ಅಥಣಿಯಲ್ಲಿ ನಡೆದ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, 2028ರಲ್ಲಿ ತಾವೇ ಮುಖ್ಯಮಂತ್ರಿಯಾಗುವುದಾಗಿ ಭವಿಷ್ಯ ನುಡಿದಿದ್ದಾರೆ. ಇದೇ ವೇಳೆ ಸಚಿವ ಸಂತೋಷ್ ಲಾಡ್ ಅವರಿಗೆ ಸವಾಲು ಹಾಕಿದರು.

ಬೆಳಗಾವಿ / ಅಥಣಿ (ಡಿ.14): ನಾನು ಉತ್ತರ ಕರ್ನಾಟಕ ಬಗ್ಗೆ ಮಾತಾಡುವಾಗ ಅಲ್ಲಿ ಯಾವನೋ ಅಡ್ಡ ಬರ್ತಾನೆ. ನಮ್ಮ ಸಮಸ್ಯೆ ಅವನಿಗೇನು ಗೊತ್ತು? ಸುಮ್ಮನೆ ಅಡ್ಡ ಬರ್ತಾರೆ ನನ್ನ ಮಕ್ಕಳು ಎಂದು ಶಾಸಕ ಶಿವಲಿಂಗೇಗೌಡರ ಹೆಸರನ್ನು ಪ್ರಸ್ತಾಪಿಸದೆ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.

Add Asianetnews Kannada as a Preferred SourcegooglePreferred

ಅಥಣಿಯಲ್ಲಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್ ಅವರು,ನಾನು ಯಲ್ಲಮ್ಮನ ಗುಡ್ಡದಲ್ಲಿ 'ಮುಲ್ಲಾನ ಕೆಲಸ ಏನು' ಅಂದೆ. ನಾನು ಇಂಥದಕ್ಕೆಲ್ಲ ಹೆದರೋದಿಲ್ಲ. ಹತ್ತು ಸಾರಿ ಉಚ್ಚಾಟನೆ ಮಾಡಿ ಸಂತೋಷ್ ಲಾಡ್ ಅವರೇ. ಹತ್ತು ಸಾರಿ ಉಚ್ಚಾಟನೆ ಮಾಡಿದರೂ ನಾವು ಅಂಜೋ ಮಕ್ಕಳಲ್ಲ. ನೀವು ಉಚ್ಚಾಟನೆ ಮಾಡಿದರೆ, ಜೆಸಿಬಿ ತರುತ್ತೇವೆ ಎಂದು ಸವಾಲೆಸೆದರು.

2028 ಕ್ಕೆ ನಾನೇ ಸಿಎಂ: ಯತ್ನಾಳ್

ರಾಜ್ಯ ರಾಜಕಾರಣದ ಕುರಿತು ಪ್ರಮುಖ ಭವಿಷ್ಯ ನುಡಿದ ಯತ್ನಾಳ್, 2028 ರಲ್ಲಿ ತಾವೇ ಮುಖ್ಯಮಂತ್ರಿಯಾಗುವ ವಿಶ್ವಾಸ ವ್ಯಕ್ತಪಡಿಸಿದರು. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ವಿಧಾನವನ್ನು ಸ್ವತಃ ವಿವರಿಸಿದ ಯತ್ನಾಳ್, '2028 ರಲ್ಲಿ ಓಟಿಂಗ್ ನನಗೆ ಆಗುತ್ತದೆ. ನಾನೇ ಸಿಎಂ ಆಗುತ್ತೇನೆ. ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ದಿನ 11 ಜೆಸಿಬಿಗಳಿಗೆ ಪೂಜೆ ಮಾಡುತ್ತೇನೆ. ಓಂ ಶ್ರೀ ಗುರು ಬಸವ ಲಿಂಗಾಯ ನಮಃ ಎಂದು ಕೊಠಡಿ ಒಳಗೆ ಹೋಗುತ್ತೇನೆ. ನಾನು ಸಿಎಂ ಆದರೆ ಗಣಪತಿ ಮೇಲೆ ಕಲ್ಲು ತೂರಿದರೆ ಢಂ... ಶಿವಾಜಿ ಮಹಾರಾಜರ ಮೆರವಣಿಗೆ ಮೇಲೆ ಕಲ್ಲು ಒಗೆದರೆ ಢಂ... ರಾಮನ ಬಗ್ಗೆ ಕೊಂಯ್ಕ್ ಅಂದರೆ ಢಂ...' ಎಂದು ತಮ್ಮ ಆಕ್ರಮಣಕಾರಿ ಧೋರಣೆ ಸಮರ್ಥಿಸಿಕೊಂಡರು. ಹಿಂದೂ ಯುವಕರು ಆಲ್ಕೋಹಾಲ್ ಬಿಟ್ಟು ಜಿಮ್‌ಗೆ ಹೋಗಿ ದೇಹ ಬೆಳೆಸಬೇಕು 'ಬಕ್ ಎಂದು ಎದೆಗೇ ಒದೆಯಬೇಕು' ಅದು ನಿಜವಾದ ಗಂಡಸುತನ, ಫೇಸ್‌ಬುಕ್‌ ಸೋಷಿಯಲ್‌ನಲ್ಲಿ ಬರೆದುಕೊಳ್ಳುವುದಲ್ಲ ಎಂದರು.

