ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ! ಮಹಾರಾಷ್ಟ್ರ ಪ್ರಥಮ, ಬಂಗಾಳ, ಬಿಹಾರ, ಒಡಿಶಾದಲ್ಲಿ 0 ಕೃಷಿಕರಿಗಿಂತ ಕೃಷಿ ಕಾರ್ಮಿಕರ ಸಾವೇ ಅಧಿಕ: ಎನ್‌ಸಿಆರ್‌ಬಿ

ಪಿಟಿಐ ನವದೆಹಲಿ (ಆ.31) : ದೇಶಾದ್ಯಂತ 2021ನೇ ಸಾಲಿನಲ್ಲಿ 10881 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ ಅತಿ ಹೆಚ್ಚು ಮಂದಿ ಮಹಾರಾಷ್ಟ್ರದವರಾಗಿದ್ದರೆ, 2ನೇ ಅತಿ ಹೆಚ್ಚು ಮಂದಿ ಕರ್ನಾಟಕದ ರೈತರಾಗಿದ್ದಾರೆ ಎಂಬ ಕಳವಳಕಾರಿ ಸಂಗತಿ ಬಹಿರಂಗವಾಗಿದೆ. ಗಮನಾರ್ಹ ಎಂದರೆ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್‌, ಒಡಿಶಾದಂತಹ ರಾಜ್ಯಗಳಲ್ಲಿ ರೈತರ ಶೂನ್ಯ ಆತ್ಮಹತ್ಯೆ ವರದಿಯಾಗಿದೆ.

ಸಾಲಪಾವತಿಗೆ ಬ್ಯಾಂಕ್‌ ನೋಟಿಸ್‌: ರೈತ ಆತ್ಮಹತ್ಯೆಗೆ ಶರಣು

ಮರಣವನ್ನಪ್ಪಿದ ಅನ್ನದಾತರ ಪೈಕಿ 5318 ಮಂದಿ ಕೃಷಿಕರಾಗಿದ್ದರೆ, 5563 ಮಂದಿ ಕೃಷಿ ಕಾರ್ಮಿಕರಾಗಿದ್ದಾರೆ. ಇದರರ್ಥ ಭೂಮಾಲೀಕರಿಗಿಂತ ಕೃಷಿ ಕಾರ್ಮಿಕರೇ ಹೆಚ್ಚು ಸಾವಿಗೀಡಾಗಿದ್ದಾರೆ. ದೇಶದಲ್ಲಿ 2021ನಲ್ಲಿ 1,64,033 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅದರಲ್ಲಿ ಕೃಷಿಕರ ಪ್ರಮಾಣ ಶೇ.6.6ರಷ್ಟಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ದಾಖಲೆ ಹೇಳುತ್ತದೆ.

ಸಾವಿಗೆ ಶರಣಾದ ಒಟ್ಟು ಕೃಷಿಕರ ಪೈಕಿ ಶೇ.37.3ರಷ್ಟುಮಂದಿ ಮಹಾರಾಷ್ಟ್ರದವರು. ಶೇ.19.9 ಮಂದಿ ಕರ್ನಾಟಕದವರು. ನಂತರದ ಸ್ಥಾನದಲ್ಲಿ ಆಂಧ್ರಪ್ರದೇಶ (ಶೇ.9.8), ಮಧ್ಯಪ್ರದೇಶ (ಶೇ.6.2) ಹಾಗೂ ತಮಿಳುನಾಡು (ಶೇ.5.5) ಇವೆ. ಆತ್ಮಹತ್ಯೆ ಮಾಡಿಕೊಂಡ 5318 ಕೃಷಿಕರ ಪೈಕಿ 5107 ಮಂದಿ ಪುರುಷರು ಹಾಗೂ 211 ಮಂದಿ ಮಹಿಳೆಯರು. 5563 ಕೃಷಿ ಕಾರ್ಮಿಕರ ಪೈಕಿ 5121 ಪುರುಷರು ಹಾಗೂ 442 ಮಹಿಳೆಯರಿದ್ದಾರೆ ಎಂದು ವರದಿ ವಿವರಿಸಿದೆ.

ಕೋವಿಡ್‌ ವೇಳೆ 11724 ನಿರುದ್ಯೋಗಿಗಳು ಆತ್ಮಹತ್ಯೆ!

ಕೋವಿಡ್‌ ಸಾಂಕ್ರಾಮಿಕ ತಾಂಡವವಾಡುತ್ತಿದ್ದ 2021ರಲ್ಲಿ ಪ್ರಾಣ ಉಳಿಸಿಕೊಳ್ಳಲು ಜನರು ಹರಸಾಹಸ ಪಡುತ್ತಿದ್ದರೆ, 37,751 ಮಂದಿ ದಿನಗೂಲಿ ನೌಕರರು ಹಾಗೂ 11724 ಮಂದಿ ನಿರುದ್ಯೋಗಿಗಳು ಸಾವಿಗೆ ಶರಣಾಗಿರುವ ಕಳವಳಕಾರಿ ಸಂಗತಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ವರದಿಯಿಂದ ಬೆಳಕಿಗೆ ಬಂದಿದೆ.

2021ರಲ್ಲಿ ದೇಶದಲ್ಲಿ 1,64,033 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ ದಿನಗೂಲಿ ನೌಕರರ ಸಂಖ್ಯೆ (37,751) ಅತಿ ಹೆಚ್ಚಿದ್ದರೆ, 18,803 ಸಾವಿನೊಂದಿಗೆ ಸ್ವಯಂ ಉದ್ಯೋಗಿಗಳು 2ನೇ ಸ್ಥಾನದಲ್ಲಿದ್ದಾರೆ. ನಿರುದ್ಯೋಗಿಗಳು (11,724) ಮೂರನೇ ಸ್ಥಾನದಲ್ಲಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ವರದಿ ತಿಳಿಸಿದೆ.

