Asianet Suvarna News Asianet Suvarna News

ಮುಡಾ ಹಗರಣ: ಸಿದ್ದು ತನಿಖೆಗೆ 11 ಸಮರ್ಥನೆ ನೀಡಿದ ಹೈಕೋರ್ಟ್‌

ಇಡೀ ಪ್ರಕರಣದಲ್ಲಿ ಹಲವು ವಿಚಾರಗಳು ಮುನ್ನೆಲೆಗೆ ಬಂದಿದ್ದವು. ನ್ಯಾಯಮೂರ್ತಿಗಳು ಪ್ರಮುಖವಾಗಿ 8 ಪ್ರಶ್ನೆಗಳನ್ನು ರಚಿಸಿಕೊಂಡು, ಅವುಗಳಿಗೆ ಉತ್ತರ ನೀಡಿದ್ದಾರೆ. ಆದೇಶದ ಕೊನೆಯ ಭಾಗದಲ್ಲಿ ಆ ತೀರ್ಪಿನ ಸಾರಾಂಶವನ್ನು 11 ಅಂಶಗಳಲ್ಲಿ ವಿವರಿಸಿದ್ದಾರೆ. ಈ 11 ಪ್ರಶ್ನೆಗಳಲ್ಲಿ ಏಕೆ ಮುಖ್ಯಮಂತ್ರಿಗಳ ವಿರುದ್ಧ ಪ್ರಾಥಮಿಕ ತನಿಖೆ ನಡೆಸಲು ಅನುಮತಿ ನೀಡಬೇಕು ಎಂಬುದನ್ನು ತಿಳಿಸಿದ್ದಾರೆ

High Court gave 11 justifications for CM Siddaramaiah investigation grg
Author
First Published Sep 25, 2024, 4:16 AM IST | Last Updated Sep 25, 2024, 4:16 AM IST

ಬೆಂಗಳೂರು(ಸೆ.25): ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಸುಮಾರು 56 ಕೋಟಿ ರು. ಮೌಲ್ಯದ 14 ಬದಲಿ ನಿವೇಶನಗಳನ್ನು ಪಡೆದಿರುವ ಪ್ರಕರಣಕ್ಕೆ ಸಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧದ ತನಿಖೆಗೆ ಪೂರ್ವಾನುಮತಿ (ಅನುಮೋದನೆ) ನೀಡಿ ರಾಜ್ಯಪಾಲರು ಹೊರಡಿಸಿದ್ದ ಆದೇಶವನ್ನು ಎತ್ತಿಹಿಡಿಯವ ಸಂದರ್ಭದಲ್ಲಿ ಹೈಕೋರ್ಟ್‌ ಪ್ರಮುಖವಾಗಿ 8 ಪ್ರಶ್ನೆಗಳನ್ನು ರಚಿಸಿಕೊಂಡು ಉತ್ತರ ನೀಡಿದೆ.

ಇಡೀ ಪ್ರಕರಣದಲ್ಲಿ ಹಲವು ವಿಚಾರಗಳು ಮುನ್ನೆಲೆಗೆ ಬಂದಿದ್ದವು. ನ್ಯಾಯಮೂರ್ತಿಗಳು ಪ್ರಮುಖವಾಗಿ 8 ಪ್ರಶ್ನೆಗಳನ್ನು ರಚಿಸಿಕೊಂಡು, ಅವುಗಳಿಗೆ ಉತ್ತರ ನೀಡಿದ್ದಾರೆ. ಆದೇಶದ ಕೊನೆಯ ಭಾಗದಲ್ಲಿ ಆ ತೀರ್ಪಿನ ಸಾರಾಂಶವನ್ನು 11 ಅಂಶಗಳಲ್ಲಿ ವಿವರಿಸಿದ್ದಾರೆ. ಈ 11 ಪ್ರಶ್ನೆಗಳಲ್ಲಿ ಏಕೆ ಮುಖ್ಯಮಂತ್ರಿಗಳ ವಿರುದ್ಧ ಪ್ರಾಥಮಿಕ ತನಿಖೆ ನಡೆಸಲು ಅನುಮತಿ ನೀಡಬೇಕು ಎಂಬುದನ್ನು ತಿಳಿಸಿದ್ದಾರೆ. ಅಲ್ಲದೆ, ದೂರುದಾರರು ಪ್ರಾಸಿಕ್ಯೂಷನ್‌ಗೆ ಕೋರಿದ ನಡೆ ಕಾನೂನು ಪ್ರಕಾರವಾಗಿದೆಯೇ? ಪ್ರಾಸಿಕ್ಯೂಷನ್‌ ಮತ್ತು ತನಿಖೆಗೆ ಯಾವ ನಿಯಮಗಳ ಅಡಿಯಲ್ಲಿ ಫೂರ್ವಾನುಮತಿ ನೀಡಬೇಕಿದೆ ಎಂಬ ಅಂಶವನ್ನೂ ಸ್ಪಷ್ಟಪಡಿಸಿದ್ದಾರೆ.