ಲಾಡ್‌ಗೆ ಸವಾಲು: ಉರ್ದು ಬೋರ್ಡ್ ತೆಗೆಸಿ

ಮರಾಠಾ ನಿಗಮದ ಕುರಿತು ಸದನದಲ್ಲಿ ಕಾಲಿಂಗ್ ಅಟೆನ್ಸನ್ ಹಾಕಿದ್ದನ್ನು ಪ್ರಸ್ತಾಪಿಸಿದ ಯತ್ನಾಳ್, ಸಚಿವ ಸಂತೋಷ್ ಲಾಡ್ ಅವರಿಗೆ ನೇರ ಸವಾಲೆಸೆದರು. ಮರಾಠಿ ಭಾಷೆ ವಿರೋಧ ಮಾಡುತ್ತೀರಿ, ಏನು ಉರ್ದು ಭಾಷೆ ಬಗ್ಗೆ ಹಲ್ಲು ಕಿರಿತೀರಿ? ಉರ್ದು ಭಾಷೆ ಎಲ್ಲಿಯದು? ಮರಾಠಿ ಭಾಷೆ ವಿರೋಧಿಸುವವರು ದಮ್ಮು ತಾಕತ್ತು ಇದ್ರೆ ಉರ್ದು ಭಾಷೆ ಬೋರ್ಡ್ ತೆಗೆಸಿರಿ. ಇದೆಲ್ಲಾ ನಿಮಗಾಗಲ್ಲರಿ ಲಾಡ್ ಅವರೇ ಎಂದು ಟೀಕಿಸಿದರು.

ದ್ವೇಷ ಭಾಷಣ ವಿಧೇಯಕ ಯತ್ನಾಳ್ ಎಚ್ಚರಿಕೆ

ದ್ವೇಷ ಭಾಷಣ ವಿಧೇಯಕ ತರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ದ್ವೇಷ ಭಾಷಣ ಮಾಡಿದವರನ್ನು ಒಳಗೆ ಹಾಕ್ತಾರಂತೆ ಏಳು ವರ್ಷ. ಯಾರು ತರುವವರಿದ್ದಾರೆ ಅವರೇ ಮೊದಲು ಒಳಗೆ ಹೋಗ್ತಾರೆ. ನಾನು ಹೋಗ್ತೀನಿ. ಆದರೆ ಹೊರಗೆ ಬರೋದು ಹೇಗೆ ನನಗೆ ಗೊತ್ತು ಎಂದು ವ್ಯಂಗ್ಯವಾಡಿದರು.

ಶಿವಾಜಿ ಮಹಾರಾಜರ ಕುರಿತು ಮಾತನಾಡಿದ ಯತ್ನಾಳ್ ಅವರು, ಶಿವಾಜಿ ಮಹಾರಾಜರು ಇಡೀ ರಾಷ್ಟ್ರಕ್ಕೆ ಆದರ್ಶರು. ವಿಜಯಪುರದಲ್ಲಿ ಶಿವಾಜಿ ಮಹಾರಾಜರ ಮೂರ್ತಿ ಕೂರಿಸೋದು ಅಷ್ಟು ಸರಳವಲ್ಲ. ಯಾಕೆಂದರೆ ಇಲ್ಲಿ ಪಾಕಿಸ್ತಾನ ಮೇಡ್ ಬಹಳಷ್ಟಿವೆ. ಶಿವಾಜಿ ಮಹಾರಾಜರು ಇಲ್ಲದಿದ್ದರೆ ಇಂದು ಎಲ್ಲರ ಸುನ್ನತ್ ಆಗ್ತಿತ್ತು. ನಾನೂ ಕೂಡ ಯತ್ನಾಳ್ ಆಗಿ ಇರುತ್ತಿರಲಿಲ್ಲ ಎಂದರು ಇದೇ ವೇಳೆ ಕೆಲವರು ಯತ್ನಾಳ್ ಮರಾಠರಿಗೆ ಹುಟ್ಟಿದ್ದಾರಾ ಎಂದು ಕೇಳ್ತಾರೆ ಹೌದು ನಾನು ಮರಾಠಿಗರಿಗೆ ಹುಟ್ಟಿದ್ದೇನೆ, ಲಿಂಗಾಯತ ವೀರಶೈವ ಮರಾಠರು ಎಲ್ಲರೂ ಒಂದೇ ಬೇರೆಬೇರೆಯಲ್ಲ ಎಂದು ತಿರುಗೇಟು ನೀಡಿದರು.