ನನ್ನ ಶೈಕ್ಷಣಿಕ ವಿದ್ಯಾರ್ಹತೆ ಬಗ್ಗೆ ಅಷ್ಟೊಂದು ಆಸಕ್ತಿ ಇದ್ದವರು ಚುನಾವಣೆಗೆ ಸಲ್ಲಿಕೆ ಮಾಡಿರುವ ಅಫಿಡವಿಟ್‌ನಲ್ಲಿ ಮಾಹಿತಿ ಬೇಕಾದರೆ ತೆಗೆದುಕೊಳ್ಳಲಿ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

ಕಲಬುರಗಿ (ಜೂ.11): ರಾಜ್ಯದಲ್ಲಿ ಬಿಜೆಪಿ ಪರಿಷ್ಕರಣೆ ಮಾಡಿ ಅಳವಡಿಕೆ ಮಾಡಿದ್ದ ಚಕ್ರವರ್ತಿ ಸೂಲಿಬೆಲೆ ವಿಚಾರಗಳನ್ನು ತೆಗೆದುಹಾಕುತ್ತೇವೆ ಎಂದು ಹೇಳಿದ್ದ ಐಟಿ-ಬಿಟಿ, ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಬಿಜೆಪಿಗರು ನಿಮ್ಮ ವಿದ್ಯಾಭ್ಯಾಸ ಏನು ಎನ್ನುವುದನ್ನು ತಿಳಿದುಕೊಳ್ಳಿ ಎಂದು ಟೀಕೆ ಮಾಡಿದ್ದಾರೆ. ಪ್ರಧಾನಿ ಮೋದಿ ಅವರ ವಿದ್ಯಾರ್ಹತೆ ತಿಳಿದುಕೊಳ್ಳಲು ಮುಂದಾದವರ ಮೇಲೆ ಕೇಸ್‌ ದಾಖಲಿಸಲಾಗಿದೆ. ಆದರೆ, ನಾನು ಮುಚ್ಚುಮರೆ ಮಾಡುತ್ತಿಲ್ಲ. ನನ್ನ ವಿದ್ಯಾರ್ಹತೆ ಮಾಹಿತಿ ಬೇಕಾದಲ್ಲಿ ನನ್ನ ಅಫಿಡವಿಟ್‌ನಿಂದ ತಿಳಿದುಕೊಳ್ಳಲಿನ ಎಂದು ತಿರುಗೇಟು ನೀಡಿದ್ದಾರೆ.

Add Asianetnews Kannada as a Preferred SourcegooglePreferred

ರಾಜ್ಯದಲ್ಲಿ ಚಕ್ರವರ್ತಿ ಸೂಲಿಬೆಲೆ ವಾಸ್ತವವನ್ನು ಹೇಳುವ ವ್ಯಕ್ತಿ ಅಲ್ಲ. ಅಂತಹ ಬಾಡಿಗೆ ಭಾಷಣಕಾರರು ಬರೆದಿದ್ದನ್ನೆಲ್ಲಾ ನಮ್ಮ ಮಕ್ಕಳು ಓದಿದರೆ ಅವರ ಭವಿಷ್ಯ ಏನಾಗಬೇಕು. ಹಾಗಾಗಿ ಶಾಲಾ ಪಠ್ಯಪುಸ್ತಕದಲ್ಲಿ ಸೇರಿಸಿರುವ ಅವರು ಬರೆದಿರುವ ಪಠ್ಯವಿಷಯವನ್ನು ತೆಗೆದುಹಾಕುತ್ತೇವೆ ಎಂದು ಐಟಿ-ಬಿಟಿ, ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಖಾರವಾಗಿ ಹೇಳಿದ ಬೆನ್ನಲ್ಲೇ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಚಕ್ರವರ್ತಿ ಸೂಲಿಬೆಲೆ ಮತ್ತು ಪ್ರಿಯಾಂಕ ಖರ್ಗೆ ಅವರ ವಿದ್ಯಾರ್ಹತೆ ಸಾಮ್ಯತೆ ಮಾಡಿರುವ ಫೋಟೋಗಳನ್ನು ವೈರಲ್‌ ಮಾಡುತ್ತಿದ್ದಾರೆ. ಈ ಬಗ್ಗೆ ಸ್ವತಃ ಸಚಿವ ಖರ್ಗೆ ಅವರೇ ಟೀಕಾಕಾರಿಗೆ ಮತ್ತು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. 

