World Cancer Day 2026: ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಎಫ್ಪಿಎಐ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ, ಭಾರತದಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ಪ್ರಕರಣಗಳ ಬಗ್ಗೆ ಚರ್ಚಿಸಲಾಯಿತು. ವಿಶೇಷವಾಗಿ ಮಹಿಳೆಯರಲ್ಲಿ ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಹೆಚ್ಚಾಗುತ್ತಿದೆ ಎಂದು ತಜ್ಞರು ಮಾಹಿತಿ
ಧಾರವಾಡ (ಫೆ.10): ಭಾರತದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು ಒಂದೇ ವರ್ಷದಲ್ಲಿ 14.1 ಲಕ್ಷ ಕ್ಯಾನ್ಸರ್ನ ಹೊಸ ಪ್ರಕರಣ ಪೆತ್ತೆಯಾಗುವುದು ಮಾತ್ರವಲ್ಲದೇ, ಒಂಭತ್ತು ಲಕ್ಷ ಸಾವುಗಳು ಈ ರೋಗದಿಂದ ಸಂಭವಿಸಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ ಎಂದು ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ (ಎಫ್ಪಿಎಐ) ವೈದ್ಯಾಧಿಕಾರಿ ಡಾ. ನರ್ಸರಿನ್ ಹೊನ್ನಳ್ಳಿ ಹೇಳಿದರು.
ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಎಫ್ಪಿಎಐ ಸಿದ್ದರಾಮೇಶ್ವರ ಬಿಇಡಿ ಕಾಲೇಜಿನಲ್ಲಿ ಆಯೋಜಿಸಿದ್ದ ಜನಜಾಗೃತಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಮೊದಲ ಮತ್ತು ಎರಡನೇಯ ಸ್ಥಾನದಲ್ಲಿದ್ದು ಹೆಚ್ಚಾಗಿ 15-44 ವರ್ಷದ ಮಹಿಳೆಯರು ಮರಣ ಹೊಂದುತ್ತಿದ್ದಾರೆ. ಈ ಕ್ಯಾನ್ಸರ್ಗೆ ಅತೀ ಹೆಚ್ಚು ಜನರು ತುತ್ತಾಗುತ್ತಿದ್ದು ಇದರ ಬಗ್ಗೆ ತಿಳಿವಳಿಕೆ ಕಡಿಮೆಯಿದೆ ಎಂದರು.
ಶೇ. 95ರಷ್ಟು ಈ ಕ್ಯಾನ್ಸರ್ ಹ್ಯೂಮನ್ ಪೆಪಿಲೋಮಾ ವೈರಸ್ನಿಂದ ಹರಡುತ್ತದೆ. ಈ ವೈರಸ್ನ್ನು ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಲಸಿಕೆಯಿಂದ ತಡೆಗಟ್ಟಲು ಸಾಧ್ಯ. ಕಿಶೋರಿಯರಿಗೆ ಲಸಿಕೆ ಮತ್ತು ಮಹಿಳೆಯರಿಗೆ ತಪಾಸಣೆ ಮೂಲಕ ಈ ರೋಗವನ್ನು ತಡೆಯಬಹುದು ಎಂದ ಅವರು, ಎಫ್ಪಿಎಐ ಇದುವರಗೆ 2500ಕ್ಕೂ ಹೆಚ್ಚು ಮಕ್ಕಳಿಗೆ ಅನೇಕ ದಾನಿಗಳ ಸಹಾಯದಿಂದ ಉಚಿತವಾಗಿ ಲಸಿಕೆ ನೀಡಲಾಗಿದೆ ಮತ್ತು 2 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ತಪಾಸಣೆ ಮಾಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮ ಅಧಿಕಾರಿ ಎನ್.ಎಫ್. ಮಡಿವಾಳರ ಮಾತನಾಡಿ, ಈ ದಿನವು ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಜಾಗತಿಕ ಆರೋಗ್ಯ ರಕ್ಷಣಾ ಕಾರ್ಯಕ್ರಮವಾಗಿದೆ. ಕ್ಯಾನ್ಸರ್ ಪತ್ತೆ, ಚಿಕಿತ್ಸೆ ಮತ್ತು ತಡೆಗಟ್ಟುವ ಜಾಗೃತಿ ಮೂಡಿಸುವ ಉದ್ದೇಶವಿದೆ. ಪ್ರತಿ ವರ್ಷ ಎಫ್ಪಿಎಐ 10 ಸಾವಿರ ಮಕ್ಕಳಲ್ಲಿ ತಂಬಾಕು, ಗುಟಕಾ, ಧೂಮಪಾನ ಮತ್ತು ಇತರೆ ದುಷ್ಚಟಗಳ ಪರಿಣಾಮಗಳ ಕುರಿತು ಶಾಲೆ ಮತ್ತು ಕಾಲೇಜಗಳಲ್ಲಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಗಿರಿಜಾ ಕುಮಾರಸ್ವಾಮಿ, ಭವಿಷ್ಯದಲ್ಲಿ ನೀವು ಶಿಕ್ಷಕರಾಗುವರಿದ್ದು, ಸಾವಿರಾರೂ ಮಕ್ಕಳ ಜೀವನ ರೂಪಿಸಲಿದ್ದೀರಿ. ಹೀಗಾಗಿ ಕ್ಯಾನ್ಸರ್ ಕುರಿತಾದ ಮಾಹಿತಿ ಪಡೆದು ಎಲ್ಲರೂ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.
ಜಯಶೀಲಾ ಕೆ.ಎಂ., ಡಿ.ಎಂ. ಪಾಟೀಲ, ಕುಮಾರಸ್ವಾಮಿ ಹಿರೇಮಠ ಹಾಗೂ 200ಕ್ಕೆ ಹೆಚ್ಚು ಬಿ.ಎಡ್ ಪ್ರಶಿಕ್ಷಾನಾರ್ಥಿಗಳಿದ್ದರು.



