ಗ್ರಾಮಕ್ಕೆ ಇಂದು ಭೇಟಿ ಕೊಟ್ಟಿದ್ದೇನೆ. ಒಂದು ರೀತಿ ನಾವು ಯಾವ ಯುಗದಲ್ಲಿದ್ದೇವೆ ಎಂಬುದು ಅರ್ಥ ಆಗ್ತಿಲ್ಲ. ನಮ್ಮ ರಾಜ್ಯ ಐಟಿ ಬಿಟಿ ರೀತಿ ಪದಗಳನ್ನು ನಾವು ಹೇಳ್ತಾ ಇರ್ತೇವೆ ಆದರೆ ಇನ್ನು ನಮ್ಮಿಂದ ಜನರಿಗೆ ಕುಡಿಯಲು ಶುದ್ಧ ನೀರು ಕೊಡಲಾಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ತುಮಕೂರು (ಜೂ.15): ಗ್ರಾಮಕ್ಕೆ ಇಂದು ಭೇಟಿ ಕೊಟ್ಟಿದ್ದೇನೆ. ಒಂದು ರೀತಿ ನಾವು ಯಾವ ಯುಗದಲ್ಲಿದ್ದೇವೆ ಎಂಬುದು ಅರ್ಥ ಆಗ್ತಿಲ್ಲ. ನಮ್ಮ ರಾಜ್ಯ ಐಟಿ ಬಿಟಿ ರೀತಿ ಪದಗಳನ್ನು ನಾವು ಹೇಳ್ತಾ ಇರ್ತೇವೆ ಆದರೆ ಇನ್ನು ನಮ್ಮಿಂದ ಜನರಿಗೆ ಕುಡಿಯಲು ಶುದ್ಧ ನೀರು ಕೊಡಲಾಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

Add Asianetnews Kannada as a Preferred SourcegooglePreferred

ಕಲುಷಿತ ನೀರು ಕುಡಿದು ಮೃತಪಟ್ಟ ಪ್ರಕರಣ ಸಂಬಂಧ ಮಧುಗಿರಿ ತಾಲೂಕಿನ ಚಿನ್ನೇನಹಳ್ಳಿ ಗ್ರಾಮಕ್ಕೆ ಭೇಟಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಜನಗಳಿಗೆ ಕಲುಷಿತ ನೀರು ಕೊಟ್ಟಿದೆ. ಇದರಿಂದ ಸುಮಾರು 300ಕ್ಕೂ ಅಧಿಕ ಜನರು ವಾಂತಿ-ಭೇದಿಯಿಂದ ಅಸ್ವಸ್ಥಗೊಂಡಿದ್ದಾರೆ. ಈಗಾಗಲೇ ಆರು ಜನ ಸತ್ತಿದ್ದಾರೆ ಎಂದರು.

