Karnataka school mobile ban update ರಾಮನಗರದಲ್ಲಿ ಯಶಸ್ವಿಯಾದ 'ಮೊಬೈಲ್ ಬಿಡಿ ಪುಸ್ತಕ ಹಿಡಿ' ಅಭಿಯಾನವನ್ನು ಇದೀಗ ರಾಜ್ಯಾದ್ಯಂತ ವಿಸ್ತರಿಸಲು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಈ ಅಭಿಯಾನದ ಮೂಲಕ ಮಕ್ಕಳಲ್ಲಿ ಮೊಬೈಲ್ ಗೀಳನ್ನು ಕಡಿಮೆ ಮಾಡುವುದಾಗಿದೆ.
ಬೆಂಗಳೂರು (ಫೆ.21): ಶಾಲಾ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಗೀಳನ್ನು ಬಿಡಿಸಲು ರಾಮನಗರ ತಾಲೂಕು ಬಿಡದಿ ಹೋಬಳಿಯ ಬನ್ನಿಕುಪ್ಪೆ ಕ್ಲಸ್ಟರ್ನ ಸಮೂಹ ಸಂಪನ್ಮೂಲ ಶಿಕ್ಷಕ ಚಿಕ್ಕವೀರಯ್ಯ ಅವರು ಕಳೆದ ವರ್ಷ ನಡೆಸಿದ ‘ಮೊಬೈಲ್ ಬಿಡಿ ಪುಸ್ತಕ ಹಿಡಿ’ ಅಭಿಯಾನ ಯಶಸ್ವಿಯಾಗಿ ರಾಜ್ಯಾದ್ಯಂತ ಸದ್ದು ಮಾಡಿತ್ತು. ಇದೀಗ ಈ ಅಭಿಯಾನವನ್ನು ರಾಜ್ಯಾದ್ಯಂತ ಪರಿಣಾಮಕಾರಿ ಅನುಷ್ಠಾನ ಮಾಡಲು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಈ ಅಭಿಯಾನವನ್ನು 2025-26ನೇ ಸಾಲಿನಲ್ಲೇ ರಾಜ್ಯಾದ್ಯಂತ ಅನುಷ್ಠಾನಗೊಳಿಸಲು ಎಲ್ಲ ಬಿಇಒಗಳಿಗೆ ಸರ್ಕಾರ ಪತ್ರದ ಮೂಲಕ ಸೂಚಿಸಿತ್ತು. ಇದರ ಹಿನ್ನೆಲೆಯಲ್ಲಿ ವಿವಿಧ ಬಿಇಒಗಳು ತಮ್ಮ ವ್ಯಾಪ್ತಿಯ ಶಾಲೆಗಳಲ್ಲಿ ಮೊಬೈಲ್ ಬಿಡಿ ಪುಸ್ತಕ ಹಿಡಿ ಅಭಿಯಾನ ಅನುಷ್ಠಾನಕ್ಕೆ ಆದೇಶಿಸಿದ್ದರು. ಇದೀಗ ಈ ಅಭಿಯಾನವನ್ನು 2026-27ನೇ ಸಾಲಿನಲ್ಲಿ ಶಾಲಾ ಆರಂಭದ ದಿನದಿಂದಲೇ ರಾಜ್ಯಾದ್ಯಂತ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಇಲಾಖೆ ಸೂಚಿಸಿದೆ. ಮಕ್ಕಳಲ್ಲಿ ಮೊಬೈಲ್ ಗೀಳು ಕಡಿಮೆ ಮಾಡಿ ಓದು ಹಾಗೂ ಕ್ರೀಡೆ ಸೇರಿದಂತೆ ಮತ್ತಿತರ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸುವಿಕೆಗೆ ಶಾಲಾ ಶಿಕ್ಷಕರ ಜೊತೆಗೆ ಪೋಷಕರಿಗೂ ಇಲಾಖೆ ಒಂದಷ್ಟು ಜವಾಬ್ದಾರಿ ನೀಡಿದೆ.
ಸಹಪಠ್ಯ ಚಟುವಟಿಕೆಗೆ ಒತ್ತು:
ಶಾಲೆಗಳಲ್ಲಿ ಸಹಪಠ್ಯ ಚಟುವಟಿಕೆಗಳಾದ ಪ್ರತಿಭಾ ಕಾರಂಜಿ, ಕಲೋತ್ಸವ, ರಾಷ್ಟ್ರೀಯ ಹಬ್ಬಗಳು, ಪಾತ್ರಾಭಿನಯ, ನೃತ್ಯ, ಭಾಷಣ, ಸಮುದಾಯದತ್ತ ಕಾರ್ಯಕ್ರಮ ಮತ್ತಿತರ ಚಟುವಟಿಕೆಗಳ ಮೂಲಕ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣ ಮಿತ ಬಳಕೆ ಮತ್ತು ಸುರಕ್ಷತೆ ಬಗ್ಗೆ ಅರಿವು ಮೂಡಿಸಬೇಕು. ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಂಥಾಲಯ ಇಲಾಖೆ ಮತ್ತು ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಕೂಡ ಆರೋಗ್ಯಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಗ್ರಂಥಪಾಲಕರನ್ನು ಶಾಲೆಗಳಿಗೆ ಆಹ್ವಾನಿಸಿ ಅತಿಯಾಗಿ ಮೊಬೈಲ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳುವೀಳಿಕೆ ನೀಡಬೇಕೆಂದು ಸೂಚಿಸಲಾಗಿದೆ.
