ವಿಜಯಪುರದಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (KSDL) ನೂತನ ಉತ್ಪಾದನಾ ಘಟಕ ಸ್ಥಾಪನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. 227.91 ಕೋಟಿ ರೂ. ವೆಚ್ಚದ ಈ ಯೋಜನೆಯು ಉತ್ತರ ಕರ್ನಾಟಕದ ಕೈಗಾರಿಕಾ ಅಭಿವೃದ್ಧಿಗೆ ಪೂರಕವಾಗಲಿದ್ದು, ಸ್ಥಳೀಯವಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ.

ಬೆಂಗಳೂರು/ವಿಜಯಪುರ (ಏ.30): ಉತ್ತರ ಕರ್ನಾಟಕದ ಕೈಗಾರಿಕಾ ಭೂಪಟದಲ್ಲಿ ವಿಜಯಪುರ ಜಿಲ್ಲೆ ಹೊಸ ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದೆ. ರಾಜ್ಯದ ಪ್ರತಿಷ್ಠಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (KSDL) ನೂತನ ಉತ್ಪಾದನಾ ಘಟಕವನ್ನು ವಿಜಯಪುರದಲ್ಲಿ ಸ್ಥಾಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯು ಗುರುವಾರ ಮಹತ್ವದ ಅನುಮೋದನೆ ನೀಡಿದೆ. ಬರೋಬ್ಬರಿ 227.91 ಕೋಟಿ ರೂಪಾಯಿ ವೆಚ್ಚದ ಈ ಬೃಹತ್ ಯೋಜನೆಗೆ ಅಸ್ತು ಎನ್ನುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಹೊಸ ವೇಗ ನೀಡಲಾಗಿದೆ.

ವಿಜಯಪುರದಲ್ಲಿ ಕೆಎಸ್ಡಿಎಲ್ ಸ್ಥಾಪನೆ ಯಾಕೆ?

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರ ವಿಶೇಷ ಆಸಕ್ತಿಯ ಫಲವಾಗಿ ಈ ಯೋಜನೆ ಜಿಲ್ಲೆಗೆ ಲಭಿಸಿದೆ. ವಿಶ್ವಪ್ರಸಿದ್ಧ 'ಮೈಸೂರು ಸ್ಯಾಂಡಲ್ ಸೋಪ್' ಸೇರಿದಂತೆ ಕೆಎಸ್ಡಿಎಲ್‌ನ 94ಕ್ಕೂ ಹೆಚ್ಚು ಉತ್ಪನ್ನಗಳಿಗೆ ಉತ್ತರ ಕರ್ನಾಟಕ ಮಾತ್ರವಲ್ಲದೆ ನೆರೆಯ ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಅಗಾಧವಾದ ಬೇಡಿಕೆಯಿದೆ. ಈ ಬೇಡಿಕೆಯನ್ನು ಪೂರೈಸಲು ಮತ್ತು ಸಾರಿಗೆ ವೆಚ್ಚವನ್ನು ತಗ್ಗಿಸಲು ವಿಜಯಪುರವು ಭೌಗೋಳಿಕವಾಗಿ ಸೂಕ್ತ ತಾಣವಾಗಿದೆ. ವಿಜಯಪುರದ ಇಟ್ಟಂಗಿಹಾಳ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 50 ಎಕರೆ ಜಾಗದಲ್ಲಿ ಈ ನೂತನ ಘಟಕ ತಲೆ ಎತ್ತಲಿದೆ.

