ಸದನ ಸಮಾವೇಶಗೊಂಡರೂ ಸದನಕ್ಕೆ ಕೆಲವು ಸಚಿವರು ಆಗಮಿಸದಿರುವುದಕ್ಕೆ ಗರಂ ಆದ ಸಭಾಧ್ಯಕ್ಷ ಯು.ಟಿ.ಖಾದರ್‌, ಸಕಾಲಕ್ಕೆ ಸರಿಯಾಗಿ ಸದನಕ್ಕೆ ಸಚಿವರು ಆಗಮಿಸಬೇಕು ಎಂದು ಸೂಚಿಸಿದರು.

ಬೆಂಗಳೂರು (ಜು.18) :  ಸದನ ಸಮಾವೇಶಗೊಂಡರೂ ಸದನಕ್ಕೆ ಕೆಲವು ಸಚಿವರು ಆಗಮಿಸದಿರುವುದಕ್ಕೆ ಗರಂ ಆದ ಸಭಾಧ್ಯಕ್ಷ ಯು.ಟಿ.ಖಾದರ್‌, ಸಕಾಲಕ್ಕೆ ಸರಿಯಾಗಿ ಸದನಕ್ಕೆ ಸಚಿವರು ಆಗಮಿಸಬೇಕು ಎಂದು ಸೂಚಿಸಿದರು.

ಸೋಮವಾರ ಸದನ ಆರಂಭಗೊಂಡಾಗ ಸಚಿವರ ಹಾಜರಾತಿ ಇರಲಿಲ್ಲ. ಈ ಬಗ್ಗೆ ಪ್ರತಿಪಕ್ಷಗಳು ಸಭಾಧ್ಯಕ್ಷರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷರು, ಪ್ರತಿದಿನವೂ ತಡ ಮಾಡುವುದು ಸರಿಯಲ್ಲ. ಸಚಿವರು ಸದನಕ್ಕೆ ಸರಿಯಾದ ಸಮಯಕ್ಕೆ ಬರುವಂತೆ ಗಮನಹರಿಸಬೇಕು ಎಂದು ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಅವರಿಗೆ ಸೂಚಿಸಿದರು. ಸಚಿವರು ಸಮಯ ಪಾಲನೆ ಮಾಡಬೇಕು. ಸಮಯ ಸದ್ಬಳಕೆಯಾಗಬೇಕು ಎಂದರು.

ರಾಜ್ಯ ಸಚಿವರ ಜತೆ ಇಂದಿನ ರಾಹುಲ್‌ ಸಭೆ ಮತ್ತೆ ಮುಂದೂಡಿಕೆ!

ಇದಕ್ಕೂ ಮುನ್ನ ಬಿಜೆಪಿ ಸದಸ್ಯ ಆರ್‌.ಅಶೋಕ್‌ ಮಾತನಾಡಿ, ಇಂಧನ ಸಚಿವ ಕೆ.ಜೆ.ಜಾಜ್‌ರ್‍ ಅವರನ್ನು ಹೊರತುಪಡಿಸಿದರೆ ಬೇರೆ ಯಾವ ಸಚಿವರೂ ಇಲ್ಲ ಎಂದು ಹೇಳಿದರು. ಇದಕ್ಕೆ ದನಿಗೂಡಿಸಿದ ಬಿಜೆಪಿಯ ಬಸವರಾಜ ಬೊಮ್ಮಾಯಿ, ಸಚಿವರು ಇಲ್ಲದಿದ್ದರೆ ಕಲಾಪ ನಡೆಯುವುದಾದರೂ ಹೇಗೆ? ಸರ್ಕಾರಕ್ಕೆ ಸಡಿಲ ಕೊಡಬೇಡಿ ಎಂದರು.

ಸರ್ಕಾರ ವಿಧಾನಸಭೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇದು ವಿಧಾನಸಭೆಯ ಘನತೆಗೆ ತಕ್ಕದ್ದಲ್ಲ. ಈ ರೀತಿಯಾದರೆ ಸದನ ಘನತೆ, ಗೌರವ ಏನಾಗುತ್ತದೆ ಎಂದರು.

ದಲಿತರ ಜಮೀನು ಕಾಪಾಡಲು ಕಾಯ್ದೆ ಶೀಘ್ರ ತಿದ್ದುಪಡಿ: ಸಿದ್ದರಾಮಯ್ಯ

ಆಶೋಕ್‌ ಮಾತನಾಡಿ, ರಮೇಶ್‌ ಕುಮಾರ್‌ ಸಭಾಧ್ಯಕ್ಷರಾಗಿದ್ದ ವೇಳೆ ಸರ್ಕಾರದ ಇಂತಹ ಅಸಡ್ಡೆಗೆ ತಕ್ಕ ಶಾಸ್ತಿ ಮಾಡುತ್ತಿದ್ದರು. ಒಂದು ದಿನ ಸಭಾಧ್ಯಕ್ಷರು ಹೊರನಡೆದರು. ಅವರ ಮನವೊಲಿಸಲು ಆಗ ಎರಡು ಗಂಟೆ ಬೇಕಾಯಿತು ಎಂದು ನೆನಪು ಮಾಡಿಕೊಂಡರು. ಅಷ್ಟರಲ್ಲಿ ಹಲವು ಸಚಿವರು ಸದನಕ್ಕೆ ಆಗಮಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್‌ ಸದಸ್ಯ ಲಕ್ಷ್ಮಣ್‌ ಸವದಿ, ಸದನಕ್ಕೆ ಸರಿಯಾದ ಸಮಯಕ್ಕೆ ಬಂದವರಿಗೆ ಬಹುಮಾನ ನೀಡುತ್ತೀರಾ? ರೋಲೆಕ್ಸ್‌ ವಾಚ್‌ ಕೊಡುತ್ತೀರಾ? ಎಂದು ಸಭಾಧ್ಯಕ್ಷರನ್ನು ಕೆಣಕಿದರು. ಆಗ ಷಡಕ್ಷರಿ, ಮೊದಲ ಬಹುಮಾನ ಚಿನ್ನದ ನಾಣ್ಯ, ಎರಡನೇ ಬಹುಮಾನ ಬೆಳ್ಳಿ ಮತ್ತು ಮೂರನೇ ಬಹುಮಾನ ಕಬ್ಬಿಣ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷರು, ಇದನ್ನು ನಾವು ಕೊಡುವುದಿಲ್ಲ, ಷಡಕ್ಷರಿ ಕೊಡುತ್ತಾರೆ ಎಂದು ಹೇಳಿ ಮುಂದಿನ ಕಲಾಪ ನಡೆಸಿದರು.