ಮುಡಾ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಮುಂದಿರುವ ದಾರಿ ಏನು? ದಾಖಲಾಗುತ್ತಾ FIR?

ತೀರ್ಪಿನ ಸಾರಾಂಶದ 11 ಅಂಶಗಳು:

1. ದೂರುದಾರರು ದೂರು ದಾಖಲಿಸಿರುವ ಅಥವಾ ರಾಜ್ಯಪಾಲರಿಂದ ಪೂರ್ವಾನುಮತಿ ಕೋರಿದ ಕ್ರಮ ಸಮರ್ಥನೀಯವಾಗಿದೆ.
2. ವಾಸ್ತವ ಪರಿಸ್ಥಿತಿಯಲ್ಲಿ ಪ್ರಕರಣದ ತನಿಖೆಗೆ ಪಿಸಿ ಕಾಯ್ದೆ ಸೆಕ್ಷನ್‌ 17ಎ ಅಡಿಯಲ್ಲಿ ಪೂರ್ವಾನುಮತಿ ಕಡ್ಡಾಯ.
3. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯ ಅಪರಾಧಗಳ ಸಂಬಂಧ ಸಾರ್ವಜನಿಕ ಸೇವಕರ ವಿರುದ್ಧದ ಆರೋಪಗಳ ಕುರಿತು ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಮತ್ತು ಬಿಎನ್‌ಎನ್‌ಎಸ್‌ ಸೆಕ್ಷನ್‌ 223ರ ಅಡಿಯಲ್ಲಿ ಖಾಸಗಿ ದೂರು ದಾಖಲಿಸಿದ ಸಂದರ್ಭದಲ್ಲಿ ಸೆಕ್ಷನ್‌ 17ಎ ಅಡಿಯಲ್ಲಿ ತನಿಖೆಗೆ ಪೂರ್ವಾನುಮತಿ ಕೋರುವುದು ದೂರುದಾರನ ಜವಾಬ್ದಾರಿಯಾಗಿರುತ್ತದೆ. ಪೊಲೀಸ್‌ ಅಧಿಕಾರಿ ಪೂರ್ವಾನುಮತಿ ಕೋರುವ ಅಗತ್ಯವಿಲ್ಲ.
4. ಸಂವಿಧಾನದ ಪರಿಚ್ಛೇದ 163ರ ಪ್ರಕಾರ ರಾಜ್ಯಪಾಲರು ಸಾಮಾನ್ಯ ಸಂದರ್ಭದಲ್ಲಿ ಸಚಿವ ಸಂಪುಟದ ಸಲಹೆ ಹಾಗೂ ಸಲಹೆ ಆಧಾರದಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಆದರೆ, ಅಸಾಧಾರಣ ಸಂದರ್ಭದಲ್ಲಿ ರಾಜ್ಯಪಾಲರು ಸ್ವತಂತ್ರ ನಿರ್ಧಾರಗಳನ್ನೂ ತೆಗೆದುಕೊಳ್ಳಬಹುದು. ಹಾಲಿ ಪ್ರಕರಣವು ಅಂತಹ ಅಸಾಧಾರಣ ಸಂದರ್ಭದ್ದಾಗಿದೆ.
5. ರಾಜ್ಯಪಾಲರು ಕೈಗೊಂಡಿರುವ ಸ್ವತಂತ್ರ ನಿರ್ಧಾರದಲ್ಲಿ ಯಾವುದೇ ಲೋಪ ಕಂಡುಬರುತ್ತಿಲ್ಲ.
