- Home
- News
- State
- ಡಿಕೆಶಿ ಸಂಪುಟಕ್ಕೆ ಮೊದಲು ಮ್ಯಾನೇಜ್ಮೆಂಟ್ ಕೋಟಾ ಸಚಿವರು; ಭಾರೀ ಚರ್ಚೆಗೆ ಕಾರಣವಾದ ಕಾಂಗ್ರೆಸ್ ಮುಖಂಡನ ಪೋಸ್ಟ್!
ಡಿಕೆಶಿ ಸಂಪುಟಕ್ಕೆ ಮೊದಲು ಮ್ಯಾನೇಜ್ಮೆಂಟ್ ಕೋಟಾ ಸಚಿವರು; ಭಾರೀ ಚರ್ಚೆಗೆ ಕಾರಣವಾದ ಕಾಂಗ್ರೆಸ್ ಮುಖಂಡನ ಪೋಸ್ಟ್!
ಎಚ್.ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡದಿದ್ದಕ್ಕೆ ಗದಗ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಸಿದ್ದು ಪಾಟೀಲರು 'ಮ್ಯಾನೇಜ್ಮೆಂಟ್ ಕೋಟಾ' ಸಚಿವರು ಎಂದು ಪೋಸ್ಟ್ ಹಾಕಿ ಡಿಲೀಟ್ ಮಾಡಿದ್ದಾರೆ. ಈ ಪೋಸ್ಟ್ನ ಸ್ಕ್ರೀನ್ಶಾಟ್ ವೈರಲ್ ಆಗಿದ್ದು, ಕಾಂಗ್ರೆಸ್ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಗದಗ (ಜೂ.05): ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆಗೆ ಪ್ರಮಾಣ ವಚನ ಸ್ವೀರಿಸಿರುವ ನಾಯಕರು ಮ್ಯಾನೇಜ್ಮೆಂಟ್ ಕೋಟಾ (ದುಡ್ಡು ಕೊಟ್ಟ) ಸಚಿವರು ಎಂಬರ್ಥದ ಪೋಸ್ಟ್ ಅನ್ನು ಗದಗ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ ಹಾಕಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಈ ಪೋಸ್ಟ್ ಮಾಡಿ ಕೆಲವೇ ನಿಮಿಷದಲ್ಲಿ ಡಿಲೀಟ್ ಮಾಡಿದರೂ ಅವರು ಹಾಕಿದ್ದ ಪೋಸ್ಟ್ನ ಸ್ಕ್ರೀನ್ ಶಾಟ್ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ. ಪಾಟೀಲ ಅವರನ್ನು ಮೊದಲ ಪಟ್ಟಿಯಿಂದ ಕೈ ಬಿಡಲಾಗಿದ್ದು, ಸ್ಥಳೀಯ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಎಚ್.ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು ಅಂತೆಲ್ಲ ತರಹೇವಾರಿ ಪೋಸ್ಟ್ ಗಳನ್ನ ಬೆಂಬಲಿಗರು ಹರಿಬಿಟ್ಟಿದ್ದಾರಾದರೂ ಈ ಒಂದು ಪೋಸ್ಟ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮ್ಯಾನೇಜ್ಮೆಂಟ್ ಕೋಟಾ ಅಂತಾ ಬರೆಯುವುದಲ್ಲದೇ ದುಡ್ಡಿನ ಚೀಲದ ಚಿಹ್ನೆಯನ್ನ ಹಾಕಲಾಗಿದೆ.
ಮೊದಲು ಮ್ಯಾನೇಜ್ಮೆಂಟ್ ಕೋಟಾ ಮುಗೀಬೇಕು ಆಮೇಲೆ ಸರ್ಕಾರಿ ಕೋಟಾ ಅಂತಾ ಫೊಸ್ಟ್ ಮಾಡಿದ್ದಾರೆ. ಅಲ್ಲದೇ ಕಲಿಯುಗದ ಅಧಿಕಾರ ಅಂತಾ ಆಕ್ರೋಶ ಹೊರ ಹಾಕಿದ್ದಾರೆ. ಸದ್ಯ ಈ ಪೋಸ್ಟ್ ಎಲ್ಲೆಡೆ ಹರಿದಾಡುತ್ತಿದ್ದು, ಮ್ಯಾನೇಜ್ಮೆಂಟ್ ಕೋಟಾದವರು ಯಾರು, ಯಾರು, ಯಾರಿಗೆ ಹಣ ಕೊಟ್ಟಿದ್ದು? ಎನ್ನುವ ಚರ್ಚೆ ಶುರುವಾಗಿದೆ.
