ರಾಜ್ಯದ 16ನೇ ವಿಧಾನಸಭೆಗೆ ಪ್ರವೇಶಿಸಲು ಸಜ್ಜಾಗಿರುವ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 32 ಶಾಸಕರ ಪೈಕಿ 20 ಮಂದಿ ಉದ್ಯಮಿಗಳು, ಒಂಭತ್ತು ಕೃಷಿಕರು, ಒಬ್ಬರು ವೈದ್ಯರು, ಒಬ್ಬರು ರಾಜಕಾರಣಿ ಮತ್ತು ಒಬ್ಬರು ಸಮಾಜ ಸೇವೆಯಲ್ಲಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಉಲ್ಲೇಖ ಮಾಡಿಕೊಂಡಿದ್ದಾರೆ.

ಪ್ರಭುಸ್ವಾಮಿ ನಟೇಕರ್‌

ಬೆಂಗಳೂರು (ಮೇ.18) : ರಾಜ್ಯದ 16ನೇ ವಿಧಾನಸಭೆಗೆ ಪ್ರವೇಶಿಸಲು ಸಜ್ಜಾಗಿರುವ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 32 ಶಾಸಕರ ಪೈಕಿ 20 ಮಂದಿ ಉದ್ಯಮಿಗಳು, ಒಂಭತ್ತು ಕೃಷಿಕರು, ಒಬ್ಬರು ವೈದ್ಯರು, ಒಬ್ಬರು ರಾಜಕಾರಣಿ ಮತ್ತು ಒಬ್ಬರು ಸಮಾಜ ಸೇವೆಯಲ್ಲಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಉಲ್ಲೇಖ ಮಾಡಿಕೊಂಡಿದ್ದಾರೆ.

ಚುನಾಯಿತರಾಗಿರುವ ಎಂ.ಕೃಷ್ಣಪ್ಪ, ಎಸ್‌.ಮುನಿರಾಜು, ಎಸ್‌.ಮಂಜುಳಾ, ಎಸ್‌.ಟಿ.ಸೋಮಶೇಖರ್‌, ಕೃಷ್ಣಪ್ಪ, ಪ್ರಿಯಾಕೃಷ್ಣ, ಬೈರತಿ ಬಸವರಾಜ, ಕೆ.ಜೆ.ಜಾಜ್‌ರ್‍, ಧೀರಜ್‌ ಮುನಿರಾಜ್‌, ಬಿ.ಶಿವಣ್ಣ, ರಾಮಲಿಂಗಾರೆಡ್ಡಿ, ಸಿ.ಕೆ.ರಾಮಮೂರ್ತಿ, ಜಮೀರ್‌ ಆಹ್ಮದ್‌ ಖಾನ್‌, ಬಿ.ಗರುಡಾಚಾರ್‌, ಎನ್‌.ಶ್ರೀನಿವಾಸಯ್ಯ, ರಿಜ್ವಾನ್‌ ಅರ್ಷದ್‌, ಶರತ್‌ ಬಚ್ಚೇಗೌಡ, ಮುನಿರತ್ನ, ಸತೀಶ್‌ ರೆಡ್ಡಿ, ಎನ್‌.ಎ.ಹ್ಯಾರೀಸ್‌ ಅವರು ಉದ್ಯಮಿಗಳೆಂದು ಗುರುತಿಸಿಕೊಂಡಿದ್ದಾರೆ.