6. ನಿರ್ಧಾರ ತೆಗೆದುಕೊಳ್ಳುವ ಪ್ರಾಧಿಕಾರ (ಸಕ್ಷಮ ಪ್ರಾಧಿಕಾರ) ಅದರಲ್ಲೂ ರಾಜ್ಯಪಾಲರಂತಹ ಉನ್ನತ ಕಚೇರಿಯು ಕಡತದಲ್ಲಿರುವ ಕಾರಣಗಳನ್ನು ದಾಖಲಿಸಿದರೆ ಸಾಕಾಗುತ್ತದೆ. ಆ ಕಾರಣಗಳು ರಾಜ್ಯಪಾಲರ ಆದೇಶದ ಭಾಗದಲ್ಲಿ ಸಂಕ್ಷಿಪ್ತವಾಗಿದೆ. ಕಾರಣಗಳು ಕಡತದಲ್ಲಿರಬೇಕು. ಮೊದಲ ಬಾರಿಗೆ ಕಾರಣಗಳನ್ನು ಆಕ್ಷೇಪಣೆಗಳ ಮೂಲಕ ಸಾಂವಿಧಾನಿಕ ನ್ಯಾಯಾಲಯದ ಮುಂದೆ ತರಲಾಗುವುದಿಲ್ಲ.
6. ರಾಜ್ಯಪಾಲರದ ಆದೇಶವು ಎಲ್ಲಿಯೂ ಸಹ ವಿವೇಚನ ರಹಿತವಾಗಿಲ್ಲ.
7. ರಾಜ್ಯಪಾಲರು ವಿವೇಚನೆ ಬಳಸಿಲ್ಲ ಎಂದು ಹೇಳುವಂತಿಲ್ಲ. ರಾಜ್ಯಪಾಲರು ಸಂಪೂರ್ಣ ವಿವೇಚನೆಯುತವಾಗಿ ಆದೇಶ ಹೊರಡಿಸಿದ್ದಾರೆ.
8. ಪೂರ್ವಾನುಮತಿ ನೀಡುವ ಮುನ್ನ ವಿಚಾರಣೆಯ ಅವಕಾಶವನ್ನು ನೀಡುವುದು ಪಿಸಿ ಕಾಯ್ದೆ ಸೆಕ್ಷನ್ 17ಎ ಅಡಿಯಲ್ಲಿ ಕಡ್ಡಾಯವಲ್ಲ. ಸಕ್ಷಮ ಪ್ರಾಧಿಕಾರವು ಅವಕಾಶ ನೀಡಲು ಬಯಸಿದರೆ, ಆ ಆಯ್ಕೆ ಸದಾ ಮುಕ್ತವಾಗಿರುತ್ತದೆ.
9. ರಾಜ್ಯಪಾಲರು ಆತುರದ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾದ ಆರೋಪ ಇಡೀ ಆದೇಶವನ್ನು ಕುಲಷಿತಗೊಳಿಸುವುದಿಲ್ಲ.
10. ರಾಜ್ಯಪಾಲರು ಆದೇಶವನ್ನು ಸೆಕ್ಷನ್‌ 17ಎ ಅಡಿ ಪೂರ್ವಾನುಮತಿ ನೀಡಿರುವುದಕ್ಕೆ ಮಾತ್ರ ಸೀಮಿತವಾಗಿ ಓದಲಾಗಿದೆ. ಬಿಎನ್‌ಎನ್‌ಎಸ್‌ ಸೆಕ್ಷನ್‌ 218 ಅಡಿ ನೀಡುವ ಆದೇಶವಲ್ಲ.
11. ಅರ್ಜಿಯಲ್ಲಿ ವಿವರಿಸಲಾಗಿರುವ ವಾಸ್ತವಾಂಶಗಳನ್ನು ಪರಿಶೀಲಿಸಿದರೆ ಪ್ರಕರಣದಲ್ಲಿ ಫಲಾನುಭವಿ ಹೊರಗಿನವರಲ್ಲ. ಮುಖ್ಯಮಂತ್ರಿಗಳ ಪತ್ನಿಯಾಗಿದ್ದಾರೆ. ಆದ್ದರಿಂದ ನಿಸ್ಸಂದೇಹವಾಗಿ ಪ್ರಕರಣದ ತನಿಖೆ ನಡೆಸುವ ಅಗತ್ಯವಿದೆ.

