ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಖಾತೆ ಹಂಚಿಕೆಯಿಂದ ಉಂಟಾಗಿರುವ ಗೊಂದಲವನ್ನು ಬಗೆಹರಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ. ಹಿರಿಯ ಸಚಿವರಾದ ರಾಮಲಿಂಗಾರೆಡ್ಡಿ ಮತ್ತು ಕೆ.ಹೆಚ್. ಮುನಿಯಪ್ಪ ಅವರ ಅಸಮಾಧಾನವನ್ನು ಶಮನಗೊಳಿಸುವ ಪ್ರಯತ್ನ ಯಶಶ್ವಿಯಾಗಿದೆ.

ಬೆಂಗಳೂರು (ಜೂ.05): ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಖಾತೆ ಹಂಚಿಕೆಯ ನಂತರ ಹಿರಿಯ ಸಚಿವರಾದ ರಾಮಲಿಂಗಾರೆಡ್ಡಿ ಮತ್ತು ಕೆ.ಹೆಚ್. ಮುನಿಯಪ್ಪ ಅಸಮಾಧಾನ ಸ್ಫೋಟಗೊಂಡಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ನಡೆಸಿದ್ದಾರೆ. ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ಅಭಿವೃದ್ಧಿ ಖಾತೆ ನೀಡುವ ಬಗ್ಗೆ ತಾವು ಮಾತು ಕೊಟ್ಟಿದ್ದು ನಿಜ ಎಂದು ಡಿ.ಕೆ. ಶಿವಕುಮಾರ್ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಮಲಿಂಗಾರೆಡ್ಡಿ ಮುನಿಸು: ಡಿ.ಕೆ. ಶಿವಕುಮಾರ್ ಹೇಳಿದ್ದೇನು?

ಖಾತೆ ಹಂಚಿಕೆಯ ನಂತರ ರಾಮಲಿಂಗಾರೆಡ್ಡಿ ಅವರು ಯಾರ ಕೈಗೂ ಸಿಗದಂತೆ ಬೇರೆಡೆ ತೆರಳಿರುವುದು ಪಕ್ಷದಲ್ಲಿ ಸಂಚಲನ ಮೂಡಿಸಿತ್ತು. ಈ ಬಗ್ಗೆ ಮಾತನಾಡಿದ ಡಿ.ಕೆ. ಶಿವಕುಮಾರ್, 'ರಾಮಲಿಂಗಾರೆಡ್ಡಿ ಅವರು ಅತ್ಯಂತ ಹಿರಿಯ ನಾಯಕರು. ನಾನು ಅವರಿಗೆ ಒಂದು ಖಾತೆ ನೀಡುವ ಬಗ್ಗೆ ಮಾತು ಕೊಟ್ಟಿದ್ದು ನಿಜ. ಸಾರಿಗೆ ಇಲಾಖೆಯ ಜೊತೆಗೆ ಬೇರೆಯವರುಗೆ ಕೊಟ್ಟಿದ್ದ ಮುಜರಾಯಿ ಖಾತೆಯನ್ನು ಇವರಿಗೆ ಕೊಡಿಸಿದ್ದೆವು. ಆದರೆ ಈಗ ಹೈಕಮಾಂಡ್ ತೀರ್ಮಾನದಂತೆ ಕೃಷ್ಣಬೈರೇಗೌಡರಿಗೆ ಬೆಂಗಳೂರು ಅಭಿವೃದ್ಧಿ ಖಾತೆ ನೀಡಲಾಗಿದೆ. ಇದಾದ ನಂತರವೂ ನಾನು ರಾಮಲಿಂಗಾರೆಡ್ಡಿ ಅವರ ಪರವಾಗಿ ಖಾತೆ ಕೊಡಿಸಲು ಪ್ರಯತ್ನ ಪಟ್ಟಿದ್ದೆ, ಆದರೆ ಅಂತಿಮವಾಗಿ ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು' ಎಂದರು.