ಮೊದಲ ಪಟ್ಟಿಯಲ್ಲಿ ಹೆಸರು ಇಲ್ಲದನ್ನ ಗಮನಿಸಿದ್ದ ಮಾಜಿ ಸಚಿವ ಎಚ್.ಕೆ. ಪಾಟೀಲರು, ಸಿದ್ಧಾಂತ ನಿಷ್ಠರಿಗೆ ಯಾವಾಗಲೂ ಹಾದಿ ಕಠಿಣವೇ, ಹೈಕಮಾಂಡ್ ನಿರ್ಧಾರ ಕ್ಕೆ ಒಪ್ಪೋಣ ಅಂತಾ ಕಾರ್ಯಕರ್ತರಿಗೆ ಟ್ವಿಟರ್ ಪೋಸ್ಟ್ ಮೂಲಕ ಸಂದೇಶ ನೀಡಿದ್ದರು. ಆದರೆ, ಕೆಲವೇ ನಿಮಿಷದಲ್ಲಿ ಆ ಸಂದೇಶವನ್ನೂ ಡಿಲೀಟ್ ಮಾಡಲಾಗಿತ್ತು.
ಇತ್ತ ಅಲ್ಪ ಸಂಖ್ಯಾತರ ಘಟಕದ ಕಾರ್ಯದರ್ಶಿ ಸೈಯದ್ ಖಾಲಿದ್ ಕೊಪ್ಪಳ ರಾಜೀನಾಮೆ ಎಚ್ಚರಿಗೆ ನೀಡಿದ್ದಾರೆ. ಮಾಜಿ ಸಚಿವ ಎಚ್.ಕೆ. ಪಾಟೀಲರು ಯಾವುದೇ ಪ್ರತಿಭಟನೆ ಹೇಳಿಕೆ ನೀಡದಂತೆ ಸೂಚಿಸಿದ್ದಾರೆ ಆದ್ರೂ ನಾವು ರಸ್ತೆಗಿಳಿದಿದ್ದೇವೆ. ಉತ್ತರ ಕರ್ನಾಟಕ ಧೀಮಂತ ನಾಯಕ, ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದ ನಾಯಕನ ಕಡೆಗಣನೆಯಾಗಿದೆ. ಮೊದಲ ಪಟ್ಟಿಯಲ್ಲಿ ನಿರ್ಲಕ್ಷಿಸಲಾಗಿದೆ.. ಆದರೆ ಎರಡನೇ ಪಟ್ಟಿಯಲ್ಲಿ ಪರಿಗಣಿಸದಿದ್ದರೆ ಪದಾಧಿಕಾರಿಗಳ ಸಾಮೂಹಿಕ ರಾಜೀನಾಮೆಗೆ ಸಿದ್ಧ ಅಂತಾ ಎಚ್ಚರಿಕೆ ನೀಡಿದ್ದಾರೆ.
ಗದಗ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿರುವ ಎಚ್ ಕೆ ಪಾಟೀಲರು ಆರು ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.. ಅಲ್ದೆ, ಪಶ್ಚಿಮ ಪದವಿಧರರ ಕ್ಷೇತ್ರದಿಂದ ನಾಲ್ಕು ಬಾರಿ ಆಯ್ಕೆಯಾಗಿದ್ದರು. 40 ವರ್ಷದ ಸುಧೀರ್ಘ ರಾಜಕೀಯ ಪಯಣದಲ್ಲಿ ಜವಳಿ, ಕಾನೂನು, ಕೃಷಿ, ಜಲ ಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಸಚಿವರಾಗಿ ತನ್ನದೇಯಾದ ಛಾಪುಮೂಡಿಸಿದ್ದಾರೆ. 'ಹುಲಕೋಟಿಯ ಹುಲಿ' ಅಂತಾನೇ ಖ್ಯಾತರಾಗಿರೋ ಪಾಟೀಲರಿಗೆ ಈ ಬಾರಿ ಸಚಿವ ನೀಡದಿರೋದು ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ

