ಶಾಲೆ, ಕಾಲೇಜು, ಚಿತ್ರಮಂದಿರ, ಶಾಪಿಂಗ್‌ ಮಾಲ್‌ಗಳಲ್ಲಿ ಮಾಸ್ಕ್‌ ಕಡ್ಡಾಯ.ಹೊಸ ವರ್ಷಾಚರಣೆಗೆ ಮಾಸ್ಕ್‌ ಕಡ್ಡಾಯ. ಮಧ್ಯರಾತ್ರಿ 1 ಗಂಟೆಗೆ ಆಚರಣೆಗೆ ಅವಕಾಶಮಕ್ಕಳು, ಗರ್ಭಿಣಿಯರು ಹೊಸ ವರ್ಷಾಚರಣೆಯಿಂದ ದೂರ ಇರಬೇಕು.ಆಸನಗಳು ಸಂಖ್ಯೆಯಷ್ಟೇ ಗ್ರಾಹಕರಿಗೆ ಅವಕಾಶ

ಬೆಳಗಾವಿ (ಡಿ.26): ಬೆಂಗಳೂರಿನಲ್ಲಿ ಎಂ.ಜಿ. ರಸ್ತೆ ಮತ್ತು ಬ್ರಿಗೇಡ್‌ ರಸ್ತೆಯಲ್ಲಿ ಮಧ್ಯರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷ ಆಚರಣೆಗೆ ಅನುಮತಿ. ಬಾರ್‌, ರೆಸ್ಟೋರೆಂಟ್‌ಗಳೆಲ್ಲವೂ ಒಂದು ಗಂಟೆಗೆ ಕ್ಲೋಸ್‌ ಮಾಡಬೇಕು. ರಾಜ್ಯದ ಎಲ್ಲ ಶಾಲೆ, ಕಾಲೇಜು, ಚಿತ್ರಮಂದಿರ, ಶಾಪಿಂಗ್ ಮಾಲ್‌ಗಳಲ್ಲಿ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್‌ ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಕೋವಿಡ್‌ 4ನೇ ಅಲೆಯ ಕುರಿತಂತೆ ರಾಜ್ಯ ಸರ್ಕಾರದಿಂದ ಬೆಳಗಾವಿಯಲ್ಲಿ ನಡೆದ ಸಭೆಯ ನಂತರ ಮಾತನಾಡಿದ ಅವರು, ಹೋಟೆಲ್, ಬಾರ್, ರೆಸ್ಟೋರೆಂಟ್‌ ಸೇರಿ ಎಲ್ಲ ಸಿಬ್ಬಂದಿಗಳೂ ಕೂಡ ಕಡ್ಡಾಯವಾಗಿ 2ನೇ ಡೋಸ್‌ ಕೋವಿಡ್‌ ಲಸಿಕೆಯನ್ನು ಪಡೆದಿರಬೇಕು. ಎಷ್ಟು ಟೇಬಲ್, ಕುರ್ಚಿ ಇರುತ್ತೋ ಅಷ್ಟೇ ಮಾತ್ರ ಅವಕಾಶ ಮಾಡಬೇಕು. ಹೆಚ್ಚುವರಿ ಜನರಿಗೆ ಪಬ್, ಬಾರ್, ರೆಸ್ಟೋರೆಂಟ್‌ನಲ್ಲಿ ಅವಕಾಶವಿಲ್ಲ. ಎಂ.ಜಿ.ರಸ್ತೆ ಸೇರಿದಂತೆ ಎಲ್ಲ ರಸ್ತೆಗಳಲ್ಲಿ ಸಂಭ್ರಮಚಾರಣೆಗೂ ಕೂಡ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಹೊಸ ವರ್ಷಾಚರಣೆ ಮಾಡುವಾಗಲೂ ಪಾರ್ಟಿ ಮತ್ತು ಇತರೆ ಕಾರ್ಯಕ್ರಮಗಳಿಗೂ ಮಾಸ್ಕ್‌ ಕಡ್ಡಾಯವಾಗಿ ಧರಿಸಬೇಕು. ಈ ಮೊದಲು ಮಧ್ಯರಾತ್ರಿ 2 ಗಂಟೆವರೆಗೆ ಹೊಸ ವರ್ಷಾಚರಣೆಗೆ ಮಾಡಿದ್ದ ಸಮಯದ ಮಿತಿಯನ್ನು 1 ಗಂಟೆಗೆ ಕಡಿತೊಳಿಸಲಾಗಿದೆ ಎಂದರು.

