ಮಹಾಲಯ ಅಮವಾಸ್ಯೆಯಂದು ಮಾಂಸ ಸಿಗುವುದು ಅನುಮಾನ ಎಂಬ ವದಂತಿ ಹರಡಿದ್ದು, ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಪ್ರಾಣಿ ವಧೆ ನಿಷೇಧದಿಂದಾಗಿ ಜನರು ಸಾಂಪ್ರದಾಯಿಕ ಆಚರಣೆಗಳನ್ನು ನಡೆಸಲು ಸಾಧ್ಯವಾಗುತ್ತದೆಯೇ ಎಂಬ ಪ್ರಶ್ನೆ ಮೂಡಿದೆ. ವ್ಯಾಪಾರಿಗಳು ಮಾಂಸ ಮಾರಾಟ ಮಾಡುವುದಾಗಿ ಹೇಳುತ್ತಿದ್ದರೆ, ಸರ್ಕಾರ ನಿಷೇಧ ಜಾರಿಗೊಳಿಸುವುದಾಗಿ ಹೇಳುತ್ತಿದೆ.

ಬೆಂಗಳೂರು (ಅ.1): ನಾಳೆ ವರ್ಷದ ಅತೀ ದೊಡ್ಡ ಅಮವಾಸ್ಯೆ ಸಂಭ್ರಮ. ಮಹಾಲಯ ಅಮವಾಸ್ಯೆಯಂದು ರಾಜ್ಯದಲ್ಲಿ ಮಾಂಸ ಸಿಗೋದು ಅನುಮಾನ ಎನ್ನಲಾಗಿದೆ. ಸತ್ತು ಸ್ವರ್ಗದಲ್ಲಿರುವ ಹಿರಿಯರಿಗೆ ಮಾಂಸದ ಅರ್ಪಣೆ ಈ ಬಾರಿ ಅಸಾಧ್ಯವಾಗುವ ಸಾಧ್ಯತೆ ಇದೆ. ಗಾಂಧಿ ಜಯಂತಿ ಹಿನ್ನಲೆ ಪ್ರಾಣಿ ವಧೆ ಮಾಡೋ ಹಾಗಿಲ್ಲ ಎಂದು ಸ್ಥಳೀಯ ಆಡಳಿತಗಳು ಹೇಳುತ್ತಿವೆ. ಇನ್ನೊಂದೆಡೆ, ಮಹಾತ್ಮ ಗಾಂಧಿ ಹುಟ್ಟುವ ಮುನ್ನವೇ ಮಹಾಲಯ ಅಮಾವಾಸ್ಯೆ ಆಚರಣೆ ಮಾಡುತ್ತಿದ್ದೆವು. ಈ ಬಾರಿಯೂ ಮಾಂಸ ಅರ್ಪಿಸಿ ಆಚರಣೆ ಮಾಡಲಿದ್ದೇನೆ ಎನ್ನುತ್ತಿದ್ದಾರೆ. ಇದರಿಂದಾಗಿ ಅಕ್ಷರಶಃ ಮಹಾತ್ಮ ಗಾಂಧಿ ಜನ್ಮ ದಿನ vs ಮಹಾಲಯ ಅಮಾವಾಸ್ಯೆ ಎನ್ನುವಂತಾಗಿದೆ. ಮಾಂಸ ಮಾರಾಟ ಮಾಡೋ ಹಾಗಿಲ್ಲ ಅಂತ ಸರ್ಕಾರ ಈಗಾಗಲೇ ಹೇಳಿದೆ. ಸರ್ಕಾರ ಏನು ಬೇಕಾದರೂ ಹೇಳಲಿ ಮಾಂಸ ಮಾರಾಟ ಮಾಡಿಯೇ ಸಿದ್ದ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಅಂಗಡಿ ಓಪನ್ ಮಾಡಿದ್ರೆ ಅದನ್ನು ಮುಚ್ಚಿಸಲಿದ್ದೇವೆ ಎಂದು ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ.

