ರಾಜ್ಯದಲ್ಲಿ ಈ ಬಾರಿ ಮಳೆ ಕೊರತೆಯಾಗಿದೆ. ಆದರೆ, ಕಾವೇರಿ ಜಲ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್‌ ನಿಯಮದಂತೆ ಈವರೆಗೆ 24 ಟಿಎಂಸಿ ನೀರನ್ನು ಮಾತ್ರ ತಮಿಳುನಾಡಿಗೆ ಹರಿಸಲಾಗಿದೆ.

ಬೆಂಗಳೂರು (ಆ.23): ಸರ್ಕಾರ ರಾಜ್ಯದ ಹಿತಾಸಕ್ತಿ ಕಾಪಾಡಲು ಬದ್ದವಾಗಿದೆ. ರಾಜ್ಯ ನೆಲ ಜಲ ಭಾಷೆ ಗಡಿ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಸರ್ಕಾರ ರಾಜಕೀಯ ಮಾಡೋದಿಲ್ಲ. ಸುಪ್ರೀಂ ಕೋರ್ಟ್‌ ತೀರ್ಪಿನಂತೆ ನಾವು ತಮಿಳುನಾಡಿಗೆ ಈವರೆಗೆ 86.38 ಟಿಎಂಸಿ ಬಿಡಬೇಕಾಗಿತ್ತು. ಆದರೆ, ಕೇವಲ 24 ಟಿಎಂಸಿ ನೀರು ಹರಿಸುವ ಮೂಲಕ ರಾಜ್ಯದ ಹಿತಾಸಕ್ತಿ ಕಾಪಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕಾವೇದಿ ನದಿ ನೀರಿನ ಹಂಚಿಕೆ ಹಾಗೂ ವಿವಾದದ ಕುರಿತು ಇಂದು ನಡೆದ ರಾಜ್ಯದ ಸರ್ವ ಪಕ್ಷ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ರಾಜ್ಯದ ಹಿತಾಸಕ್ತಿ ಕಾಪಾಡಲು ಬದ್ದವಾಗಿದೆ. ರಾಜ್ಯ ನೆಲ ಜಲ ಭಾಷೆ ಗಡಿ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಸರ್ಕಾರ ರಾಜಕೀಯ ಮಾಡೋದಿಲ್ಲ. ರಾಜ್ಯದ ಜನರ ಹಿತಸಕ್ತಿ ಕಾಪಾಡುತ್ತೇವೆ. ಇದರಲ್ಲಿ ರಾಜಕೀಯ ಮಾಡುವ ಪ್ರಶ್ನೆಯೇ ಇಲ್ಲ. ಸರ್ವೋಚ್ಚ ನ್ಯಾಯಾಲಯ ನಮಗೆ ತೀರ್ಪು ಕೊಟ್ಟ ಮೇಲೆ 2018 ರಲ್ಲಿ ಕಾವೆರಿ ನೀರು ಪ್ರಾದಿಕಾರ ರಚನೆಯಾಗಿದೆ. ಇದರಲ್ಲಿ ಅನೇಕ‌ ಸಭೆಗಳನ್ನು ಮಾಡಿದ್ದರೆ ಈ ಕಮಿಟಿ ಆದ ಮೇಲು ಸಹ ರಾಜ್ಯದಲ್ಲಿ ಸಂಕಷ್ಟ ದಿನಗಳು ಎದುರಾಗಿದೆ ಎಂದರು.

ಮಳೆ ಕೈಕೊಟ್ಟಾಗೆಲ್ಲಾ ತಮಿಳುನಾಡಿನಿಂದ ವಿವಾದ ಸೃಷ್ಟಿ: ಮಾಜಿ ಸಿಎಂ ಡಿವಿಎಸ್‌ ಆಕ್ರೋಶ

ಈವರೆಗೆ 86 ಟಿಎಂಸಿ ನೀರು ಬಿಡಬೇಕಿತ್ತು: ನಮ್ಮ ರಾಜ್ಯದಲ್ಲಿ ಈ ವರ್ಷ ಮಳೆ ಕಡಿಮೆಯಾಗಿದೆ. ಆಗಸ್ಟ್ ನಲ್ಲಿಯೂ ಕೊರೆತೆಯಾಗಿದೆ. ಇಲ್ಲಿಯವರೆಗೆ ನಾವು 86.38 ಟಿಎಂಸಿ ಬಿಡಬೇಕಾಗಿತ್ತು. ಆದ್ರೆ ನಾವು ಬಿಟ್ಟಿರೋದು ಕೇವಲ 24 ಟಿಎಂಸಿ ನೀರು ಬಿಟ್ಟಿದ್ದೇವೆ ಎಂದರೆ ಸರ್ಕಾರ ರಾಜ್ಯದ ಹಿತಾಸಕ್ತಿ ಕಾಪಾಡಿದೆ ಎಂದರ್ಥ. ನಾವು ನೀರು ಬಿಡೋದಕ್ಕೆ ಸಾದ್ಯವಿಲ್ಲ ಅಂತ ಹೇಳಿದ್ದೇವೆ. ಕುಡಿಯುವ ನೀರಿಗಾಗಿ‌ ಇಟ್ಟುಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಶುಕ್ರವಾರ ನ್ಯಾಯ ಪೀಠದ ಮುಂದೆ ವಿಚಾರಣೆ: ಕಾವೇರಿ ನೀರು ನಿಯಂತ್ರಣ ಸಮಿತಿಯು ತನ್ನ ಸಭೆಯಲ್ಲಿ ಜೂನ್‌ ವರೆಗಿನ ಮಳೆಯ ಕೊರತೆಯನ್ನು ಗಮನಿಸಿದೆ. ಆಗಸ್ಟ್‌ 10 ರಂದು 15,000 ಕ್ಯೂಸೆಕ್‌ ನೀರು ಬಿಡಲು ಸೂಚಿಸಿತು. ಇದನ್ನು ರಾಜ್ಯ ಬಲವಾಗಿ ವಿರೋಧಿಸಿದ್ದು, ನೀರಿನ ಪ್ರಮಾಣ 10,000 ಕ್ಯೂಸೆಕ್‌ಗೆ ಇಳಿಕೆ ಮಾಡಿದೆ. ಇದರಿಂದ ಅಸಮಾಧಾನಗೊಂಡ ತಮಿಳುನಾಡು ಸುಪ್ರೀಂ ಕೋರ್ಟಿನಲ್ಲಿ ನೀರು ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ್ದು, ಶುಕ್ರವಾರ ಮೂರು ನ್ಯಾಯಾಧೀಶರ ಪೀಠದ ಮುಂದೆ ವಿಚಾರಣೆಗೆ ಬರಲಿದೆ ಎಂದು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಮಾಹಿತಿ ಹಂಚಿಕೊಂಡರು.

ಅರ್ಧ ಕರ್ನಾಟಕ ಬರಗಾಲ, ಮುಂದೆಯೂ ಮಳೆ ಮುನ್ಸೂಚನೆಯಿಲ್ಲ: ಸಚಿವ ಕೃಷ್ಣಬೈರೇಗೌಡ

ಕಾವೇರಿ ನದಿ ನೀರು ಹಂಚಿಕೆಯಲ್ಲಿ ಸರ್ಕಾರ ಎಡವಿದೆ:
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ. ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ‌. ಮುಂಚೆನೆ ಎಚ್ಚೆತ್ತುಕೊಳ್ಳಬೇಕಿತ್ತು. ನಾವು ರಾಜಕಾರಣ ಮಾಡಲ್ಲ. ಮುಂದಿನ ಶುಕ್ರವಾರ ಸುಪ್ರೀಂ ನಲ್ಲಿ ಕೇಸ್ ಇದೆ
ಏನಾಗ್ತದೆ ನೋಡೊಣ. ಇನ್ನು ಮಹದಾಯಿ ವಿವಾದ ಕೇಸ್ ಕೂಡ ಕೋರ್ಟ್‌ನಲ್ಲಿದೆ. ಮಧ್ಯಂತರ ಅರ್ಜಿ ಹಾಕಿ ಎಂದರು ಹಾಕಿಲ್ಲ. ಕೋರ್ಟ್ ನಲ್ಲಿ ಮೊದಲು ಸೂಕ್ತವಾಗಿ ವಾದ ಮಂಡಿಸಿ ರಾಜಕೀಯ ಲಾಭ ಸಿಗೊದಿಲ್ಲ ಎಂದು ಸಭೆಯಲ್ಲಿ ಸಲಹೆ ನೀಡಿದ್ದೇವೆ.
- ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಈ ಸಭೆಯಲ್ಲಿ ಇನ್ನೂ ಸಭೆಯಲ್ಲಿ ಜಲ ಸಂಪನ್ಮೂಲ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್‌, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಬಿ.ಎಸ್. ಯಡಿಯೂರಪ್ಪ, ಹೆಚ್.ಡಿ. ಕುಮಾರಸ್ವಾಮಿ, ಜಗದೀಶ ಶೆಟ್ಟರ, ಡಿ.ವಿ. ಸದಾನಂದಗೌಡ, ವೀರಪ್ಪ ಮೊಯಿಲಿ, ಸಚಿವರಾದ ಹೆಚ್‌.ಕೆ. ಪಾಟೀಲ, ಚಲುವರಾಯಸ್ವಾಮಿ, ಡಾ. ಜಿ. ಪರಮೇಶ್ವರ, ಕೆ.ಜೆ. ಜಾರ್ಜ್‌, ಕೃಷ್ಣ ಬೈರೇಗೌಡ, ನವದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಸೇರಿದಂತೆ ಎಲ್ಲ ಪಕ್ಷಗಳ ಶಾಸಕರು ಸಂಸದರು, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್‌ ಗೋಯಲ್‌, ಜಲ ಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ, ಹಿರಿಯ ವಕೀಲರಾದ ಮೋಹನ್‌ ಕಾತರಕಿ ಮತ್ತು ಇತರ ಕಾನೂನು ತಜ್ಞರು, ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.