ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್‌) ಕುರಿತು ಜನರ ಆತಂಕ ನಿವಾರಿಸದ ಚುನಾವಣಾ ಆಯೋಗದ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಸ್‌ಐಆರ್‌ ಪ್ರಕ್ರಿಯೆ ಪಾರದರ್ಶಕವಾಗಿರಬೇಕು  ಯಾವುದೇ ತಪ್ಪಾಗಿದ್ದರೂ ಆಯೋಗ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

 ಬೆಂಗಳೂರು (ಜು.5): ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಕುರಿತು ಆತಂಕ ಸೃಷ್ಟಿಯಾಗಿದ್ದರೆ ಅದನ್ನು ನಿವಾರಸದೆ ಚುನಾವಣಾ ಆಯೋಗ ಕತ್ತೆ ಕಾಯುತ್ತಿದೆಯೇ? ಎಸ್‌ಐಆರ್‌ನಲ್ಲಿ ಏನೇ ಏನೇ ತಪ್ಪಾಗಿದ್ದರೂ ಚುನಾವಣಾ ಆಯೋಗ ಕಾನೂನಿನಂತೆ ಕ್ರಮ ಕೈಗೊಳ್ಳಲಿ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಐಆರ್‌ಗೆ ಸಂಬಂಧಿಸಿ ಸಮುದಾಯ ಭವನದಲ್ಲಿ ಮಾಡಲಿ, ಯಾವುದೋ ಕಚೇರಿಯಲ್ಲಿ ಮಾಡಿ ಎಂದು ನಾವು ಜನರಿಗೆ ಯಾವುದೇ ಒತ್ತಾಯ ಮಾಡಿಲ್ಲ. ಆದರೆ ಎಸ್‌ಐಆರ್‌ ಕುರಿತು ಜನರಲ್ಲಿ ಸಂಶಯ, ಆತಂಕವಿದೆ. ಇಡೀ ಪ್ರಕ್ರಿಯೆ ಬಗ್ಗೆಯೇ ಅನುಮಾನವಿದ್ದು, ಅದನ್ನು ಚುನಾವಣಾ ಆಯೋಗ ನಿವಾರಿಸಲಿ ಎಂದರು.

ಎಸ್‌ಐಆರ್‌ಗೆ ಸಂಬಂಧಿಸಿ ರಾಜ್ಯ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುತ್ತಿಲ್ಲ. ಎಸ್‌ಐಆರ್ ಪ್ರಕ್ರಿಯೆಗೆ ನೇಮಕ ಮಾಡಿರುವ ಬಿಎಲ್‌ಒಗಳು ಸರ್ಕಾರದ ಅಧಿಕಾರಿ, ಸಿಬ್ಬಂದಿಯೇ ಆಗಿರಬಹುದು. ಆದರೆ, ಚುನಾವಣಾ ಆಯೋಗದ ನಿರ್ದೇಶನದಂತೆ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಎಸ್ಐಆರ್‌ ಗೊಂದಲ ನಿವಾರಣೆ ಮಾಡಬೇಕಾದದ್ದು ಚುನಾವಣಾ ಆಯೋಗದ ಕೆಲಸ. ಉತ್ತಮ ಮತದಾರರ ಪಟ್ಟಿ ಸಿದ್ಧಪಡಿಸುವುದು, ಚುನಾವಣೆಯನ್ನು ಸರಿಯಾಗಿ ನಡೆಸುವುದಷ್ಟೇ ಅವರ ಕೆಲಸ. ಅದನ್ನು ಬಿಟ್ಟು ಬೇರೇನೂ ಕೆಲಸ ಅವರಿಗಿಲ್ಲ ಎಂದರು.

ಎಸ್‌ಐಆರ್‌ ಪ್ರಕ್ರಿಯೆಯಿಂದ ನೈಜ ಮತದಾರರು ಪಟ್ಟಿಯಿಂದ ಹೊರಗುಳಿಯಬಾರದು ಎಂದು ಕಾಂಗ್ರೆಸ್‌, ಬಿಜೆಪಿ ಸೇರಿ ಎಲ್ಲ ಶಾಸಕರು ಶ್ರಮಿಸುತ್ತಿದ್ದಾರೆ. ಬಿಹಾರ, ಪಶ್ವಿಮ ಬಂಗಾಳದಲ್ಲಿ ಈಗಾಗಲೇ ಮತದಾರರ ಪಟ್ಟಿಯಲ್ಲಿದ್ದರೆ ಮಾತ್ರ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆ ಸಿಗುತ್ತದೆ ಎಂದು ಹೇಳಿದ್ದಾರೆ. ನಮ್ಮಲ್ಲೂ ಅದರಿಂದ ಜನರಿಗೆ ಆತಂಕ ಸೃಷ್ಟಿಯಾಗಿದೆ. ಎಸ್‌ಐಆರ್‌ ಪ್ರಕ್ರಿಯೆಗೆ ನಾವು ವಿರೋಧಿಸುತ್ತಿಲ್ಲ. ಆದರೆ ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ಮಾಡಿ ಎಂದು ಒತ್ತಾಯಿಸುತ್ತಿದ್ದೇವೆ. ಇನ್ನು, ಕೇಂದ್ರ ಸರ್ಕಾರದ ನಿಗಾದಲ್ಲೇ ಎಸ್‌ಐಆರ್‌ ಮಾಡಲಿ ನಾವು ಬೇಡ ಎಂದಿಲ್ಲ ಎಂದು ಹೇಳಿದರು.

ಚೌಕಿದಾರ ಚೋರ್‌: ಸಚಿವ

ದೇಶದ ಚೌಕಿದಾರನೇ ಕಳ್ಳನಾದ ಮೇಲೆ ಏನು ಮಾಡಲಾಗುತ್ತದೆ. ರಾಮಮಂದಿರ ಸ್ಥಾಪನೆ ಸೇರಿ ಎಲ್ಲ ರೀತಿಯ ಪ್ರಕ್ರಿಯೆಯ ಶ್ರೇಯವನ್ನು ಪ್ರಧಾನಿ ಮೋದಿ ಪಡೆದರು. ಆದರೆ, ರಾಮಮಂದಿರದಲ್ಲಿ ದೇಣಿಗೆ ಕಳ್ಳತನವಾದಾಗ ಮಾತ್ರ ಸುಮ್ಮನಿದ್ದಾರೆ. ವಿಎಚ್‌ಪಿ, ಆರ್‌ಎಸ್‌ಎಸ್‌ ಸೇರಿ ಎಲ್ಲ ಚೌಕಿದಾರರು ಕಳ್ಳರಾಗಿರುವುದು ಬಹಿರಂಗವಾಗಿದೆ ಎಂದು ಪ್ರಿಯಾಂಕ್‌ ಖರ್ಗೆ ವಾಗ್ದಾಳಿ ನಡೆಸಿದರು.