ಫೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀಗಳ ಬಂಧನದ ನಡುವೆಯೂ, ಮುರುಘಾ ಮಠದಲ್ಲಿ ನಡೆಯಲಿರುವ ಸಾಮೂಹಿಕ ವಿವಾಹ ಕಾರ್ಯಕ್ರಮ ಎಂದಿನಂತೆ ನಡೆಯಲಿದೆ ಎಂದು ಮಠ ತಿಳಿಸಿದೆ. ಸೋಮವಾರಂದು ಈ ತಿಂಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ. 

ಚಿತ್ರದುರ್ಗ (ಸೆ.4): ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಮುರುಘಾ ಶ್ರೀಗಳು ಪೊಲೀಸ್‌ ಕಸ್ಟಡಿಯಲ್ಲಿದ್ದರೂ, ಮಠದಲ್ಲಿ ಎಂದಿನಿಂತೆ ಸೇವಾ ಕಾರ್ಯಕ್ರಗಳು, ದಿನನಿತ್ಯದ ಕಾರ್ಯಕ್ರಮಗಳು ನಡೆಯುತ್ತಿವೆ. ಸೋಮವಾರ ಎಂದಿನಂತೆ ಈ ತಿಂಗಳ ಸಾಮೂಹಿಕ ವಿವಾಹ ಕಾರ್ಯಕ್ರಮವೂ ನಡೆಯಲಿದೆ ಎಂದು ಮಠ ಮಾಹಿತಿ ನೀಡಿದೆ. ಮುರುಘಾ ಮಠದಲ್ಲಿ ಪ್ರತಿ ತಿಂಗಳ 5ನೇ ತಾರೀಖಿನಂದು ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯತ್ತದೆ. ಮುರುಘಾ ಮಠದ ಅನುಭವ ಮಂಟಪದಲ್ಲಿ ಈ ಕಾರ್ಯಕ್ರಮ ಆಯೋಜನೆ ಆಗುತ್ತದೆ. ಈ ಬಾರಿ ಇದನ್ನು ನಡೆಸಿಕೊಡಲು ಮುರುಘಾ ಶ್ರೀಗಳಿಲ್ಲ. 32ನೇ ವರ್ಷದ 9ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಹಾಗೂ ಶಿಕ್ಷಕರ ದಿನಾಚರಣೆ ಸೋಮವಾರ ನಡೆಯಲಿದ್ದು, ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮಿಗಳು ಇದರ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಮುರುಘಾ ಶ್ರೀಗಳ ಅನುಪಸ್ಥಿತಿಯಲ್ಲಿ ಮಠದ ಉಸ್ತುವಾರಿಯನ್ನು ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ವಹಿಸಿಕೊಂಡಿದ್ದಾರೆ. ಅವರ ನೇತೃತ್ವದಲ್ಲಿಯೇ ಈ ಕಾರ್ಯಕ್ರಮ ನಡೆಯಲಿದೆ ಎಂದು ಮಠ ತನ್ನ ಪ್ರಕಟಣೆ ಹಾಗೂ ಆಹ್ವಾನ ಪತ್ರಿಕೆಯಲ್ಲೂ ತಿಳಿಸಿದೆ.

Add Asianetnews Kannada as a Preferred SourcegooglePreferred

ಮೊನ್ನೆಯಿಂದ 8 ಜೋಡಿಗಳು ಮದುವೆಗೆ ನೋಂದಣಿ ಮಾಡಿಸಿಕೊಂಡಿದ್ದವು. ಸದ್ಯ 8ರ ಪೈಕಿ ಒಂದು ಜೋಡಿ ಮಾತ್ರ ಕೌಟುಂಬಿಕ ಸಮಸ್ಯೆಯಿಂದ ಸಾಮೂಹಿಕ ಮದುವೆ ಕಾರ್ಯಕ್ರಮದಿಂದ ಹಿಂದೆ ಸರಿದಿದೆ. ಇದರಿಂದಾಗಿ ಸೋಮವಾರ ಮುರುಘಾ ಮಠದಲ್ಲಿ 7 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಲಿದೆ. ಇನ್ನು ಕೊನೇ ಕ್ಷಣದಲ್ಲಿ ಸಾಮೂಹಿಕ ವಿವಾಹದ ಆಹ್ವಾನ ಪತ್ರಿಕೆಯನ್ನು ಪ್ರಿಂಟ್‌ ಮಾಡಿಸಿದ್ದಾರೆ ಎಂದು ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ಮುರುಘಾ ಮಠದ ಮೂಲಗಳಿಂದ ಮಾಹಿತಿ ಸಿಕ್ಕಿವೆ.