Karnataka election 2023: ಕಲಬುರಗಿ ಅಸೆಂಬ್ಲಿ ಅಖಾಡದಲ್ಲಿ ಮತ್ತಷ್ಟುಕೋಟಿ ಕುಳಗಳು

ಕೃಷ್ಣಬೈರೇಗೌಡ, ಎಸ್‌.ಆರ್‌.ವಿಶ್ವನಾಥ್‌, ಆರ್‌.ಅಶೋಕ್‌, ಎ.ಸಿ.ಶ್ರೀನಿವಾಸ, ಎಲ್‌.ಎ.ರವಿಸುಬ್ರಹ್ಮಣ್ಯ, ದಿನೇಶ್‌ ಗುಂಡೂರಾವ್‌, ಬಿ.ಎಸ್‌.ಸುರೇಶ್‌, ಕೆ.ಎಚ್‌.ಮುನಿಯಪ್ಪ ಅವರು ಕೃಷಿಕರು ಎಂಬುದಾಗಿ ಹೇಳಿಕೊಂಡಿದ್ದಾರೆ. ಇನ್ನು, ಗೋಪಾಲಯ್ಯ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡರೆ, ಡಾ

ಸಿ.ಎನ್‌.ಅಶ್ವತ್ಥನಾರಾಯಣ ಅವರು ವೈದ್ಯರಾಗಿದ್ದಾರೆ. ಎಸ್‌.ಸುರೇಶ್‌ ಕುಮಾರ್‌ ಅವರು ರಾಜಕಾರಣಿ ಎಂದು ಪ್ರಮಾಣ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ಪದವೀಧರರು ಹೆಚ್ಚು: ಇನ್ನು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವಿಜೇತರಾದವರಲ್ಲಿ ಕೇವಲ ಒಬ್ಬರೇ ವೈದ್ಯರಿದ್ದು, ಎಂಜಿನಿಯರ್‌ ಮತ್ತು ವಕೀಲಿಕೆ ಮಾಡಿದವರು ತಲಾ ನಾಲ್ವರಿದ್ದಾರೆ.

ಚುನಾವಣೆಯಲ್ಲಿ ವಿಜೇತರಾಗಿರುವವರಲ್ಲಿ ಪದವೀಧರರ ಸಂಖ್ಯೆ ಹೆಚ್ಚಿದೆ. 13 ಮಂದಿ ಪದವಿ ಪಡೆದುಕೊಂಡಿದ್ದಾರೆ. ಈ ಪೈಕಿ ಐವರು ಸ್ನಾತಕೋತ್ತರ ಪದವೀಧರರಾಗಿದ್ದು, ಇಬ್ಬರು ಅಮೆರಿಕ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಕೃಷ್ಣ ಬೈರೇಗೌಡ ಅವರು ಅಮೆರಿಕ ವಿಶ್ವವಿದ್ಯಾಲಯದಿಂದ ಎಂ.ಎ ವಿದ್ಯಾಭ್ಯಾಸ ಮಾಡಿದ್ದರೆ, ಧೀರಜ್‌ ಮುನಿರಾಜ್‌ ಅಮೆರಿಕದಲ್ಲಿ ಎಂ.ಎಸ್‌ ಪದವೀಧರರಾಗಿದ್ದಾರೆ. ಎಲ್‌.ಎ.ರವಿಸುಬ್ರಮಣ್ಯ, ಎನ್‌.ಎ.ಹ್ಯಾರಿಸ್‌, ಎನ್‌.ಶ್ರೀನಿವಾಸಯ್ಯ ಅವರು ಸ್ನಾತಕೋತ್ತರ ಪದವಿ ಪಡೆದ ನೂತನ ವಿಜೇತ ಅಭ್ಯರ್ಥಿಗಳಾಗಿದ್ದಾರೆ. ಇನ್ನುಳಿದಂತೆ ಎಸ್‌.ಆರ್‌.ವಿಶ್ವನಾಥ್‌, ಎಸ್‌.ಟಿ.ಸೋಮಶೇಖರ್‌, ಎಂ.ಕೃಷ್ಣಪ್ಪ, ಆರ್‌.ಅಶೋಕ್‌, ಗೋಪಾಲಯ್ಯ, ಎ.ಸಿ.ಶ್ರೀನಿವಾಸ, ರಾಮಲಿಂಗಾರೆಡ್ಡಿ, ರಿಜ್ವಾನ್‌ ಅರ್ಷದ್‌ ಅವರು ಪದವಿ ಪಡೆದವರಾಗಿದ್ದಾರೆ.

