ಮುಡಾ ಮಾಜಿ ಆಯುಕ್ತ ನಟೇಶ್‌ಗೆ ಮುಂಬಡ್ತಿ ನೀಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ ವಿರುದ್ಧ ಎಚ್. ವಿಶ್ವನಾಥ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರ ಆರೋಪ ಹೊತ್ತಿರುವ ಅಧಿಕಾರಿಯನ್ನು ರಕ್ಷಿಸಲಾಗುತ್ತಿದೆ ಎಂದು ಆರೋಪಿಸಿ, ಕಾಂಗ್ರೆಸ್ ಶಾಸಕರ ವಿದೇಶಿ ಪ್ರವಾಸ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಮಾಜಿ ಆಯುಕ್ತ ನಟೇಶ್‌ಗೆ ಮುಂಬಡ್ತಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಟೇಶ್‌ಗೆ ಪ್ರಮೋಷನ್ ಕೊಡಲು ಲಂಚ ನೀಡಲಾಗಿದೆ ಎಂಬ ಸ್ನೇಹಮಯಿ ಕೃಷ್ಣ ಆರೋಪದ ಬೆನ್ನಲ್ಲೇ, ಸರ್ಕಾರದ ನಡೆಗೆ ವಿಶ್ವನಾಥ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇನು ಹೊಸ ವಿಷಯವಲ್ಲ. ಈ ಎಲ್ಲ ವಿಚಾರಗಳು ಈಗಾಗಲೇ ಜನರಿಗೆ ಗೊತ್ತಿರುವ ಸಂಗತಿಗಳೇ. ನಟೇಶ್ ಒಬ್ಬ ಕರೆಪ್ಟ್ ಬಾಸ್ಟೆರ್ಡ್ ಅಧಿಕಾರಿ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ ಎಂದು ಹೇಳಿದ್ದಾರೆ.

ಅರೆಸ್ಟ್ ಮಾಡಿದರೆ ಸತ್ಯ ಹೊರಬರುತ್ತೆ ಅನ್ನೋ ಭಯ

ನಟೇಶ್ ವಿರುದ್ಧ ಗಂಭೀರ ಆರೋಪಗಳು ಮತ್ತು ತನಿಖೆಗಳು ನಡೆಯುತ್ತಿದ್ರೂ ಕೂಡ ಸರ್ಕಾರ ಅವರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ವಿಶ್ವನಾಥ್, “ಈ ಸರ್ಕಾರ ಇನ್ನೂ ಅವರನ್ನ ಅರೆಸ್ಟ್ ಮಾಡಿಲ್ಲ. ಯಾಕಂದ್ರೆ, ಅವನನ್ನ ಅರೆಸ್ಟ್ ಮಾಡಿದ್ರೆ ಸಿದ್ದರಾಮಯ್ಯ ಅವರದ್ದೇ ಅನೇಕ ಸಂಗತಿಗಳು ಹೊರಗೆ ಬರುತ್ತವೆ ಅನ್ನೋ ಭಯದಲ್ಲಿ ಬಂಧಿಸಿಲ್ಲ” ಎಂದು ಕಿಡಿಕಾರಿದ್ದಾರೆ.

ತನಿಖೆ ನಡೆಯುತ್ತಿದ್ದವರಿಗೇ ಪ್ರಮೋಷನ್ – ಯಾವ ರಾಜ್ಯದಲ್ಲಿ ಹೀಗಿದೆ?

ನಟೇಶ್ ವಿರುದ್ಧ ಕಳ್ಳತನ, ಸೈಟ್ ಹಗರಣ, ಮುಡಾ ದುರುಪಯೋಗ ಸೇರಿದಂತೆ ಗಂಭೀರ ಆರೋಪಗಳ ತನಿಖೆ ನಡೆಯುತ್ತಿದ್ದರೂ ಕೂಡ ಮುಂಬಡ್ತಿ ನೀಡಿರುವುದನ್ನು ಪ್ರಶ್ನಿಸಿದ ವಿಶ್ವನಾಥ್, ತನಿಖೆ ನಡೆಯುತ್ತಿದ್ದರೂ ಮುಂಬಡ್ತಿ ಕೊಟ್ಟಿದ್ದಾರೆ ,ಯಾವ ರಾಜ್ಯದಲ್ಲಿದೆ ಈ‌ ರೀತಿ? ಕಳ್ಳ, ಸೈಟ್ ಕದ್ದಿದ್ದಿಯಾ, ಮುಡಾ ಹಾಳು ಮಾಡಿದ್ದೀಯಾ ಅಂತ ತನಿಖೆಗೆ ನಡೆಯುತ್ತಿದ್ದರೆ ಅವನಿಗೆ ಪ್ರಮೋಷನ್ ಕೊಟ್ಟಿದ್ದೀರಾ. ಥೂ...ಥೂ..ನಗೆ ಪಾಟಲು, ನಾಚಿಕೆ ಆಗುತ್ತೆ ಸಿದ್ದರಾಮಯ್ಯ, ಇದು ನಿನ್ನ ಆಡಳಿತನಾ? ಛೀ...ಛೀ...ನೋ... ಎಂದು ಕಠೋರವಾಗಿ ಟೀಕಿಸಿದರು.

