ರಾಜ್ಯದ 7 ವಿಧಾನ ಪರಿಷತ್ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ, ಕಾಂಗ್ರೆಸ್ 5 ಮತ್ತು ಬಿಜೆಪಿ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಮೈತ್ರಿ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ನಿಂದ ಒಟ್ಟು 11 ಶಾಸಕರು ಅಡ್ಡ ಮತದಾನ ಮಾಡಿದ್ದು, ಸಿಎಂ ಡಿ.ಕೆ. ಶಿವಕುಮಾರ್ ರಾಜಕೀಯ ತಂತ್ರಗಾರಿಕೆಯ ಯಶಸ್ಸು ಆಗಿದೆ.

ರಾಜ್ಯದ 7 ವಿಧಾನ ಪರಿಷತ್ ಸ್ಥಾನಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಐವರು ಹಾಗೂ ಬಿಜೆಪಿಯ ಇಬ್ಬರು ಗೆಲುವು ಸಾಧಿಸಿದ್ದಾರೆ. ಇನ್ನು ಜೆಡಿಎಸ್‌ನಿಂದ ನಿಲ್ಲಿಸಲಾಗಿದ್ದ ಅಭ್ಯರ್ಥಿ ಗೋವಿಂದರಾಜು ಅವರಿಗೆ ಸೋಲುಂಟಾಗಿದೆ. ಇದರ ಜೊತೆಗೆ ಮೈತ್ರಿ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ನಿಂದ ಒಟ್ಟು 11 ಸದಸ್ಯರು ಅಡ್ಡ ಮತದಾನ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾಂಗ್ರೆಸ್‌ನ ಅಭ್ಯರ್ಥಿಗಳ ಪಾರುಪತ್ಯ:

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಾರಥ್ಯದಲ್ಲಿ ಕಾಂಗ್ರೆಸ್ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿತ್ತು.

ಫಲಿತಾಂಶದ ಅಂಕಿ-ಅಂಶಗಳು ಹೀಗಿವೆ:

  • ಬಿ.ಕೆ. ಹರಿಪ್ರಸಾದ್: 30 ಮತಗಳು
  • ತಿಪ್ಪಣ್ಣ ಕಮಕನೂರು: 30 ಮತಗಳು
  • ಶಿವಣ್ಣ ಬಿ.ಎಸ್.: 30 ಮತಗಳು
  • ಪಿ.ವಿ. ಮೋಹನ್: 29 ಮತಗಳು
  • ವಿನಯ್ ಕಾರ್ತಿಕ್: 32 ಮತಗಳು

ಉಳಿದಂತೆ ಬಿಜೆಪಿಯಿಂದ ರಘು ಕೌಟಿಲ್ಯ 29 ಹಾಗೂ ಲಿಂಗರಾಜ ಪಾಟೀಲ 27 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಉಳಿದಂತೆ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಗೋವಿಂದರಾಜು ಅವರು ಕೇವಲ 14 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ. ಇನ್ನು ಜೆಡಿಎಸ್‌ನಲ್ಲಿ ಒಬ್ಬ ಅಭ್ಯರ್ಥಿ ಗೆಲ್ಲುವುದಕ್ಕೆ ಬೇಕಿದ್ದ ಶಾಸಕರ ಬಲವೂ ಇರಲಿಲ್ಲ. ಆದರೂ ಪಕ್ಷದ ಶಾಸಕರನ್ನು ಒಗ್ಗಟ್ಟಿನಲ್ಲಿ ಇಟ್ಟುಕೊಳ್ಳುವ ಉದ್ದೇಶದಿಂದ ಅಭ್ಯರ್ಥಿಯನ್ನು ಹಾಕಲಾಗುತ್ತಿದೆ ಎಂದು ಸ್ವತಃ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದರು.

ಮೈತ್ರಿ ಪಕ್ಷದಿಂದ 11 ಅಡ್ಡ ಮತದಾನ

ಇನ್ನು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಇದೀಗ ಲಭ್ಯವಾಗಿರುವ ಮಾಹಿತಿಯಂತೆ ಒಟ್ಟು 11 ಮತಗಳು ಅಡ್ಡಮತದಾನವಾಗಿವೆ ಎಂದು ತಿಳಿದುಬಂದಿದೆ. ಈ ಎಲ್ಲ ಅಡ್ಡಮತಗಳು ಕೂಡ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳದ್ದಾಗಿವೆ. ಅಂದರೆ ಬಿಜೆಪಿಯ 7 ಹಾಗೂ ಜೆಡಿಎಸ್‌ನ 4 ಶಾಸಕರು ತಮ್ಮ ಪಕ್ಷ ತೋರಿಸಿದ ಅಭ್ಯರ್ಥಿಯನ್ನು ಬಿಟ್ಟು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತವನ್ನು ಹಾಕಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ, ಒಬ್ಬ ಶಾಸಕರ ಮತ ಅಸಿಂಧುವಾಗಿದೆ. ಇನ್ನೂ ಚುನಾವಣಾ ಅಧಿಕಾರಿಗಳಿಂದ ಅಧಿಕೃತ ಮಾಹಿತಿ ಲಭ್ಯವಾಗಬೇಕಿದೆ.

ಟಾಸ್ಕ್‌ನಲ್ಲಿ ವಿನ್ ಆದ ಡಿಕೆಶಿ

ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಮೊದಲ ಬಾರಿಗೆ ಹೈಕಮಾಂಡ್ ಕೊಟ್ಟ ಟಾಸ್ಕ್‌ನಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ಗಳಿಸಿದ್ದಾರೆ. ಕಾಂಗ್ರೆಸ್ ಮತಗಳಷ್ಟೇ ಅಲ್ಲದೆ ಬಿಜೆಪಿ ಮತ್ತು ಜೆಡಿಎಸ್‌ನಿಂದ 11 ಮತಗಳನ್ನು ಸೆಳೆಯುವಲ್ಲಿಯೂ ಯಶಸ್ವಿಯಾಗಿದ್ದಾರೆ. ಈ ಮೂಲಕ ತಮಗೆ ಸಿಎಂ ಆದ ಬಳಿಕ ಬಂದ ಮೊದಲ ಟಾಸ್ಕ್‌ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಟ್ರಬಲ್ ಶೂಟರ್ ಮತ್ತು ರಾಜಕೀಯ ಚಾಣಾಕ್ಷತನದ ಸಾಮರ್ಥ್ಯವನ್ನು ಹೈಕಮಾಂಡ್ ಮುಂದೆ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.