ಚಕ್ರವರ್ತಿ ಸೂಲೆಬೆಲೆ ಬರೆದ ಪಠ್ಯಕ್ಕೆ ಕೊಕ್‌: ಪ್ರಿಯಾಂಕ ಖರ್ಗೆ

ಈ ಕುರಿತು ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ವಿದ್ಯಾರ್ಹತೆ ನನ್ನ ಅಫೀಡವಿಟ್ ನಲ್ಲೇ ಇದೆ. ಅದನ್ನ ನೋಡಿಕೊಳ್ಳೋದಕ್ಕೆ ಹೇಳಿ. ನ್ಯಾಷನಲ್ ಲಾ ಸ್ಕೂಲ್ ನಲ್ಲಿ ಹೋಗಿ ಅದನ್ನೂ ನೋಡಿಕೊಳ್ಳಲು ಹೇಳಿ. ನ್ಯಾಷನಲ್ ಲಾ ಸ್ಕೂಲ್ ನಲ್ಲೂ ನಾನು ಪಾಸಾಗಿದ್ದೇನೆ. ನಾನು ಮಾಡಿದ ವಿದ್ಯಾಭ್ಯಾಸ ಇವ್ರಿಗೆ ತಿಳಿಯದೇ ಇರಬಹುದು. ಅದಕ್ಕೆ ನಾನೇನು ಉತ್ತರ ಕೊಡೋದಕ್ಕೆ ಆಗಲ್ಲ ಎಂದು ತಿರುಗೇಟು ನೀಡಿದರು. 

ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಹತೆ ಕೇಳಿ: ನನ್ನ ವಿದ್ಯಾರ್ಹತೆ ಬಗ್ಗೆ ಟೀಕೆ ಮಾಡುವವರು ಅವರ ಸುಪ್ರೀಂ ಲೀಡರ್ ಇದ್ದಾರಲ್ಲ ಅವರ ಅರ್ಹತೆ ಏನಿದೆ ಅನ್ನೋದನ್ನ ತಿಳ್ಕೋದಕ್ಕೆ ಹೇಳಿ. ಯಾರಾದ್ರೂ ಪ್ರಧಾನ ಮಂತ್ರಿ ಅವರ ಡಿಗ್ರಿ ತಿಳ್ಕೋಳ್ಳೋಕೆ ಹೋದ್ರೆ ಆರ್ ಟಿ ಐ ನಲ್ಲಿ ಕೊಡಬೇಡಿ ಅಂತಾ ಹೇಳ್ಬಿಟ್ಟಿದ್ದಾರೆ. ಅದಕ್ಕಾಗಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಕೇಸ್ ಹಾಕಿದ್ದಾರೆ. ಮೊದಲು ಅದಕ್ಕೆಲ್ಲಾ ಉತ್ತರ ಕೊಡಲಿ. ನಾನು ಚುನಾಯಿತ ಪ್ರತಿನಿಧಿ, ಜನರು ಆಯ್ಕೆ ಮಾಡಿರೋದು
ಸುಳ್ಳು ಸುದ್ದಿ ಹಬ್ಬಿಸ್ತಿದ್ದಾರೆ. ನಾನು ಈಗ ಅದನ್ನೂ ನೋಡ್ತಿದ್ದೇನೆ. ಸ್ವಲ್ಪ ಟೈಮ್ ಕೊಡಿ, ಆರನೆಯದ್ದಲ್ಲ, ಏಳನೇ ಗ್ಯಾರಂಟಿಯೂ ಬರುತ್ತದೆ. ಎಲ್ಲವನ್ನೂ ಲೀಗಲ್ ಆಗಿಯೇ ಮಾಡ್ತೇವೆ ಎಂದು ಸಚಿವ ಪ್ರೀಯಾಂಕ್ ಖರ್ಗೆ ಹೇಳಿದರು.

