ಜಾರಿ ನಿರ್ದೇಶನಾಲಯದ ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆಯಾದ ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ನ್ಯಾಯದ ಮೇಲೆ ನಂಬಿಕೆ ವ್ಯಕ್ತಪಡಿಸಿದ್ದಾರೆ. ಜೈಲಿನಲ್ಲಿ ನಟ ದರ್ಶನ್‌ ಅವರನ್ನು ಭೇಟಿಯಾಗಿದ್ದಾಗಿ ತಿಳಿಸಿದ್ದಾರೆ.

ಬೆಂಗಳೂರು: ನಮ್ಮ ದೇಶದ ಕಾನೂನಿಗೆ ಎಲ್ಲರೂ ತಲೆಬಾಗಲೇ ಬೇಕು. ಜಾರಿ ನಿರ್ದೇಶನಾಲಯ(ಇ.ಡಿ.) ದಾಳಿ ವೇಳೆ ನನ್ನ ಮನೆಯಲ್ಲಿ ಹಣ ಸಿಗಲು ಸಾಧ್ಯವಿಲ್ಲ. ಕಂಪನಿಯಲ್ಲಿ ಸಿಕ್ಕಿರಬಹುದು. ನ್ಯಾಯಕ್ಕೆ ಜಯ ಸಿಗಲಿದೆ ಎಂದು ಜೈಲಿನಿಂದ ಬಿಡುಗಡೆಯಾದ ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ ಅಲಿಯಾಸ್‌ ಪಪ್ಪಿ ಹೇಳಿದ್ದಾರೆ. ಬಿಡುಗಡೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಬಿಹಾರ ಚುನಾವಣೆಗೆ ಯಾವುದೇ ಹಣ ನೀಡಿಲ್ಲ. ಜೈಲಲ್ಲಿ ಇದ್ದಾಗ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ನನ್ನನ್ನು ಭೇಟಿಯಾಗಿದ್ದರು. ನನಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಅವರು ನನ್ನಿಂದ ಯಾವುದೇ ಸಹಿ ಹಾಕಿಸಿಕೊಂಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Add Asianetnews Kannada as a Preferred SourcegooglePreferred

ಸಚಿವ ಸ್ಥಾನದ ಆಕಾಂಕ್ಷಿಯಲ್ಲ

ಸಚಿವ ಸಂಪುಟ ಪುನರ್‌ ರಚನೆ ವೇಳೆ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನಾನು ಮೊದಲ ಬಾರಿಗೆ ಶಾಸಕನಾಗಿದ್ದೇನೆ. ನಾನು ಇನ್ನೂ ಕಲಿಯುತ್ತಿದ್ದೇನೆ ಎಂದ ಅವರು, ಜೈಲಿನಲ್ಲಿ ನಾನು ಮತ್ತು ದರ್ಶನ್‌ ಒಮ್ಮೆ ಮಾತ್ರ ಭೇಟಿಯಾಗಿ ಎರಡು ನಿಮಿಷ ಮಾತನಾಡಿದ್ದೇವೆ ಎಂದು ತಿಳಿಸಿದರು. ನಮ್ಮ ಚಿತ್ರದುರ್ಗ ಜಿಲ್ಲೆಯಲ್ಲಿ ಸಾಕಷ್ಟು ಹಿರಿಯ ನಾಯಕರಿದ್ದಾರೆ. ಅವರಿಗೆ ಸಚಿವ ಸ್ಥಾನ ಸಿಗಬೇಕು. ಸಚಿವ ಸ್ಥಾನಕ್ಕಾಗಿ ನಾನು ಯಾರನ್ನೂ ಕೇಳಿಲ್ಲ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

ಜೈಲಲ್ಲಿ ದರ್ಶನ್ ಭೇಟಿ

ಜೈಲಿನಲ್ಲಿ ನಾನು ಮತ್ತು ದರ್ಶನ್‌ ಒಮ್ಮೆ ಮಾತ್ರ ಭೇಟಿಯಾಗಿ ಎರಡು ನಿಮಿಷ ಮಾತನಾಡಿದ್ದೇವೆ. ದರ್ಶನ್‌ ಅವರು ಹಿಂದಿನಿಂದಲೂ ನನಗೆ ಪರಿಚಿತರು. ಹೀಗಾಗಿ ಭೇಟಿಯಾಗಿ ಮಾತುಕತೆ ಮಾಡಿದ್ದೇವೆ. ಅವರಿಗೆ ಜೈಲಿನಲ್ಲಿರುವ ಸೌಲಭ್ಯಗಳ ಬಗ್ಗೆ ನಾವು ಚರ್ಚೆ ಮಾಡಿಲ್ಲ. ಅವರ ಬ್ಯಾರಕ್‌ ಬೇರೆ, ನನ್ನ ಬ್ಯಾರಕ್‌ ಬೇರೆ ಎಂದು ವೀರೇಂದ್ರ ಹೇಳಿದರು.