06:45 PM (IST) Aug 02

ಸಿದ್ದರಾಮಯ್ಯ ಅಮೃತ ಮಹೋತ್ಸವ : ಸಿದ್ದು ಅಭಿಮಾನಿಯಿಂದ ವಿದ್ಯಾರ್ಥಿಗಳಿಗೆ ವಿಶೇಷ ಉಡುಗೊರೆ

ದಾವಣಗೆರೆ: ಸಿದ್ದರಾಮಯ್ಯ ಅಮೃತ ಮಹೋತ್ಸವ ಹಿನ್ನಲೆ ಸಿದ್ದರಾಮಯ್ಯ ಅಭಿಮಾನಿ‌‌ಯೊಬ್ಬರು ಜನ್ಮದಿನವನ್ನ ವಿಶೇಷವಾಗಿ ಆಚರಿಸಿದ್ದಾರೆ.
ವಿದ್ಯಾರ್ಥಿಗಳಿಗೆ ವಿಶೇಷ ಉಡುಗೊರೆ ನೀಡಿ ಯುವ ಮುಖಂಡ ಸಂಪತ್ ಕುಮಾರ್ ಮಕ್ಕಳಿಗೆ ನೆರವಾಗಿದ್ದಾರೆ. ನಿರಂತರ ಮಳೆ ಹಿನ್ನಲೆ ದಾವಣಗೆರೆ ನಗರದ ಹಳೇ ಕುಂದುವಾಡ ಪ್ರಾಥಾಮಿಕ ಶಾಲೆಯಲ್ಲಿ ಮಕ್ಕಳಿಗೆ 400 ಛತ್ರಿ ವಿತರಣೆ ಮಾಡಿದ್ದಾರೆ. ಬ್ಯಾನರ್, ಬಂಟಿಗ್ಸ್ ಹಾಕಿ ಪ್ರಚಾರ ಪಡೆಯುತ್ತಿದ್ದಾರೆ. ಆದರೆ ಒಬ್ಬರು ಸಹ ಸಿದ್ದರಾಮಯ್ಯ ಹೆಸರಿನ ಮೇಲೆ ಒಂದು ಒಳ್ಳೆಯ ಕೆಲಸ ಮಾಡುತ್ತಿಲ್ಲ. ಮಳೆ ಹಿನ್ನಲೆ ವಿದ್ಯಾರ್ಥಿಗಳು ನೆನೆದುಕೊಂಡು ಬರುತ್ತಿದ್ದರು. ಈ ಹಿನ್ನಲೆ ವಿದ್ಯಾರ್ಥಿಗಳಿಗೆ ಛತ್ರಿ ಕೊಡಿಸಿದ್ದೇನೆ. ಇನ್ನೂ ಐನೂರು ಛತ್ರಿ ವಿತರಣೆ ಮಾಡಲಿದ್ದೇನೆ ಎಂದು ಸಂಪತ್ ಕುಮಾರ್ ಹೇಳಿದ್ದಾರೆ.

04:04 PM (IST) Aug 02

ದ್ಯದಲ್ಲೆ ಬಯ್ಯಪ್ಪನಹಳ್ಳಿ ಟು ವೈಟ್ ಫೀಲ್ಡ್ ಮೆಟ್ರೋ ಮಾರ್ಗ ಆರಂಭ

ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಲ್ಲಿ, ವಾಹನಗಳ ಸಂಖ್ಯೆಯೂ ಹೆಚ್ಚಾಗ್ತಿದೆ. ಅದಕ್ಕೆ ಅನುಗುಣವಾಗಿ ಮೆಟ್ರೊ ಮಾರ್ಗಗಳು ಕೂಡ ಬೆಳೆಯುತ್ತಿವೆ.‌ ಈಗಾಗಲೆ ಮೆಟ್ರೋ ಅವಲಂಬಿಸಿರೋ ಪ್ರಯಾಣಿಕರಿಗೆ ಬಿಎಂಆರ್ಸಿಎಲ್ ಮತ್ತೊಂದು ಸಿಹಿಸುದ್ದಿ ನೀಡಲು ಮುಂದಾಗಿದೆ. ಸದ್ಯದಲ್ಲೆ ಫೇಸ್ 2 ನೂತನ ಮೆಟ್ರೋ ಮಾರ್ಗ ಆರಂಭವಾಗಲಿದ್ದು ಮುಂದಿನ ತಿಂಗಳು ಪರೀಕ್ಷಾರ್ಥ ಸಂಚಾರ ಆರಂಭವಾಗಲಿದೆ. ಸಿಲಿಕಾನ್ ಸಿಟಿ ಟ್ರಾಫಿಕ್ ಜಂಜಾಟವನ್ನು ಕೊಂಚ ಕಡಿಮೆ ಮಾಡಿದ್ದಲ್ಲದೆ ಹೊರಭಾಗದಲ್ಲು ಮೆಟ್ರೋ ರೈಲು ಸಂಚಾರ ಮಾಡ್ತಾಯಿದ್ದು, ಸದ್ಯದಲ್ಲೆ ಬಯ್ಯಪ್ಪನಹಳ್ಳಿ - ವೈಟ್ ಫೀಲ್ಡ್ ಮೆಟ್ರೋ ಮಾರ್ಗ ಕಾರ್ಯಾಚರಣೆಗೆ ರೆಡಿಯಾಗಿದೆ. 

