ಧರ್ಮಸ್ಥಳದ ಶವ ಹೂತಿಟ್ಟ ಪ್ರಕರಣದ ಕುರಿತು ಮಂತ್ರಾಲಯ ಶ್ರೀಗಳು ಹೇಳಿಕೆ ನೀಡಿದ್ದಾರೆ. ನ್ಯಾಯಾಲಯದ ತನಿಖೆಯ ಮೂಲಕ ಸತ್ಯ ಹೊರಬೀಳಲಿದೆ ಎಂದಿದ್ದಾರೆ. ಧಾರ್ಮಿಕ ಕ್ಷೇತ್ರದ ಪಾವಿತ್ರತೆಯನ್ನು ವ್ಯವಸ್ಥೆಯ ಲೋಪದೋಷಗಳೊಂದಿಗೆ ಜೋಡಿಸಬಾರದು ಎಂದೂ ಅಭಿಪ್ರಾಯಪಟ್ಟಿದ್ದಾರೆ.
ರಾಯಚೂರು, (ಆಗಸ್ಟ್.4): ಧರ್ಮಸ್ಥಳದ ಶವ ಹೂತಿಟ್ಟ ವಿವಾದ ಪ್ರಕರಣದ ಕುರಿತು ಮಂತ್ರಾಲಯ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಮಹತ್ವದ ಹೇಳಿಕೆ ನೀಡಿದ್ದಾರೆ. ಈ ವಿಷಯವು ಪ್ರಸ್ತುತ ನ್ಯಾಯಾಲಯದಲ್ಲಿ ತನಿಖೆಯ ಹಂತದಲ್ಲಿದ್ದು, ಹೊರಗಿನ ಚರ್ಚೆಗಳು ಸೂಕ್ತವಲ್ಲ ಎಂದರು.
ಧರ್ಮಸ್ಥಳದಲ್ಲಿ ಏನೇ ನಡೆದರೂ ಅದು ನ್ಯಾಯಾಲಯ ಮತ್ತು ತನಿಖೆಯ ಮೂಲಕ ಎಲ್ಲ ಸತ್ಯಗಳು ಬಹಿರಂಗಗೊಳ್ಳಲಿವೆ ಎಂದರು. ಇನ್ನು ಧರ್ಮಸ್ಥಳದ ಧಾರ್ಮಿಕ ಸ್ಥಳದ ಬಗ್ಗೆ ಉಂಟಾಗಿರುವ ಅಪಪ್ರಚಾರದ ಕುರಿತು ಮಾತನಾಡಿದ ಶ್ರೀಗಳು, ಯಾವುದೇ ಧಾರ್ಮಿಕ ಕ್ಷೇತ್ರದ ಪಾವಿತ್ರತೆಯನ್ನು ಅಲ್ಲಿನ ವ್ಯವಸ್ಥೆಯ ಲೋಪದೋಷಗಳೊಂದಿಗೆ ಜೋಡಿಸಬಾರದು. ಕ್ಷೇತ್ರವು ಭಕ್ತರ ಶ್ರದ್ಧಾ ಕೇಂದ್ರವಾಗಿದ್ದು, ಯಾವುದೇ ಪ್ರಕರಣವಿದ್ದರೂ ಕಾನೂನು ತನ್ನ ಕರ್ತವ್ಯ ನಿರ್ವಹಿಸಲಿದೆ. ಲೋಪದೋಷಗಳಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದರು.
ನಾಳೆ ಸಾರಿಗೆ ಮುಷ್ಕರ:
ರಾಜ್ಯದಲ್ಲಿ ನಾಳೆ ನಡೆಯಲಿರುವ ಸಾರಿಗೆ ಮುಷ್ಕರದ ಕುರಿತು ಕೂಡ ಶ್ರೀಗಳು ಪ್ರತಿಕ್ರಿಯಿಸಿದ್ದಾರೆ. ಸಾರಿಗೆ ಇಲಾಖೆಯವರು ತಮ್ಮ ಬೇಡಿಕೆಗಳಿಗಾಗಿ ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಅಹವಾಲು ಸಲ್ಲಿಸಿದ್ದಾರೆ. ಸರ್ಕಾರವು ಈ ಬೇಡಿಕೆಗಳನ್ನು ಪರಿಶೀಲಿಸಿ, ಸೂಕ್ತ ಪರಿಹಾರ ಒದಗಿಸುವ ವಿಶ್ವಾಸವಿದೆ ಎಂದರು
