ಆಸ್ಟ್ರೇಲಿಯಾ ತಂಡ ವಿಶ್ವಕಪ್‌ ಗೆದ್ದ ಚಿತ್ರಕ್ಕಿಂತ ಆಸೀಸ್‌ ಆಲ್ರೌಂಡರ್‌ ಮಿಚೆಲ್‌ ಮಾರ್ಷ್‌ ಟ್ರೋಫಿಯ ಮೇಲೆ ಕಾಲು ಇಟ್ಟುಕೊಂಡಿರುವ ಚಿತ್ರವೇ ಹೆಚ್ಚಾಗಿ ವೈರಲ್‌ ಆಗಿದೆ. ಟ್ರೋಫಿ ಕುರಿತಾಗಿ ಆಸೀಸ್‌ ಆಟಗಾರನ ಅಗೌರವ ಕುರಿತು ಟೀಕೆ ಆಗುತ್ತಿರುವ ನಡುವೆ ನಟ ಚೇತನ್‌ ಅಹಿಂಸಾ, ಮಿಚೆಲ್‌ ಮಾರ್ಷ್‌ ಬೆಂಬಲಕ್ಕೆ ನಿಂತಿದ್ದಾರೆ. 

ಬೆಂಗಳೂರು (ನ.21): ಟೀಮ್‌ ಇಂಡಿಯಾ ವಿಶ್ವಕಪ್‌ ಸೋಲು ಕಂಡ ಬೆನ್ನಲ್ಲಿಯೇ ತಂಡದಲ್ಲಿ ಮೀಸಲಾತಿ ಇದ್ದಿದ್ದರೆ, ವಿಶ್ವಕಪ್‌ ಗೆಲ್ಲುತ್ತಿದ್ದರು ಎಂದು ಹೇಳುವ ಮೂಲಕ ವಿವಾದಕ್ಕೆ ಗುರಿಯಾಗಿದ್ದ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್‌ ಕುಮಾರ್‌ ಅಹಿಂಸಾ ಮತ್ತೊಮ್ಮೆ ಕ್ರಿಕೆಟ್‌ ವಿಚಾರವಾಗಿ ಅಭಿಪ್ರಾಯ ಹೇಳಿ ಸುದ್ದಿಯಾಗಿದ್ದಾರೆ. ಈ ಬಾರಿ ಅವರು ಆಸ್ಟ್ರೇಲಿಯಾ ಆಲ್ರೌಂಡರ್‌ ಮಿಚೆಲ್‌ ಮಾರ್ಷ್‌ ವಿಚಾರವಾಗಿ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅಹಮದಾಬಾದ್‌ನಲ್ಲಿ ಭಾನುವಾರ ಆಸ್ಟ್ರೇಲಿಯಾ ತಂಡ 6 ವಿಕೆಟ್‌ಗಳಿಂದ ಭಾರತ ತಂಡವನ್ನು ಸೋಲಿಸಿ ಚಾಂಪಿಯನ್‌ ಆಗಿತ್ತು. ಆಸ್ಟ್ರೇಲಿಯಾ ತಂಡ ಚಾಂಪಿಯನ್‌ ಆಗಿ ಟ್ರೋಫಿ ಜೊತೆ ಸಂಭ್ರಮಿಸಿದ ಚಿತ್ರಕ್ಕಿಂತ ಹೆಚ್ಚಾಗಿ ಮಿಚೆಲ್‌ ಮಾರ್ಷ್‌ ಹೋಟೆಲ್‌ ರೂಮ್‌ನಲ್ಲಿ ಟ್ರೋಫಿ ಮೇಲೆ ಕಾಲಿಟ್ಟು ತೆಗೆಸಿಕೊಂಡಿರುವ ಚಿತ್ರ ಬಹಳ ವೈರಲ್‌ ಆಗಿತ್ತು. ಭಾರತದಲ್ಲಿ ಟ್ರೋಫಿ ಗೆದ್ದರೆ ಅದನ್ನು ದೇವಸ್ಥಾನಗಳಿಗೆ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸುತ್ತಾರೆ. ಆದರೆ, ಆಸೀಸ್‌ ಆಟಗಾರ ಟ್ರೋಫಿ ಮೇಲೆ ಕಾಲಿಟ್ಟು ತೆಗೆಸಿಕೊಂಡಿರುವ ಚಿತ್ರದ ಬಗ್ಗೆ ಬಹಳ ಮಂದಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದು ವಿಶ್ವಕಪ್‌ ಎನ್ನುವ ಟೂರ್ನಿಗೆ ಹಾಗೂ ಘನೆತೆಯ ಟ್ರೋಫಿಗೆ ಮಾಡಿರುವ ಅವಮಾನ ಎಂದು ಮಿಚೆಲ್‌ ಮಾರ್ಷ್‌ ಬಗ್ಗೆ ಟೀಕೆ ಮಾಡಿದ್ದರು. ಈಗ ಮಿಚೆಲ್‌ ಮಾರ್ಷ್‌ ಬೆಂಬಲವಾಗಿ ನಟ ಚೇತನ್‌ ಅಹಿಂಸಾ ಮಾತನಾಡಿದ್ದಾರೆ.