04:03 PM (IST) Aug 02

ಟೆಂಡರ್‌ನಲ್ಲಿ ಅವ್ಯವಹಾರ: ಹಗರಣದ ಸುಳಿಯಲ್ಲಿ ಸಚಿವ ಅಶ್ವತ್ಥ್ ನಾರಾಯಣ್

ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಟೂಲ್ ಕಿಟ್ ಪೂರೈಕೆ ಟೆಂಡರ್‌ನಲ್ಲಿ ಭ್ರಷ್ಟಾಚಾರ ಆರೋಪ. ವಿದ್ಯಾರ್ಥಿಗಳಿಗೆ ಪೂರೈಸುವ ಟೂಲ್ ಕಿಟ್ ನಲ್ಲಿ 22 ಕೋಟಿ ರೂ. ಹಗರಣ. 22 ಕೋಟಿ ಟೆಂಡರ್ ಹಗರಣದಲ್ಲಿ ಸಚಿವ ಅಶ್ವಥ್ ನಾರಾಯಣ್ ನೇರ ಕೈವಾಡ ಆರೋಪ. ಹಗರಣದ ಸಂಪೂರ್ಣ ದಾಖಲೆ ಸಮೇತ ಆಮ್ ಆದ್ಮಿ ಪಾರ್ಟಿಯಿಂದ ದೂರು ದಾಖಲು. ರಾಜ್ಯದ ಕೈಗಾರಿಕಾ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಪೂರೈಸುವ ಸಲಕರಣೆಗಳ ಟೂಲ್ ಕಿಟ್ ಟೆಂಡರ್. ಪರಿಶಿಷ್ಟ ಜಾತಿ & ಪಂಗಡಗಳ 13 ಸಾವಿರ ವಿದ್ಯಾರ್ಥಿಗಳಿಗೆ 22 ಕೋಟಿ ವೆಚ್ಚದಲ್ಲಿ ಟೂಲ್ ಖರೀದಿಸುವ ಟೆಂಡರ್. ತಾಂತ್ರಿಕ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯ ಸಲಕರಣೆಗಳನ್ನ ಒಳಗೊಂಡ ಟೂಲ್ ಕಿಟ್ ಪೂರೈಕೆ ಟೆಂಡರ್. ಈ ಟೆಂಡರ್‌ನಲ್ಲಿ ಭಾರೀ ಗೋಲ್ಮಾಲ್ ನಡೆದಿರುವ ಬಗ್ಗೆ ಗಂಭೀರ ಆರೋಪ. ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಚಿವ ಅಶ್ವಥ್ ನಾರಾಯಣ್ ನೇರ ಹಸ್ತಕ್ಷೇಪ, ಕೈವಾಡವಿದೆ ಆರೋಪಿಸಿದ್ದಾರೆ. 

02:29 PM (IST) Aug 02

ಮಳೆಯಲ್ಲಿ ಕಣ್ಮನ ಸೆಳೆಯುತ್ತಿದೆ ಹಂಪಿಯ ಸ್ಮಾರಕಗಳ ಸೊಬಗು

ಐತಿಹಾಸಿಕ ಹಂಪಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ. ಹಂಪಿಯ ಸ್ಮಾರಕದ ಸೌಂದರ್ಯ ವಿಜಯನಗರದ ಇತಿಹಾಸ ಕೇಳಲು ಮತ್ತು ನೋಡಲು ಎಲ್ಲರಿಗೂ ಬಲು ಇಷ್ಟ. ಸದ್ಯ ಈ ಹಂಪಿ ಮತ್ತಷ್ಟು ಆಕರ್ಷಣೆಯನ್ನು ಪಡೆದುಕೊಂಡಿದೆ. ವಿಶ್ವ ವಿಖ್ಯಾತ ಹಂಪಿಯಲ್ಲಿ ಮಳೆಯಲ್ಲಿ ಮಿಂದೆದ್ದ ಸ್ಮಾರಕಗಳು ಕಂಗೊಳಿಸುತ್ತಿವೆ. 

ಫೋಟೋಗಳಿಗೆ ಇಲ್ಲಿ ಕ್ಲಿಕ್ಕಿಸಿ

02:16 PM (IST) Aug 02

ಮಳೆ ಕಾರಣದಿಂದ ರೈಲು ಸಂಚಾರದಲ್ಲಿ ವ್ಯತ್ಯಯ

ಭಟ್ಕಳ- ಮುರುಡೇಶ್ವರದ ಮಧ್ಯೆ ರೈಲು ಮಾರ್ಗದಲ್ಲಿ ನೀರು ತುಂಬಿರುವುದರಿಂದ ಸಂಚಾರದಲ್ಲಿ ವ್ಯತ್ಯಯ. 
ಎಂಎಒ-ಎಂಎಕ್ಯೂ ರೈಲು ಸಂಖ್ಯೆ 06601 ಸಂಚಾರ ಸಂಪೂರ್ಣ ರದ್ದು (Cancelled)
ಎಂಎಕ್ಯೂ-ಎಂಎಒ ರೈಲು ಸಂಖ್ಯೆ 06602 ಸಂಚಾರ ಉಡುಪಿಯಲ್ಲೇ ಸ್ಥಗಿತ (Short termination)