Murugha Math incident: ಮಠ-ಮಾನ್ಯಗಳು ಮೌಲ್ಯ ಕಳೆದುಕೊಳ್ಳುತ್ತಿವೆ - ಸಾಹಿತಿ ಕು.ವೀರಭದ್ರಪ್ಪ

ಸಾಮೂಹಿಕ ಕಲ್ಯಾಣ ಮಹೋತ್ಸವ ಕಾರ್ಯಕ್ರಮಕ್ಕೆ ಗುರುಕಲ್ ಮಠದ ಶಾಂತವೀರ ಗುರು ಮುರುಘಾ ರಾಜೇಂದ್ರ ಸ್ವಾಮೀಜಿ ಗೌರವ ಉಪಸ್ಥಿತಿ ಇರಲಿದೆ. ಮುಖ್ಯ ಅತಿಥಿಗಳಾಗಿ ಸಮುದಾಯದ ಮಲ್ಲಿಕಾರ್ಜುನ ಸ್ವಾಮಿ, ಷಣ್ಮುಖಪ್ಪ ಇರಲಿದ್ದಾರೆ. ಬೆಳಗ್ಗೆ 10.30ಕ್ಕೆ ಅನುಭವ ಮಂಟಪದಲ್ಲಿ ಈ ಕಾರ್ಯಕ್ರಮ ನೆರವೇರಲಿದೆ.

Murugha Mutt 2ನೇ ದಿನವೂ ಆರೋಗ್ಯದಲ್ಲಿ ಏರುಪೇರು, ನಾಳೆ ಮಠದಲ್ಲಿ ಸ್ಥಳ ಮಹಜರು!

ಏನಿದು ಪ್ರಕರಣ: ಚಿತ್ರದುರ್ಗದ (Chitradurga) ಮುರುಘಾ ಮಠದ (Murugha Mutt) ಆಡಳಿತದಲ್ಲಿರುವ ವಿದ್ಯಾರ್ಥಿ ನಿಲಯದಲ್ಲಿರುವ ಹಲವು ಅಪ್ರಾಪ್ತ ಬಾಲಕಿಯರಿಗೆ ಸ್ವಾಮೀಜಿಗಳಾದ ಮುರುಘಾ ಶ್ರೀ ಲೈಂಗಿಕವಾಗಿ ದೌರ್ಜನ್ಯ ಮಾಡಿದ್ದರು ಎಂದು ಆರೋಪಿಸಿ, ಇಬ್ಬರು ವಿದ್ಯಾರ್ಥಿನಿಯರು ಮೈಸೂರಿನಲ್ಲಿದ್ದ ಒಡನಾಡಿ ಸೇವಾ ಸಂಸ್ಥೆಯ ಸಹಾಯ ಪಡೆದು ದೂರು ನೀಡಿದ್ದರು. ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ವಿದ್ಯಾರ್ಥಿ ನಿಲಯದಲ್ಲಿರುವ (Student Hostel) ಹೆಣ್ಣು ಮಕ್ಕಳನ್ನು (Girls) ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಸ್ವಾಮೀಜಿಯವರಿಗೆ ಹಣ್ಣು ತೆಗೆದುಕೊಂಡು ಹೋಗುವಂತೆ ಮಹಿಳಾ ವಾರ್ಡನ್‌ (Women Warden) ಅವರೇ ನಮ್ಮನ್ನು ಅವರ ಕೋಣೆಗೆ ಕಳುಹಿಸುತ್ತಿದ್ದರು. ಅವರ ಕೋಣೆಗೆ ಹೋದರೆ, ಅಲ್ಲಿ ನಮಗೆ ಮತ್ತು ಬರುವಂತೆ ಮಾಡಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು ಎಂದು ಮೈಸೂರಿನ ನಜರಾಬಾದ್‌ ಪೊಲೀಸ್‌ ಠಾಣೆಯಲ್ಲಿ ಮಠದ ಇಬ್ಬರು ವಿದ್ಯಾರ್ಥಿನಿಯರು ದೂರು ನೀಡಿದ್ದರು. ಇದಕ್ಕಾಗಿ ಒಡನಾಡಿ ಸಂಸ್ಥೆಯ ಸಹಾಯ ತೆಗೆದುಕೊಂಡಿದ್ದರು. ಇದರ ಬೆನ್ನಲ್ಲಿಯೇ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಆದರೆ, ಪ್ರಕರಣ ರಾಖಲಾಗಿ ಹಲವು ದಿನಗಳಾದರೂ ಪೊಲೀಸರು ಸ್ವಾಮೀಜಿಯವರನ್ನು ಬಂಧನ ಮಾಡಿರಲಿಲ್ಲ. ಅದಾದ ನಂತರ ದೊಡ್ಡ ಮಟ್ಟದ ಪ್ರತಿಭಟನೆಗಳು ರಾಜ್ಯಾದ್ಯಂತ ನಡೆದಿದ್ದರು. ಇದರಿಂದಾಗಿ ಗುರುವಾರ ತಡರಾತ್ರಿ ಮುರುಘಾ ಮಠದ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದರು. ಆದರೆ, ಶುಕ್ರವಾರ ಬೆಳಗ್ಗೆಯ ವೇಳೆಗೆ ಜೈಲಿನಲ್ಲೇ ಕುಸಿದುಬಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.