ರಾಜ್ಯದ ವಿದ್ಯುತ್‌ ಸಂಪರ್ಕವಿಲ್ಲದ ಕತ್ತಲಲ್ಲಿದ್ದ ಮನೆಗಳಿಗೆ ವಿದ್ಯುತ್‌ ಸೌಲಭ್ಯ ನೀಡುವ ಕಾರ್ಯ   100 ದಿನಗಳಲ್ಲಿಯೇ 1.2 ಲಕ್ಷ ಮನೆಗಳಿಗೆ ವಿದ್ಯುತ್‌ ಸಂಪರ್ಕ - ಸಚಿವ ಸುನಿಲ್ ಕುಮಾರ್ 

 ಬೆಂಗಳೂರು(ಡಿ.12): ರಾಜ್ಯದ ವಿದ್ಯುತ್‌ ಸಂಪರ್ಕ ವಿಲ್ಲದ (Electricity) ಕತ್ತಲಲ್ಲಿದ್ದ ಮನೆಗಳಿಗೆ (House) ವಿದ್ಯುತ್‌ ಸೌಲಭ್ಯ ನೀಡುವ ಕಾರ್ಯ ವೇಗವಾಗಿ ನಡೆಯುತ್ತಿದ್ದು, ಅಧಿಕಾರ ವಹಿಸಿಕೊಂಡು 100 ದಿನಗಳಲ್ಲಿಯೇ 1.2 ಲಕ್ಷ ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡಲಾಗಿದೆ ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್‌ (V Sunil Kumar) ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಸಚಿವರು, ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತಾ ಬಂದರೂ ರಾಜ್ಯದಲ್ಲಿ (Karnataka) ಲಕ್ಷಾಂತರ ಮನೆಗಳಿಗೆ ವಿದ್ಯುತ್‌ ಸಂಪರ್ಕ ಸಿಕ್ಕಿಲ್ಲ ಎಂಬ ಮಾಹಿತಿ ನನ್ನನ್ನು ಬಹುವಾಗಿ ಕಾಡಿತ್ತು. ಆರಂಭದಲ್ಲಿ ವಿದ್ಯುತ್‌ ಸಂಪರ್ಕವಿಲ್ಲದ ಮನೆಗಳೇ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ ಪಟ್ಟು ಹಿಡಿದು ಮಾಹಿತಿ ಕಲೆ ಹಾಕುತ್ತಾ ಹೋದಾಗ ಇಷ್ಟೊಂದು ವಿಚಾರ ಲಭಿಸಿತು. ಇನ್ನೂ ವಿದ್ಯುತ್‌ ಸಂಪರ್ಕವಿಲ್ಲದ ಮನೆಗಳ ಮಾಹಿತಿ ಬರುತ್ತಲೇ ಇದೆ. ಅವುಗಳಿಗೂ ಸಂಪರ್ಕ ನೀಡುತ್ತೇವೆ. ಇಲಾಖೆಯ ಬೆಳಕು ಯೋಜನೆ ಜನಸಾಮಾನ್ಯರಿಗಾಗಿ ರೂಪಿಸಲಾಗಿದೆ.

Add Asianetnews Kannada as a Preferred SourcegooglePreferred

ಈ ಯೋಜನೆ ಅನ್ವಯ ವಿದ್ಯುತ್‌ ಸಂಪರ್ಕ ರಹಿತ ಮನೆಗಳ ಸಮೀಕ್ಷೆ ನಡೆಸಿದಾಗ ಮನೆಗಳಿಗೆ ವಿದ್ಯುತ್‌ ಸಂಪರ್ಕ ಇಲ್ಲದಿರುವುದು ಪತ್ತೆಯಾಯಿತು. ಈ ಪೈಕಿ 80,228 ಸರ್ವಿಸ್‌ ಮೇನ್‌ ಗಳಿದ್ದರೆ, 46,559 ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವುದಕ್ಕೆ ಸಂಪೂರ್ಣ ಮೂಲ ಸೌಕರ್ಯ ರಚನೆ ಮಾಡುವ ಅನಿವಾರ್ಯತೆ ಇತ್ತು. 142.44 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಅನುಷ್ಠಾನ ಕಂಡಿದೆ ಸಚಿವರು ಸುನಿಲ್ ಕುಮಾರ್ ತಿಳಿಸಿದ್ದಾರೆ.