ಮೈಸೂರನ್ನು ಹಾಳು ಮಾಡಿದ ಆಡಳಿತ

ಮೈಸೂರು ನಗರಾಭಿವೃದ್ಧಿಯಲ್ಲಿ ನಡೆದ ಅಕ್ರಮಗಳ ಬಗ್ಗೆ ಮಾತನಾಡಿದ ವಿಶ್ವನಾಥ್, “ಮೈಸೂರನ್ನ ಹಾಳು ಮಾಡಿದ್ದೀರಲ್ಲಪ್ಪಾ. ಮುಡಾ ಹಾಳು ಮಾಡಿದವರನ್ನ ರಕ್ಷಿಸಿ, ಅವರಿಗೆ ಬಹುಮಾನವಾಗಿ ಮುಂಬಡ್ತಿ ಕೊಡ್ತೀರಾ?” ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಕಾಂಗ್ರೆಸ್ ಶಾಸಕರ ವಿದೇಶಿ ಪ್ರವಾಸ: ಸಿಎಂ ವಿರುದ್ಧ ಕಿಡಿ

ಇದೇ ವೇಳೆ, ಕಾಂಗ್ರೆಸ್ ಶಾಸಕರ ವಿದೇಶಿ ಪ್ರವಾಸ ವಿಚಾರದಲ್ಲೂ ಸಿಎಂ ಸಿದ್ದರಾಮಯ್ಯ ವಿರುದ್ಧ ಎಚ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು. ಕರ್ನಾಟಕದ ರಾಜಕಾರಣ ದಿನೇ ದಿನೇ ಅಧೋಗತಿಗೆ ಇಳಿಯುತ್ತಿದೆ. ಶಾಸಕರು ಯಾಕೆ ವಿದೇಶಕ್ಕೆ ಹೋಗ್ತಿದ್ದಾರೆ ಅನ್ನೋದನ್ನ ಜನರಿಗೆ ಗೊತ್ತಾಗಲ್ಲ ಅನ್ನೋ ಭ್ರಮೆ ಯಾರಿಗೂ ಬೇಡ. ಕರ್ನಾಟಕದಲ್ಲಿ 90% ಸಾಕ್ಷರತೆ ಇದೆ. ಜನರು ಮೂರ್ಖರಲ್ಲ ಎಂದರು.

ಜನರನ್ನು ಫೂಲ್ ಮಾಡೋಕೆ ಆಗಲ್ಲ

ನೀವು ಏನು ಮಾಡ್ತೀರೋದು ಜನರಿಗೆ ಚೆನ್ನಾಗಿ ಅರ್ಥವಾಗುತ್ತದೆ. ಸಿದ್ದರಾಮಯ್ಯ ಜನರನ್ನು ಫೂಲ್ ಮಾಡೋಕೆ ಆಗಲ್ಲ. ಏನೇ ಇದ್ದರೂ ನೇರವಾಗಿ ಹೇಳಿ, ಕುರ್ಚಿ ಉಳಿಸಿಕೊಳ್ಳಲು ಈ ರೀತಿ ಸರ್ಕಸ್ ಬೇಕಾ? ಇದರಿಂದ ಜನರಿಗೆ ಏನು ಪ್ರಯೋಜನ? ಕಳೆದ 2.5 ವರ್ಷಗಳಿಂದ ಇದೇ ಕಥೆ. ಕರ್ನಾಟಕದಲ್ಲಿ ಆಡಳಿತವೂ ಇಲ್ಲ, ಅಭಿವೃದ್ಧಿಯೂ ಇಲ್ಲ. ಬರೀ ಕಿರಿಚಾಟ, ಎರೆಚಾಟ ಮಾತ್ರ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನ ಓಟ್ ಕೊಟ್ಟಿರೋದು ಅಭಿವೃದ್ಧಿಗೆ, ನಾಟಕಕ್ಕೆ ಅಲ್ಲ

ಜನರು ನಿಮಗೆ ಅಧಿಕಾರ ಕೊಟ್ಟಿದ್ದು ವಿದೇಶ ಪ್ರವಾಸಕ್ಕೆ ಅಲ್ಲ. ಒಬ್ಬರಿಗೊಬ್ಬರು ಕಿತ್ತಾಡಲು, ಬೈದಾಡಲು ಅಲ್ಲ. ಜನರ ಕೆಲಸ ಮಾಡಲು, ರಾಜ್ಯದ ಅಭಿವೃದ್ಧಿಗೆ ಈ ಓಟ್ ನೀಡಲಾಗಿದೆ. ಆದರೆ ಸಿದ್ದರಾಮಯ್ಯ ನಾಯಕತ್ವದಲ್ಲಿ ಆ ಓಟ್ ದುರುಪಯೋಗವಾಗುತ್ತಿದೆ. ಇದು ಸರಿಯಲ್ಲ ಎಂದು ಎಚ್.ವಿಶ್ವನಾಥ್ ಟೀಕಿಸಿದರು.