ಅತೃಪ್ತ ಆತ್ಮಗಳು ಮತ್ತು ಪಂಚಭೂತಗಳ ದೋಷದಿಂದ ಜಾಗತಿಕವಾಗಿ ಸಾವು-ನೋವುಗಳು ಹೆಚ್ಚಾಗಲಿದೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಜೊತೆಗೆ 2026ರಲ್ಲಿ ಜಗತ್ತಿಗೆ ಹತ್ತು ಪಟ್ಟು ಹೆಚ್ಚಿನ ಅಪಾಯವಿದೆ ಎಂದು ತಿಳಿಸಿದ್ದಾರೆ.

ಬೀದರ್ (ಜ.10): ಜಗತ್ತಿನಲ್ಲಿ ಸತ್ತಿರುವ ಈ ಕೋಟ್ಯಂತರ ಜನರ ಆತ್ಮಗಳಿಗೆ ಸರಿಯಾದ ಸಂಸ್ಕಾರವಾಗಿಲ್ಲ. ಈ ಅತೃಪ್ತ ಆತ್ಮಗಳು ಜಗತ್ತಿನಾದ್ಯಂತ ಸಂಚರಿಸುತ್ತಿರುವುದರಿಂದ ಮನುಕುಲಕ್ಕೆ ದೊಡ್ಡ ಅಪಾಯವಿದೆ. ಆದ್ದರಿಂದ 2025ಕ್ಕಿಂತಲೂ 2026ರಲ್ಲಿ ಜಗತ್ತಿಗೆ ಹತ್ತು ಪಟ್ಟು ಹೆಚ್ಚಿನ ಅಪಾಯವಿದೆ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.

ಬೀದರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ಬಿಟ್ಟುಕೊಡುವುದಿಲ್ಲ ಎಂಬ ಸ್ಪೋಟಕ ರಾಜಕೀಯ ಭವಿಷ್ಯವನ್ನು ಹೇಳಿದ ಬೆನ್ನಲ್ಲಿಯೇ ಜಾಗತಿಕ ಜೀವನಶೈಲಿ ಕುರಿತಾದ ಮತ್ತೊಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. 2025ಕ್ಕಿಂತಲೂ 2026ರಲ್ಲಿ ಜಗತ್ತಿಗೆ ಹತ್ತು ಪಟ್ಟು ಹೆಚ್ಚಿನ ಅಪಾಯವಿದೆ ಎಂದು ಎಚ್ಚರಿಸಿರುವ ಶ್ರೀಗಳು, ಪಂಚಭೂತಗಳ ದೋಷದಿಂದ ದೇಶಗಳೇ ನಾಶವಾಗಲಿವೆ ಎಂಬ ಆತಂಕಕಾರಿ ಮುನ್ಸೂಚನೆ ನೀಡಿದ್ದಾರೆ.

ಅತೃಪ್ತ ಆತ್ಮಗಳಿಂದ ಮನುಕುಲಕ್ಕೆ ಸಂಚಕಾರ

ಜಗತ್ತಿನಾದ್ಯಂತ ನೀರು ಮತ್ತು ಬೆಂಕಿಯ ಅನಾಹುತಗಳಿಂದ ಮಿಲಿಯನ್ ಗಟ್ಟಲೆ ಜನರು ಸಾವನ್ನಪ್ಪಿದ್ದಾರೆ. ಆದರೆ, ಸತ್ತಿರುವ ಈ ಕೋಟ್ಯಂತರ ಆತ್ಮಗಳಿಗೆ ಸರಿಯಾದ ಸಂಸ್ಕಾರವಾಗಿಲ್ಲ. ಈ ಅತೃಪ್ತ ಆತ್ಮಗಳು ಜಗತ್ತಿನಾದ್ಯಂತ ಸಂಚರಿಸುತ್ತಿರುವುದರಿಂದ ಮನುಕುಲಕ್ಕೆ ದೊಡ್ಡ ಅಪಾಯವಿದೆ. ಜನರ ಮಾನಸಿಕ ಸ್ಥೈರ್ಯ ಕುಸಿಯುವುದು, ಏಕಾಂಗಿತನ ಕಾಡುವುದು, ಇದ್ದಕ್ಕಿದ್ದಂತೆ ಬೀಳುವುದು, ಹುಚ್ಚುತನ ಹಾಗೂ ಶರೀರದ ಅಂಗಾಂಗಗಳಲ್ಲಿ ವ್ಯತ್ಯಾಸವಾಗುವಂತಹ ವಿಚಿತ್ರ ಆರೋಗ್ಯ ಸಮಸ್ಯೆಗಳು ಎದುರಾಗಲಿವೆ' ಎಂದು ವಿವರಿಸಿದರು.

2026: ಕರ್ನಾಟಕಕ್ಕೆ ಸೌಭಾಗ್ಯ, ಜಗತ್ತಿಗೆ ದೌರ್ಭಾಗ್ಯ?

2026ನೇ ವರ್ಷ ಕರ್ನಾಟಕಕ್ಕೆ ಶುಭ ತರಲಿದೆ. ರಾಜ್ಯದಲ್ಲಿ ಮಳೆ-ಬೆಳೆ ಚೆನ್ನಾಗಿರಲಿದೆ. ಆದರೆ ಜಾಗತಿಕ ಮಟ್ಟದಲ್ಲಿ ಪರಿಸ್ಥಿತಿ ಭೀಕರವಾಗಿರಲಿದೆ. ಹವಾಮಾನ ವೈಪರೀತ್ಯದಿಂದ ಸಾವು-ನೋವುಗಳು ಹೆಚ್ಚಾಗಲಿವೆ. ಸೂರ್ಯ ಗೃಹ ಬದಲಾವಣೆಯಾಗುತ್ತಿರುವುದರಿಂದ ಇದರ ಪ್ರಭಾವ ದೊಡ್ಡ ಉದ್ಯಮಿಗಳು, ಶ್ರೀಮಂತರು ಮತ್ತು ರಾಜಕೀಯ ವ್ಯಕ್ತಿಗಳ ಮೇಲೆ ಬೀಳಲಿದೆ. ಆಕಸ್ಮಿಕ ಅವಘಡಗಳು ಮತ್ತು ಮನುಷ್ಯನೇ ತಂದುಕೊಳ್ಳುವ ಆಪತ್ತುಗಳಿಂದ ದುಃಖದ ಮಾರುತಗಳು ಬೀಸಲಿವೆ' ಎಂದು ಶ್ರೀಗಳು ನುಡಿದರು.

ಸಂಕ್ರಮಣದ ಪ್ರಭಾವ

ಪ್ರಾಕೃತಿಕ ದೋಷಗಳು ಅಂದರೆ ನೀರಿನ ಆಘಾತಗಳು ಹೆಚ್ಚಾಗಲಿವೆ. ಚಂದ್ರಮಾನ ಯುಗಾದಿ ಮತ್ತು ಉತ್ತರಾಯಣದ ಬದಲಾವಣೆಗಳ ನಡುವೆ ಸೂರ್ಯನ ಚಲನೆಯಿಂದಾಗಿ ಆರ್ಥಿಕವಾಗಿ ಪ್ರಭಾವಿ ವ್ಯಕ್ತಿಗಳಿಗೆ ಸಂಕಷ್ಟ ಎದುರಾಗಲಿದೆ. ಆದರೆ ಈ ಬಾರಿಯ ಸಂಕ್ರಾಂತಿಯಿಂದಲೇ ಅಂತಹ ದೊಡ್ಡ ಅಶುಭವೇನೂ ಸದ್ಯಕ್ಕೆ ಗೋಚರಿಸುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.