1.64 ಲಕ್ಷ ಆತ್ಮಹತ್ಯೆಗಳಲ್ಲಿ ಸ್ತ್ರೀಯರ ಸಂಖ್ಯೆ 45026 ಇದೆ. 1898 ಸರ್ಕಾರಿ ನೌಕರರು, 11431 ಖಾಸಗಿ ಉದ್ಯೋಗಿಗಳು, 2541 ಸರ್ಕಾರಿ ಸ್ವಾಮ್ಯದ ಕಂಪನಿಗಳ ಸಿಬ್ಬಂದಿ ಸಾವಿಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರಲ್ಲಿ ಶೇ.64.02 (1,05,242) ಮಂದಿಯ ಆದಾಯ 1 ಲಕ್ಷಕ್ಕಿಂತ ಕಡಿಮೆ ಇದೆ. ಶೇ.31.6 (51812) ಜನರ ಆದಾಯ 1ರಿಂದ 5 ಲಕ್ಷದೊಳಗಿದೆ ಎಂದು ವರದಿ ವಿವರಿಸಿದೆ.

ಓವರ್‌ಸ್ಪೀಡ್‌ ಅಪಘಾತಕ್ಕೆ ಬಲಿ: ಕರ್ನಾಟಕ ದೇಶದಲ್ಲೇ ನಂ.2!

-\ಅತ್ಯಂತ ತ್ವರಿತವಾಗಿ ಗಮ್ಯ ಮುಟ್ಟಬೇಕು ಎಂಬ ಉತ್ಸಾಹದಿಂದ ಶರವೇಗವಾಗಿ ವಾಹನ ಓಡಿಸಿದ್ದರಿಂದ ಕರ್ನಾಟಕದಲ್ಲಿ 2021ನೇ ಇಸ್ವಿಯಲ್ಲಿ 8797 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ದೇಶದಲ್ಲಿ ಅತಿ ವೇಗದ ಕಾರಣಕ್ಕೆ ರಸ್ತೆ ಅಪಘಾತವಾಗಿ ಸಾವಿಗೀಡಾದವರ ಸಂಖ್ಯೆಯಲ್ಲಿ ಕರ್ನಾಟಕದ ಪಾಲು ಶೇ.10.1ರಷ್ಟಿದ್ದು, ದೇಶದಲ್ಲೇ 2ನೇ ಸ್ಥಾನ ಪಡೆದಿದೆ ಎಂದು ಕೇಂದ್ರ ಸರ್ಕಾರದ ವರದಿಯೊಂದು ಹೇಳಿದೆ.

ತುಮಕೂರಲ್ಲಿ ರಸ್ತೆ ಅಪಘಾತ: ರಾಜ್ಯ ಸರ್ಕಾರಕ್ಕೂ ಮುನ್ನ ಪ್ರಧಾನಿ ಮೋದಿ ಪರಿಹಾರ ಘೋಷಣೆ

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ)ದ ವಾರ್ಷಿಕ ವರದಿ ಬಿಡುಗಡೆಯಾಗಿದ್ದು, ಅದರಲ್ಲಿ ಈ ಮಾಹಿತಿ ಇದೆ. ದೇಶಾದ್ಯಂತ 2021ರಲ್ಲಿ ಅತಿವೇಗದಿಂದಾಗಿ ಉಂಟಾದ ರಸ್ತೆ ಅಪಘಾತಗಳಲ್ಲಿ 87050 ಮಂದಿ ಸಾವಿಗೀಡಾಗಿದ್ದಾರೆ. ಆ ಪೈಕಿ ತಮಿಳುನಾಡಿನಲ್ಲಿ ಅತಿ ಹೆಚ್ಚು ಅಂದರೆ 11,419 (ಶೇ.13.1) ಜನರು ಪ್ರಾಣತೆತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಒಟ್ಟಾರೆ ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಗಳೇ ದೇಶದಲ್ಲಿ ಅತಿ ಹೆಚ್ಚು ಅಪಘಾತ ಸಂಬಂಧಿ ಸಾವುಗಳಿಗೆ ಕಾರಣವಾಗುತ್ತಿವೆ. ರಸ್ತೆ ಅಪಘಾತಗಳಿಂದಾಗಿ ದೇಶದಲ್ಲಿ 2021ರಲ್ಲಿ 1,55,622 ಮಂದಿ ಸಾವಿಗೀಡಾಗಿದ್ದಾರೆ. ಆ ಪೈಕಿ ಓವರ್‌ಸ್ಪೀಡ್‌ ಶೇ.59.7ರಷ್ಟುಅಪಘಾತಗಳಿಗೆ ಕಾರಣವಾಗಿದ್ದು, 87,050 ಮಂದಿ ಬಲಿಯಾಗಿದ್ದಾರೆ. ನಿರ್ಲಕ್ಷ್ಯದ ಚಾಲನೆಗೆ 42,853 ಮಂದಿ ಪ್ರಾಣ ತೆತ್ತಿದ್ದಾರೆ., ಮಾದಕ ವಸ್ತು ಅಥವಾ ಮದ್ಯಪಾನ ಮಾಡಿ ವಾಹನ ಚಾಲನೆ ವೇಳೆ 2935 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿ ವಿವರಿಸಿದೆ.