ಬೆಂಗಳೂರು ರಾಜಕಾರಣದಲ್ಲೇ ತಮ್ಮ ಇಡೀ ಬದುಕನ್ನು ಕಳೆದವರು ರಾಮಲಿಂಗಾರೆಡ್ಡಿ. ಹಾಗಾಗಿ ಅವರು ಈ ಖಾತೆಗಾಗಿ ಪಟ್ಟು ಹಿಡಿದಿರುವುದರಲ್ಲಿ ತಪ್ಪಿಲ್ಲ. ಅವರ ಜೊತೆ ನಾನು ಮಾತನಾಡುತ್ತೇನೆ, ಸಮಜಾಯಿಷಿ ನೀಡುತ್ತೇನೆ. ಅವರ ಮುನಿಸನ್ನು ಶಮನಗೊಳಿಸುವ ಜವಾಬ್ದಾರಿ ನಮ್ಮದು ಎಂದು ಸಿಎಂ ಶಿವಕುಮಾರ್ ಭರವಸೆ ನೀಡಿದ್ದಾರೆ.

ಕೆ.ಹೆಚ್. ಮುನಿಯಪ್ಪ ಸಮಾಧಾನ:

ಇನ್ನೊಬ್ಬ ಹಿರಿಯ ನಾಯಕ ಕೆ.ಹೆಚ್. ಮುನಿಯಪ್ಪ ಅವರ ಅಸಮಾಧಾನದ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್, 'ನಾನು ಮತ್ತು ರಾಹುಲ್ ಗಾಂಧಿ ಅವರು ಮುನಿಯಪ್ಪ ಅವರ ಜೊತೆ ಸುದೀರ್ಘವಾಗಿ ಮಾತನಾಡಿದ್ದೇವೆ. ಅವರು ಹಿರಿಯರಾಗಿದ್ದು, ಈಗ ಸಮಾಧಾನಗೊಂಡಿದ್ದಾರೆ. ಪಕ್ಷ ಕೊಟ್ಟ ಜವಾಬ್ದಾರಿಯನ್ನು ಸಂತೋಷದಿಂದ ನಿರ್ವಹಿಸುತ್ತೇನೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಅವರಲ್ಲಿ ಈಗ ಯಾವುದೇ ಅಸಮಾಧಾನ ಉಳಿದಿಲ್ಲ' ಎಂದು ಸ್ಪಷ್ಟಪಡಿಸಿದರು.

ರಾಹುಲ್ ಗಾಂಧಿ ಅವರ ವಿಧಾನಸಭೆ ಭೇಟಿ:

ಇತ್ತೀಚೆಗೆ ರಾಹುಲ್ ಗಾಂಧಿ ಅವರು ಕರ್ನಾಟಕ ವಿಧಾನಸಭೆಗೆ ಭೇಟಿ ನೀಡಿದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, 'ರಾಹುಲ್ ಗಾಂಧಿ ಅವರು ಬಂದಾಗ ಸ್ವಲ್ಪ ಸಮಯವಿತ್ತು. ಆ ಸಮಯವನ್ನು ವ್ಯರ್ಥ ಮಾಡುವುದು ಬೇಡ ಎಂದು ನಾನೇ ಅವರಿಗೆ ವಿಧಾನಸಭೆಯನ್ನು ತೋರಿಸಿದೆ. ನಮ್ಮ ವಿಧಾನಸಭೆಯ ಭವ್ಯತೆಯನ್ನು ನೋಡಿ ಅವರು ಬಹಳ ಖುಷಿ ಪಟ್ಟರು. ಕರ್ನಾಟಕದ ಈ ಗೆಲುವು ದೇಶಾದ್ಯಂತ ಹೊಸ ಸಂಚಲನ ಮೂಡಿಸಿದೆ ಎಂಬ ಸಂದೇಶವನ್ನು ಅವರು ನಮಗೆ ನೀಡಿದ್ದಾರೆ. ಕಾರ್ಯಕರ್ತರಲ್ಲಿ ಹೊಸ ಹುರುಪು ಬಂದಿದೆ, ನಾವು ಮತದಾರರ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇವೆ' ಎಂದರು.

ಒಟ್ಟಾರೆಯಾಗಿ, ಖಾತೆ ಹಂಚಿಕೆಯಿಂದ ಉಂಟಾಗಿರುವ 'ರೆಬಲ್' ಆಟವನ್ನು ಡಿ.ಕೆ. ಶಿವಕುಮಾರ್ ಅವರು ತಮ್ಮ ಚಾಣಾಕ್ಷತನದಿಂದ ಬಗೆಹರಿಸಲು ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಸಚಿವ ಸಂಪುಟದಲ್ಲಿ ಎಲ್ಲವೂ ಸುಗಮವಾಗಿ ಸಾಗುವ ಲಕ್ಷಣಗಳು ಕಂಡುಬರುತ್ತಿವೆ.