'ವಿಶ್ವಕಪ್ ಟ್ರೋಫಿಯ ಮೇಲೆ ಕಾಲಿಟ್ಟಿರುವ ಚಿತ್ರದೊಂದಿಗೆ ಆಸ್ಟ್ರೇಲಿಯಾದ ಕ್ರಿಕೆಟಿಗನೊಬ್ಬ ಸುದ್ದಿಯಲ್ಲಿದ್ದಾರೆ. ಬಲಗೈ ಮತ್ತು ಎಡಗೈ ಅಥವಾ ತಲೆ ಮತ್ತು ಕಾಲುಗಳಂತಹ ದೇಹದ ಭಾಗಗಳು ‘ಶುದ್ಧ ಅಥವಾ ಅಶುದ್ಧವಾಗಿವೆ’ ಎಂಬ ಬ್ರಾಹ್ಮಣ್ಯದ ಶ್ರೇಣಿಕೃತ ವ್ಯವಸ್ಥೆಯ ಕಲ್ಪನೆಯು ಭಾರತೀಯ ಬಹುಸಂಖ್ಯಾತ ಸಂಸ್ಕೃತಿಯಾಗಿದೆ. ಪಶ್ಚಿಮದಲ್ಲಿ, ಜನರು ಮನೆಯೊಳಗೆ ಮತ್ತು ಮಲಗುವ ಕೋಣೆಯಲ್ಲಿಯೂ ಶೂಗಳನ್ನು ಧರಿಸುತ್ತಾರೆ. ಆಸ್ಟ್ರೇಲಿಯಾದ ಆಟಗಾರನಿಗೆ, ಟ್ರೋಫಿಯ ಮೇಲೆ ಕಾಲುಗಳನ್ನು ಇಡುವುದು ಅಗೌರವವಾಗಿರಲಿಲ್ಲ; ಅದು ಕೇವಲ ಅವರ ವಿಶ್ರಾಂತಿ ಆಗಿತ್ತು' ಎಂದು ಅವರು ಬರೆದುಕೊಂಡಿದ್ದಾರೆ.

ಅದರರ್ಥ ಪಶ್ಚಿಮ ರಾಷ್ಟ್ರಗಳಲ್ಲಿ ಜನರು ಮನೆ ಹಾಗೂ ಮಲಗುವ ಕೋಣೆಯ ಒಳಗೆ ಶೂ ಧರಿಸಿಕೊಂಡು ಹೋಗುತ್ತಾರೆ. ದೇಹದ ಯಾವುದೇ ಭಾಗ ಶುದ್ಧ ಅಥವಾ ಅಶುದ್ಧ ಎನ್ನುವುದು ಬ್ರಾಹ್ಮಣ್ಯದ ಶ್ರೇಣಿಕೃತ ವ್ಯವಸ್ಥೆಯ ಕಲ್ಪನೆ ಎಂದು ಚೇತನ್‌ ಅಹಿಂಸಾ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಸಿರುವ ವ್ಯಕ್ತಿಯೊಬ್ಬರು, 'ನೀನೊಬ್ಬ ಕಪಟಿ. ತಲೆ ಮತ್ತು ಮುಖವನ್ನು ಯಾವ ಬಟ್ಟೆಯಿಂದಲೂ ಮುಚ್ಚಿಕೊಳ್ಳುತ್ತಿಲ್ಲ. ಆದರೆ ನೀನು ನಿನ್ನನ್ನು ಮುಚ್ಚಿಕೊಳ್ಳುತ್ತೀಯಾ. ಯಾಕೆ? ಇದು ಕೂಡ ಬ್ರಾಹ್ಮಣ ಕಲ್ಪನೆಯೇ ಮತ್ತು ನೀನು ನಿಮ್ಮ ನನ್ನು ನಿಮ್ಮ ತಲೆ ಅಥವಾ ಮುಖದಂತೆ ಶ್ರೇಷ್ಠವಲ್ಲ ಎಂದು ಸಹ ಪರಿಗಣಿಸಿ. ನೀವು ನಿಮ್ಮನ್ನೇ ಕೀಳಾಗಿಸುತ್ತಿದ್ದೀರಿ. ತುಂಬಾ ಕೆಟ್ಟದಾಗಿದೆ' ಎಂದು ಬರೆದಿದ್ದಾರೆ.

