*  ನ.8ರವರೆಗೆ ಎನ್‌ಐಎ ವಶಕ್ಕೆ ದಂತ ವೈದ್ಯ ಶೌಕೀರ್‌*  ಐಸಿಸ್‌ ನೇಮಕ, ಹಣ ಸಂಗ್ರಹದಲ್ಲಿ ಕಿಂಗ್‌ಪಿನ್‌: ಎನ್‌ಐಎ*  ಐಸಿಸ್‌ ಸಂಘಟನೆಯಲ್ಲಿ ತೌಕೀರ್‌ ಸಕ್ರಿಯನಾಗಿದ್ದ ಬಗ್ಗೆ ಪುರಾವೆ ಪತ್ತೆ 

ಬೆಂಗಳೂರು(ಅ.27):  ಎರಡು ದಿನಗಳ ಹಿಂದೆ ದೆಹಲಿಯಲ್ಲಿ ಸಿಕ್ಕಿಬಿದ್ದ ಐಸಿಸ್‌ ಶಂಕಿತ ಉಗ್ರ ದಂತ ವೈದ್ಯ ಡಾ.ಮೊಹಮ್ಮದ್‌ ತೌಕೀರ್‌ನನ್ನು(Mohammed Tauqir) ಬೆಂಗಳೂರಿಗೆ ಕರೆತಂದು ನ್ಯಾಯಾಲಯದ ಮುಂದೆ ಮಂಗಳವಾರ ಹಾಜರುಪಡಿಸಿದ ರಾಷ್ಟ್ರೀಯ ತನಿಖಾ ದಳ (NIA), ಪ್ರಕರಣದ ಹೆಚ್ಚಿನ ತನಿಖೆ ಸಲುವಾಗಿ ನ.8ರ ವರೆಗೆ ವಶಕ್ಕೆ ಪಡೆದಿದೆ.

Add Asianetnews Kannada as a Preferred SourcegooglePreferred

ರಾಜ್ಯದಲ್ಲಿ(Karnataka) ಅತ್ಯುಗ್ರ ಸಂಘಟನೆ ಇಸ್ಲಾಮಿಕ್‌ ಸ್ಟೇಟ್ಸ್‌ಗೆ(ISIS) ನೇಮಕಾತಿ ಹಾಗೂ ಹಣ ಸಂಗ್ರಹ ಆರೋಪದ ಮೇರೆಗೆ ದೆಹಲಿಯಲ್ಲಿ(Delhi) ಬೆಂಗಳೂರಿನ(Bengaluru) ತಿಲಕನಗರ ಸಮೀಪದ ಬಿಸ್ಮಿಲ್ಲಾ ನಗರ ಮೂಲದವನಾದ ತೌಕೀರ್‌ನನ್ನು ಎನ್‌ಐಎ ತಂಡ ಬಂಧಿಸಿತ್ತು.

ವಿಚಾರಣೆಗಾಗಿ ಶಂಕಿತ ಐಸಿಸ್‌ ಉಗ್ರರ ದೆಹಲಿಗೆ ಕರೆದೊಯ್ದ NIA

‘ಐಸಿಸ್‌ ಸಂಘಟನೆಯಲ್ಲಿ ತೌಕೀರ್‌ ಸಕ್ರಿಯನಾಗಿದ್ದ ಬಗ್ಗೆ ತನಿಖೆ(Investigation) ವೇಳೆ ಪುರಾವೆಗಳು ಪತ್ತೆಯಾಗಿವೆ. ಹೀಗಾಗಿ ಆತನನ್ನು ಹೆಚ್ಚಿನ ತನಿಖೆ ಸಲುವಾಗಿ ತಮ್ಮ ವಶಕ್ಕೆ ನೀಡಬೇಕು’ ಎಂದು ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ(Court) ತನಿಖಾಧಿಕಾರಿಗಳು ಮನವಿ ಸಲ್ಲಿಸಿದರು. ಈ ಮನವಿ ಪುರಸ್ಕರಿಸಿದ ನ್ಯಾಯಾಲಯವು, ನ.8ರ ವರೆಗೆ ಆರೋಪಿಗೆ ಎನ್‌ಐಎ ಸುಪರ್ದಿಗೆ ಒಪ್ಪಿಸಿ ಆದೇಶಿಸಿತು. ಎನ್‌ಐಎ ಪರವಾಗಿ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್‌ ವಾದ ಮಂಡಿಸಿದರು.

‘ಐಸಿಸ್‌ ಸಂಘಟನೆಗೆ ಹಣ ಸಂಗ್ರಹ ಹಾಗೂ ಹೊಸ ಸದಸ್ಯರ ನೇಮಕಾತಿ ಜಾಲದ ತೌಕೀರ್‌ ಕಿಂಗ್‌ಪಿನ್‌ ಆಗಿದ್ದಾನೆ. ಇಸ್ಲಾಂ ಯುವಕರಿಗೆ(Youths) ಮೂಲಭೂತವಾದಿ(Fundamentalist) ಬೋಧಿಸಿ ಐಸಿಸ್‌ ಸಂಘಟನೆಗೆ ಸೇರಲು ಅವರಿಗೆ ತೌಕೀರ್‌ ಪ್ರಚೋದಿಸುತ್ತಿದ್ದ. ಅಲ್ಲದೆ, ತನ್ನ ಪ್ರಭಾವಕ್ಕೊಳಗಾದವರಿಗೆ ಟರ್ಕಿ ಮೂಲಕ ಸಿರಿಯಾಗೆ ಕಳುಹಿಸಿ ಐಸಿಸ್‌ಗೆ ಆತ ಸೇರಿಸಿದ್ದ. ಇನ್ನು ಐಸಿಸ್‌ ನೇಮಕಾತಿಗೆ ಅಗತ್ಯವಾದ ಹಣ ದೇಣಿಗೆ ಸಂಗ್ರಹದಲ್ಲೂ ತೌಕೀರ್‌ ಬಹುಮುಖ್ಯವಾದ ಪಾತ್ರವಹಿಸಿದ್ದಾನೆ’ ಎಂದು ನ್ಯಾಯಾಲಯಕ್ಕೆ ಎನ್‌ಐಎ ತಿಳಿಸಿದೆ.