ಡಾಸಿ.ಎನ್‌.ಅಶ್ವತ್ಥನಾರಾಯಣ ಅವರೊಬ್ಬರೇ ಎಂಬಿಬಿಎಸ್‌ ವಿದ್ಯಾಭ್ಯಾಸ ಮಾಡಿ ವೈದ್ಯರಿದ್ದರೆ, ನಾಲ್ವರು ವಕೀಲಿಕೆ ಮಾಡಿದವರಿದ್ದಾರೆ. ಬಿ.ಶಿವಣ್ಣ, ಪ್ರಿಯಾಕೃಷ್ಣ, ಎಸ್‌.ಸುರೇಶ್‌ಕುಮಾರ್‌ ಮತ್ತು ಕೆ.ಎಚ್‌.ಮುನಿಯಪ್ಪ ಅವರು ಎಲ್‌ಎಲ್‌ಬಿ ವಿದ್ಯಾಭ್ಯಾಸ ಮಾಡಿದ್ದಾರೆ. ಇನ್ನು, ಬಿ.ಇ ವಿದ್ಯಾರ್ಹತೆಯನ್ನು ಹೊಂದಿರುವವರು ಉದಯ ಬಿ.ಗರುಡಾಚಾರ್‌, ದಿನೇಶ್‌ ಗುಂಡೂರಾವ್‌, ಶರತ್‌ ಕುಮಾರ್‌ ಬಚ್ಚೇಗೌಡ, ಎಸ್‌.ರಘು ಅವರಾಗಿದ್ದಾರೆ. ಶರತ್‌ ಕುಮಾರ್‌ ಬಚ್ಚೇಗೌಡ ಬಿಇ ವಿದ್ಯಾಭ್ಯಾಸದ ಜತೆಗೆ ಸ್ನಾತಕೋತ್ತರ ಪದವಿ ಎಂ.ಎಸ್‌ ಸಹ ಮಾಡಿಕೊಂಡಿರುವುದು ವಿಶೇಷ.

ತುಮಕೂರು ಅಭ್ಯರ್ಥಿಗಳ ಆಸ್ತಿ ವಿವರ : ಯಾರು ಎಷ್ಟು ಶ್ರೀಮಂತರು

ಪದವಿಗಿಂತ ಕಡಿಮೆ ವಿದ್ಯಾಭ್ಯಾಸ ಮಾಡಿರುವವರನ್ನು ಗಮನಿಸುವುದಾದರೆ ಪಿಯುಸಿ ವಿದ್ಯಾರ್ಹತೆ ಹೊಂದಿರುವವರು ಮೂವರಿದ್ದಾರೆ. ಎಸ್‌.ಮಂಜುಳಾ, ಸಿ.ಕೆ.ರಾಮಮೂರ್ತಿ ಮತ್ತು ಬೈರತಿ ಸುರೇಶ್‌ ಪಿಯುಸಿ ವಿದ್ಯಾಭ್ಯಾಸ ಮಾಡಿದ್ದು, ಬೈರತಿ ಬಸವರಾಜ ಮತ್ತು ಕೆ.ಜೆ.ಜಾಜ್‌ರ್‍ ಪದವಿಯನ್ನು ಅಪೂರ್ಣಗೊಳಿಸಿದ್ದಾರೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿರುವವರು ಐವರಿದ್ದು, ಎಂ.ಕೃಷ್ಣಪ್ಪ, ಎಸ್‌.ಮುನಿರಾಜು, ಜಮೀರ್‌ ಅಹ್ಮದ್‌ ಖಾನ್‌, ಮುನಿರತ್ನ, ಸತೀಶ್‌ ರೆಡ್ಡಿ ಅವರು ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸ ಪಡೆದವರಾಗಿದ್ದಾರೆ.