ಕೊನೆಗೂ ಸಾರಿಗೆ ಸಿಬ್ಬಂದಿ ಮುಷ್ಕರ ಅಂತ್ಯ: ಬಸ್ ಸಂಚಾರ ಶುರು...!
ರಾಜ್ಯದಲ್ಲಿ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಸಾರಿಗೆ ಸಿಬ್ಬಂದಿ ಮುಷ್ಕರ ಇದೀಗ ತಾನೆ ಅಂತ್ಯವಾಗಿದೆ. ಸಾರಿಗೆ ಸಿಬ್ಬಂದಿ ಮುಷ್ಕರವನ್ನು ವಾಪಸ್ ಪಡೆಯುತ್ತಿದ್ದೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಅವರು ಫ್ರೀಡಂಪಾರ್ಕ್ನಲ್ಲಿ ನೌಕರರ ಸಮ್ಮುಖದಲ್ಲಿ ಘೋಷಿಸಿದ್ದಾರೆ.
ಬೆಂಗಳೂರು, (ಡಿ.14): ಸಾರಿಗೆ ನೌಕರರು ನಾಲ್ಕು ದಿನಗಳಿಂದ ನಡೆಸುತ್ತಿದ್ದ ಮುಷ್ಕರ ಕೊನೆಗೂ ಅಂತ್ಯ ಕಂಡಿದ್ದು, ರಾಜ್ಯದೆಲ್ಲೆಡೆ ಬಸ್ ಸಂಚಾರ ಆರಂಭಗೊಂಡಿದೆ.
ಕೋಡಿಹಳ್ಳಿ ಚಂದ್ರಶೇಖರ್ ಅವರು ಫ್ರೀಡಂಪಾರ್ಕ್ನಲ್ಲಿ ನೌಕರರ ಸಮ್ಮುಖದಲ್ಲಿ ಘೋಷಿಸಿದ್ದಾರೆ. ಸರ್ಕಾರದಿಂದ ಲಿಖಿತ ಭರವಸೆ ದೊರತಿರುವ ಹಿನ್ನೆಲೆಯಲ್ಲಿ ಮುಷ್ಕರ ಅಂತ್ಯವಾಗಿದೆ ಎಂದು ಅವರು ಪ್ರಕಟಿಸಿದರು.
ಸಾರಿಗೆ ನೌಕರರಿಗೆ ಸರ್ಕಾರ ನೀಡಿರುವ ಭರವಸೆಗಳೇನು? ಇಲ್ಲಿದೆ ಡಿಟೇಲ್ಸ್
ಸಾರಿಗೆ ಸಂಸ್ಥೆ ಸಿಬ್ಬಂದಿಯ 4 ದಿನಗಳ ಮುಷ್ಕರ ವಾಪಸ್ ಪಡೆಯುತ್ತಿದ್ದು, ರಾಜ್ಯಾದ್ಯಂತ ಎಲ್ಲಾ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುತ್ತಾರೆ. ಮುಷ್ಕರದಿಂದ ತೊಂದರೆಯಾಗಿದ್ದಕ್ಕೆ ರಾಜ್ಯದ ಜನರಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಸರ್ಕಾರ ಒಪ್ಪಿದ್ದ 9 ಬೇಡಿಕೆಗಳು ಪರಿಷ್ಕರಣೆಯಾಗಿದೆ. ನಮ್ಮ ಮೊದಲ ಬೇಡಿಕೆ ಮಾತ್ರ ಘೋಷಣೆ ಆಗಿಲ್ಲ. ಜೊತೆಗೆ, 6ನೇ ವೇತನ ಆಯೋಗದ ಜಾರಿ 2021ರ ಜನವರಿಗೆ ಜಾರಿಯಾಗುತ್ತದೆ. ಕಾನೂನು ಪ್ರಕಾರವಾಗಿ ಜಾರಿಗೆ ಬರುತ್ತೆ, ತಡೆಯಲಾಗಲ್ಲ. ಈ ಎರಡೂ ವಿಚಾರದಲ್ಲಿ ಯಾವುದೇ ಗೊಂದಲ ಬೇಡ ಎಂದು ಸಾರಿಗೆ ನೌಕರರಿಗೆ ತಿಳಿಸಿದರು.