ಕೊರೋನಾ ಸಂಕಷ್ಟ : ರಾಜ್ಯಕ್ಕೆ ಸದ್ಯಕ್ಕಿಲ್ಲ ಆಕ್ಸಿಜನ್, ಔಷಧ ಕೊರತೆ
ರಾಜ್ಯದಲ್ಲಿ ಸದ್ಯ ಆಕ್ಸಿಜನ್ ಹಾಗೂ ಔಷಧದ ಕೊರತೆ ಇಲ್ಲ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರವು ಹೆಚ್ಚಿನ ಔಷಧ ಪೂರೈಕೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಬೆಂಗಳೂರು (ಏ.25): ರಾಜ್ಯದಲ್ಲಿ ಮಾಡಿದ ವೀಕೆಂಡ್ ಕರ್ಫ್ಯೂ ಯಶಸ್ವಿಯಾಗಿದೆ. ಜನ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದು ಈಗಿರುವ ಮಾರ್ಗಸೂಚಿಗಳು ಮುಂದುವರಿಯಲಿವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿಂದು ಮಾತನಾಡಿದ ಗೃಹ ಸಚಿವ ಬೊಮ್ಮಾಯಿ ವೀಕೆಂಡ್ ಕರ್ಫ್ಯೂ ಯಶಸ್ವಿಯಾಗಿದೆ. ಆದರೆ ವಿಸ್ತರಣೆ ಬಗ್ಗೆ ಚರ್ಚೆಯಾಗಿಲ್ಲ ಎಂದರು.
ಇನ್ನು ಕೇಂದ್ರ ಸರ್ಕಾರ ರಾಜ್ಯದ ಆಕ್ಸಿಜನ್ ಪಾಲನ್ನು ಹೆಚ್ಚಿಸಿದೆ. 300 ಮೆಟ್ರಿಕ್ ಟನ್ ಗಳಿಂದ 800 ಮೆಟ್ರಿಕ್ ಟನ್ ರಾಜ್ಯಕ್ಕೆ ಆಕ್ಸಿಜನ್ ಹೆಚ್ಚುವರಿಯಾಗಿ ನೀಡಲು ಒಪ್ಪಿದೆ. ನಿನ್ನೆ ಸಂಜೆ ಸಿಎಂ ಜೊತೆ ಸಭೆ ನಡೆಸಲಾಗಿದ್ದು, ಸಭೆ ವೇಳೆಯೇ ಕೇಂದ್ರ ಸರ್ಕಾರದಿಂದ ಭರವಸೆ ಸಿಕ್ಕಿದೆ ಎಂದರು.
ಕರ್ನಾಟಕಕ್ಕೆ ದೊರೆಯುತ್ತಿದ್ದ ರೆಮ್ಡೆಸಿವಿರ್, ಆಕ್ಸಿಜನ್ ಪೂರೈಕೆ ಹೆಚ್ಚಳ: ಮೋದಿಗೆ ಸಿಎಂ ಧನ್ಯವಾದ ...
ರೆಮ್ಡಿಸಿವರ್ ಇಂಜೆಕ್ಷನ್ ಗಳು ರಾಜ್ಯಕ್ಕೆ ಹೆಚ್ಚು ಒದಗಿಸಲು ಕೇಂದ್ರ ಸರ್ಕಾರ ಸಹಕಾರ ನೀಡಲಿದೆ. 50 ಸಾವಿರದಿಂದ 1,22,000 ರೆಮ್ಡಿಸಿವರ್ ಇಂಜೆಕ್ಷನ್ ಗಳು ರಾಜ್ಯಕ್ಕೆ ಕೇಂದ್ರ ಸರ್ಕಾರ ದೊರಕಿಸಿಕೊಡಲಿದೆ ಎಂದರು.
ವೀಕೆಂಡ್ ಕರ್ಫ್ಯೂ ಮುಂದುವರಿಸುವ ಬಗ್ಗೆ ಸದ್ಯಕ್ಕೆ ಯಾವುದೇ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿಲ್ಲ. ನಿನ್ನೆ ನಡೆದ ಸಿಎಂ ಸಭೆಯಲ್ಲಿ ವೀಕೆಂಡ್ ಕರ್ಫ್ಯೂ ವಿಸ್ತರಣೆ ಬಗ್ಗೆ ಚರ್ಚೆಯಾಗಿಲ್ಲ ಎಂದರು.
ಕೋ ವ್ಯಾಕ್ಸಿನ್, ಕೋವಿಡ್ ಶೀಲ್ಡ್ ಲಸಿಕೆ ಎರಡನೇ ಡೋಸ್ ಕೊರತೆ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಸಚಿವ ಬೊಮ್ಮಾಯಿ ಇದು ನಮ್ಮ ಗಮನಕ್ಕೆ ಬಂದಿದೆ. ಈ ಸಮಸ್ಯೆ ಕೂಡ ಬಗೆಹರಿಯಲಿದೆ. ಮೇ 1 ರಿಂದ 18 ವರ್ಷದ ಮೇಲ್ಪಟ್ಟವರಿಗೆ ಮೊದಲನೇ ಡೋಸ್ ವಿತರಣೆಯಾಗಲಿದೆ. 45 ನೇ ವರ್ಷ ವಯಸ್ಕರರಿಗೆ ಎರಡನೇ ಹಂತದ ಲಸಿಕೆ ನೀಡುತ್ತೇವೆ ಎಂದು ಗೃಹ ಸಚಿವ ಬೊಮ್ಮಾಯಿ ಹೇಳಿದರು.
ರೆಮ್ಡಿಸಿವರ್ ಇಂಜೆಕ್ಷನ್ ಕೂಡ ಎಲ್ಲ ಜಿಲ್ಲೆಗಳಿಗೆ ಪೂರೈಕೆ ಮಾಡುತ್ತೇವೆ. ಕೆಲವು ಜಿಲ್ಲೆಗಳಲ್ಲಿ ಹೆಚ್ವುವರಿಯಾಗಿ ಉಳಿದಿರುವ ರೆಮ್ಡಿಸಿವರ್ ಡ್ರಗ್ ಗಳನ್ನ ಕಡಿಮೆ ಇದ್ದ ಜಿಲ್ಲೆಗಳಿಗೆ ವಿತರಣೆ ಮಾಡುವುದಾಗಿ ಸಚಿವರು ತಿಳಿಸಿದರು.