ಕುಮಾರಸ್ವಾಮಿ ದಾಖಲೆಗಳನ್ನು ಕೊಡಲಿ: ಕಾಂಗ್ರೆಸ್ ಸರ್ಕಾರ 45% ಎನ್ನುವ ಕುಮಾರಸ್ವಾಮಿ ಆರೋಪ ವಿಚಾರವಾಗಿ ಮಾತನಾಡಿದ ಪ್ರಿಯಾಂಕ್‌ ಖರ್ಗೆ, ಕುಮಾರಸ್ವಾಮಿ ಅವರು ದಾಖಲೆಗಳನ್ನ ಕೊಡಲಿ. ಸುಮ್ನೇ ಕಾಮಗಾರಿ ನಿಲ್ಲಿಸಿರೋದು ಯಾಕೆ ಅನ್ನೋದನ್ನ ತಿಳಿದುಕೊಳ್ಳಲಿ. ಚುನಾವಣೆಗೂ ಮುಂಚೆ ತರಾತುರಿಯಲ್ಲಿ ಟೆಂಡರ್ ಆಗಿದೆ. ಗುತ್ತಿಗೆದಾರರನ್ನ ಕರೆಸಿ ಮಾತಾಡಿಸಿದ್ದಾರೆ. ನನ್ನದೇ ಇಲಾಖೆಯಲ್ಲಿ ಎಲ್1 ಬಿಟ್ಟು, ಎಲ್2, ಎಲ್3 ಗೆ ಕೊಟ್ಟಿದ್ದಾರೆ. ಇದಕ್ಕಾಗಿ ಇಂಜಿನಿಯರ್‌ ಸಸ್ಪೆಂಡ್ ಮಾಡಿದ್ದೀವಿ. ಹಾಗಿದ್ದರೆ ಜನತಾದಳದವ್ರಿಗೆ ಪಾರದರ್ಶಕತೆ ಬೇಡ್ವಾ? ಭ್ರಷ್ಡಾಚಾರದ ವಿರುದ್ಧ ನಾವು ಕ್ರಮ ಕೈಗೊಳ್ಳೋದು ಬೇಡ್ವಾ? ಶೇ.45 ಅಂತಾ ಯಾವ ಆಧಾರದ ಮೇಲೆ ಹೇಳ್ತಾರೆ? ಏನಾದ್ರೂ ಇದ್ರೆ ಕೊಡಿ ಅದನ್ನೂ ತನಿಖೆ ಮಾಡ್ತೇವೆ ಎಂದು ಹೇಳಿದರು.

'ಶಕ್ತಿ ಯೋಜನೆ ಸ್ಮಾರ್ಟ್‌ ಕಾರ್ಡ್‌' ಪಡೆದ ಮೊದಲ ಮಹಿಳೆ ಇವರೇ! ಉಚಿತ ಪ್ರಯಾಣವನ್ನೂ ಮಾಡಿದ್ರು

ಈಗ ಸರ್ಕಾರ ಅಧಿಕಾರಕ್ಕೆ ಬಂದು ಒಂದೇ ತಿಂಗಳಾಗಿದೆ. ಈ ವ್ಯವಸ್ಥೆಯನ್ನ ಚೇಂಜ್ ಮಾಡೋದಕ್ಕೆ ಎಲ್ಲರೂ ಸಹಕಾರ ಮಾಡಬೇಕು. ಅದೆಲ್ಲಾ ಬಿಟ್ಟು ಒದು ಶೇ.45, ಶೇ.50 ಸರ್ಕಾರ ಅಂತಾ ಹೇಳಿ ಯಾರ ಮೇಲೆ ಗೂಬೆ ಕೂಡಿಸೋದನ್ನ ಮಾಡ್ತಿದ್ದೀರಾ? ಕರ್ನಾಟಕದಲ್ಲಿ ಕನ್ನಡಿಗರಿಗೆ ಒಳ್ಳೆ ಆಡಳಿತಕ್ಕೆ ಸಹಕರಿಸಿ ಎಂದು ಪ್ರಿಯಾಂಕ್ ಖರ್ಗೆ ಅವರು ಮಾಜಿ ಸಿಎಂ ಕುಮಾರಸ್ವಾಮಿಗೆ ತಿರುಗೇಟು ನೀಡಿದರು.