ಮಂಗಳೂರು ಬ್ಲಾಸ್ಟ್‌ ಕೇಸ್‌ನಲ್ಲಿ ಆರೋಪಿಯಾಗಿರುವ ಮೊಹಮದ್‌ ಶಾರೀಕ್‌ ತನ್ನ ಕುಕೃತ್ಯಗಳಿಗಾಗಿ ಡಾರ್ಕ್‌ ವೆಬ್‌ ಬಳಸುತ್ತಿದ್ದ ಎನ್ನುವ ಮಾಹಿತಿ ಬಹಿರಂಗವಾಗಿದೆ. ಹಾಗಾದರೆ ಡಾರ್ಕ್‌ವೆಬ್‌ ಎಂದರೇನು? ಇದರಿಂದ ಆಗುವ ಸಹಾಯವೇನು ಎನ್ನುವ ಕುತೂಹಲ ಆರಂಭವಾಗಿದೆ. 

ಮಂಗಳೂರು (ನ.25): ಮಂಗಳೂರು ಆಟೋ ರಿಕ್ಷಾ ಬ್ಲಾಸ್ಟ್‌ ಕೇಸ್‌ನ ಆರೋಪಿಯಾಗಿ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉಗ್ರ ಮೊಹಮದ್‌ ಶಾರೀಕ್‌ ತನ್ನ ಕುಕೃತ್ಯಗಳಿಗಾಗಿ ಡಾರ್ಕ್‌ ವೆಬ್‌ ಬಳಸುತ್ತಿದ್ದ. ಈ ಡಾರ್ಕ್‌ವೆಬ್‌ನ ಮಾಹಿತಿ ಕೇಳಿದರೆ ಅಚ್ಚರಿಯಾಗೋದು ಖಂಡಿತ. ಇಂಟರ್ ನೆಟ್ ಲೋಕದಲ್ಲಿ ಪ್ರಖ್ಯಾತಿಯ ಜೊತೆಗೆ ಕುಖ್ಯಾತಿಯನ್ನೂ ಡಾರ್ಕ್‌ ವೆಬ್‌ ಪಡೆದುಕೊಂಡಿದೆ. ಭಯೋತ್ಪಾದಕರಿಗೆ ಹಣಕಾಸಿನ ಪೂರೈಕೆಗೂ ಡಾರ್ಕ್ ವೆಬ್ ದೊಡ್ಡ ಮಟ್ಟದಲ್ಲಿ ನೆರವು ನೀಡುತ್ತಿದೆ. ಡಾರ್ಕ್ ವೆಬ್ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಸೈಬರ್ ತಜ್ಞರು ಮಾತನಾಡಿದ್ದು, ಡಾರ್ಕ್ ವೆಬ್ ಸಾಫ್ಟ್‌ವೇರ್ ಹಾಗೂ ಮೂಲಗಳನ್ನು ರಹಸ್ಯವಾಗಿರಿಸುತ್ತದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಡಾರ್ಕ್ ವೆಬ್ ರಹಸ್ಯದ ಬಗ್ಗೆ ಕರ್ನಾಟಕ ಪೊಲೀಸ್ ಅಕಾಡೆಮಿ ಅತಿಥಿ ತಜ್ಞ ಅನಂತ ಪ್ರಭು ಮಾಹಿತಿ ನೀಡಿದ್ದು, ಓಪನ್ ವೆಬ್, ಡೀಪ್ ವೆಬ್ ಹಾಗೂ ಡಾರ್ಕ್ ವೆಬ್ ಎಂಬ ಇಂಟರ್ ನೆಟ್ ಗೇಮ್ ಇದಾಗಿದೆ. ಬಳಕೆದಾರನ ನೈಜ ಐಪಿ ಅಡ್ರೆಸ್ ಅನ್ನೇ ಡಾರ್ಕ್ ವೆಬ್ ಅನಾಮಧೇಯವಾಗಿಸುತ್ತೆ ಎಂದಿದ್ದಾರೆ.

