ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳ ವಿರುದ್ಧ ಘೋಷಿತ ಅಪರಾಧಿಗಳು ಎಂದು ನಗರದ ಸಿಟಿ ಸಿವಿಲ್‌ ನ್ಯಾಯಾಲಯ ಆದೇಶ ಹೊರಡಿಸಿದೆ.

ಬೆಂಗಳೂರು (ಏ.20): ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳ ವಿರುದ್ಧ ಘೋಷಿತ ಅಪರಾಧಿಗಳು ಎಂದು ನಗರದ ಸಿಟಿ ಸಿವಿಲ್‌ ನ್ಯಾಯಾಲಯ ಆದೇಶ ಹೊರಡಿಸಿದೆ.
ಪೀಣ್ಯ ಕೈಗಾರಿಕಾ ಟೌನ್‌ ನಿವಾಸಿ ವಿ.ಸುಕುಮಾರ್ ಹಾಗೂ ಕಾಕ್ಸ್‌ಟೌನ್‌ನ ರಾಜ್ ಕುಮಾರ್ ಕ್ರಿಶ್ಚಿಯನ್ ಅವರು ನಾಪತ್ತೆಯಾಗಿದ್ದು, ಈ ಇಬ್ಬರ ಪತ್ತೆಗೆ ರಾಜ್ಯ-ಹೊರ ರಾಜ್ಯಗಳಲ್ಲಿ ಹುಡುಕಾಟ ನಡೆಸಲಾಗಿದೆ. ಆದರೂ ಆರೋಪಿಗಳು ಕೈಗೆ ಸಿಗದೆ ತಲೆಮರೆಸಿಕೊಂಡಿದ್ದಾರೆ. ಹೀಗಾಗಿ ಅವರ ವಿರುದ್ಧ ನಗರದ 23ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಪ್ರೊಕ್ಲ್ಮೇಷನ್‌ (ಘೋಷಿತ ಅಪರಾಧಿಗಳು) ಹೊರಡಿಸಿದೆ ಎಂದು ಎಸ್‌ಐಟಿ ತಿಳಿಸಿದೆ.

ಚಾಮರಾಜಪೇಟೆಯ ಮೇ.ನಿವ್ಯಾ ಟ್ರೇಡರ್ಸ್‌ ಕಂಪನಿಯನ್ನು ಸುಕುಮಾರ್‌ ಹೋಮ್‌ ಹಾಗೂ ಸಂಜಯನಗರದಲ್ಲಿ ಮೆ.ಪ್ರೋಗೆಸ್ಟಿವ್‌ ಮೈನ್ಸ್‌ ಆ್ಯಂಡ್‌ ಮಿನರಲ್ಸ್ ಕಂಪನಿಯನ್ನು ರಾಜ್‌ಕುಮಾರ್‌ ಕ್ರಿಶ್ಟಿಯನ್ ನಡೆಸುತ್ತಿದ್ದರು. ಈ ಕಂಪನಿಗಳ ವಿರುದ್ಧ ಅಕ್ರಮ ಗಣಿಗಾರಿಕೆ ಪ್ರಕರಣಗಳು ದಾಖಲಾಗಿದ್ದವು. ಈ ಬಗ್ಗೆ ತನಿಖೆ ನಡೆಸಿ ಕೋರ್ಟ್‌ಗೆ ಲೋಕಾಯುಕ್ತ ಎಸ್‌ಐಟಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಆದರೆ ವಿಚಾರಣೆಗೆ ಹಾಜರಾಗದೆ ಇವರಿಬ್ಬರು ತಲೆಮರಿಸಿಕೊಂಡಿದ್ದಾರೆ.
ಮಾಹಿತಿ ನೀಡಿ-ಎಸ್‌ಐಟಿ:

ಇದನ್ನೂ ಓದಿ: 10 ವರ್ಷ ಕೂಲಿ ಮಾಡಿದ್ರೆ ಸೇವೆ ಕಾಯಂಗೆ ಅರ್ಹ: ಹೈಕೋರ್ಟ್

ಆರೋಪಿಗಳ ಕುರಿತು ಮಾಹಿತಿ ನೀಡುವಂತೆ ಎಸ್‌ಐಟಿ ಮನವಿ ಮಾಡಿದೆ. ವಿಳಾಸ-ವಿಶೇಷ ತನಿಖಾ ತಂಡ, ಕರ್ನಾಟಕ ಲೋಕಾಯುಕ್ತ, ಕೃಷಿ ತಂತ್ರಜ್ಞಾನ ಮಾಹಿತಿ ಕಟ್ಟಡ, ಕೃಷಿ ವಿಶ್ವವಿದ್ಯಾನಿಲಯ ಆವರಣ, ಹೆಬ್ಬಾಳ, ಬೆಂಗಳೂರು-24. ಮೊ.9449840251, 9448023018 ಹಾಗೂ ದೂ.080-22942702, ಇ.ಮೇಲ್‌- sitsp2@karnataka.gov.in.