ಈ ಬಾರಿ ಮಹಾತ್ಮ ಗಾಂಧಿ ಜನ್ಮದಿನದಂತೆ ಮಹಾಲಯ ಅಮಾವಾಸ್ಯೆ ಬಂದಿದೆ. ಹಿರಿಯರಿಗೆ ಎಡೆ ಇಡಲು ಈ ಬಾರಿ ನಾನ್‌ ವೆಜ್‌ ಸಿಗೋದಿಲ್ಲ ಎನ್ನುವ ಅನುಮಾನ ವ್ಯಕ್ತವಾಗಿದೆ. ನಾಳೆ ಮಾಂಸ ಮಾರಾಟಕ್ಕೆ ಅವಕಾಶ ಕೊಡುವಂತೆ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಮನವಿ ಮಾಡಿದೆ. ಸಿಎಂ, ಬಿಬಿಎಂಪಿ ಕಮೀಷನರ್ ಹಾಗೂ ನಗರಾಭಿವೃದ್ಧಿ ಇಲಾಖೆ ಸೆಕ್ರೆಟರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ.

ಹಿಂದೂಗಳು ತಮ್ಮ ಪಿತೃಗಳಿಗೆ ಮಾಂಸವನ್ನು ನೈವೇದ್ಯ ಮಾಡಿ ಪೂಜೆ ನೀಡುತ್ತಾರೆ. ಆದರೆ, ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಾಳೆ ಪ್ರಾಣಿವಧೆ ಮತ್ತು ಮಾಂಸ ಮಾರಾಟಕ್ಕೆ ಅವಕಾಶವಿಲ್ಲ ಎಂದು ಸರ್ಕಾರ ಹೇಳಿದೆ. ಇದು ವ್ಯಾಪಾರಕ್ಕೆ ದೊಡ್ಡ ಮಟ್ಟದಲ್ಲಿ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಜೊತೆಗೆ ನೈವೇದ್ಯ ಇಡಲಾಗದೇ ಜನರ ಭಾವನೆಗೂ ನಾಳೆ ಪೆಟ್ಟು ಬೀಳುವ ಸಾಧ್ಯತೆ ಅಂತ ಅಳಲು ತೋಡಿಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

ಪಿತೃಪಕ್ಷದ ಆಚರಣೆ, ಮಹತ್ವ, ಶಾಸ್ತ್ರೋಕ್ತ ವಿವರಗಳು ಇಲ್ಲಿವೆ

ಮಹಾಲಯ ಅಮವಾಸ್ಯೆಯಂದು ಹಿರಿಯರಿಗೆ ನಾನ್‌ ವೆಜ್‌ ಊಟವನ್ನೇ ಪೂಜೆಗೆ ಇಡಬೇಕು. ನಾನ್‌ ವೆಜ್‌ ಇಲ್ಲ ಅಂದ್ರೆ ಆಗೋದಿಲ್ಲ ಎಂದು ಜನ ಹೇಳುತ್ತಿದ್ದಾರೆ. ಈ ಒಂದು ದಿನ ವಿಶೇಷದಿನ ಎಂದು ಪರಿಗಣಿಸಿ ಸಿಎಂ ಮಾಂಸ ಮಾರಾಟಕ್ಕೆ ಅವಕಾಶ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಮಹಾಲಯ ಅಮಾವಾಸ್ಯೆಗೆ ಈಗಾಗಲೇ ಬೇರೆ, ಬೇರೆ ರಾಜ್ಯದಿಂದ ಕುರಿ,ಮೇಕೆಗಳನ್ನು ತರಿಸಿಕೊಳ್ಳಲಾಗಿದೆ. ಕೋಳಿಗಳನ್ನು ರೆಡಿ ಇಟ್ಟುಕೊಂಡಿದ್ದೇವೆ ಎಂದು ವ್ಯಾಪಾರಿಗಳು ಹೇಳಿದ್ದಾರೆ. ಕೆಲ ಮಾಂಸದ ಅಂಗಡಿ ಮಾಲೀಕರು ಮಾತ್ರ, ನಾವು ನಾಳೆ ಮಾಂಸ ಕಟ್ ಮಾಡೇ ಮಾಡಲಿದ್ದೇವೆ ಎಂದಿದ್ದಾರೆ.

ಮಹಾಲಯ ಅಮವಾಸ್ಯೆ ವಿಶೇಷ, ಗೋಕರ್ಣದಲ್ಲಿ ಪಿತೃಗಳಿಗೆ ಪಿಂಡ ಪ್ರಧಾನ, ಆಹಾರ ಸಮರ್ಪಣೆ