ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಐದು ವರ್ಷ ಪೂರ್ಣಗೊಳಿಸಬೇಕು, ಒಂದು ವೇಳೆ ಬದಲಾವಣೆ ಆದರೆ ಮಲ್ಲಿಕಾರ್ಜುನ ಖರ್ಗೆ ಮಾತ್ರ ಪರ್ಯಾಯ ನಾಯಕ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದ್ದಾರೆ. ಸಚಿವ ಸಂಪುಟ ಪುನಾರಚನೆ ಹಾಗೂ ತಮ್ಮ ಸಚಿವ ಸ್ಥಾನದ ಆಕಾಂಕ್ಷೆ ಬಗ್ಗೆಯೂ ಅವರು ಮಾತನಾಡಿದ್ದಾರೆ.

ಕೊಪ್ಪಳ (ಮೇ.4): ಸಿದ್ದರಾಮಯ್ಯ ಅವರೇ ಐದು ವರ್ಷವೂ ಮುಖ್ಯಮಂತ್ರಿ ಆಗಿರಬೇಕು ಎನ್ನುವುದು ನನ್ನ ಅಭಿಪ್ರಾಯ. ಹಾಗೊಂದು ವೇಳೆ ಅವರನ್ನು ಬದಲಾಯಿಸಬೇಕು ಎನ್ನುವುದಾದರೆ ಸಿದ್ದರಾಮಯ್ಯ ಅವರಿಗೆ ಪರ್ಯಾಯ ನಾಯಕ ಎಂದರೆ ಅದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತ್ರ ಎಂದು ಸಿಎಂರ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈಗಲೂ ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ, ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಆಗಿರಬೇಕು. ಅವರ ಅಧಿಕಾರಾವಧಿಯಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಎಲ್ಲ ವರ್ಗಗಳ ಹಿತ ಕಾಯುತ್ತಿದ್ದಾರೆ. ಹೀಗಾಗಿ, ಅವರೇ ಮುಂದುವರಿಯಬೇಕು ಎಂದು ನಾನು ಹೇಳಿದ್ದೇನೆಯೇ ಹೊರತು ನಾನು ಯಾರ ಬೆಂಬಲಿಗನೂ ಅಲ್ಲ, ನಾನು ಕಾಂಗ್ರೆಸ್ ಬೆಂಬಲಿಗ’ ಎಂದರು

‘ಮಲ್ಲಿಕಾರ್ಜುನ ಖರ್ಗೆಯವರು ಸಿಎಂ ಆಗಲಿ ಎನ್ನುವುದು ನನ್ನ ಅಭಿಪ್ರಾಯ. ಹಾಗಂತ, ನಾನು ಡಿ.ಕೆ.ಶಿವಕುಮಾರ್‌ ಆಗಬಾರದು ಎನ್ನುವುದಿಲ್ಲ. ಶಾಸಕರಾಗಿರುವ ಪ್ರತಿಯೊಬ್ಬರೂ ಸಿಎಂ ಆಗಲು ಅರ್ಹರಿರುತ್ತಾರೆ. ನಾನು ಪ್ರಧಾನಿಯಾಗಬೇಕು ಅಂದುಕೊಂಡಿದ್ದೇನೆ, ಪ್ರತಿಯೊಬ್ಬರೂ ಆಸೆ ಪಡಬಹುದು. ಆದರೆ, ಆಗಬೇಕಲ್ಲ’ ಎಂದರು.

ರಾಜ್ಯದಲ್ಲಿನ ರಾಜಕೀಯ ಕುರಿತು ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆಯ ಹಿನ್ನೆಲೆಯಲ್ಲಿ ನಾನೇ ಖುದ್ದು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಬಂದಿದ್ದೇನೆ. ಮುಖ್ಯಮಂತ್ರಿಯಾಗುವಂತೆ ನಾನೇ ಅವರಿಗೆ ಮನವಿ ಮಾಡಿದ್ದೇನೆ. ಆದರೆ, ಖರ್ಗೆಯವರು, ‘ಈ ಹಿಂದೆಯೇ ಆಗಬೇಕಾಗಿತ್ತು, ನೀವೆಲ್ಲ ಸೋತಿದ್ದರಿಂದ 2008ರಲ್ಲಿ ನಾನು ಆಗಲಿಲ್ಲ’ ಎಂದಷ್ಟೇ ಹೇಳಿದರು ಎಂದರು.

ಭೇಟಿ ವೇಳೆ, ಸಚಿವ ಸಂಪುಟ ಪುನಾರಚನೆ ಮಾಡಿ, 25 ಬೇರೆ ಶಾಸಕರಿಗೆ ಸಚಿವ ಸ್ಥಾನ ಕೊಡಿ, ಅದರಲ್ಲೂ ಹೊಸಬರು, ಹಿರಿಯರು ಸಹ ಇರಲಿ ಎಂದಷ್ಟೇ ಹೇಳಿದ್ದೇನೆ. ನನ್ನನ್ನು ಸಚಿವನ್ನಾಗಿ ಮಾಡಿ ಎಂದು ನಾನು ಕೇಳಿಲ್ಲ. ಮಗು ಅತ್ತಾಗಲೇ ಹಾಲು ಕೊಡಬೇಕು ಎಂದೇನೂ ಇಲ್ಲ. ಒಳ್ಳೆಯ ತಾಯಿಗೆ ಮಗುವಿಗೆ ಯಾವಾಗ ಹಾಲು ಬೇಕು ಎನ್ನುವುದು ಗೊತ್ತಾಗಿ ಅಳುವ ಮೊದಲೇ ಹಾಲು ಕೊಡುತ್ತಾಳೆ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಪಕ್ಷ ಕೊಟ್ಟರೆ ನಿಭಾಯಿಸುವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೀನು ಪೈನಾನ್ಸ್ ಮಿನಿಸ್ಟರ್ ಆಗಬೇಕು ಎಂದು ಈ ಹಿಂದೆ ಹೇಳಿದ್ದರು, ಮಾಡಿಲ್ಲ. ಹಾಗಂತ ನಾನು ಈಗ ಅದನ್ನು ಕೇಳಲು ಆಗುತ್ತದೆಯೇ ಎಂದು ಪ್ರಶ್ನೆ ಮಾಡಿದರು.