ಲಾಕ್ಡೌನ್ನಿಂದ ಸುಧಾರಿಸಿದ ವೃಷಭಾವತಿ ನೀರಿನ ಗುಣಮಟ್ಟ!
ಲಾಕ್ಡೌನ್ನಿಂದ ಸುಧಾರಿಸಿದ ವೃಷಭಾವತಿ ನೀರಿನ ಗುಣಮಟ್ಟ!| ವೃಷಭಾವತಿ ಕಾಲುವೆಯಲ್ಲಿ ಕಂಡು ಬರುತ್ತಿದ್ದ ಮಾಲಿನ್ಯದ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ, ದುರ್ವಾಸನೆ ಸಾಕಷ್ಟು ಕಡಿಮೆ
ಬೆಂಗಳೂರು(ಏ.16): ಲಾಕ್ಡೌನ್ ಜಾರಿಯಿಂದಾಗಿ ನಗರದ ವೃಷಭಾವತಿ ಕಾಲುವೆಯಲ್ಲಿ ಕಂಡು ಬರುತ್ತಿದ್ದ ಮಾಲಿನ್ಯದ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ, ದುರ್ವಾಸನೆ ಸಾಕಷ್ಟುಕಡಿಮೆಯಾಗಿದೆ. ಕಡು ಕಪ್ಪು ಬಣ್ಣದಿಂದ ಕೂಡಿರುತ್ತಿದ್ದ ನೀರು ತುಸು ತಿಳಿಯಾಗಿದೆ.
ಲಾಕ್ಡೌನ್ ಪರಿಣಾಮ ಪೀಣ್ಯ ಸೇರಿದಂತೆ ನಗರದ ಪ್ರಮುಖ ಕೈಗಾರಿಕಾ ಪ್ರದೇಶಗಳು, ಹೋಟೆಲ್ಗಳು, ವಾಹನಗಳ ಸವೀರ್ಸ್ ಸೆಂಟರ್ಗಳು, ವಿವಿಧ ಗುಡಿ ಕೈಗಾರಿಕೆಗಳು ಸ್ಥಗಿತಗೊಂಡಿವೆ. ಹೀಗಾಗಿ ಇವುಗಳಿಂದ ಬಿಡುಗಡೆಯಾಗಿ ಕಾಲುವೆ ಸೇರುತ್ತಿದ್ದ ತ್ಯಾಜ್ಯ ನೀರು ಹೊರ ಬರುತ್ತಿಲ್ಲ. ಇದರಿಂದ ವೃಷಭಾವತಿ ಕಾಲುವೆಯಿಂದ ಬರುತ್ತಿದ್ದ ದುರ್ವಾಸನೆ ಕೂಡ ಕಡಿಮೆಯಾಗಿದೆ. ಇದಲ್ಲದೇ ಉದ್ಯೋಗ ಇತ್ಯಾದಿ ಕಾರಣಗಳಿಂದ ಹೊರ ರಾಜ್ಯ ಹಾಗೂ ಜಿಲ್ಲೆಯಿಂದ ಬಂದಿದ್ದ ಜನರು ಸಹ ವಾಪಸ್ ತಮ್ಮ ಊರಿಗೆ ಹೋಗಿರುವುದರಿಂದ ನಗರದಲ್ಲಿ ನೀರಿನ ಬಳಕೆ ಸಾಕಷ್ಟುಕಡಿಮೆ ಆಗಿರುವುದರಿಂದ ಕಾಲುವೆಯಲ್ಲಿ ಹರಿಯುವ ನೀರಿನ ಪ್ರಮಾಣವೂ ಇಳಿಮುಖವಾಗಿದೆ.
ನಗುತ್ತಿದೆ ನಿಸರ್ಗ: ಗಂಗೆ ಸ್ವಚ್ಛವಾದ ಬೆನ್ನಲ್ಲೇ ಅಪರೂಪದ ಪ್ರಾಣಿ ಪ್ರತ್ಯಕ್ಷ!
ಇದೇ ರೀತಿ ಬೆಳ್ಳಂದೂರು ಕೆರೆಗೆ ಸೇರುವ ತ್ಯಾಜ್ಯ ನೀರು ಕಡಿಮೆಯಾಗುತ್ತಿದೆ. ಮೋರಿಗಳಲ್ಲಿ ನೀರಿನ ಹರಿವು ಕಡಿಮೆಯಾಗಿದೆ ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮೂಲಗಳು ತಿಳಿಸಿವೆ.
ಗಂಗಾ ನದಿ ನೀರು ಈಗ ಕುಡಿಯಲು ಯೋಗ್ಯ: ಬರಿಗಣ್ಣಿಗೆ ಕಾಣುತ್ತಿವೆ ಜಲಚರಗಳು!
ಮಾಲಿನ್ಯ ಪರಿಶೀಲಿಸದ ಮಂಡಳಿ
ದೇಶದ ಪ್ರಮುಖ ನದಿಗಳಾದ ಗಂಗಾ, ಯಮುನಾ ನದಿಗಳು ಲಾಕ್ಡೌನ್ನಿಂದ ಸ್ವಚ್ಛವಾಗಿವೆ ಎಂಬ ವರದಿಗಳು ಬಂದಿವೆ. ಆದರೆ, ರಾಜ್ಯದ ಪ್ರಮುಖ ನದಿಯಾದ ಕಾವೇರಿ, ಅರ್ಕಾವತಿ ನದಿಗಳು ಹಾಗೂ ನಗರದ ವೃಷಭಾವತಿ ಕಾಲುವೆ ಸ್ಥಿತಿಗಳನ್ನು ತಿಳಿಯಬೇಕಿದ್ದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಶೀಲಿಸುವ ಗೋಜಿಗೆ ಹೋಗಿಲ್ಲ.
ತ್ಯಾಜ್ಯ ಹರಿಯುತ್ತಿಲ್ಲ, ಜನರೂ ಬರುತ್ತಿಲ್ಲ: ಗಂಗಾ, ಯಮುನಾ ಕ್ಲೀನ್ ಕ್ಲೀನ್!
ಈ ಕುರಿತು ಮಾತನಾಡಿದ ಮಂಡಳಿ ಸದಸ್ಯ ಕಾರ್ಯದರ್ಶಿ ಬಸವರಾಜ ಪಾಟೀಲ್, ಲಾಕ್ಡೌನ್ ಹಿನ್ನೆಲೆಯಲ್ಲಿ ರಜೆ ನೀಡಿರುವುದರಿಂದ ನೀರಿನ ಮಾದರಿ ಪರಿಶೀಲನೆ ಮಾಡಿಲ್ಲ. ಸಿಬ್ಬಂದಿ ನೀರಿನ ಮಾದರಿ ಪರಿಶೀಲನಾ ಕಾರ್ಯಕ್ಕಾಗಿ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ರಾಜ್ಯ ನದಿ, ಕಾಲುವೆಗಳು ನಿಖರವಾಗಿ ಎಷ್ಟುಪ್ರಮಾಣದಲ್ಲಿ ಸ್ವಚ್ಛವಾಗಿವೆ ಎಂದು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
"