ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ಕಟುವಾಗಿ ಟೀಕಿಸಿದ್ದು, ಇದು ರಾಷ್ಟ್ರದ ಘನತೆಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿದ್ದಾರೆ. 'ಎಪ್ಸ್ಟೀನ್ ಫೈಲ್' ಮೂಲಕ ಅಮೆರಿಕ ಇಸ್ರೇಲ್ ಪ್ರಧಾನಿ ಮೋದಿಯವರನ್ನು ಬ್ಲ್ಯಾಕ್ಮೇಲ್ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು (ಮಾ.3): ಇರಾನ್ ನಾಯಕ ಖಮೇನಿ ಹತ್ಯೆ ಹಾಗೂ ಭಾರತದ ಪ್ರಸ್ತುತ ವಿದೇಶಾಂಗ ನೀತಿಯ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ಪ್ರಧಾನಿ ಮೋದಿಯವರ ರಾಜತಾಂತ್ರಿಕ ನಡೆಗಳು ದೇಶದ ಘನತೆಗೆ ಧಕ್ಕೆ ತರುತ್ತಿವೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಖಮೇನಿ ಹತ್ಯೆ ಮೋಸದ ಜಾಲ? ಬಿಕೆ ಹರಿಪ್ರಸಾದ್ ಹೇಳಿದ್ದೇನು?
ಖಮೇನಿ ಹತ್ಯೆಯು ಯುದ್ಧದ ಸಂದರ್ಭದಲ್ಲಿ ನಡೆದಿದ್ದಲ್ಲ, ಬದಲಿಗೆ ಅಮೆರಿಕ-ಇರಾನ್ ನಡುವಿನ ಮಾತುಕತೆ ನಡೆಯುತ್ತಿದ್ದ ವೇಳೆಯೇ ಸಂಚು ರೂಪಿಸಿ ಮಾಡಿದ ಮೋಸದ ಹತ್ಯೆಯಾಗಿದೆ ಎಂದು ಹರಿಪ್ರಸಾದ್ ಕಿಡಿಕಾರಿದರು. ಇದು ವಿಶ್ವಸಂಸ್ಥೆಯ ನಿಯಮಗಳ ಸಂಪೂರ್ಣ ಉಲ್ಲಂಘನೆಯಾಗಿದೆ. ಇರಾನ್ ಭಾರತದ ಪರಮಾಪ್ತ ಮಿತ್ರ ರಾಷ್ಟ್ರವಾಗಿದ್ದು, ಕಾಶ್ಮೀರದ ವಿಷಯದಲ್ಲೂ ನಮಗೆ ಬೆಂಬಲ ನೀಡಿದೆ ಎಂದು ಅವರು ಸ್ಮರಿಸಿದರು.
ಎಪ್ಸ್ಟೀನ್ ಫೈಲ್ ಮೂಲಕ ಮೋದಿಗೆ ಬ್ಲ್ಯಾಕ್ಮೇಲ್?
ಪ್ರಧಾನಿ ಮೋದಿ ವಿರುದ್ಧ ಅತ್ಯಂತ ಗಂಭೀರ ಆರೋಪ ಮಾಡಿದ ಹರಿಪ್ರಸಾದ್, ಅಮೆರಿಕ ಮತ್ತು ಇಸ್ರೇಲ್ ರಾಷ್ಟ್ರಗಳು ಎಪ್ಸ್ಟೀನ್ ಫೈಲ್ ಇಟ್ಟುಕೊಂಡು ಪ್ರಧಾನಿ ಮೋದಿಯವರನ್ನು ಬ್ಲ್ಯಾಕ್ಮೇಲ್ ಮಾಡುತ್ತಿವೆ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ. ಅದಕ್ಕಾಗಿಯೇ ನಮ್ಮ ವಿದೇಶಾಂಗ ನೀತಿ ಇಂದು ಡೋಲಾಯಮಾನವಾಗಿದೆ. ಖಮೇನಿ ಹತ್ಯೆಗೆ 48 ಗಂಟೆಗಳ ಮೊದಲು ಮೋದಿ ಇಸ್ರೇಲ್ಗೆ ಭೇಟಿ ನೀಡಿದ್ದರ ಹಿಂದಿನ ಮರ್ಮವೇನು? ಎಂದು ಪ್ರಶ್ನಿಸಿದ್ದಾರೆ.
