ಶ್ರೀರಂಗಪಟ್ಟಣದಲ್ಲಿ ಅಬಕಾರಿ ಇಲಾಖೆ ₹7 ಲಕ್ಷ ಮೌಲ್ಯದ 12 ಕಿಲೋ ಗಾಂಜಾ ವಶಪಡಿಸಿಕೊಂಡಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಒರಿಸ್ಸಾದಿಂದ ಗಾಂಜಾ ತರಿಸಿಕೊಂಡು ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಮಂಡ್ಯ (ಜೂ. 11): ಸಕ್ಕರೆ ನಾಡು ಎಂದೇ ಪ್ರಸಿದ್ಧಿಯಾದ ಮಂಡ್ಯ ಜಿಲ್ಲೆಯಲ್ಲಿರುವ ಇತಿಹಾಸದಲ್ಲಿ ಟಿಪ್ಪು ಸುಲ್ತಾನ್‌ನ ರಾಜಧಾನಿ ಆಗಿದ್ದ ಶ್ರೀರಂಗಪಟ್ಟಣ ಪ್ರವಾಸಿ ಸ್ಥಳದಲ್ಲಿ ಇದೀಗ ಗಾಂಜಾ ಘಮಲು ಜೋರಾಗಿ ಹರಡುತ್ತಿದೆ. ಶ್ರೀರಂಗಪಟ್ಟಣದಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಂದಾಜು ₹7 ಲಕ್ಷ ಮೌಲ್ಯದ 12 ಕಿಲೊಗ್ರಾಂ ಗಾಂಜಾ ಸೊಪ್ಪನ್ನು ಜಪ್ತಿ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಕಾರ್ಯಾಚರಣೆಯ ಸ್ಥಳ:

ಶ್ರೀರಂಗಪಟ್ಟಣ ತಾಲ್ಲೂಕಿನ ಬೊಮ್ಮೂರು ಅಗ್ರಹಾರದ ಬಳಿ ಈ ದಾಳಿ ನಡೆಯಿದ್ದು, ನಂಬರ್ ಪ್ಲೇಟ್ ಇಲ್ಲದ ಬೈಕ್‌ನಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಈ ಕಾರ್ಯಾಚರಣೆ ಅಬಕಾರಿ ಡಿಸಿ ನಾಗಶಯನ ಅವರ ನೇತೃತ್ವದಲ್ಲಿ ನಡೆಯಿತು. ಬಂಧಿತರು ಮೈಸೂರು ಹಾಗೂ ಚಾಮರಾಜನಗರ ಮೂಲದವರಾಗಿದ್ದು, ಇವರನ್ನು ಇರ್ಷಾದ್ ಮತ್ತು ಅಕ್ಬರ್ ಎಂಬವರಾಗಿ ಗುರುತಿಸಲಾಗಿದೆ. ಇವರು ಗಾಂಜಾ ಸಾಗಾಟದ ದಂಧೆಯಲ್ಲಿ ಎಷ್ಟು ನಿಪುಣರಾಗಿದ್ದರೆಂದರೆ, ನಂಬರ್ ಪ್ಲೇಟ್ ಇಲ್ಲದ ಬೈಕ್ ಬಳಸುವ ಮೂಲಕ ಗಾಂಜಾ ಸಾಗಣೆ ಮಾಡುತ್ತಿದ್ದರು.

ಅಕ್ರಮ ಜಾಲದ ಬೆನ್ನುಹತ್ತಿದ ಪೊಲೀಸರು:

ಆರೋಪಿಗಳು ಒರಿಸ್ಸಾದಿಂದ ಗಾಂಜಾ ತರಿಸಿಕೊಂಡು ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳಿಗೆ ಸರಬರಾಜು ಮಾಡುತ್ತಿದ್ದ ಮಾಹಿತಿ ಲಭ್ಯವಾಗಿದೆ. ಇವರ ವಿರುದ್ಧ ಈ ಹಿಂದೆ ಹಲವು ಗಂಭೀರ ಪ್ರಕರಣಗಳು ದಾಖಲಾಗಿರುವ ಶಂಕೆಯೂ ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ. ಬಂಧಿತ ಇಬ್ಬರ ವಿರುದ್ಧ ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆ (NDPS Act) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮುಂದಿನ ತನಿಖೆಗಾಗಿ ಹೆಚ್ಚಿನ ಮಾಹಿತಿಯನ್ನು ಕೂಡ ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಸಕ್ಕರೆ ನಾಡಿನಲ್ಲಿ ಗಾಂಜಾ ಚಟುವಟಿಕೆಗಳು ಹೆಚ್ಚುತ್ತಿರುವುದಕ್ಕೆ ಈ ದಾಳಿ ಎಚ್ಚರಿಕೆಯ ಗಂಟೆಯಾಗಿದೆ. ಭವಿಷ್ಯದಲ್ಲಿ ಈ ರೀತಿಯ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಪೊಲೀಸರು ಬಿಗಿ ಕ್ರಮ ಕೈಗೊಳ್ಳಬೇಕಿದೆ ಎಂಬ ಒತ್ತಾಯ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.