ಪೊಷಕರು ಮೊಬೈಲ್ ಬಿಟ್ಟು ಮಾದರಿಯಾಗಿ:
ಶಾಲಾ ಹಂತದಲ್ಲಿ ಮಕ್ಕಳ ದಾಖಲಾತಿ ಜಾಗೃತಿ ಅಭಿಯಾನದ ಸಮಯದಲ್ಲಿ ನಡೆಸುವ ಎಸ್ಡಿಎಂಸಿ/ಪೋಷಕರ ಸಭೆಗಳಲ್ಲಿ ಮೊಬೈಲ್ ಬಳಕೆಯ ಪರಿಣಾಮಗಳನ್ನು ಬಲ್ಲ ತಜ್ಞರಿಂದ ಜಾಗೃತಿ ಮೂಡಿಸಲು ಕ್ರಮ ವಹಿಸಬೇಕು. ಮನೆಯಲ್ಲಿ ಮಕ್ಕಳು ಮೊಬೈಲ್ ಬಳಕೆ ಕಡಿಮೆ ಮಾಡಲು ಪೋಷಕರು ಗಮನ ಹರಿಸಬೇಕು. ಮೊಬೈಲ್ ಬಳಕೆಗೆ ಸಮಯ ನಿಗದಿಪಡಿಸಿ, ಯಾವ ವಿಚಾರಗಳನ್ನು ಮಕ್ಕಳು ನೋಡುತ್ತಿದ್ದಾರೆ ಎಂದು ಪೊಷಕರು ಗಮನ ಹರಿಸಬೇಕು. ಪೋಷಕರು ಕೂಡ ಮೊಬೈಲ್ ಬಳಕೆ ಕಡಿಮೆ ಮಾಡಿ ಓದುವಿಕೆ ಹಾಗೂ ಇತರೆ ಚಟುವಟಿಕೆಗಳಿಗೆ ಆದ್ಯತ ನೀಡಿ ತಮ್ಮ ಮಕ್ಕಳಿಗೆ ಮಾದರಿ ಆಗಬೇಕೆಂದು ಸೂಚಿಸಿದೆ.
ರಾಮನಗರದಲ್ಲಿ ಚಿಕ್ಕವೀರಯ್ಯ ನಡೆಸಿದ್ದ ಅಭಿಯಾನ ಯಶಸ್ವಿ
ಶಾಲಾ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ಗೀಳನ್ನು ಬಿಡಿಸಲು ರಾಮನಗರ ತಾಲೂಕಿನ ಬನ್ನಿಕುಪ್ಪೆ ಕ್ಲಸ್ಟರ್ನ ಸಮೂಹ ಸಂಪನ್ಮೂಲ ಶಿಕ್ಷಕ ಚಿಕ್ಕವೀರಯ್ಯ ಟಿ.ಎನ್. ಆರಂಭಿಸಿದ ಮೊಬೈಲ್ ಬಿಡಿ ಪುಸ್ತಕ ಹಿಡಿ ಅಭಿಯಾನಕ್ಕೆ ರಾಜ್ಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಅಭಿಯಾನದ ಬಗ್ಗೆ ಅವರು ಮಾತನಾಡಿರುವ ವಿಡಿಯೋ 10 ಲಕ್ಷ ವೀಕ್ಷಣೆಯಾಗಿತ್ತು. ಕ್ಲಸ್ಟರ್ ವ್ಯಾಪ್ತಿಯ 14 ಶಾಲೆಗಳಲ್ಲಿ ನಡೆಸಿದ್ದ ಈ ಅಭಿಯಾನವು ಮಕ್ಕಳಲ್ಲಿ ಮೊಬೈಲ್ ಗೀಳು ತಗ್ಗಿಸಿ, ಪುಸ್ತಕ ಓದಿನತ್ತ ಆಸಕ್ತಿ ಹೆಚ್ಚಿಸಿತ್ತು. ಮಕ್ಕಳಿಗೆ ಮೊಬೈಲ್ ನೀಡದೆ ಪಠ್ಯ ಮತ್ತು ಕ್ರೀಡೆ ಮತ್ತಿತರ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸುವಂತೆ ಪೋಷಕರಲ್ಲಿ ಜಾಗೃತಿ ಮೂಡಿಸಲು ಈ ಅಭಿಯಾನ ಯಶಸ್ವಿಯಾಗಿತ್ತು.