ರೈಲು ಸಂಖ್ಯೆ 11098 ಇಆರ್‌ಎಸ್- ಪುಣೆ ಎಕ್ಸ್‌ಪ್ರೆಸ್ ಭಟ್ಕಳ ನಿಲ್ದಾಣದಲ್ಲಿ, ರೈಲು ಸಂಖ್ಯೆ 16595 ಎಸ್‌ಬಿಸಿ- ಕಾರವಾರ ಎಕ್ಸ್‌ಪ್ರೆಸ್ ಶಿರೂರು ನಿಲ್ದಾಣದಲ್ಲಿ, ರೈಲು ಸಂಖ್ಯೆ 16334 ಟಿವಿಸಿ- ವಿಆರ್‌ಎಲ್ ಎಕ್ಸ್‌ಪ್ರೆಸ್ ರೈಲು ಸೇನಾಪುರ ನಿಲ್ದಾಣದಲ್ಲಿ, ರೈಲು ಸಂಖ್ಯೆ 12201 ಎಲ್‌ಟಿಟಿ- ಕೆಸಿವಿಎಲ್ ಎಕ್ಸ್‌ಪ್ರೆಸ್ ಅಂಕೋಲಾ ನಿಲ್ದಾಣದಲ್ಲಿ, ರೈಲು ಸಂಖ್ಯೆ 16516 ಕಾರವಾರ-ವೈಪಿಆರ್ ಎಕ್ಸ್‌ಪ್ರೆಸ್ ಹೊನ್ನಾವರ ನಿಲ್ದಾಣದಲ್ಲಿ ತಾತ್ಕಾಲಿಕ ಸ್ಥಗಿತ.

02:10 PM (IST) Aug 02

ಸಿದ್ದರಾಮಯ್ಯಗೆ ದೇವರು ಆಯಸ್ಸು, ಆರೋಗ್ಯ ಕೊಡಲಿ: ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ: ಸಿದ್ದರಾಮಯ್ಯನವರಿಗೆ 75 ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ದೇವರು ಆಯಸ್ಸು ಕೊಟ್ಟು ರಾಜ್ಯದ ರಾಷ್ಟ್ರದ ಕೆಲಸ ಮಾಡಲಿ ಎಂದು ಹಾರೈಸುತ್ತೇನೆ ಎಂದು ಮಾಜಿಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯನವರ ಹುಟ್ಟುಹಬ್ಬಕ್ಕೆ ನಾನು ಸಹ ಅವರಿಗೆ ಶುಭಾಶಯ ತಿಳಿಸುತ್ತೇನೆ. ಸಿದ್ದರಾಮಯ್ಯ ರಾಷ್ಟ್ರ, ರಾಜ್ಯದ ಕೆಲಸ, ಯಾವುದೇ ಕಾರಣಕ್ಕೂ ರಾಷ್ಟ್ರದ್ರೋಹಿಗಳಿಗೆ ಬೆಂಬಲ ಕೊಡಬಾರದು ಎಂದು ಪ್ರಾರ್ಥನೆ ಮಾಡುತ್ತೇನೆ. ಸಿದ್ದರಾಮೋತ್ಸವ ಮಾಡುವುದರಿಂದ ಸರ್ಕಾರಕ್ಕೆ ಹಾಗೂ ಬಿಜೆಪಿಯ ಸಂಘಟನೆಗೆ ಯಾವುದೇ ರೀತಿಯ ತೊಂದರೆ ಇಲ್ಲ, ನಮ್ಮ ಕೆಲಸವನ್ನು ನಾವು ಮಾಡುತ್ತಾ ಇದ್ದೇವೆ. ಸಿದ್ದರಾಮೋತ್ಸವದ ಬಗ್ಗೆ ಅವರ ಪಕ್ಷದಲ್ಲಿಯೇ ಗೊಂದಲವಿದೆ. ಎಸ್. ಆರ್. ಪಾಟೀಲ್ ಮುಖ್ಯಮಂತ್ರಿಯಾಗಲಿ ಎಂದು ವೀರಪ್ಪ ಮೊಯ್ಲಿಯವರು ಹೇಳಿದ್ದಾರೆ. ಡಿಕೆಶಿ ನಾನು ಸಿಎಂ ಆಗುತ್ತೇನೆ,ಒಕ್ಕಲಿಗರು ನನ್ನ ಜೊತೆ ನಿಂತುಕೊಳ್ಳಿ ಎನ್ನುತ್ತಾರೆ, ಎಂದಿದ್ದಾರೆ.