Covid 4th Wave: ಬೆಂಗಳೂರಿಗೆ ಕಾಲಿಟ್ಟಿತೇ ಬಿಎಫ್‌-7 ಕರೊನಾ ಭೂತ: ಚೀನಾದಿಂದ ಬಂದ ವ್ಯಕ್ತಿಯಲ್ಲಿ ಸೋಂಕು

ವಿದೇಶಿ ಸೋಂಕಿತರಿಗೆ ಪ್ರತ್ಯೇಕ ಆಸ್ಪತ್ರೆ ಮೀಸಲು: ವಿದೇಶಗಳಲ್ಲಿ ಸೊಂಕಿನ ಪ್ರಮಾಣ ಜಾಸ್ತಿಯಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರ ಕಡೆ ಹೆಚ್ಚಿನ ಗಮನ ಹರಿಸಲು ತಜ್ಞರ ಸಲಹೆ ನೀಡಿದ್ದಾರೆ. ಹೀಗಾಗಿ, ಅಂತರರಾಷ್ಟ್ರೀಯ ಪ್ರಯಾಣಿಕರ ಸೊಂಕು ಕಂಡು ಬಂದಲ್ಲಿ ಅವರಿಗೆ ಎರಡು ಆಸ್ಪತ್ರೆ ಮೀಸಲು ಇಡಲಾಗಿದೆ. ವಿದೇಶಿ ಪ್ರಯಾಣಿಕರು ಮತ್ತು ರೂಪಾಂತರಿ ತಳಿ ಪತ್ತೆಯಾದ ಸೋಂಕಿತರಿಗೆ ಚಿಕಿತ್ಸೆ ನೀಡಲು ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆ ಮತ್ತು ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಗಳು ಕೋವಿಡ್‌ ಸೋಂಕಿತರಿಗೆ ಮೀಸಲು ಇಡಲಾಗಿದೆ ಎಂದು ಸಚಿವ ಅಶೋಕ್‌ ಮಾಹಿತಿ ನೀಡಿದರು.

ಶಾಲೆ-ಕಾಲೇಜು, ಚಿತ್ರಮಂದಿರದಲ್ಲಿ ಮಾಸ್ಕ್‌ ಕಡ್ಡಾಯ: ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಮಾತನಾಡಿ, ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಇನ್ನು ಶಾಲಾ ಕಾಲೇಜುಗಳಲ್ಲಿ ಮಾಸ್ಕ್‌ ಮತ್ತು ಸ್ಯಾನಿಟೈಸಿಂಗ್‌ ಕಡ್ಡಾಯ ಮಾಡಲಾಗಿದೆ. ಶಿಕ್ಷಕರು ಕಡ್ಡಾಯವಾಗಿ ಲಸಿಕೆ ಪಡೆದಿರಬೇಕು. ಈಗ ಘೋಷಣೆ ಮಾಡಿದಂತೆ ಶಾಲೆ, ಕಾಲೇಜು, ಸಭಾಂಗಣ, ಶಾಪಿಂಗ ಮಾಲ್, ಆಡಿಟೋರಿಯಂ, ಚಿತ್ರಮಂದಿರ ಸೇರಿ ಎಲ್ಲಾ ಒಳಾಂಗಣ ಪ್ರದೇಶದಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಆದರೆ, ಸೋಂಕಿನ ಬಗ್ಗೆ ಹೆಚ್ಚಿನ ಆತಂಕ ಬೇಡ. ಮುನ್ನೆಚ್ಚರಿಕೆ ಕ್ರಮ ತಗೆದುಕೊಳ್ಳಬೇಕು. ಎಲ್ಲರೂ ಸರ್ಕಾರದ ಜೊತೆ ಸಹಕರಿಸಬೇಕು. ಜನದಟ್ಟಣೆಯ ಇರುವ ಕಡೆಗಳಲ್ಲಿ ಎಲ್ಲಾ ಸಾರ್ವಜನಿಕರು ಮಾಸ್ಕ್ ಹಾಕಬೇಕು ಎಂದು ಮನವಿ ಮಾಡಿದರು.

