಕಗೊಳಿಸಿ ಎರಡು ಠಾಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದಕ್ಕೆ ಸರ್ಕಾರ ಸ್ಪಂದಿಸಿ ಹೊಸದೊಂದು ಠಾಣೆ ಸ್ಥಾಪಿಸಲು ಅನುಮತಿ ನೀಡಿದೆ.

ಹಾಲಿ ಇರುವ ಉದಯಗಿರಿ ಠಾಣೆಯ ಕಟ್ಟಡವನ್ನು ಉದಯಗಿರಿ ದಕ್ಷಿಣ ಪೊಲೀಸ್ ಠಾಣೆಯಾಗಿ ಮಾರ್ಪಾಡು ಮಾಡಿ, ದೇವನೂರು 1ನೇ ಹಂತದಲ್ಲಿನ ಸಿಎ ನಿವೇಶನದಲ್ಲಿ ಉದಯಗಿರಿ ಉತ್ತರ ಪೊಲೀಸ್ ಠಾಣೆ ಕಟ್ಟಡ ನಿರ್ಮಿಸಬಹುದಾಗಿದೆ.