01:10 PM (IST) Aug 02

ಅಕ್ಕ-ತಂಗಿಯರಿಂದಲೇ ಒಡಹುಟ್ಟಿದ ಸಹೋದರನ ಕೊಲೆ

ಅಕ್ಕ-ತಂಗಿಯರಿಂದಲೇ ಒಡಹುಟ್ಟಿದ ಸಹೋದರನ ಕೊಲೆ. ಬೇರೆಯವರು ಬೆರಳು ತೋರಿಸದಂತೆ ಚನ್ನಾಗಿ ಬದುಕು ಎಂದು ಬುದ್ದಿವಾದ ಹೇಳಿದ್ದೇ ಸಹೋದರನಿಗೆ ತಪ್ಪಾಯಿತು. ಕಲಬುರಗಿ ನಗರದ ಹೊರವಲಯದ ಕೆರೆ ಬೊಸಗಾ ಜಮೀನಿನಲ್ಲಿ ನಡೆದಿದ್ದ ನಾಗರಾಜ್ ಕೊಲೆ ಪ್ರಕರಣವನ್ನು ಬೇಧಿಸಿದ ಕಲಬುರಗಿ ಪೋಲಿಸರು. ಬುದ್ದಿವಾದ ಹೇಳಿ ಬೈದವನನ್ನು ಮರ್ಡರ್ ಮಾಡಿಸಿದ ಸಹೋದರಿಯರು. ಕೊಲೆಯಾದ ಯುವಕನ ಅಕ್ಕ, ತಂಗಿ ಹಾಗೂ ಅವರ ಸ್ನೇಹಿತ ಸೇರಿ ಆರು ಜನರ ಬಂಧನ. ಅವಿನಾಶ್, ಆಸಿಫ್, ರೋಹಿತ್, ಮೊಸಿನ್ ಬಂಧಿತ ಕಿಲ್ಲರ್ಸ್. ಅಲ್ಲದೇ ಸ್ವಂತ ಸಹೋದರನನ್ನೇ ಹತ್ಯೆ ಮಾಡಲು ಹೇಳಿದ್ದ ಸಹೋದರಿಯರಾದ ನಿರ್ಮಲಾ, ಸುಮೀತ್ರಾ ಸಹ ಬಂಧನ. ಕಲಬುರಗಿ ನಗರ ಪೋಲಿಸ್ ಆಯುಕ್ತ ಡಾ. ರವಿಕುಮಾರ್ ವೈಎಸ್ ಮಾಹಿತಿ. ಬಂಧಿತರು ಕಲಬುರಗಿ ನಗರದ ಗಾಜಿಪೂರ ಬಡಾವಣೆ ನಿವಾಸಿಗಳು. ನಿರ್ಮಲಾ ಜೊತೆಗೆ ಶರಣು ಎಂಬಾತ ಸ್ನೇಹ ಹೊಂದಿದ್ದ. ಈ ಬಗ್ಗೆ ಅಸಮಧಾನ ಹೊಂದಿದ್ದ ನಾಗರಾಜ್ ತನ್ನ ಸಹೋದರಿಯರಿಗೆ ಬೈದು ಬುದ್ದಿ ಹೇಳಿದ್ದ. ಕೆಲವೊಮ್ಮೆ ಈ ಬಗ್ಗೆ ಕಿರಿಕಿರಿಯೂ ಆಗಿತ್ತು. ನಿಂದಿಸಿ ಕೆಟ್ಟದಾಗಿ ಮಾತನಾಡಿದ್ದಾನೆ ಎಂಬ ಕಾರಣಕ್ಕಾಗಿ ಆತನನ್ನು ಮುಗಿಸಲು ಸಹೋದರಿಯರಿಂದಲೇ ಸ್ಕೆಚ್. ಮಾಡಿದ ತಪ್ಪಿಗೆ ಕಂಬಿ ಎಣಿಸುತ್ತಿರುವ ಆರೋಪಿಗಳು.

12:58 PM (IST) Aug 02

ಭಟ್ಕಳ: ಅವಶೇಷಗಳಡಿ ಸಿಲುಕಿದ 2 ಮೃತ ದೇಹಗಳು ಪತ್ತೆ

ಭಟ್ಕಳದಲ್ಲಿ ಗುಡ್ಡು ಕುಸಿದು, ನಾಲ್ವರು ಅಸುನೀಗಿದ್ದು, ಇಬ್ಬರ ಮೃತದೇಹವನ್ನು ಹೊರ ತೆಗೆಯಲಾಗಿದೆ. 

12:48 PM (IST) Aug 02

Gadag: ದನದ ಕೊಟ್ಟಿಗೆ ಮೇಲೆ ಕುಸಿದ ಪಕ್ಕದ ಮನೆ ಗೋಡೆ

ಗದಗ: ತಾಲೂಕಿನ ಮುಳಗುಂದದಲ್ಲಿ ಮನೆಗೋಡೆ ಕುಸಿತ, ದನದ ಕೊಟ್ಟಿಗೆಯ ಮೇಲೆ ಕುಸಿದ ಪಕ್ಕದ ಮನೆಯ ಗೋಡೆ. ಗೋಡೆ ಕುಸಿತಕ್ಕೆ ಎತ್ತಿನ ಕೊಂಬು ಮುರಿದು ಗಂಭೀರ ಗಾಯ. ಮುಳಗುಂದ ಪಟ್ಟಣದ ಹಳೆವುಡಾ ಓಣಿಯ ನಿಂಗಪ್ಪ ಮಜ್ಜುಗುಡ್ಡ ಅವರಿಗೆ ಸೇರಿದ ಎತ್ತು.. ಗಂಗಮ್ಮ ಹಾವೇರಿ ಅವರ ಮನೆಯ ಗೋಡೆ ಕುಸಿದು ಗೋಡೆ ಹಿಂದೆ ಶೆಡ್‌ನಲ್ಲಿ ಕಟ್ಟಿದ್ದ 4 ಎತ್ತುಗಳು ಹಾಗೂ 2 ಆಕಳು ಗಳ ಮೇಲೆ ಗೋಡೆ ಕುಸಿತ. ಘಟನೆಯಲ್ಲಿ ಒಂದು ಎತ್ತಿನ ಕೊಂಬು ಮುರಿದು, ಇನ್ನುಳಿದ ಜಾನುವಾರುಗಳಿಗೂ ಗಂಭೀರ ಗಾಯ.

