ಪಾಂಡವಪುರದಲ್ಲಿ ಅಕ್ರಮ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಹಲಗೂರಿನಲ್ಲಿ ಅರೆಬೆಂದ ದೇಹ ಪತ್ತೆಯಾಗಿದ್ದು, ಕೊಲೆ ಮಾಡಿ ಸುಟ್ಟು ಹಾಕಿರುವ ಶಂಕೆ ವ್ಯಕ್ತವಾಗಿದೆ.

ಪಾಂಡವಪುರ (ಜೂ.4): ಸ್ಕೂಟರ್‌ನಲ್ಲಿ ಅಕ್ರಮವಾಗಿ ಒಣ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಪೊಲೀಸರು ಮಾಲು ಸಮೇತ ಸೋಮವಾರ ರಾತ್ರಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಟ್ಟಣದ ವಿ.ಸಿ.ಕಾಲನಿ ನಿವಾಸಿ ರಂಗಸ್ವಾಮಿ ಅವರ ಪುತ್ರ ಆರ್.ಪ್ರಕಾಶ್ (29) ಬಂಧಿತ ಆರೋಪಿ. ತಾಲೂಕಿನ ಕ್ಯಾತನಹಳ್ಳಿ ಗ್ರಾಪಂ ವ್ಯಾಪ್ತಿಯ ಜಯಂತಿ ನಗರದ ಸಮೀಪ ಪಾಂಡವಪುರ-ಕೆ.ಆರ್.ಪೇಟೆ ಮುಖ್ಯ ರಸ್ತೆಯಲ್ಲಿ ಆರೋಪಿ ಸ್ಕೂಟರ್‌ನಲ್ಲಿ ಗಾಂಜಾ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಪೊಲೀಸರು ಆರೋಪಿ ಬಳಿ ಇದ್ದ 2 ಕೆ.ಜಿ 300 ಗ್ರಾಂ ಒಣ ಗಾಜಾ ಹಾಗೂ ಸ್ಕೂಟರ್ ಅನ್ನು ವಶಕ್ಕೆ ತೆಗೆದುಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಬಕಾರಿ ಉಪ ಆಯುಕ್ತ ನಾಗಶಯನ ಮಾರ್ಗದರ್ಶನದಲ್ಲಿ ಶ್ರೀರಂಗಪಟ್ಟಣ ವಲಯದ ಅಬಕಾರಿ ನಿರೀಕ್ಷಕ ವೈ.ಜೆ. ಪ್ರಫುಲ್ಲ ಚಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ ಅಬಕಾರಿ ಪೊಲೀಸರಾದ ರಾಮು, ದಿಲೀಪ್ ವಾಹನ ಚಾಲಕರಾದ ನಾಗರಾಜು, ಸಂದೀಪ್ ಹಾಗೂ ಕ್ಯಾತನಹಳ್ಳಿ ಗ್ರಾಪಂ ಸಿಬ್ಬಂದಿ ಭಾಗವಹಸಿದ್ದರು.

ವ್ಯಕ್ತಿ ಕೊಲೆ ಮಾಡಿ ಸುಟ್ಟು ಹಾಕಿದ ಅರೆಬೆಂದ ದೇಹ ಪತ್ತೆ

ಹಲಗೂರು: ವ್ಯಕ್ತಿಯನ್ನು ಕೊಲೆ ಮಾಡಿ ಸುಟ್ಟು ಹಾಕಿರುವ ಅರೆಬೆಂದ ದೇಹ ಪತ್ತೆಯಾಗಿರುವ ಘಟನೆ ಸಮೀಪದ ಹಾಡ್ಲಿ ಗ್ರಾಮದ ಬಳಿ ಜರುಗಿದೆ.

ಗ್ರಾಮದ ಸುಶೀಲಮ್ಮ ಕೋಂ ಲೇಟ್ ಸಿದ್ದೇಗೌಡರ ನೀಲಿಗಿರಿ ಜಮೀನಿನ ಆಜು-ಬಾಜಿನಲ್ಲಿ ಕುರಿ ಮೇಯಿಸುತ್ತಿದ್ದವರಿಗೆ ಸುಟ್ಟು ಹಾಕಿರುವ ಅರ್ಧ ಬೆಂದ ಮೃತದೇಹ ಇರುವುದನ್ನು ನೋಡಿ ತಕ್ಷಣ ಹಲಗೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್ ಮತ್ತು ಸಬ್ ಇನ್ಸ್ ಪೆಕ್ಟರ್ ಲೋಕೇಶ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ವ್ಯಕ್ತಿಯನ್ನು ಕೊಲೆ ಮಾಡಿ ದೇಹ ಪತ್ತೆ ಆಗಬಾರದೆಂಬ ದೃಷ್ಟಿಯಿಂದ ಸುಟ್ಟು ಹಾಕಲು ಪ್ರಯತ್ನಿಸಿ ಅರ್ಧ ಬೆಂದ ದೇಹವನ್ನು ಬಿಟ್ಟು ಹೋಗಿದ್ದಾರೆ.

ಘಟನಾ ಸ್ಥಳಕ್ಕೆ ಬೆರಳು ತಜ್ಞರು, ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿ ಸಿ.ಈ.ತಿಮ್ಮಯ್ಯ ಸ್ಥ ಆಗಮಿಸಿ ಪರಿಶೀಲನೆ ನಡೆಸಿದರು. ಹಲಗೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳ ಶೋಧನೆಯಲ್ಲಿ ತೊಡಗಿದ್ದಾರೆ.