BY Vijayendra: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಗೃಹಲಕ್ಷ್ಮಿ ಯೋಜನೆಯನ್ನು ಸರ್ಕಾರ ಚುನಾವಣಾ ಆಮಿಷವಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ಉಪಚುನಾವಣೆ ವೇಳೆ ಹಣ ಬಿಡುಗಡೆ ಮಾಡಿರುವುದನ್ನು 'ಚುನಾವಣೆ ಲಕ್ಷ್ಮಿ' ಎಂದು ವ್ಯಂಗ್ಯವಾಡಿದರು.

ಚಿತ್ರದುರ್ಗ (ಮೇ.7): ಗೃಹಲಕ್ಷ್ಮಿ ಯೋಜನೆ ಚುನಾವಣೆ ಲಕ್ಷ್ಮಿಯಾಗಿ ರೂಪಾಂತರಗೊಂಡಿದ್ದು, ಮುಂದಿನ ಕಂತು ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ವೇಳೆಗೆ ಬಿಡುಗಡೆ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದರು.

Add Asianetnews Kannada as a Preferred SourcegooglePreferred

ಬುಧವಾರ ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗ ಮಾತನಾಡಿದ ಅವರು, ಪ್ರತಿ ತಿಂಗಳು ನೀಡಬೇಕಾದ ಗೃಹಲಕ್ಷ್ಮಿ ಹಣವನ್ನು ಎರಡು ತಿಂಗಳು ತಡೆ ಹಿಡಿದು ಉಪ ಚುನಾವಣೆ ವೇಳೆ ಬಿಡುಗಡೆ ಮಾಡಿದ್ದಾರೆ. ಜನರಿಗೆ ಆಮಿಷವೊಡ್ಡುವ ರೀತಿಯಲ್ಲಿ ಯೋಜನೆ ಬಳಸಿಕೊಳ್ಳುತ್ತಿದ್ದಾರೆ. ಗ್ಯಾರಂಟಿಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಅಷ್ಟೊಂದು ವಿಶ್ವಾಸ ಇದ್ದರೆ ಬಾಗಲಕೋಟೆ ಉಪ ಚುನಾವಣೆಗೆ 15 ದಿನ ಮುಂಚೆ ಹೋಗಿ ಏಕೆ ಕೂರಬೇಕಾಗಿತ್ತು ಎಂದು ಪ್ರಶ್ನಿಸಿದರು.

ಉಪ ಚುನಾವಣೆಯ ಸೋಲಿನಿಂದ ಬಿಜೆಪಿ ಹತಾಶರಾಗುವ ಪ್ರಶ್ನೆ ಎದುರಾಗದು. ಪ್ರಧಾನಿ ಮೋದಿ ಅವರಂಥ ದಿಟ್ಟ ನಾಯಕತ್ವ ದೇಶಕ್ಕೆ ಸಿಕ್ಕಿದೆ. ಉಪ ಚುನಾವಣೆ ಸೋಲಿನ ಸಂಬಂಧ ತಲೆಕೆಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಪ್ರಶ್ನೆಗೆ ಉತ್ತರ ನೀಡಿದರು.

ರಾಜ್ಯ ಹೈಕೋರ್ಟಿನ ಆದೇಶದಂತೆ ಶೃಂಗೇರಿಯಲ್ಲಿ ಮರು ಮತ ಎಣಿಕೆ ನಡೆದು ಬಿಜೆಪಿ ಅಭ್ಯರ್ಥಿ ಜೀವರಾಜ್ ಗೆದ್ದಿದ್ದಾರೆ. ಮತಗಳ್ಳತನದ ವಿರುದ್ಧ ದೇಶವ್ಯಾಪಿ ಪ್ರಚಾರ ಮಾಡಿದ್ದ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಮಾನ ಮರ್ಯಾದೆ ಇದ್ದರೆ ಸಭಾಧ್ಯಕ್ಷರು ಜೀವರಾಜ್ ಅವರಿಗೆ ತಕ್ಷಣ ಪ್ರಮಾಣವಚನ ಬೋಧಿಸಬೇಕು. ಸ್ಪೀಕರ್ ಅವರು ರಾಜಕಾರಣ, ರಾಜಕಾರಣಿಗಳ ಒತ್ತಡಕ್ಕೆ ಮಣಿಯದೇ ನ್ಯಾಯಯುತವಾಗಿ ನಡೆದುಕೊಳ್ಳಲಿ. ಪರಾಜಿತ ಅಭ್ಯರ್ಥಿ ರಾಜೇಗೌಡರು ಹೈಕೋರ್ಟಿಗೆ ಹೋಗಲು ಸಮಯಾವಕಾಶ ಕೊಡಲು ಕಟ್ಟುಕಥೆ ಹೇಳುತ್ತಿದ್ದಾರೆ ಎಂದು ಆಕ್ಷೇಪಿಸಿದರು.