12:45 PM (IST) Aug 02

ಪ್ರವೀಣ್ ಕೇಸ್ ತನಿಖೆ ಪ್ರಗತಿ ಆಗಿದೆ: ಜ್ಞಾನೇಂದ್ರ

ವಿಧಾನಸೌಧದಲ್ಲಿ ಅರಗ ಜ್ಞಾನೇಂದ್ರ ಹೇಳಿಕೆ. ಪ್ರವೀಣ್ ಕೇಸ್‌ನಲ್ಲಿ ಸಾಕಷ್ಟು ಪ್ರಗತಿ ಆಗಿದೆ. ಎರಡು‌ ಮೂರು ದಿನಗಳಲ್ಲಿ ಆರೋಪಿಗಳನ್ನ ಬಂಧನ ಮಾಡ್ತೀವಿ. ಫಾಝಿಲ್ ಹತ್ಯೆ ಆರೋಪಿಗಳನ್ನೂ ಬಂಧಿಸಲಾಗಿದೆ. ಯಾವುದೇ ಕೇಸ್ ಆಗಲಿ ಯಾರನ್ನೂ ನಾವು ಬಿಡೋದಿಲ್ಲ. ಎಲ್ಲಾ ಕೇಸ್‌ನಲ್ಲೂ ಆರೋಪಿಗಳನ್ನ ಬಂಧಿಸುತ್ತೇವೆ. ಪ್ರವೀಣ್‌ನಂತೆ ಫಾಝಿಲ್‌ಗೂ ಪರಿಹಾರ ಕೊಡುವ ವಿಚಾರವಾಗಿ ಮಾತನಾಡಿದ, ಗೃಹ ಸಚಿವರು ಪರಿಹಾರ ಕೊಡಬಾರದು ಅಂತ ಎಲ್ಲೂ ಇಲ್ಲ. ನಾವು ಪರಿಹಾರ ಕೊಡೊಲ್ಲ ಅಂತನೂ ಹೇಳಿಲ್ಲ. ಇನ್ನೂ ಟೈಂ ಇದೆ. ನಾವು ಮಂಗಳೂರಿನಲ್ಲಿ ಇದ್ದಾಗ ಅ ಕೊಲೆ ಆಯ್ತು. ಈ‌ ಬಗ್ಗೆ ತನಿಖೆ ನಡೆಯುತ್ತಿದೆ. ಪರಿಹಾರ ಕೊಡೊಕೆ ಇನ್ನು ಟೈಂ ಇದೆ, ಎಂದಿದ್ದಾರೆ ಅರಗ ಜ್ಞಾನೇಂದ್ರ.

12:33 PM (IST) Aug 02

ಸುರತ್ಕಲ್ ಹತ್ಯೆ: ಪ್ರೀತಿ-ಗೀತಿ ಅಲ್ಲ, ಟಾರ್ಗೆಟ್ ಮಾಡಿಯೇ ಹತ್ಯೆ

ಪ್ರೇಮ ಪ್ರಕರಣ ಮತ್ತು ಮುಸ್ಲಿಂ ಪಂಗಡಗಳ ಬಗ್ಗೆ ಸುದ್ದಿ ಹರಡಿತ್ತು. ಆದರೆ ಇದು ಅವನ ವೈಯಕ್ತಿಕ ವಿಚಾರಕ್ಕೆ ‌ನಡೆದ ಹತ್ಯೆ ಅಲ್ಲ. ಪ್ರೇಮ ಪ್ರಕರಣ ಅಥವಾ ಒಳಪಂಗಡದ ಗಲಾಟೆಗೆ ನಡೆದ ಹತ್ಯೆ ಅಲ್ಲ. ಪ್ರಕರಣ ನಡೆದ ‌ಬಳಿಕ ಕೆಲ ರೌಡಿಶೀಟರ್‌ಗಳು ನಾವೇ ಅಂತ ಹೇಳಿಕೊಂಡು ತಿರುಗಾಡಿದ್ದಾರೆ. ಇವರ ಬಗ್ಗೆ ಮುಂದಿನ ದಿನಗಳಲ್ಲಿ ವಿಚಾರಣೆ ‌ನಡೆಸಲಾಗುವುದು. ಫಾಜಿಲ್ ಹತ್ಯೆಗೂ ಮೊದಲು ಗೆಳೆಯನ ಜೊತೆ ಶಾಪಿಂಗ್ ಮಾಡಿದ್ದಾನೆ. ಸುರತ್ಕಲ್‌ನ ಮೊಬೈಲ್ ಶಾಪ್ ಮತ್ತು ಪಕ್ಕದ ಅಂಗಡಿಗೂ ಹೋಗಿದ್ದಾನೆ. ನಮ್ಮ ತನಿಖೆಯಲ್ಲಿ ಇದು ಫಾಸಿಲ್ ಮೇಲೆ ನಡೆದ ಪ್ಲಾನ್ ಅನ್ನೋದು ಸ್ಪಷ್ಟ, ಎಂದಿದ್ದಾರೆ ಪೊಲೀಸರ್ ಕಮಿಷನರ್ ಶಶಿಕುಮಾರ್. 

12:30 PM (IST) Aug 02

Raichuru: ಮಳೆಗೆ ಕುಸಿದು ಬಿದ್ದ ಕುರಿ-ಮೇಕೆ ಶೆಡ್

ರಾಯಚೂರು: ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಮಳೆ ಹೊಡೆತಕ್ಕೆ ಕುಸಿದು ಬಿದ್ದ ಕುರಿ- ಮೇಕೆಗಳ ಶೆಡ್. 4 ಕುರಿ ಸಾವು, 8 ಕುರಿಗಳಿಗೆ ಗಂಭೀರ ಗಾಯ. ರಾಯಚೂರು ಜಿಲ್ಲೆ ‌ಲಿಂಗಸೂಗೂರು ತಾ. ಬಗಡಿ ತಾಂಡಾದಲ್ಲಿ ಘಟನೆ. ಬಗಡಿ ತಾಂಡಾದ ಲಕ್ಷ್ಮಿ ಬಾಯಿ ಎಂಬುವರಿಗೆ ಸೇರಿದ ಕುರಿಗಳು ಸಾವು. ಶೆಡ್‌ನಲ್ಲಿ ಸಿಲುಕಿ ನರಳಾಟ ನಡೆಸಿದ ಇನ್ನುಳಿದ ‌ಕುರಿಗಳ ರಕ್ಷಣೆ.