ನಾನು ಬೆಳಗ್ಗೆ ಜಿಲ್ಲಾಧಿಕಾರಿಗೆ ಕಾಲ್ ಮಾಡಿದಾಗ, ಇಬ್ಬರೇ ಸತ್ತಿರೋದು ಅಂತಾ ಹೇಳಿದ್ರು. ಆದರೆ ನನಗೆ ಯಾಕೋ ಡೌಟ್ ಬಂತು. ಜನರನ್ನು ಕೇಳಿದ್ರೆ ಎಲ್ಲರೂ ವಾಂತಿ ಭೇದಿಯಿಂದ ಸತ್ತಿರೋದು ಅಂತಾ ಹೇಳಿದ್ರು. ನಾನು ಗ್ರಾಮಕ್ಕೆ ಬಂದು ಪ್ರತಿಯೊಂದು ಮನೆಗೆ ಭೇಟಿ ನೀಡಿ ವಿಚಾರಿಸಿದ್ದೇನೆ. ಬಲವಂತಾಗಿ ನಮ್ಮ ಬಳಿ ಸಹಿ ಹಾಕಿಸಿಕೊಂಡಿದ್ದಾರೆ ನಮಗೆ ಓದೋಕೆ ಬರೊಲ್ಲ, ನಾವೆಲ್ಲ ಎಸ್ಸಿ ಜನಾಂಗದವರು ಎಂದು ಹೇಳಿದ್ರು. 'ಸತ್ತೋಗಿದರೆ ಸೈನ್ ಹಾಕಿ ಅಂದ್ರು, ಹಾಕಿದಿವಿ ಅಷ್ಟೇ' ಅಂದ್ರು. ಬಲವಂತವಾಗಿ ಸೈನ್ ಹಾಕಿಸಿಕೊಂಡು ಹೋಗಿದ್ದಾರೆ. ಇನ್ನೊಂದು ಮನೆಗೆ ಹೋಗಿದ್ದೆ, ಅವರು ಕುಡಿದು ಸತ್ತಿದ್ದಾರೆ ಅಂತಾ ಅಧಿಕಾರಿಗಳು ಹೇಳಿದ್ದಾರೆ. ಆದರೆ ಅವನು ಬಿಡಿ, ಸಿಗರೇಟು ಏನೂ ಸೇದಿಲ್ಲ, ಇನ್ನು ಕುಡಿಯೋ ಪ್ರಶ್ನೆ ಎಲ್ಲಿಂದ ಬರುತ್ತೆ? ಕುಡಿದು ಸತ್ತಿರೋಕೆ ಸಾಧ್ಯ ಇಲ್ಲ. ಅವನು ಸತ್ತಿರೋದು ಕಲುಷಿತ ನೀರು ಕುಡಿದು ಎಂದು ಗ್ರಾಮಸ್ಥರು ಹೇಳಿದ್ದಾರೆ. ಆದರೆ ಡಿಹೆಚ್‌ಒ ಹಾಲ್ಕೋಹಾಲಿಕ್ ಕುಡಿದು ಸಾವನ್ನಪ್ಪಿದ್ದಾರೆ ಎಂದು ರಿಪೋರ್ಟ್ ಕೊಟ್ಟಿದ್ದಾರೆ. ಇದೆಲ್ಲ ಅಧಿಕಾರಿಗಳ ಮುಂದೆನೇ ಚರ್ಚೆ ಆಗಿದೆ. ಆದರೂ ಇಲ್ಲಿ ಸತ್ತಿರೋದು ಆರು ಜನ ಅಲ್ಲ, ಇಬ್ರು ಅಂತಾ ಸಮಜಾಯಿಷಿ ಕೊಡ್ತಿದ್ದಾರೆ. ಆ ಮೂಲಕ ಸರ್ಕಾರ ಸಾವನ್ನು ಮುಚ್ಚಿಡುವ ಕೆಲಸ ಮಾಡ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಲ ಜೀವನ್ ಮಿಷನ್ ಕಾಮಗಾರಿ ಎಡವಟ್ಟು; ಕಲುಷಿತ ನೀರು ಸೇವಿಸಿ 112 ಜನ ಅಸ್ವಸ್ಥ : ನಾಲ್ವರ ಸಾವು?

ಸರ್ಕಾರದ ಮೇಲೆ ಆರೋಪ ಮಾಡ್ತಿದ್ದಂತೆ ಆರ್‌ ಅಶೋಕ್ ಮಾತಿಗೆ ವಿರೋಧ ವ್ಯಕ್ತಪಡಿಸಿದ ಸ್ಥಳೀಯರು. ಸರ್ಕಾರದ ಮೇಲೆ ಗೂಬೆ ಕೂರಿಸಬೇಡಿ. ಈ ವಿಚಾರದಲ್ಲಿ ಬೇರೆ ಊರಿನವರು ಇಲ್ಲಿ ಯಾಕೆ ಮಾತನಾಡೋಕೆ ಬಂದಿದ್ದೀರಾ ಎಂದು ಸುಮ್ಮನಿರಿಸಿದ ಗ್ರಾಮಸ್ಥರು. ಅಷ್ಟಕ್ಕೆ ಸುಮ್ಮನಾಗದ ವಿಪಕ್ಷ ನಾಯಕ ಆರ್ ಅಶೋಕ್, ವಿರೋಧ ಪಕ್ಷದ ನಾಯಕನಾಗಿ ಜನ ಏನ್ ಹೇಳಿದ್ದಾರೋ ಅದನ್ನ ನಾನು ಹೇಳ್ತಿದಿನಿ. ಇಲ್ಲಿ ಆಗಿರುವ ಆರು ಜನರ ಸಾವು ಕೂಡ ಕಲುಷಿತ ನೀರು ಕುಡಿದು ಆಗಿದೆ ಅಂತಾ ಜನರೇ ಹೇಳಿದ್ದಾರೆ. ಸರ್ಕಾರ ಈ ವಿಚಾರವನ್ನ ಪರಿಶೀಲನೆ ಮಾಡಬೇಕು. ಸಾವನ್ನಪ್ಪಿರುವ ಆರು ಜನರಿಗೆ ತಲಾ 25 ಲಕ್ಷದಂತೆ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