ಮುಡಾ ಹಗರಣ: ನಿಮಗೆ ಕಿಂಚಿತ್ ಮಾನ-ಮರ್ಯಾದೆ ಇದ್ರೆ ರಾಜೀನಾಮೆ ಕೊಡಿ - ಸಿಎಂ ವಿರುದ್ಧ ಶಾಸಕ ವೇದವ್ಯಾಸ ಕಾಮತ್ ಕಿಡಿ

ಪ್ರಕರಣ ಸಾಗಿ ಬಂದ ಹಾದಿ

ಮುಡಾ ಸಂಸ್ಥೆಯು ಮೈಸೂರಿನ ಕೆಸರೆ ಗ್ರಾಮದ ಸರ್ವೇ ನಂಬರ್‌ 464ರ 3 ಎಕರೆ 16 ಗುಂಟೆ ಜಮೀನಿನ ಬದಲಿಗೆ ಸುಮಾರು 56 ಕೋಟಿ ಮೌಲ್ಯದ 14 ನಿವೇಶನಗಳನ್ನು ಅಕ್ರಮವಾಗಿ ನೀಡಿದೆ. ಇದರಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದು, ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಾರೆ. ಈ ಸಂಬಂಧ ತನಿಖೆ/ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ, ಸ್ನೇಹಮಯಿ ಕೃಷ್ಣ ಮತ್ತು ಜೆಡಿಎಸ್‌ ಕಾನೂನು ಘಟಕದ ಅಧ್ಯಕ್ಷ ಎಸ್‌.ಪಿ.ಪ್ರದೀಪ್‌ ಕುಮಾರ್‌ ಕಳೆದ ಜೂನ್‌-ಜುಲೈನಲ್ಲಿ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದರು.

ಪ್ರಕರಣ ಸಂಬಂಧ ಮುಖ್ಯಮಂತ್ರಿಗಳ ವಿರುದ್ಧ ತನಿಖೆ/ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ರಾಜ್ಯಪಾಲರು ಆ.17ರಂದು ಆದೇಶಿಸಿದ್ದರು. ಅದನ್ನು ಪ್ರಶ್ನಿಸಿ ಮುಖ್ಯಮಂತ್ರಿಗಳು ಆ.19ರಂದು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಅಂದೇ ಅರ್ಜಿ ಕುರಿತು ಸಿದ್ದರಾಮಯ್ಯ ಪರ ವಕೀಲ ರಾಜ್ಯಪಾಲರ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿದ್ದರು. ತಡೆಯಾಜ್ಞೆ ನೀಡಲು ಪ್ರತಿವಾದಿ ಪರ ವಕೀಲರು ಆಕ್ಷೇಪಿಸಿದ್ದರು. ಕೊನೆಗೆ ಹೈಕೋರ್ಟ್‌, ಪ್ರಾಸಿಕ್ಯೂಷನ್ ಆಧರಿಸಿ ಮುಖ್ಯಮಂತ್ರಿಗಳ ವಿರುದ್ಧ ಆತುರದ ಕ್ರಮ ಜರುಗಿಸದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮತ್ತು ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಿ ಮಧ್ಯಂತರ ಆದೇಶ ಮಾಡಿತ್ತು. ನಂತರ ಸುದೀರ್ಘವಾಗಿ ವಾದ-ಪ್ರತಿವಾದ ಆಲಿಸಿದ್ದ ಸೆ.12ರಂದು ವಿಚಾರಣೆ ಪೂರ್ಣಗೊಳಿಸಿದ್ದ ಹೈಕೋರ್ಟ್‌ ತೀರ್ಪು ಕಾಯ್ದಿರಿಸಿತ್ತು.

Latest Videos
Follow Us:
Download App:
  • android
  • ios