12:22 PM (IST) Aug 02

Mandya: ಬಿಡದೇ ಸುರಿದ ಮಳೆಗೆ ಬೀಡಿ ಕಾರ್ಮಿಕರ ಕಾಲೋನಿ ಜಲಾವೃತ

ಮಂಡ್ಯ: ಸೋಮವಾರ ರಾತ್ರಿ ಸುರಿದ ರಣಮಳೆಯಿಂದಾಗಿ ಜಿಲ್ಲೆಯ ವಿವಿಧೆಡೆ ಹಲವಾರು ಕೆರೆಕಟ್ಟೆಗಳು ಒಡೆದು ಹಲವು ಬಡಾವಣೆಗಳ ಕೆರೆಯಂತಾಗಿದೆ. ಮಳೆಯಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಮಂಡ್ಯ ತಾಲೂಕಿನ ಹಾಡ್ಯ ಗೋಪಾಲಪುರ ಹಳೇಬೂದನೂರು ಕೋಣನಹಳ್ಳಿ ಸೇರಿದಂತೆ ಹಲವು ಕೆರೆಗಳು ಬಿರುಮಳೆಗೆ ಒಡೆದು ಹೋಗಿವೆ. ತೆಪ್ಪದ ಮೂಲಕ ನೀರಿನಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸುವ ಕಾರ್ಯಾಚರಣೆ ನಡೆದಿದೆ. ಬೀಡಿ ಕಾರ್ಮಿಕರ ಕಾಲೋನಿ ಸಂಪೂರ್ಣ ಜಲಾವೃತಗೊಂಡಿದೆ.

12:06 PM (IST) Aug 02

Davanagere: ಹಿರೇಹಳ್ಳ ತುಂಬಿ ಹರಿದು, ದೊಡ್ಡ ಅವಾಂತರ

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಚನ್ನಗಿರಿ ಹಾಗು ಹೊನ್ನಾಳಿ ತಾಲೂಕಿನಲ್ಲಿ ಭಾರಿ ಮಳೆ. ಹಿರೇಹಳ್ಳ ಚಿಕ್ಕಹಳ್ಳ ತುಂಬಿ ಹರಿದು ದೊಡ್ಡ ಅವಾಂತರ ಸೃಷ್ಟಿಸಿದೆ. ನಲ್ಕುದುರೆ ಸರ್ಕಾರಿ ಪ್ರೌಢಶಾಲೆ ಆವರಣಕ್ಕೆ ನುಗ್ಗಿದ ನೀರು. ಚಿರಡೋಣಿ ದೊಡ್ಡಘಟ್ಟ ರಸ್ತೆ ಸಂಪರ್ಕ ಕಡಿತ. ನವಿಲೇಹಾಳ್ ನಲ್ಕುದುರೆ ರಸ್ತೆ ಸಂಪರ್ಕ ಕಡಿತ. ಚನ್ನಗಿರಿ ಹೊನ್ನಾಳಿ ತಾಲ್ಲೂಕಿನಲ್ಲಿ ಬಹುತೇಕ ಕೆರೆಕಟ್ಟೆಗಳು ಭರ್ತಿಯಾಗಿವೆ. ಸಾವಿರಾರು ಎಕರೆ ಬೆಳೆ ಮುಳುಗಡೆ. ಹಲವಡೆ ಕೊಚ್ಚಿಹೋದ ಬೆಳೆ. ಜನಜೀವನ ಅಸ್ತವ್ಯಸ್ತ.

12:04 PM (IST) Aug 02

Kolara: ಬಹುತೇಕ ಕೆರೆಗಳು ತುಂಬಿ ಕೋಡಿ

ಕೋಲಾರ: ಸತತ ನಾಲ್ಕು ರಾತ್ರಿ ಸುರಿದ ಮಳೆಯ ಪರಿಣಾಮದಿಂದ ಜಿಲ್ಲೆಯ ಬಹುತೇಕ ಕೆರೆಗಳು ತುಂಬಿ ಕೋಡಿ ಹರಿಯುತ್ತಿವೆ. ರಸ್ತೆಗಳ ಮೇಲೆ ಹರಿಯುತ್ತಿರುವ ನೀರು. ಕೋಲಾರ - ಕೋಡಿ ಕಣ್ಣೂರು ಮುಖ್ಯ ರಸ್ತೆಯ ಮೇಲೆ ಹರಿಯುತ್ತಿರುವ ನೀರು. ರಸ್ತೆಯ ಮೇಲೆ ಸಂಚರಿಸಲು ವಾಹನ ಸವಾರರು ಪರದಾಟ. ಕೋಲಾರಮ್ಮ ಕೆರೆ ತುಂಬಿರುವ ಪರಿಣಾಮ ರಸ್ತೆಯ ಮೇಲೆ ಹರಿಯುತ್ತಿರುವ ನೀರು. ಕೆ.ಸಿ ವ್ಯಾಲಿ ನೀರಿನ ಜೊತೆ ಮಳೆ ನೀರು ಸೇರಿಕೊಂಡು ಕೋಡಿ.