ವಿದೇಶಾಂಗ ನೀತಿಯ ದಿವಾಳಿತನ ಮತ್ತು ಅಲಿಪ್ತ ನೀತಿಗೆ ತಿಲಾಂಜಲಿ
ನೆಹರೂ ಕಾಲದಿಂದಲೂ ಭಾರತ ಪಾಲಿಸಿಕೊಂಡು ಬಂದಿದ್ದ 'ಅಲಿಪ್ತ ನೀತಿ'ಗೆ (Non-Aligned Movement) ಮೋದಿ ಸರ್ಕಾರ ಸಂಪೂರ್ಣವಾಗಿ ತಿಲಾಂಜಲಿ ನೀಡಿದೆ ಎಂದು ಅವರು ಟೀಕಿಸಿದ್ದಾರೆ. 'ವಾಜಪೇಯಿಯವರೂ ಸಹ ಇರಾನ್ ಜೊತೆ ಉತ್ತಮ ಸಂಬಂಧ ಹೊಂದಿದ್ದರು. ಆದರೆ ಇಂದಿನ ವಿಶ್ವಗುರುಗಳಿಗೆ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಕಾಣಿಸುತ್ತಿಲ್ಲ, ಬದಲಿಗೆ ಇಸ್ರೇಲ್ಗೆ ಹೋಗಿ ಡ್ಯಾನ್ಸ್ ಮಾಡಿ ಬಂದಿದ್ದಾರೆ ಎಂದು ಟ್ರಂಪ್ ಹೇಳುತ್ತಿದ್ದಾರೆ' ಎಂದು ಲೇವಡಿ ಮಾಡಿದರು.
ನೆತನ್ಯಾಹು ಒಬ್ಬ ಕೊಲೆಗಡುಕ: ಬಿಜೆಪಿಯ ಇಬ್ಬಗೆ ನೀತಿ ಟೀಕೆ
ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರನ್ನು ದೊಡ್ಡ ಕೊಲೆಗಡುಕ ಎಂದು ಕರೆದ ಹರಿಪ್ರಸಾದ್, ಅವರನ್ನು ಮೋದಿ ಗೆಳೆಯ ಎಂದು ಕರೆಯುತ್ತಿರುವುದು ದುರಂತ ಎಂದಿದ್ದಾರೆ. ಅಮೇರಿಕ ಇಸ್ರೇಲ್ ಯಾವ ಸಂದರ್ಭದಲ್ಲಿ ಏನು ಮಾಡತ್ತೋ ಗೊತ್ತಾಗುತ್ತಿಲ್ಲ. ಮುಂದೆ ಅವರು ಯಾವ ಸರ್ಕಾರವನ್ನು ಬುಡಮೇಲು ಮಾಡಬಹುದು.ಇಂಥ ಕೊಲೆಗಡುಕನನ್ನ ಮೋದಿ ಒಬ್ಬ ಫ್ರೆಂಡ್ ಅಂತಾರೆ. ಗೋದ್ರಾದಲ್ಲಿ 3000 ಜನರ ಹತ್ಯೆ ಮಾಡಿದ ಕೆಟ್ಟ ಹೆಸರನ್ನು ಇಟ್ಟುಕೊಂಡವರು ಮೋದಿ. ಇತ್ತ ರಷ್ಯಾದಂತಹ ಹಳೆಯ ಮಿತ್ರರೊಂದಿಗೂ ಸಂಬಂಧ ಹಳಸಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಬೀಫ್ ರಫ್ತು, ಹಿಂದುತ್ವದ ರಾಜಕಾರಣದ ವಿರುದ್ಧ ಹರಿಪ್ರಸಾದ್ ಕಿಡಿ
ಬಿಜೆಪಿಯ ಹಿಂದುತ್ವದ ರಾಜಕಾರಣದ ಬಗ್ಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಮುಸ್ಲಿಂ, ಹಲಾಲ್ ಮತ್ತು ಪಾಕಿಸ್ತಾನದ ಜಪ ಮಾಡದಿದ್ದರೆ ತಿಂದ ಅನ್ನ ಜೀರ್ಣವಾಗುವುದಿಲ್ಲ. ಆದರೆ ಇವರ ಅಧಿಕಾರಾವಧಿಯಲ್ಲೇ ದೇಶದಿಂದ ಅತಿ ಹೆಚ್ಚು ಬೀಫ್ (ದನದ ಮಾಂಸ) ರಫ್ತಾಗುತ್ತಿದೆ' ಎಂದು ವಾಗ್ದಾಳಿ ನಡೆಸಿದರು.