ಡಾರ್ಕ್ ವೆಬ್ ಬಳಕೆಗೆ ಸಾಮಾನ್ಯವಾಗಿ ಪ್ರತ್ಯೇಕ ಸಾಫ್ಟ್‌ವೇರ್ ಬಳಕೆ ಮಾಡುತ್ತಾರೆ. ಬಹುತೇಕವಾಗಿ ಟಾರ್ (ಟಿಓಆರ್ - ದ ಆನಿಯನ್ ಬ್ರೌಸರ್) ಬ್ರೌಸರ್ ಬಳಕೆ ಆಗುತ್ತದೆ ಎಂದು ಅನಂತ ಪ್ರಭು ಮಾಹಿತಿ ನೀಡಿದ್ದಾರೆ. ಬಳಕೆದಾರರು ಕಳುಹಿಸುವ ಸಂದೇಶಗಳನ್ನು ಎನ್‌ಕ್ರಿಪ್ಷನ್ ಮೂಲಕ ಗೌಪ್ಯವಾಗಿ ಇಡಲಾಗುತ್ತದೆ. ಆಯುಧ ಹಾಗೂ ಡ್ರಗ್ಸ್ ಮಾರಾಟ ಚಟುವಟಿಕೆಗಳಿಗೆ ಇದರ ಬಳಕೆ ಮಾಡಲಾಗುತ್ತದೆ.

ಹಿಂದುಗಳ ಮೇಲೆಯೇ ಯಾಕೆ ಕಣ್ಣು: ಈ ನಡುವೆ ಉಗ್ರ ಮೊಹಮ್ಮದ್ ಶಾರಿಕ್ ಗೆ ಹಿಂದುಗಳ ಮೇಲೆ ಯಾಕೆ ಕಣ್ಣು ಬಿದ್ದಿದೆ ಎನ್ನುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸಿಎಎ, ಎನ್.ಆರ್.ಸಿ ಗಲಾಟೆ ಬಳಿಕವೇ ಆತನಿಗೆ ಹಿಂದುಗಳ ಮೇಲೆ ಆಕ್ರೋಶ ಹೆಚ್ಚಾಗಿರಬಹುದು ಎನ್ನಲಾಗಿದೆ. ಲಷ್ಕರ್ ಇ ತೋಯ್ಬಾವನ್ನು ಸಂಪರ್ಕ ಮಾಡಲು ಉಗ್ರ ಶಾರೀಕ್‌ ಪ್ರಯತ್ನಿಸಿದ್ದ. ಅವರ ಸಹಕಾರ ಪಡೆದು ಆಗಲೇ ದಾಳಿಗೆ ಸಂಚು ರೂಪಿಸಿದ್ದ. ಹಿಂದು ಮುಖಂಡರನ್ನು, ಆರ್.ಎಸ್.ಎಸ್ ನಾಯಕರನ್ನು ಟಾರ್ಗೆಟ್ ಮಾಡಿದ್ದ ಎನ್ನಲಾಗಿದೆ. AK47 ನಂತಹ ಬಂದೂಕು ತರಲು ಪ್ರಯತ್ನ ಮಾಡುತ್ತಿದ್ದ. ಒಂದಷ್ಟು ಜನ ಪೊಲೀಸ್ ಅಧಿಕಾರಿಗಳು ಕೂಡ ಈತನ ಟಾರ್ಗೆಟ್ ಆಗಿದ್ದರು ಎನ್ನುವ ಮಾಹಿತಿ ಸಿಕ್ಕಿದೆ. ಧರ್ಮದಂಗಲ್, ಹಿಜಾಬ್ ಘಟನೆ ಬಳಿಕ ಶಾರೀಕ್ ಗೆ ಮಂಗಳೂರೇ ಟಾರ್ಗೆಟ್ ದೊಡ್ಡ ಟಾರ್ಗೆಟ್‌ ಆಗಿತ್ತು.

Mangaluru Blast case: ಹಿಂದೂ ಸೋಗಿನಲ್ಲಿದ್ದ ಮಂಗಳೂರು ಬಾಂಬರ್‌!

