‘ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ ಪೂರೈಕೆಯಲ್ಲಿ ಸಮಸ್ಯೆ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಸಿಲಿಂಡರ್‌ಗಳು ಕಾಳಸಂತೆಯಲ್ಲಿ ಮಾರಾಟ ಹಾಗೂ ಅಕ್ರಮ ದಾಸ್ತಾನು ಆಗದಂತೆ ಪೊಲೀಸ್‌, ಸಾರಿಗೆ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ನಿಗಾ ವಹಿಸಬೇಕು’ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ ಸೂಚನೆ ನೀಡಿದ್ದಾರೆ

ಬೆಂಗಳೂರು : ‘ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ ಪೂರೈಕೆಯಲ್ಲಿ ಸಮಸ್ಯೆ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಸಿಲಿಂಡರ್‌ಗಳು ಕಾಳಸಂತೆಯಲ್ಲಿ ಮಾರಾಟ ಹಾಗೂ ಅಕ್ರಮ ದಾಸ್ತಾನು ಆಗದಂತೆ ಪೊಲೀಸ್‌, ಸಾರಿಗೆ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ನಿಗಾ ವಹಿಸಬೇಕು’ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ ಸೂಚನೆ ನೀಡಿದ್ದಾರೆ. ಜತೆಗೆ, ಅಡುಗೆ ಅನಿಲ ಸಂಬಂಧಿಸಿದ ಸಾರ್ವಜನಿಕರ ಅಹವಾಲು ಹಾಗೂ ದೂರು ಆಲಿಸಲು ಆಹಾರ ಇಲಾಖೆಯಿಂದ ಕೂಡಲೇ ಸಹಾಯವಾಣಿ ಪ್ರಾರಂಭಿಸಬೇಕು ಎಂದು ತಿಳಿಸಿದ್ದಾರೆ.

ಹೋಟೆಲ್‌ಗಳಿಂದ ಅಂಕಿ-ಅಂಶ ಕೋರಿದ ಸಿಎಸ್‌:

ಗ್ಯಾಸ್‌ ಸಿಲಿಂಡರ್‌ ಸಮಸ್ಯೆ ಹಿನ್ನೆಲೆಯಲ್ಲಿ ಬುಧವಾರ ಪೊಲೀಸ್‌ ಇಲಾಖೆ, ಸಾರಿಗೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಹಾಗೂ ಹೋಟೆಲ್‌ ಮಾಲೀಕರ ಸಂಘದ ಜತೆ ವಿಸ್ತೃತ ಸಭೆ ನಡೆಸಿದರು.

ಸಭೆಯಲ್ಲಿ ಹೋಟೆಲ್‌ಗಳ ಬೇಡಿಕೆಯ ಶೇ.50 ರಷ್ಟು ಸಿಲಿಂಡರ್ ಆದರೂ ಪೂರೈಸಬೇಕು ಎಂದು ಹೋಟೆಲ್‌ ಮಾಲೀಕರ ಸಂಘ ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಶಾಲಿನಿ ರಜನೀಶ್, ಯುದ್ಧದ ಸ್ಥಿತಿಯಿಂದ ಅಡುಗೆ ಅನಿಲ ಸಮಸ್ಯೆ ಉದ್ಭವಿಸಿದೆ. ಹೋಟೆಲ್‌ ಮಾಲೀಕರ ಸಂಘಕ್ಕೆ ಹೆಚ್ಚು ಸಿಲಿಂಡರ್‌ ಪೂರೈಸಲು ಸಾಧ್ಯವಾಗುತ್ತಿಲ್ಲ. ಈ ಹಂತದಲ್ಲಿ ನೀವು ಸಹಕಾರ ನೀಡಬೇಕು. ನೀವು ಅಂಕಿ-ಅಂಶಗಳ ಸಹಿತ ಬುಧವಾರ ಮತ್ತೊಮ್ಮೆ ಮನವಿ ನೀಡಿದರೆ ಎಷ್ಟು ಪ್ರಮಾಣದಲ್ಲಿ ಒದಗಿಸಬಹುದು ಎಂಬುದನ್ನು ಪರಿಶೀಲಿಸುತ್ತೇವೆ ಎಂದು ಭರವಸೆ ನೀಡಿದರು ಎನ್ನಲಾಗಿದೆ.