ಪ್ರವಾಸದ ವೇಳೆ ಶಿಷ್ಟಚಾರ ಉಲ್ಲಂಘನೆ: ತುಮಕೂರು ಡಿಸಿ, ಸಿಇಒ‌ ವಿರುದ್ಧ ಕೇಂದ್ರ ಸಚಿವ ವಿ.ಸೋಮಣ್ಣ ಗರಂ

ಈ ಪ್ರಕರಣದಲ್ಲಿ 100% ಅಧಿಕಾರಿಗಳ ನಿರ್ಲಕ್ಷ್ಯ ಇದೆ. ಆ ನಿರ್ಲಕ್ಷ್ಯದಿಂದಲೇ ಈ ರೀತಿಯಾಗಿರೋದು. ಶುದ್ಧವಾದ ನೀರು ಕೊಟ್ಟಿದ್ರೆ ಯಾಕೆ ಈ ರೀತಿ ಆಗ್ತಿತ್ತು? ಕಲುಷಿತ ನೀರು ಕೊಟ್ಟಿರೋದ್ರಿಂದಲೇ ಈ ಸಮಸ್ಯೆ ಉದ್ಭವವಾಗಿರೋದು. ಈ ಸಾವಿಗೆ ನೇರ ಕಾರಣ ಸರ್ಕಾರ. ಘಟನೆ ಸಂಬಂಧ ಕೆಳಮಟ್ಟದ ಅಧಿಕಾರಿಗಳನ್ನ ಅಮಾನತ್ತು ಮಾಡಲಾಗಿದೆ. ಮಾನ್ಯ ಮುಖ್ಯಮಂತ್ರಿಗಳ ತವರು ಕ್ಷೇತ್ರದಲ್ಲಿಯೂ ಒಂದು ಘಟನೆ ಆದಾಗ ಒಬ್ಬರು ಸತ್ತಿದ್ರು. ಆಗ ಅವರು ಹೇಳಿದ್ರು ನಾನು ಕೆಳಹಂತದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲ್ಲ. ಡಿಸಿ ಸಿಇಒಗಳೇ ಜವಾಬ್ದಾರನ್ನಾಗಿ ಮಾಡ್ತೇನೆ ಅಂತಾ. ಆದರೆ ಈಗ ಅವರಿಗೆ ನಾನು ಹೇಳ್ತೇನೆ, ನೀವು ಕೆಳಹಂತದ ಅಧಿಕಾರಿಗಳನ್ನ ಅಮಾನತ್ತು ಮಾಡೋದ್ರಿಂದ ಏನು ಬರುತ್ತೆ? ನೀವೇ ಹೇಳಿದಂತೆ ಡಿಸಿ ಸಿಇಒಗಳ ಮೇಲೆ ಕ್ರಮ ಕೈಗೊಳ್ಳಿ, ಜನರಿಗೆ ನ್ಯಾಯ ಕೊಡಿ ನೋಡೋಣ ಎಂದು ಸವಾಲು ಹಾಕಿದರು. ಅಲ್ಲದೇ ಈ ವಿಚಾರವಾಗಿ ನಾವು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡ್ತೇವೆ. ಮೃತಪಟ್ಟಿರುವ ಅಷ್ಟು ಜನರಿಗೂ ನ್ಯಾಯ ಸಿಗಬೇಕು, ಮೃತರಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ಕೊಡಬೇಕು ಎಂದು ಪುನಃ ಆಗ್ರಹಿಸಿದರು.