ನಿರ್ಬಂಧ ಸಡಿಲ: ಗ್ರಾಮೀಣ ಪ್ರದೇಶದಲ್ಲಿ (Rural Area) ವಿದ್ಯುತ್‌ ಸಂಪರ್ಕ ಕಲ್ಪಿಸುವುದಕ್ಕೆ ಈ ಹಿಂದೆ ಸ್ಥಳೀಯ ಆಡಳಿತದಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ NOC) ಪಡೆಯುವುದು ಕಡ್ಡಾಯವಾಗಿತ್ತು. ಈ ನಿಯಮಕ್ಕೆ ಹಲವೆಡೆ ಸ್ಥಳೀಯ ಆಡಳಿತದಿಂದಲೇ ಸಮಸ್ಯೆ ಉಂಟಾಗಿತ್ತು. ಈ ಹಿನ್ನೆಯಲ್ಲಿ ಯಾರಿಗೆ ಮನೆ ಇದೆಯೋ ಅವರೆಲ್ಲರಿಗೂ ಸಂಪರ್ಕ ನೀಡಬೇಕು. ರೇಷನ್‌ ಕಾರ್ಡ್‌ (Ration Card), ಆಧಾರ್‌ ಕಾರ್ಡ್‌ (Aadhaar Card), ಮತದಾರರ ಪ್ರಮಾಣ ಪತ್ರ, ಗ್ರಾಮ ಪಂಚಾಯಿತಿ ಒದಗಿಸುವ ಇನ್ನಿತರ ದಾಖಲೆ (Documents) ಸಲ್ಲಿಸಿ ವಿದ್ಯುತ್‌ ಸಂಪರ್ಕ ಪಡೆಯುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಹೀಗಾಗಿ 1.20 ಲಕ್ಷ ವಿದ್ಯುತ್‌ ಸಂಪರ್ಕ ಕಲ್ಪಿಸುವ ಗುರಿ ಕಾಲಮಿತಿಯಲ್ಲೇ ಮುಕ್ತಾಯಗೊಂಡಿದೆ ಎಂದು ಸಚಿವರು ತಿಳಿಸಿದ್ದಾರೆ.

ಇನ್ನೂ ಅರ್ಜಿ ಬರುತ್ತಿದೆ

ಇನ್ನೂ ವಿದ್ಯುತ್‌ ಸಂಪರ್ಕವಿಲ್ಲದ ಮನೆಗಳ ಮಾಹಿತಿ ಬರುತ್ತಲೇ ಇದೆ. ಅವುಗಳಿಗೂ ಸಂಪರ್ಕ ನೀಡುತ್ತೇವೆ. ಇಲಾಖೆಯ ಬೆಳಕು ಯೋಜನೆ ಜನಸಾಮಾನ್ಯರಿಗಾಗಿ ರೂಪಿಸಲಾಗಿದೆ.

- ವಿ.ಸುನಿಲ್‌ ಕುಮಾರ್‌, ಇಂಧನ ಸಚಿವ

ಮತ್ತೆ ವಿದ್ಯುತ್ ಬೆಲೆ ಏರಿಕೆ ಶಾಕ್ 

ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೇ ರಾಜ್ಯದಲ್ಲಿ(Karnataka) ಸಾರ್ವಜನಿಕರಿಗೆ ಮತ್ತೊಮ್ಮೆ ವಿದ್ಯುತ್‌(Electricity) ಶುಲ್ಕ ಹೆಚ್ಚಳದ ಶಾಕ್‌ ನೀಡಲು ಇಂಧನ ಇಲಾಖೆ(Department of Energy) ಸಜ್ಜಾಗಿದೆ. ಈಗಾಗಲೇ ಬೆಸ್ಕಾಂ ವತಿಯಿಂದ ಪ್ರತಿ ಯುನಿಟ್‌ಗೆ 1.50 ರು. ವಿದ್ಯುತ್‌ ಶುಲ್ಕ ಹೆಚ್ಚಳ ಮಾಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (KERC) ಪ್ರಸ್ತಾವನೆ ಸಲ್ಲಿಕೆಯಾಗಿದೆ.

ಇದರ ಜತೆಗೆ ಮಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (MESCOM), ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪೆನಿ(HESCOM), ಕಲಬುರಗಿ ವಿದ್ಯುತ್‌ ಸರಬರಾಜು ಕಂಪೆನಿ(GESCOM) ಹಾಗೂ ಮೈಸೂರು ಚಾಮುಂಡೇಶ್ವರಿ ವಿದ್ಯುತ್‌ ಕಂಪೆನಿಗಳೂ(CESCOM) ಸಹ ದರ ಹೆಚ್ಚಳ ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದು, ಸರಾಸರಿ ಪ್ರತಿ ಯುನಿಟ್‌ಗೆ 1 ರು.ನಿಂದ 1.50 ರು.ವರೆಗೆ ದರ ಹೆಚ್ಚಳ ಮಾಡುವಂತೆ ಸದ್ಯದಲ್ಲೇ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿವೆ. ಎಲ್ಲಾ ಎಸ್ಕಾಂಗಳ ಬೇಡಿಕೆಗಳನ್ನು ಪರಿಗಣಿಸಿ ಕೆಇಆರ್‌ಸಿಯು 2022ರ ಏ.1ರಿಂದ ಅನ್ವಯವಾಗುವಂತೆ ಫೆಬ್ರುವರಿ ಅಥವಾ ಮಾರ್ಚ್‌ ತಿಂಗಳಲ್ಲಿ ಅಂತಿಮ ದರ ಪರಿಷ್ಕರಣೆ ಪಟ್ಟಿಬಿಡುಗಡೆ ಮಾಡಲಿದ್ದು, ಅಂತಿಮವಾಗಿ ಎಷ್ಟು ದರ ಏರಿಕೆಯಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.