11:01 AM (IST) Aug 02

Bengaluru Rain: ಸಾಯಿ ಲೇ ಔಟ್ ಜಲಾವೃತ

ಸಾಯಿ ಲೇಔಟ್ ಅಲ್ಲಿ ಮುಗಿಯದ ಜನರ ನರಳಾಟ. ಕಳೆದ ರಾತ್ರಿ ಸುರಿದ ಮಳೆಗೆ ಮತ್ತೆ ಶ್ರೀ ಸಾಯಿಲೇಔಟ್ ಜಲಾವೃತ. ಹಲವು ಮನೆಗಳಿಗೆ ನುಗ್ಗಿದ ನೀರು. ಸ್ಥಳೀಯರಿಂದ ಬಿಬಿಎಂಪಿಗೆ ಹಿಡಿಶಾಪ. ಪ್ರತಿಬಾರಿ ಡ್ರೈನೇಜ್ ನೀರು ಮನೆಗೆ ನುಗ್ಗುತ್ತಿದೆ. ಯಾವ ಅಧಿಕಾರಿ, ಸಿಬ್ಬಂದಿಯೂ ಬಂದಿಲ್ಲ. ಪ್ರತಿಬಾರಿ ಡ್ರೈನೇಜ್ ನೀರನ್ನ ಹೊರ ಹಾಕಲು ದುಡ್ಡು ಕೊಡಬೇಕು. ದುಡ್ಡು ಕೊಟ್ಟು ಡ್ರೈನೇಜ್ ನೀರನ್ನ ಹೊರಹಾಕಿಸಬೇಕು. ಸ್ವಂತ ಮನೆಯಿದ್ದೂ ಬಾಡಿಗೆ ಮನೆಗಳಲ್ಲಿ ವಾಸ ಮಾಡುವಂತಾಗಿದೆ. ನಮ್ಮ ಕಣ್ಣೀರು ಶಾಸಕರು, ಅಧಿಕಾರಿಗಳಿಗೆ ಕಾಣೋಲ್ಲ ಎಂದು ಸಾಯಿ ಲೇಔಟ್ ನಿವಸಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

10:44 AM (IST) Aug 02

ಭಟ್ಕಳದಲ್ಲಿ ಗುಡ್ಡ ಕುಸಿತ: 4 ಸಾವು ಖಚಿತ ಪಡಿಸಿದ ಡಿಸಿ

ಕಾರವಾರ (ಉತ್ತರಕನ್ನಡ): ಭಾರೀ ಮಳೆಯ ಹಿನ್ನೆಲೆಯಲ್ಲಿ ಮನೆಯ ಮೇಲೆ ಗುಡ್ಡ ಕುಸಿತ. ಭಟ್ಕಳದ ಮುಟ್ಟಳ್ಳಿಯಲ್ಲಿ ಮನೆಯೊಳಗೆ ಸಿಲುಕಿಕೊಂಡಿದ್ದವ ಸಾವು- ಅಧಿಕಾರಿಗಳಿಂದ ಮಾಹಿತಿ. ಗುಡ್ಡ ಕುಸಿತವಾದ ಕಾರಣ ಮಲಗಿದ್ದವರ ಮೇಲೆ ಉರುಳಿ ಬಿದ್ದ ಮನೆ. ಮನೆಯೊಳಗೆ ಸಿಲುಕಿಬಿದ್ದಿದ್ದ ಮನೆ ಯಜಮಾನಿ ಲಕ್ಷ್ಮೀ ನಾರಾಯಣ ನಾಯ್ಕ (60),‌ ಮಗಳು ಲಕ್ಷ್ಮೀ ನಾಯ್ಕ (45), ಮಗ ಅನಂತ ನಾರಾಯಣ ನಾಯ್ಕ (38), ಹಾಡುವಳ್ಲಿ ಬಡಬಾಗಿಲಿನ ತಂಗಿಮಗ ಪ್ರವೀಣ್ ರಾಮಕೃಷ್ಣ ನಾಯ್ಕ (16) ಸಾವು. ಮೃತದೇಹಗಳನ್ನು ಹೊರಕ್ಕೆ ತೆಗೆಯಲು ಮುಂದುವರಿದ
ಕಾರ್ಯಾಚರಣೆ. ಮುಟ್ಟಳ್ಳಿಯಲ್ಲಿ ಮತ್ತಷ್ಟು ಗುಡ್ಡ ಕುಸಿತಗಳಾಗುವ ಸಾಧ್ಯತೆ ಈ ಕಾರಣಗಳಿಂದ ಸ್ಥಳೀಯ 5-6 ಕುಟುಂಬಗಳನ್ನು ಸ್ಥಳಾಂತರಿಸಲು ನಿರ್ಧಾರ. ಭಟ್ಕಳದ ಉಳಿದ ಪ್ರದೇಶಗಳಲ್ಲೂ ಅಪಾಯದಲ್ಲಿರುವ ಕುಟುಂಬಗಳನ್ನು ಸ್ಥಳಾಂತರಿಸಲು ಆದೇಶ. ಏಷಿಯಾನೆಟ್ ಸುವರ್ಣ ನ್ಯೂಸ್‌ಗೆ ಭಟ್ಕಳ ಎಸಿ ಮಮತಾ ದೇವಿ ಮಾಹಿತಿ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