ಕಾಳಸಂತೆಯಲ್ಲಿ ಮಾರಾಟ ಮಟ್ಟ ಹಾಕಿ:

ಅಡುಗೆ ಅನಿಲ ಕೊರತೆ ಹಿಂದೆ ಕಾಳಸಂತೆ ಮಾರಾಟಗಾರರ ಕೈವಾಡವೂ ಇರಬಹುದು. ಹೀಗಾಗಿ ಪೊಲೀಸ್‌ ಇಲಾಖೆ ಇದರ ಬಗ್ಗೆ ಕಟ್ಟೆಚ್ಚರ ವಹಿಸಬೇಕು. ಈ ಬಗ್ಗೆ ವಿಶೇಷ ಗಮನ ನೀಡಿ ಗ್ಯಾಸ್‌ ದುರ್ಬಳಕೆ ಆಗುವುದನ್ನು ತಡೆಯಬೇಕು.

ಇನ್ನು ಹೋಟೆಲ್‌ ಮಾಲೀಕರು ಸಹಜ ಖರೀದಿಗಿಂತ ಹೆಚ್ಚು ಖರೀದಿಸಬಾರದು. ಆತಂಕದಿಂದ ಹೆಚ್ಚೆಚ್ಚು ಖರೀದಿಸಿ ದಾಸ್ತಾನು ಮಾಡುತ್ತಿರುವುದರಿಂದಲೂ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಗಮನ ಹರಿಸಬೇಕು ಎಂದರು.

ಮತ್ತೊಮ್ಮೆ ಪತ್ರ ನೀಡಲು ಸಿಎಸ್‌ ಸೂಚನೆ:

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ ರಾವ್ ಸುದ್ದಿಗಾರರೊಂದಿಗೆ ಮಾತನಾಡಿ, ವಾಣಿಜ್ಯ ಸಿಲಿಂಡರ್‌ ಪೂರೈಕೆ ಸಂಪೂರ್ಣ ನಿಂತಿದೆ. ಈ ಬಗ್ಗೆ ಮುಖ್ಯಕಾರ್ಯದರ್ಶಿಗಳ ಗಮನಕ್ಕೆ ತಂದು ಶೇ.50 ರಷ್ಟು ಆದರೂ ಪೂರೈಸಬೇಕು. ಸಂಪೂರ್ಣ ಸ್ಥಗಿತಗೊಳಿಸುವುದು ಸರಿಯಲ್ಲ ಎಂದು ಹೇಳಿದ್ದೇವೆ.

ಅಂಕಿ-ಅಂಶ ಸಹಿತ ಗುರುವಾರ ಪತ್ರ ನೀಡಲು ಸೂಚಿಸಿದ್ದಾರೆ. ಅದನ್ನು ಪರಿಶೀಲಿಸಿ ಎಷ್ಟು ಸಾಧ್ಯವೋ ಅಷ್ಟು ಅನುಕೂಲ ಮಾಡುವುದಾಗಿ ಹೇಳಿದ್ದಾರೆ.

ಹೋಟೆಲ್‌ಗಳಲ್ಲಿ ಸೌದೆಯಿಂದ, ವಿದ್ಯುತ್ ಉಪಕರಣಗಳಿಂದ ಅಡುಗೆ ಮಾಡುವುದು ಕಷ್ಟ. 2,500 ಹೋಟೆಲ್‌ಗಳಿಗೆ ಗೇಲ್‌ ಸಂಪರ್ಕವಿದ್ದು, ಅವುಗಳಿಗೆ ಸಮಸ್ಯೆಯಾಗಿಲ್ಲ. ನಮಗೆ ಸೂಕ್ತ ಪರಿಹಾರ ಒದಗಿಸುವಂತೆ ಕೋರಿದ್ದೇವೆ ಎಂದರು.