227.91 ಕೋಟಿ ರೂ.ಗಳ ಹೂಡಿಕೆ ವಿವರ:

ಈ ಬೃಹತ್ ಮೊತ್ತದ ಹೂಡಿಕೆಯನ್ನು ವಿವಿಧ ಹಂತಗಳಲ್ಲಿ ವಿನಿಯೋಗಿಸಲಾಗುವುದು:

  • ಭೂಮಿ ಖರೀದಿ: 30 ಕೋಟಿ ರೂ. (ಎಕರೆಗೆ 59.30 ಲಕ್ಷ ರೂ.ನಂತೆ).
  • ಉತ್ಪಾದನಾ ಸ್ಥಾವರ ನಿರ್ಮಾಣ: 77.88 ಕೋಟಿ ರೂ.
  • ಯಂತ್ರೋಪಕರಣಗಳ ಖರೀದಿ: 70.80 ಕೋಟಿ ರೂ.
  • ಮೂಲಸೌಕರ್ಯ ವ್ಯವಸ್ಥೆ: 24 ಕೋಟಿ ರೂ.
  • ಇತರೆ ವೆಚ್ಚಗಳು: ಟೆಂಡರ್ ಪ್ರೀಮಿಯಂ ಮತ್ತು ಸಾದಿಲ್ವಾರು ವೆಚ್ಚಗಳಿಗೆ ಸುಮಾರು 25 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

ದಾಖಲೆಯ ಲಾಭದಲ್ಲಿ ಕೆಎಸ್ಡಿಎಲ್:

ಸುಮಾರು 110 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕೆಎಸ್ಡಿಎಲ್ ಸಂಸ್ಥೆಯು ಇದೇ ಮೊದಲ ಬಾರಿಗೆ ದಾಖಲೆಯ ಪ್ರಗತಿ ಸಾಧಿಸಿದೆ. 2025-26ನೇ ಹಣಕಾಸು ವರ್ಷದಲ್ಲಿ ಸಂಸ್ಥೆಯು 2,016 ಕೋಟಿ ರೂಪಾಯಿಗಳ ಸಾರ್ವಕಾಲಿಕ ದಾಖಲೆಯ ವಹಿವಾಟು ನಡೆಸಿದ್ದು, 507 ಕೋಟಿ ರೂಪಾಯಿ ನಿವ್ವಳ ಲಾಭ ದಾಖಲಿಸಿದೆ. ಒಟ್ಟು 47,494 ಟನ್ ಉತ್ಪನ್ನಗಳನ್ನು ಉತ್ಪಾದಿಸುವ ಮೂಲಕ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ತನ್ನ ಬ್ರ್ಯಾಂಡ್ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. ವಿಜಯಪುರದಲ್ಲಿ ಹೊಸ ಘಟಕ ಆರಂಭವಾಗುವುದರಿಂದ ಈ ಉತ್ಪಾದನಾ ಸಾಮರ್ಥ್ಯ ಮತ್ತಷ್ಟು ಹೆಚ್ಚಲಿದೆ.

ಸ್ಥಳೀಯರಿಗೆ ಉದ್ಯೋಗದ ಆಸರೆ:

ಈ ಕಾರ್ಖಾನೆಯ ಸ್ಥಾಪನೆಯಿಂದ ವಿಜಯಪುರ ಜಿಲ್ಲೆ ಮತ್ತು ಸುತ್ತಮುತ್ತಲ ಭಾಗದ ನೂರಾರು ಯುವಕರಿಗೆ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಲಭಿಸಲಿವೆ. ಜಿಲ್ಲೆಯಲ್ಲಿ ಕೈಗಾರಿಕಾ ವಾತಾವರಣ ನಿರ್ಮಾಣವಾಗುವುದರಿಂದ ಪೂರಕ ಸಣ್ಣ ಕೈಗಾರಿಕೆಗಳಿಗೂ ಉತ್ತೇಜನ ಸಿಗಲಿದೆ.

ಸಚಿವ ಎಂ.ಬಿ. ಪಾಟೀಲ ಅವರು ಈ ಯೋಜನೆಗೆ ಸಹಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಕೆಎಸ್ಡಿಎಲ್ ಉತ್ಪನ್ನಗಳ ಬ್ರ್ಯಾಂಡಿಂಗ್, ಇ-ಕಾಮರ್ಸ್ ಮತ್ತು ರಫ್ತು ವಹಿವಾಟಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ನೂತನ ಘಟಕವು ಸಂಸ್ಥೆಯ ಕಿರೀಟಕ್ಕೆ ಮತ್ತೊಂದು ಗರಿ ಪ್ರಾಯವಾಗಲಿದೆ.