10:42 AM (IST) Aug 02

ಸಿದ್ದರಾಮೋತ್ಸವದಿಂದ ಸಿದ್ದರಾಮಯ್ಯಗೆ ಒಳ್ಳೇಯದಾಗಲಿ: ಆರಗ ಜ್ಞಾನೇಂದ್ರ

ಪ್ರವೀಣ್ ಹತ್ಯೆ ಕೇಸ್‌ನಲ್ಲಿ ಇಬ್ಬರ ಬಂಧನ ಆಗಿದೆ. ಯಾರು ಕೊಲೆ ಮಾಡಿದ್ದಾರೆ ಎಂಬುವುದು ಗೊತ್ತಾಗಿದೆ. ಬಂಧನ ಆದವರು ಕೃತ್ಯದ ಹಿಂದೆ ಇದ್ದವರು. ಈಗಲೇ ನಾನು ಏನೂ ಹೇಳಲ್ಲ
ಇನ್ವೆಸ್ಟಿಗೇಶನ್ ಗೆ ತೊಂದರೆ ಆಗುತ್ತದೆ. ಅಮಾಯಕರನ್ನು ಅರೆಸ್ಟ್ ಮಾಡಲ್ಲ, ಎಂದಿದ್ದಾರೆ ಗೃಹ ಸಚಿವ ಆರಗ ಜ್ಞಾನೇಂದ್ರ. ಸಿದ್ದರಾಮೋತ್ಸವದಿಂದ ಸಿದ್ದರಾಮಯ್ಯ ಅವರಿಗೆ ಒಳ್ಳೆಯದು ಆಗಲಿ
ಅವರು ಅಧಿಕಾರದಲ್ಲಿ ಇದ್ದಾಗ ಮಾಡಬಾರದನ್ನೆಲ್ಲಾ ಮಾಡಿದ್ದಾರೆ. ಈಗ ಫೋಸ್ ಕೊಡೊಕೆ ಹೊರಟಿದ್ದಾರೆ. ಈಗ ಲಾ ಆ್ಯಂಡ್ ಆರ್ಡರ್‌ನಲ್ಲಿ ಅನುಭವಿಸ್ತಾ ಇದ್ದೇವೆ. ಅಲ್ಪಸಂಖ್ಯಾತ ಮತಾಂಧ ಶಕ್ತಿಗಳ ಮೇಲೆ ಇದ್ದ ಕೇಸ್ ನ್ನೆಲ್ಲಾ ವಿತ್ ಡ್ರಾ ಮಾಡಿ. ಮತಾಂದ ಶಕ್ತಿ ಬೆಳೆಸಿಟ್ಟಿದ್ದಾರೆ. ಇಂದು ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಅವರೇ ಟೀಕೆ ಮಾಡ್ತಾರೆ. ಇದಕ್ಕೆ ಸಿದ್ದರಾಮಯ್ಯ ಅವರೇ ಕಾರಣ. ಜನರು ಇದನ್ನು ಮರೆಯಲ್ಲ. ಸಿದ್ದರಾಮಯ್ಯ ಮೇಲೆ ಅರಗ ವಾಗ್ದಾಳಿ ನಡೆಸಿದ್ದಾರೆ. ಫಾಸಿಲ್ ಕೇಸ್‌ನಲ್ಲಿ ಇದ್ದವರ ತನಿಖೆ ನಡೆಯುತ್ತಿದೆ. ಮಸೂದ್ ಕೊಲೆ ಪ್ರಕರಣದಲ್ಲಿ ಈಗಾಗಲೇ ಬಂಧನ ಆಗಿದೆ ಎಂದಿದ್ದಾರೆ. 

10:38 AM (IST) Aug 02

Gadag: ಸುರಿಯುತ್ತಿರುವ ಮಳೆಗೆ ತಗ್ಗು ಪ್ರದೇಶಗಳು ಜಲಾವೃತ

ಗದಗ: ಜಿಲ್ಲೆಯಾದ್ಯಂತ ಮುಂದುವರಿದ ಧಾರಾಕಾರ ಮಳೆ, ತಗ್ಗು ಪ್ರದೇಶಗಳು ಜಾಲವೃತ. ಮಕ್ಕಳು ಶಾಲೆಗೆ ತಲುಪಿದ ನಂತರ ಶಾಲೆ ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಣೆ ಮಾಡಿದ ಜಿಲ್ಲಾಡಳಿತ. ಈಗಾಗಲೇ ಸುರಿವ ಮಳೆಯಲ್ಲಿ ಶಾಲೆಗೆ ತೆರಳಿದ ಮಕ್ಕಳಿಗೆ ತೀವ್ರ ತೊಂದರೆ.. ಮುಂಬರುವ ಭಾನುವಾರ ಶಾಲೆಗಳನ್ನು ನಡೆಸುವ ಸೂಚನೆಯ ಮೇರೆಗೆ ಶಾಲೆಗೆ ರಜೆ ಘೋಷಣೆ. ಗದಗ ಡಿಡಿಪಿಐ ಜಿ.ಎಂ.ಬಸಲಿಂಗಪ್ಪ ಘೋಷಣೆ.

10:22 AM (IST) Aug 02

ಅರಣ್ಯ ಇಲಾಖೆಯ ಚುರುಕು ಶ್ವಾನ ರಾಣಾ ಇನ್ನಿಲ್ಲ

ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 'ರಾಣಾ' ಎನ್ನುವ ಅತಿ ಚುರುಕು ಹಾಗೂ ಜಾಣ ಶ್ವಾನ ವಯೋಸಹಜ ಕಾರಣದಿಂದ ಇಂದು ಸಾವನ್ನಪ್ಪಿದೆ. ಅತಿ ಹೆಚ್ಚು ಹಾಗೂ ಕ್ಲಿಷ್ಟ ಪ್ರಕರಣಗಳನ್ನು ಭೇದಿಸಿದ ಹಿರಿಮೆ ಈ ರಾಣಾನದ್ದು. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ರಾಣಾ ನಿನಗೆ ನಮ್ಮೆಲ್ಲರ ಅಂತಿಮ ಸಲ್ಯೂಟ್ ಹೇಳಿದ್ದಾರೆ ಅರಣ್ಯ ಇಲಾಕೆ ಅಧಿಕಾರಿಗಳು.