ಮಧ್ಯಪ್ರಾಚ್ಯ ಯುದ್ಧದಿಂದಾಗಿ ರಾಜ್ಯದಲ್ಲಿ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ಹೋಟೆಲ್‌ಗಳು ಸಮಸ್ಯೆಯನ್ನು ಎದುರಿಸುತ್ತಿದ್ದು, ಆಸ್ಪತ್ರೆ ಮತ್ತು ವಸತಿ ನಿಲಯಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.

 ವಿಧಾನಪರಿಷತ್ತು (ಮಾ.14): ಮಧ್ಯಪ್ರಾಚ್ಯ ಯುದ್ಧದಿಂದಾಗಿ ಉಂಟಾಗಿರುವ ಅಡುಗೆ ಅನಿಲ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಹೋಟೆಲ್‌ಗಳಿಗೆ ವಾಣಿಜ್ಯ ಗ್ಯಾಸ್‌ ಸಿಲಿಂಡರ್‌ ಅನ್ನು ಬೇಡಿಕೆಗೆ ಅನುಗುಣವಾಗಿ ಒದಗಿಸಲು ಸದ್ಯಕ್ಕೆ ಸಾಧ್ಯವಿಲ್ಲ. ಆದರೆ ಆಸ್ಪತ್ರೆ, ವಸತಿ ನಿಲಯ, ವಸತಿ ಶಾಲೆಗಳಿಗೆ ಆದ್ಯತೆ ಮೇರೆಗೆ ಅಡುಗೆ ಅನಿಲ ಪೂರೈಸಲಾಗುವುದು. ಸಿಲಿಂಡರ್‌ ಸಮಸ್ಯೆ ಇನ್ನು 10 ದಿನದೊಳಗೆ ಸಮಸ್ಯೆ ಪರಿಹಾರವಾಗುವ ಸಾಧ್ಯತೆ ಇದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದರು.

ಶೂನ್ಯ ವೇಳೆಯಲ್ಲಿ ಕಾಂಗ್ರೆಸ್‌ನ ಐವಾನ್ ಡಿಸೋಜಾ, ನಾಗರಾಜ್‌ ಯಾದವ್‌ ಅವರು ಅಡುಗೆ ಅನಿಲ ಪೂರೈಕೆಯಲ್ಲಿನ ಸಮಸ್ಯೆ ಕುರಿತು ಪ್ರಸ್ತಾಪಿಸಿದರು. ಅದಕ್ಕುತ್ತರಿಸಿದ ಕೆ.ಎಚ್‌.ಮುನಿಯಪ್ಪ, ತೈಲ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಬೆಳಗ್ಗೆ ಸಭೆ ನಡೆಸಿದ್ದೇನೆ. ಆಸ್ಪತ್ರೆ, ವಸತಿ ನಿಲಯ ಮತ್ತು ವಸತಿ ಶಾಲೆಗಳಿಗೆ ಆದ್ಯತೆ ಮೇರೆಗೆ ವಾಣಿಜ್ಯ ಗ್ಯಾಸ್‌ ಪೂರೈಸಲು ಸೂಚಿಸಲಾಗಿದೆ. ಹೋಟೆಲ್‌ಗಳಿಗೆ ಸಿಲಿಂಡರ್‌ ಪೂರೈಸಲು ಸದ್ಯದ ಮಟ್ಟಿಗೆ ಸಾಕಷ್ಟು ದಾಸ್ತಾನಿಲ್ಲ. ಇನ್ನು 10 ದಿನಗಳೊಳಗೆ ಸಮಸ್ಯೆ ಪರಿಹಾರವಾಗುವ ವಿಶ್ವಾಸವಿದೆ. ಅಲ್ಲಿಯವರೆಗೆ ಹೋಟೆಲ್‌ ಮಾಲೀಕರು ತಾಳ್ಮೆಯಿಂದ ಇರಬೇಕು. ಅಡುಗೆ ಅನಿಲದ ಬದಲು ಎಲೆಕ್ಟ್ರಿಕ್‌ ಸ್ಟೌವ್‌ಗಳನ್ನು ಬಳಸಬಹುದು ಎಂದರು.

ಈಗಾಗಲೇ ಮಧ್ಯಪ್ರಾಚ್ಯದಿಂದ 2 ಹಡಗುಗಳಲ್ಲಿ ತೈಲ ಬಂದಿದ್ದು, ಇನ್ನೂ 10 ರಿಂದ 12 ಹಡಗುಗಳು ಬರಬೇಕಿದೆ. ಸದ್ಯಕ್ಕೆ ಸಮಸ್ಯೆ ಉಲ್ಬಣಿಸಿಲ್ಲ. ಉಳಿದ 10ರಿಂದ 12 ಹಡಗುಗಳು ಬಂದರೆ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗಲಿದೆ. ಇನ್ನು, ಕಾಳಸಂತೆಯಲ್ಲಿ ಅನಧಿಕೃತವಾಗಿ ಹೆಚ್ಚಿನ ಬೆಲೆಗೆ ಸಿಲಿಂಡರ್‌ ಮಾರಾಟ ಮಾಡುವವರ ವಿರುದ್ಧ ನಿಗಾವಹಿಸಿ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಆಟೋ ರಿಕ್ಷಾಗಳಿಗೆ ಗ್ಯಾಸ್‌ ಸರಬರಾಜಿನಲ್ಲಿ ಯಾವುದೇ ವ್ಯತ್ಯಯವಾಗದಂತೆ ಸೂಚಿಸಲಾಗಿದೆ. ಮಂಗಳೂರಿನಲ್ಲೂ ಆಟೋ ಚಾಲಕರು ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಮಾಹಿತಿಯಿದ್ದು, ಅಲ್ಲಿಯೂ ಆಟೋಗಳಿಗೆ ಗ್ಯಾಸ್‌ ನೀಡುವಂತೆ ಸೂಚಿಸಲಾಗುವುದು ಎಂದರು.