ಭಾನುವಾರ ಭಾರತ ತಂಡ ಸೋಲು ಕಂಡ ಬೆನ್ನಲ್ಲಿಯೇ ತಂಡದಲ್ಲಿ ಮೀಸಲಾತಿ ಅಗತ್ಯವಿದೆ ಎಂದು ಹೇಳಿದ್ದು ವಿವಾದಕ್ಕೆ ಗ್ರಾಸವಾಗಿತ್ತು. ' ನಾನು ಮತ್ತೆ ಹೇಳುತಿದ್ದೇನೆ, ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿ ಅಗತ್ಯವಿದೆ. ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿ ಇದ್ದಿದ್ದರೆ ಭಾರತ ಸುಲಭವಾಗಿ ಈ ವಿಶ್ವ ಕಪ್ಪನ್ನು ಗೆಲ್ಲುತ್ತಿತ್ತು..' ಎಂದು ಅವರು ಟ್ವೀಟ್‌ ಮಾಡಿದ್ದರು. 

ವಿಶ್ವಕಪ್‌ನಲ್ಲಿ ಭಾರತದ ಸೋಲಿನ ಬೆನ್ನಲ್ಲೇ 'ತಂಡದಲ್ಲಿ ಮೀಸಲಾತಿ ಬೇಕು..' ಎಂದ ಚೇತನ್‌ ಅಹಿಂಸಾ!

ಇನ್ನು ಮಿಚೆಲ್ ಮಾರ್ಷ್‌ ಅವರ ಚಿತ್ರಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. 'ಯಾಕೆ ಈ ಶ್ವೇತವರ್ಣೀಯರು ಯಾವುದಕ್ಕೂ ಗೌರವ ನೀಡೋದಿಲ್ಲ. ಬಹುಶಃ ಮುಂದೊಂದು ದಿನ ಇಂಥ ಟ್ರೋಫಿಗಳಿಗೆ ಯಾವ ರೀತಿಯ ಗೌರವ ನೀಡಬೇಕು ಎನ್ನುವುದರ ಬಗ್ಗೆ ಅವರಿಗೆ ಪಾಠ ಸಿಗುವ ಸಾಧ್ಯತೆ ಇದೆ' ಎಂದು ಒಬ್ಬರು ಬರೆದಿದ್ದಾರೆ.ಇದು ಮಿಚೆಲ್ ಮಾರ್ಷ್‌ ಕ್ರಿಕೆಟ್‌ಗೆ ಹಾಗೂ ಐಸಿಸಿಟ ಟೂರ್ನಿಗೆ ಯಾವ ರೀತಿಯಲ್ಲಿ ಗೌರವ ನೀಡ್ತಾರೆ ಅನ್ನೋದನ್ನು ಸೂಚಿಸುತ್ತದೆ. ಇದೇ ಕಾರಣಕ್ಕೆ ನೀವು ಚಾಂಪಿಯನ್ಸ್ ಎಂದು ಕರೆಸಿಕೊಳ್ಳಲೂ ಅರ್ಹರಲ್ಲ ಎಂದು ಇನ್ನೊಬ್ಬರು ಬರೆದಿದ್ದಾರೆ.

ಇಸ್ರೇಲ್‌ನದ್ದು ಕದ್ದ ಭೂಮಿ, ಪ್ಯಾಲೆಸ್ತೇನ್‌ ಪರವಾಗಿ ಭಾರತ ನಿಲ್ಲಬೇಕು ಎಂದ ಚೇತನ್‌ ಅಹಿಂಸಾ!