Covid 4th Wave: ಕೋವಿಡ್‌ ಹೈರಿಸ್ಕ್ ದೇಶಗಳಿಂದ 2,867 ಪ್ರಯಾಣಿಕರ ಆಗಮನ: 12 ಮಂದಿಗೆ ಸೋಂಕು

ಬೂಸ್ಟರ್‌ ಡೋಸ್‌ ಪಡೆಯುವುದು ಅತ್ಯಗತ್ಯ: ಇನ್ನು ಬೂಸ್ಟರ್‌ ಡೋಸ್‌ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದ್ದು, ರಾಜ್ಯದಲ್ಲಿ ಶೇ.50 ಜನರಿಗೆ ಬೂಸ್ಟರ್‌ ಡೋಸ್‌ ನೀಡುವ ಮೂಲಕ ಸೋಂಕು ಹರಡುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ಎಲ್ಲ ಒಳಾಂಗಣ ಪ್ರದೇಶಗಳಲ್ಲಿ ಮಾಸ್ಕ್‌ ಕಡ್ಡಾಯ ಮಾಡಲಾಗುತ್ತಿದೆ. ಇದರಲ್ಲಿ ಶಾಲೆ, ಕಾಲೇಜು, ಚಿತ್ರಮಂದಿರ, ಶಾಪಿಂಗ್ ಮಾಲ್, ಸೂಪರ್‌ ಮಾರ್ಕೆಟ್‌ ಸೇರಿ ಎಲ್ಲೆಡೆ ಮಾಸ್ಕ್‌ ಕಡ್ಡಾಯ ಮಾಡಲಾಗುತ್ತದೆ. ಇನ್ನು ಕೋಮಾರ್ಬಿಟೀಸ್‌ (ದೀರ್ಘಕಾಲಿಕ ರೋಗದಿಂದ ಬಳಲುವವರು), ವೃದ್ಧರು, ಮಕ್ಕಳು ಮತ್ತು ಗರ್ಭಿಣಿಯರು ಜನಸಂದಣಿ ಪ್ರದೇಶಗಳಿಗೆ ಹೋಗದಂತೆ ಸಲಹೆ ನೀಡಲಾಗಿದೆ.

ರಾಜಕೀಯ ಯಾತ್ರೆಗಳಿಗೆ ನಿರ್ಬಂಧ ಹೇರಿಲ್ಲ: ಇನ್ನು ಕೋವಿಡ್‌ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ, ಯಾವುದೇ ಕಾರ್ಯಕ್ರಮಕ್ಕೂ ಕೂಡ ನಾವು ನಿರ್ಬಂಧ ಹೇರಿಲ್ಲ. ಮಾಸ್ಕ್ ಧರಿಸಿ ಎಂದು ಮಾತ್ರ ಸಲಹೆ ನೀಡಿದ್ದೇವೆ. ಜೆಡಿಎಸ್ ಪಂಚರತ್ನ ರಥಯಾತ್ರೆನಾದ್ರೂ ಮಾಡಲಿ, ಕಾಂಗ್ರೆಸ್ ಬಸ್ ಯಾತ್ರೆಯನ್ನಾದರೂ ಮಾಡಲಿ. ಇದಕ್ಕೆ ನಾವು ನಿರ್ಬಂಧ ವಿಧಿಸುತ್ತಿಲ್ಲ. ಎಲ್ಲರೂ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಪಾಲಿಸಲಿ ಅನ್ನೋದು ಅಷ್ಟೆ. ಇದು ನಮ್ಮ ಕಾಳಜಿಯಾಗಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.

ಮಕ್ಕಳು ಗರ್ಭಿಣಿಯರಿಗೆ ಹೊಸ ವರ್ಷ ನಿಷೇಧ:
ಹೊಸ ವರ್ಷದ ಪಾರ್ಟಿಗಳಲ್ಲಿ ಮಕ್ಕಳು ಮತ್ತು ಗರ್ಭಿಣಿಯರು ಭಾಗವಹಿಸುವಂತಿಲ್ಲ. ಹೊಸ ವರ್ಷದ ಕಾರ್ಯಕ್ರಮದಲ್ಲಿ ಹಿರಿಯ ನಾಯಕರು ಮತ್ತು ಆರೋಗ್ಯ ಸಮಸ್ಯೆ ಇರೋರು ,ಗರ್ಭಿಣಿಯರು ಮತ್ತು ಮಕ್ಕಳ ಸಾಧ್ಯವಾದಷ್ಟು ಹೊಗದೆ ಇದ್ದರೆ ಒಳ್ಳೆಯದು. ಈ ಎಲ್ಲ ನಿಯಮಗಳನ್ನು ಪಾಲಿಸುವ ಮೂಲಕ ಮುಂದಾಗುವ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಎಲ್ಲರೂ ಸರ್ಕಾರದೊಂದಿಗೆ ಕೈ ಜೋಡಿಸಬೇಕು ಎಂದು ಆರೋಗ್ಯ ಸಚಿವ ಸುಧಾಕರ್ ಮನವಿ ಮಾಡಿದರು.