    ಇದರ ಸಂಪೂರ್ಣ ತನಿಖೆ ನಡೆಯಲಿದೆ ಎಂದ ಸಚಿವ ಸುನೀಲ್‌ ಕುಮಾರ್‌: ಬಾಂಬ್ ಸ್ಪೋಟದ ಘಟನೆಯನ್ನ ಉಗ್ರವಾಗಿ ಖಂಡಿಸುತ್ತೇವೆ. ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರ ಮಾಡಲಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆಯೂ ತನಿಖೆ ನಡೆಯಲಿದೆ. ಪಿಎಫ್ಐ ನಿಷೇಧದ ಬಳಿಕ ಇಂಥ ಘಟನೆಗೆ ಸರ್ಕಾರ ಕಡಿವಾಣ ಹಾಕಿದೆ. ಸಂಚುಗಳನ್ನ ವಿಫಲಗೊಳಿಸೋ ಕೆಲಸ ಸರ್ಕಾರ ಮಾಡುತ್ತಿದೆ. ಪಿಎಫ್ಐ ನಿಷೇಧ ಇದರ ಒಂದು ಭಾಗ, ಸರ್ಕಾರ ಮೃಧು ಧೋರಣೆ ತಳೆದಿಲ್ಲ. ಈ ಘಟನೆಯನ್ನ ಇಡೀ ಸಮಾಜ ಒಂದಾಗಿ ಎದುರಿಸಬೇಕಿದೆ. ಕದ್ರಿ ದೇವಸ್ಥಾನ, ಕೆಲವು ಕಚೇರಿ ಹಾಗೂ ಸಾರ್ವಜನಿಕ ಜಾಗಗಳು ಈತನ ಗುರಿಯಾಗಿತ್ತು. ಹಿಂದೂ ಸಮಾಜ ಟಾರ್ಗೆಟ್ ಮಾಡುವ ಅವರ ಕೆಲಸ ವಿಫಲವಾಗಿದೆ. ಸ್ಥಳೀಯ ಮತ್ತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕೈವಾಡ ಇದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೂಡ ಆಗಿರುವ ಸುನೀಲ್‌ ಕುಮಾರ್‌ ಹೇಳಿದ್ದಾರೆ.

    ನಮ್ ಮಗ ಹಂಗಿಲ್ಲ, ತಪ್ಪೇ ಮಾಡಿಲ್ಲ, ಮೋಸ್ಟ್ ವಾಂಟೆಡ್ ಉಗ್ರ ಮತೀನ್ ಪೋಷಕರ ಪ್ರತಿಕ್ರಿಯೆ!

    ಇಂಥಹ ಮಾನಸಿಕತೆ ದೂರ ಆಗಬೇಕಿದೆ, ನಾವು ಇಂಥದ್ದನ್ನ ಆಗಲು ಬಿಡಲ್ಲ. ತನಿಖೆ ದೃಷ್ಟಿಯಿಂದ ಗೃಹ ಸಚಿವರು ಮೊದಲು ಭೇಟಿ ನೀಡಿದ್ದಾರೆ. ಎನ್.ಐ.ಎ ಘಟಕ ಖಂಡಿತವಾಗಿ ಮಂಗಳೂರಿನಲ್ಲಿ ಆಗಲಿದೆ. ಕೇಂದ್ರ ಸರ್ಕಾರ ಅದನ್ನ ಪಾಸಿಟಿವ್ ಆಗಿ ಪರಿಶೀಲನೆ ಮಾಡುತ್ತಿದೆ. ದೇಶದ ಯಾವುದೇ ಭಾಗದಲ್ಲಿ ಇಂಥಹ ವಾತಾವರಣ ಸೃಷ್ಟಿಯಾಗಲು ಬಿಡೋದಿಲ್ಲ. ಈ ಘಟನೆಯನ್ನ ಎಲ್ಲರೂ ಖಂಡಿಸಿ ಸಹಕಾರ ಕೊಡೋರ ಬಗ್ಗೆ ಎಚ್ಚರ ವಹಿಸಬೇಕು. ನೆಟ್ಟಾರು ಘಟನೆ, ಎಸ್‌ಡಿಪಿಐ ಉಪಟಳ ಎಲ್ಲವನ್ನೂ ಜನ ವಿರೋಧಿಸಿದ್ದಾರೆ. ಆಟೋ ಚಾಲಕ‌ನ ಕುಟುಂಬಕ್ಕೆ ಸರ್ಕಾರದ ಕಡೆಯಿಂದ ಸೂಕ್ತ ಪರಿಹಾರ ಕೊಡಲಾಗುವುದು ಎಂದು ಇಂಧನ ಸಚಿವ ಹೇಳಿದ್ದಾರೆ.